ಭದ್ರಾವತಿ: ವಿಐಎಸ್ಎಲ್ ಕಾರ್ಖಾನೆಯನ್ನು ಖಾಸಗೀಕರಣ ಹಾಗು 1 ಸಾವಿರ ಎಕರೆ ನಗರ ಪ್ರದೇಶವನ್ನು ಕೇಂದ್ರ ಸರಕಾರ ಖಾಸಗೀ ವ್ಯಕ್ತಿಗಳಿಗೆ ನೀಡಲು ಮುಂದಾಗಿರುವುದನ್ನು ವಿಐಎಸ್ಎಲ್ ನಿವೃತ್ತ ಕಾರ್ಮಿಕರು ಖಂಡಿಸಿ ಕಾರ್ಖಾನೆಯ ಮುಖ್ಯದ್ವಾರದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
ನಿವೃತ್ತ ಕಾರ್ಮಿಕ ಕಲ್ಯಾಣ ಕೇಂದ್ರದ ಅಧ್ಯಕ್ಷ ಜೆ.ಎಸ್.ನಾಗಭೂಷಣ್ ಅಧ್ಯಕ್ಷತೆಯಲ್ಲಿ ಸಭೆ ಸೇರಿ ನಂತರ ಕಾರ್ಖಾನೆಯ ಮುಂಭಾಗ ಪ್ರತಿಭಟಿಸಿದ ನಿವೃತ್ತ ಕಾರ್ಮಿಕರು ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಸಂಸ್ಥಾಪಿಸಿದ ಕಾರ್ಖಾನೆಗೆ ನೂರು ವರ್ಷಗಳು ತುಂಬಿದ್ದು, ಶತಮಾನ ಆಚರಿಸುವ ಸಂದರ್ಭದಲ್ಲಿ ಶೋಕಾಚರಣೆ ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆ ದುಸ್ಥಿಗೆ ಸೈಲ್ ಅಧಿಕಾರಿಗಳೆ ಕಾರಣಕರ್ತರಾಗಿದ್ದು, ತಾತ್ಸಾರ, ಬೇಜವಾಬ್ದಾರಿ, ಮಲತಾಯಿ ಧೋರಣೆಗೆ ಇಂದಿನ ಸ್ಥಿತಿಗೆ ಕಾರಣವಾಗಿದೆ. ಸೈಲ್ ಆಡಳಿತಕ್ಕೆ ಒಳಪಟ್ಟ ಹೊರ ರಾಜ್ಯ ಕಾರ್ಖಾನೆಗಳು ಸುಮಾರು 10 ವರ್ಷಗಳಲ್ಲಿ 75 ಸಾವಿರ ರೂ ಬಂಡವಾಳ ತೊಡಗಿಸಿ ವಿಐಎಸ್ಎಲ್ ಕಾರ್ಖಾನೆಗೆ ಕೇವಲ 150 ಕೋಟಿ ರೂ ಮಾತ್ರ ಒದಗಿಸಿರುವುದು ವಿಪರ್ಯಾಸ ಸಂಗತಿಯಾಗಿದೆ ಎಂದರು.
ಕಾರ್ಖಾನೆಗೆ ಅಗತ್ಯ ಬಂಡವಾಳ ತೊಡಗಿಸುವುದನ್ನು ಬಿಟ್ಟು ಖಾಸಗೀಕರಣಗೊಳಿಸಲು ಜಾಗತಿಕ ಟೆಂಡರ್ ಕರೆದಿರುವುದು ಖಂಡನೀಯ. ಕೂಡಲೆ ಖಾಸಗೀಕರಣ ಕೈಬಿಟ್ಟು ಸೂಕ್ತ ಬಂಡವಾಳ ತೊಡಗಿಸಿ ನೂತನ ತಂತ್ರಜ್ಞಾನದಿಂದ ಕಾರ್ಖಾನೆಯನ್ನು ಅಭಿವೃದ್ದಿ ಪಡಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ನಗರ ಪ್ರದೇಶ ಹಸ್ತಾಂತರಕ್ಕೆ ವಿರೋಧ
ಕಾರ್ಖಾನೆಯ ಜೊತೆಗೆ ಕೋಟ್ಯಾಂತರ ಬೆಲೆ ಬಾಳುವ ನಗರ ಪ್ರದೇಶ, ಪ್ರತಿಷ್ಟಿತ ಅತಿಥಿಗೃಹ, ಸ್ಟೇಡಿಯಂ, ಶಾಲಾ ಕಾಲೇಜುಗಳು, ದೇವಸ್ಥಾನ, ಚರ್ಚ್ ಮಸೀದಿ, ಹಾಗು ವಸತಿಗೃಹಗಳ ಜೊತೆಗೆ ಖಾಲಿ ಜಾಗವನ್ನು ಖಾಸಗೀ ವ್ಯಕ್ತಿಗಳಿಗೆ ವಹಿಸಲು ಸಿದ್ದತೆ ನಡೆದಿದೆ. ಖಾಸಗೀ ವ್ಯಕ್ತಿಗಳಿಗೆ ವಹಿಸಲು ಉದ್ದೇಶಿಸಿರುವ ನಗರ ಪ್ರದೇಶವನ್ನು ದೀರ್ಘಾವಧಿ ಆಧಾರದಡಿ ಹಾಗು ಪರವಾನಿಗೆ ಆಧಾರದಡಿ ವಾಸವಿರುವ ಸುಮಾರು 2500 ನಿವೃತ್ತ ಕಾರ್ಮಿಕರ ಮನೆಗಳನ್ನು ರಕ್ಷಿಸಕೊಳ್ಳಬೇಕಿದೆ. ಯಾವುದೇ ಕಾರಣಕ್ಕು ಖಾಸಗೀ ವ್ಯಕ್ತಿಗಳ ಪಾಲಾಗದಂತೆ ನಿವೃತ್ತ ಕಾರ್ಮಿಕರು ಎಚ್ಚರವಹಿಸುವ ಮೂಲಕ ತೀವ್ರಕರವಾದ ಹೋರಾಟ ಮಾಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ನಿವೃತ್ತ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಬಿ.ಮಂಜುನಾಥ್, ಎಸ್.ಎಚ್.ಹನುಮಂತರಾವ್, ಜಿ.ಕೆ.ರವೀಂದ್ರರೆಡ್ಡಿ, ಕೆಂಪಯ್ಯ, ಎಲ್.ಬಸವರಾಜ್, ಮುಖಂಡರಾದ ಕಬ್ಬಡಿ ಕೃಷ್ಣೇಗೌಡ, ಬಿ.ಜಿ.ರಾಮಲಿಂಗಯ್ಯ, ಕೆ.ಎನ್,ಭೈರಪ್ಪಗೌಡ, ಹಾ.ರಾಮಪ್ಪ, ಎಸ್.ಬಿ.ಶಿವಲಿಂಗಯ್ಯ, ನರಸಿಂಹಚಾರ್, ರಮೇಶ್, ಜಿ.ಶಂಕರ್, ಶಿವಬಸಪ್ಪ ಪಾಟೀಲ್, ಎಸ್.ಎಸ್.ಭೈರಪ್ಪ, ಮರಿಯಪ್ಪ, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್ ಹಾಗು ಪದಾಧಿಕಾರಿಗಳು ಸೇರಿದಂತೆ ನೂರಾರು ನಿವೃತ್ತ ಕಾರ್ಮಿಕರು ಭಾಗವಹಿಸಿದ್ದರು.
Discussion about this post