ಬಡವರ ಮನೆಯಲ್ಲಿ ಸಾಧಕರೇ ಹುಟ್ಟಲಿ ಎಂಬುದು ಆ ದೇವರ ಆಶೀರ್ವಾದವೇ ಸರಿ. ಆದ್ದರಿಂದ ಸಾಧಿಸುವ ಮನಸೊಂದಿದ್ದರೆ ಸಾಧನೆಗೆ ಸಾವಿರ ಹಾದಿಯಿದೆ. ಬಡತನದಿಂದ ಸಾಧನೆಯ ಹಾದಿಗೆ ಮುನ್ನುಡಿ ಬರೆದ ಹೆಣ್ಣು ಮಗಳೊಬ್ಬಳ ಯಶೋಗಾಥೆಯಿದು. ಅವರು ಬೇರೆ ಯಾರೂ ಅಲ್ಲ. ಉಡುಪಿ ಜಿಲ್ಲೆಯ ಹೆಬ್ರಿ ಸೋಮೇಶ್ವರದ ಪ್ರಮೀಳಾ ಶೆಟ್ಟಿ.
ಬಡಕುಟುಂಬದ ಮೂರು ಹೆಣ್ಣು ಮಕ್ಕಳಲ್ಲಿ ಎರಡನೆಯ ಕುಡಿಯಾಗಿ ಹುಟ್ಟಿದ ಪ್ರಮೀಳಾ ಶೆಟ್ಟಿಯವರು ಪ್ರಾಥಮಿಕ ಶಿಕ್ಷಣವನ್ನು ಕಾಸನಮಕ್ಕಿ, ಸೋಮೇಶ್ವರ ಹಾಗೂ ಹೆಬ್ರಿಯಲ್ಲಿ ಮಾಡಿದರು. ಓದುವುದರಲ್ಲಿ ಆಸಕ್ತಿ ಇರದ ಕಾರಣ ಎಂಟನೇ ತರಗತಿಗೆ ಶಾಲೆ ಬಿಟ್ಟರು. ದೂರಶಿಕ್ಷಣದ ಮೂಲಕ 10ನೇ ತರಗತಿ ಪರೀಕ್ಷೆಗೆ ಹಾಜರಾದರು ಉತ್ತೀರ್ಣರಾಗಲಿಲ್ಲ. ಆ ಬಳಿಕ ಕುಂದಾಪುರದ ನಮ್ಮಭೂಮಿ ಸಂಸ್ಥೆಯಲ್ಲಿ ಬ್ಯೂಟಿಷಿಯನ್ ತರಬೇತಿ ಪಡೆದರು. ಅದರ ಜೊತೆಗೆ ಯಕ್ಷಗಾನ ನಾಟ್ಯ ಅಭ್ಯಾಸವನ್ನು ಮಾಡಿದರು. ಐದು ವರ್ಷ ಅನುಭವ ಪಡೆದ ನಂತರ ಹೆಬ್ರಿಗೆ ಬಂದು ತನ್ನದೇ ಆದ ಸ್ವಂತ ಬ್ಯೂಟಿ ಪಾರ್ಲರ್ ತೆರೆದರು. ಅದರ ಜೊತೆಗೆ ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿಯವರ ಪುತ್ರರಾದ ಸುಬ್ರಹ್ಮಣ್ಯ ಪ್ರಸಾದ್ ಅವರಿಂದ ಯಕ್ಷಗಾನದ ತರಬೇತಿಯನ್ನು ಪಡೆದರು. ಕೆಲವೊಂದು ಯಕ್ಷಗಾನ ಪ್ರಸಂಗಗಳಲ್ಲಿ ಕಲಾವಿದರಾಗಿ ವೇಷ ಹಾಕಿ ಯಕ್ಷ ಸೇವೆಯನ್ನು ಸಲ್ಲಿಸಿದ್ದಾರೆ.
