ನವದೆಹಲಿ: ಭಾರತೀಯ ವಾಯುಸೇನಾ ಪಡೆಗಳು ಪಾಕಿಸ್ಥಾನದೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ನಾಶ ಮಾಡಿದ ಬೆನ್ನಲ್ಲೆ, ಪಾಕಿಸ್ಥಾನಕ್ಕೆ ಸೇರಿದ ಯುದ್ದ ವಿಮಾನಗಳು ಭಾರತದ ಗಡಿ ನಿಯಮ ಉಲ್ಲಂಘಿಸಿದ್ದು, ಭಾರತದ ಭಾರೀ ಪ್ರತಿರೋಧಕ್ಕೆ ಹೆದರಿ ಹಿಂದಕ್ಕೆ ಓಡಿ ಹೋಗಿವೆ.
ಇಂದು ಜಮ್ಮು ಕಾಶ್ಮೀರದ ರಾಜೌರಿ ಹಾಗೂ ನೌಶೇರಾಗಳಲ್ಲಿ ವಾಯುಗಡಿಯನ್ನು ಉಲ್ಲಂಘಿಸಿವೆ. ಈ ವೇಳೆ ಗಸ್ತು ತಿರುಗುತ್ತಿದ್ದ ಭಾರತೀಯ ವಾಯು ಪಡೆಯ ವಿಮಾನಗಳು ತಕ್ಷಣ ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸಿವೆ. ಆದರೆ ಪಾಕ್ ವಿಮಾನಗಳು ವಾಪಸ್ ಹೋಗುವಾಗ ಬಾಂಬ್ ಹಾಕಿವೆ. ಆದರೆ ಬಾಂಬ್ ದಾಳಿಯಿಂದ ಆಗಿರುವ ಹಾನಿಯ ಕುರಿತು ಮಾಹಿತಿ ಲಭ್ಯವಾಗಿಲ್ಲ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ ಒಸಿ ಬಳಿಯ ವಾಯುಸೀಮೆಯನ್ನು ಉಲ್ಲಂಘಿಸಿ ಪಾಕಿಸ್ಥಾನದ ಮೂರು ಜೆಟ್ ವಿಮಾನಗಳು ದಾಳಿ ನಡೆಸಲು ವಿಫಲ ಪ್ರಯತ್ನ ನಡೆಸಿರುವುದಾಗಿ ಪಿಟಿಐ ವರದಿ ಮಾಡಿದೆ. ಏತನ್ಮಧ್ಯೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಇನ್ನು, ಪಾಕಿಸ್ಥಾನದ ಉಗ್ರರು ಭಾರತದ ವಿಮಾನಗಳನ್ನು ಹೈಜಾಕ್ ಮಾಡುವ ಸಾಧ್ಯತೆ ಇರುವುದರಿಂದ ಜಮ್ಮು ಕಾಶ್ಮೀರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದ್ದು, ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಶ್ರೀನಗರ, ಲೇಹ್, ಪಠಾಣ್’ಕೋಟ್’ಗಳಲ್ಲಿಯೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
Discussion about this post