ಅವರ ಬಗ್ಗೆ ಅವರದೇ ಮಾತುಗಳಲ್ಲಿ ಹೇಳ ಹೊರಟರೆ ತುಂಬಾ ಮೂಡಿಯಾಗಿರುವುದರಿಂದ, ಜಾಸ್ತಿ ಯಾರೊಂದಿಗೂ ಹೊಂದಿಕೊಳ್ಳುತ್ತಿರಲಿಲ್ಲ. ಹೀಗಾಗಿ, ನಿತ್ಯ ಕ್ರಿಯಾಶೀಲವಾಗಿರಲು ಏನಾದರೊಂದು ಹವ್ಯಾಸವನ್ನು ರೂಢಿಸಿಕೊಳ್ಳುತ್ತಿದ್ದರು. ಆ ರೀತಿ ರೂಢಿಸಿಕೊಂಡ ಹವ್ಯಾಸದಲ್ಲಿ ಸಾಹಿತ್ಯವೂ ಒಂದು. ತಾನು ಬರೆಯುತ್ತಿರುವುದು ಕಥೆ ಕವನ ಎಂಬ ಅರಿವು ಇಲ್ಲದಿದ್ದರೂ ಏನಾದರೊಂದು ಗೀಚುತ್ತಿದ್ದರು. ಪೆನ್ನು ಪೇಪರ್ ಹಿಡಿದು ಇದುವರೆಗೆ ಒಂದಾಕ್ಷರವೂ ಬರೆದು ಅಭ್ಯಾಸ ಇರದಿದ್ದರೂ, ಫೇಸ್’ಬುಕ್, ಬ್ಲಾಗ್ಗಳಲ್ಲಿ ಇನ್ನೂರಕ್ಕೂ ಹೆಚ್ಚು ಕಥೆ ಕವನಗಳನ್ನು ಬರೆದಿದ್ದಾರೆ ಎಂಬುದು ವಿಶೇಷವೇ ಸರಿ. ಇನ್ನು, ಮಂಗಳ, ತರಂಗದಂತಹ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಆ ಬರಹಗಳು ಅವರನ್ನು ಗುರುತಿಸುವ ಮಟ್ಟಕ್ಕೆ ಬೆಳೆಸಿತು.
ಅದೊಂದು ದಿನ ಅಜೆಕಾರ್ ಹೋಬಳಿಯ ಘಟಕದ ಅಧ್ಯಕ್ಷರಾದ ಡಾ. ಶೇಖರ್ ಅಜೆಕಾರ್ ಕರೆ ಮಾಡಿ ಮುದ್ರಾಡಿಯ ನಾಟ್ಕದೂರಲ್ಲಿ ನಡೆಯುವ 8ನೆಯ ಅಖಿಲ ಭಾರತ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಆಹ್ವಾನ ನೀಡಿದರು. ಬೆಳದಿಂಗಳ ಸಾಹಿತ್ಯ ಸಮ್ಮೇಳನ ಏನೆಂದು ತಿಳಿದಿರಲಿಲ್ಲವಾದ್ದರಿಂದ ಸಂಜೆಯೇ ಅಲ್ಲಿಗೆ ಹೋಗಿದ್ದ ಪ್ರಮೀಳಾರಿಗೆ ಮುಂಜಾವಿನ ನಾಲ್ಕು ಗಂಟೆಯ ವೇಳೆಗೆ ಕವನ ವಾಚನ ಸಮಯ ನೀಡಿದಾಗ ಮನಸ್ಸಲ್ಲಿ ಕಸಿವಿಸಿ ಶುರುವಾಯಿತು.
ಒಬ್ಬಾಕೆ ಹೆಣ್ಣುಮಗಳು ಆ ರಾತ್ರಿಯ ವೇಳೆ ಇಷ್ಟು ಹೊತ್ತು ಕಾಯಬೇಕಲ್ಲ ಎಂದೆನಿಸಿ ಭಯವಾಗತೊಡಗಿತು. ಆದರೆ, ವೇದಿಕೆ ಹತ್ತಿದ ಬಳಿಕ ನಿರಾಳ ಭಾವ. ವೇದಿಕೆಯಲ್ಲಿದ್ದ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಮುದ್ರಾಡಿಯವರು ಪರಿಚಯಿಸಿಕೊಂಡು ಪ್ರಶಂಸಿಸಿದಾಗ ಇದ್ದ ಒಂದಷ್ಟು ಆತಂಕವೂ ಮಾಯವಾಗಿ, ಕವನ ವಾಚಿಸಲು ಹುರುಪು ಬಂತು. ಅದಾದ ಬಳಿಕ ಹಲವು ಗೋಷ್ಠಿಗಳಲ್ಲಿ ಭಾಗವಹಿಸಿದ ಶೆಟ್ಟಿಯವರಿಗೆ ಇದುವರೆಗೂ ಪುಸ್ತಕ ರೂಪದಲ್ಲಿ ತನ್ನ ಸಾಹಿತ್ಯವನ್ನು ಪ್ರಕಟಿಸಬೇಕೆಂಬ ಮನಸ್ಸಿಲ್ಲ. ಯಾಕೆಂದರೆ ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ಸ್ ಮತ್ತು ಫಾಲೋವರ್ಸ್ 10,000 ಜನರಿಗೆ ತಲುಪುವ ಸಾಹಿತ್ಯಕ್ಕೆ ಸಿಗುವ ಮನ್ನಣೆಯೇ ಸಾಕು ಎನ್ನುತ್ತಾರೆ.
ಮುಂದೆ ಸಾಹಿತ್ಯ ಕೃಷಿಯೊಂದಿಗೆ ಇಂಗ್ಲಿಷ್ ಮೀಡಿಯಂ ಮಕ್ಕಳಿಗೆ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡಿ ಕನ್ನಡ ಸಾಹಿತ್ಯ ರಚನೆಯ ಬಗ್ಗೆ ಶಿಬಿರಗಳನ್ನೇರ್ಪಡಿಸಿ ಕವನ ರಚನೆಗಳಿಗೆ ಪ್ರೋತ್ಸಾಹಿಸುವ ಕೆಲಸಗಳನ್ನು ಮಾಡಿಕೊಂಡು ಬಂದರು. ತನ್ನ ಜೀವನದಲ್ಲಿ ಒಂದು ದಿನವನ್ನೂ ಒಂದು ನಿಮಿಷವನ್ನೂ ವ್ಯರ್ಥ ಮಾಡಿಲ್ಲ ಎನ್ನುವ ಪ್ರಮೀಳಾ ಶೆಟ್ಟಿಯವರು ತಾನು ಇನ್ನೊಬ್ಬರಿಗೆ ಸ್ಪೂರ್ತಿಯಾಗಬೇಕಾದರೆ ಓದು ಅಥವಾ ಶಿಕ್ಷಣವೇ ಮುಖ್ಯ ಅನಿಸೋದಿಲ್ಲ ಹಾಗೂ ತಾನು ಪರೀಕ್ಷೆಗಳಲ್ಲಿ ಕನ್ನಡ ಒಂದು ಬಿಟ್ಟು ಎಲ್ಲಾ ವಿಷಯಗಳಲ್ಲಿ ಸೋಲು ಬಂದಾಗಲಾಗಲಿ, ಮನೆಯವರೆಲ್ಲ ಮಾತನಾಡಿಸದೆ ಇದ್ದಾಗಲೂ, ತನ್ನವರು ಹೊರಗಿನವರೆಲ್ಲಾ ಹೀಯಾಳಿಸಿದಾಗಲೂ, ಇಂಗ್ಲಿಷ್ ಬರುವುದಿಲ್ಲ ಎಂದು ಛೇಡಿಸಿದಾಗಲೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆ ಎಂದಿಗೂ ಬಂದಿಲ್ಲ. ಆದುದರಿಂದಲೇ ಇಂದು ಪ್ರಮೀಳಾ ಶೆಟ್ಟಿ ಸಾಧಕರ ಸಾಲಿನಲ್ಲಿ ನಿಲ್ಲಲು ಸಾಧ್ಯವಾಯಿತು ಎನ್ನುತ್ತಾರೆ.
ರೇಖಾ ಬಿ. ಶೆಟ್ಟಿಯವರ ಮೂಲಕ ಕ್ರೋಷಾದ ಪರಿಚಯವಾಗಿ ಮನೆಯಲ್ಲೇ ಕುಳಿತು ಉಲ್ಲನ್ ಶಾಲು, ಬಟ್ಟೆ, ಹಾಗೂ ಮಿಲಿಟರಿಯವರ ಚಳಿಗೆ ದೇಹರಕ್ಷಣೆಯ ಬಟ್ಟೆಗಳನ್ನು ಮಾಡತೊಡಗಿದರು. ತನ್ನ ಕ್ರೀಯಾಶೀಲತೆ ಹಾಗೂ ಯೂಟ್ಯೂಬ್ ಮೂಲಕ 15 ಬಟ್ಟೆಗಳನ್ನು ತಯಾರಿಸಿದ್ದಾರೆ. ಆ ಸಮಯದಲ್ಲಿ ಕೆಲವರು ಮದರ್ ಇಂಡಿಯಾ ಕ್ರೋಷಾದ ಬಗ್ಗೆ ತಿಳಿಸಿ ಅದಕ್ಕೆ ಸೇರುವಂತೆ ತಿಳಿಸಿದರು. ಅಲ್ಲಿ ಸೇರಿದ ಬಳಿಕ 2 ವರ್ಷಗಳ ಕ್ರಿಸ್ಮಸ್ ಲಾರ್ಜೆಸ್ಟ್ ಕ್ರೋಚೆಟ್ ಪ್ರಾಜೆಕ್ಟ್’ನಲ್ಲಿ ಕೆಲಸ ಮಾಡಿದರು. ಅದು 2019ನೇ ಸೆಪ್ಟೆಂಬರ್ 15ರಂದು ಗಿನ್ನಿಸ್ ದಾಖಲೆಯಾಯಿತು. ಖರ್ಚು ಮತ್ತು ಕಷ್ಟ ಎಷ್ಟೇ ಆದರೂ, ಸಮಯ ಕಲೆಯಲು ಹವ್ಯಾಸವಾಗಿ ಶುರು ಮಾಡಿದ ಕ್ರೋಷಾ ಪ್ರಾಜೆಕ್ಟ್ ಮುಂದೊಂದು ದಿನ ತನಗೆ ಗಿನ್ನಿಸ್’ನಂತಹ ವಿಶ್ವ ದಾಖಲೆಯ ಮನ್ನಣೆಯನ್ನು ತಂದು ಕೊಡಬಹುದೆಂದು ಎಂದೂ ತಿಳಿದಿರದ ಶೆಟ್ಟಿಯವರು ಇದು ತಾನು ಒಂದೊಂದು ನಿಮಿಷವನ್ನೂ ವ್ಯರ್ಥ ಮಾಡದೆ ಬಂದ ಅವಕಾಶಗಳಿಗೆ ಇಲ್ಲ ಎನ್ನದೆ ಮುನ್ನುಗ್ಗಿದುದರ ಫಲವೇ ಆಗಿದೆ ಎನ್ನಲು ಖುಷಿ ಹಾಗೂ ಹೆಮ್ಮೆ ಪಡುತ್ತಾರೆ.
ಕಳೆದ 6 ತಿಂಗಳಿನಿಂದ ಬೆಂಗಳೂರಿನಲ್ಲಿ ವಾಸ್ತವ್ಯ ಇರುವ ಕುಮಾರಿ ಪ್ರಮೀಳಾ ಶೆಟ್ಟಿಯವರು ಟಿ.ಎನ್. ಸೀತಾರಾಮರ ಮಗಳ ಪರಿಚಯದಿಂದಾಗಿ ಮಗಳು ಜಾನಕಿ ಧಾರಾವಾಹಿಯಲ್ಲಿ ಶಿಕ್ಷಕಿಯ ಒಂದು ಪುಟ್ಟ ಪಾತ್ರವನ್ನು ಮಾಡಿದ್ದಾರೆ. ಅಲ್ಲದೇ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಬೇಕೆಂಬ ಮಹದಾಸೆ ಹೊತ್ತಿರುವ ಇವರು ಮಜಾ ಭಾರತದ ಆಯ್ಕೆಯ ಪ್ರಕ್ರಿಯೆಯ ಕೊನೆಯ ಹಂತದವರೆಗೂ ಹೋಗಿ ಅವಕಾಶ ವಂಚಿತರಾದವರಲ್ಲೊಬ್ಬರು. ಮಜಾ ಟಾಕೀಸ್ನಲ್ಲಿ ಸೃಜನ್ ಲೋಕೇಶ್’ಗೆ ಒಂದು ಕವನ ಬರೆದು ಪ್ರಶಂಸಿಸಲ್ಪಟ್ಟಿದ್ದಾರೆ.
ಇನ್ನು, ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಭಾಗವಹಿಸಿ ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳುವ ಹಂಬಲ ಇರುವ ಪ್ರಮೀಳಾ ಶೆಟ್ಟಿಯವರು ಯಾವುದೇ ಗಾಡ್ ಫಾದರ್, ಆರ್ಥಿಕ ಹಿನ್ನೆಲೆ ಇಲ್ಲದೆ, ಇಂಗ್ಲಿಷ್ ಬರದೇ, ಎಜುಕೇಷನ್ ಇಲ್ಲದೆ, ಜೀವನದಲ್ಲಿ ಸೀರಿಯಸ್ ಆಗಿಲ್ಲದಿದ್ದರೂ ಇಂದು ಸಾಧನೆಯ ಹಾದಿಯಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದರೆ, ಸಾಧನೆಯ ಹಾದಿಯಲ್ಲಿನ ಈಕೆಯ ತುಡಿತ ತಿಳಿಯುತ್ತದೆ. ಈಕೆಯ ಪ್ರತಿಭೆಯನ್ನು ಗುರುತಿಸಿ ಮುಕ್ತ ಟಿವಿ, ನಮ್ಮ ಕುಡ್ಲ ಚಾನೆಲ್’ನವರು ಸಂದರ್ಶನ ಮಾಡಿದ್ದು, ಮಾನಸ ಪತ್ರಿಕೆಯಲ್ಲಿ ಪಾಸ್ ಫೈಲ್ಗಳ ಮಧ್ಯೆ ಎಂಬ ಲೇಖನ ಸಹ ಬರೆದಿದ್ದಾರೆ.
ತಾನಾಗಿ ಹೋದರೆ ಅವಕಾಶಗಳು ಒಲಿದು ಬರುತ್ತದೆ. ಯಾವುದಕ್ಕೂ ಹಿಂಜರಿಯದೆ ವೇದಿಕೆ ಅಥವಾ ಕಾರ್ಯಕ್ರಮಕ್ಕೆ ಮುಂದೆ ಸಾಗುವ ಹುಮ್ಮಸ್ಸಿರಬೇಕು. ಸಾಧನೆ ಇಷ್ಟೇ ಅಲ್ಲ ಪ್ರಯತ್ನಿಸುತ್ತಲೇ ಇರಬೇಕು ಎನ್ನುವ ಪ್ರಮೀಳಾ ಶೆಟ್ಟಿ ಚೆನ್ನೈನಲ್ಲಿ ನಡೆದ ಗಿನ್ನಿಸ್ ರೆಕಾರ್ಡ್ ಕಾರ್ಯಕ್ರಮದ ವೇದಿಕೆಯಲ್ಲಿ 5 ನಿಮಿಷದ ಸಮಯಾವಕಾಶದಲ್ಲಿ ಏನಾದರೂ ನಿಮ್ಮ ಪ್ರತಿಭೆ ಪ್ರದರ್ಶಿಸಬಹುದು ಎಂದಾಗ ಎದ್ದು ಹೋಗಿ ಪ್ರತಿಭೆಯ ಬಗೆಗಿನ ತನ್ನ ಸ್ವರಚಿತ ಕವಿತೆ ವಾಚಿಸಿದರು.
ಕನ್ನಡ ಅರ್ಥವಾಗದಿದ್ದರೂ ಕವನದ ಮಾಧುರ್ಯ ಎಲ್ಲರಿಗೂ ಇಷ್ಟವಾಯಿತು. ಎಲ್ಲರ ಕೋರಿಕೆಯ ಮೇರೆಗೆ ಅದನ್ನು ಇಂಗ್ಲಿಷ್’ಗೆ ತರ್ಜುಮೆ ಮಾಡಿಸಿ ಮತ್ತೆ ಓದಿ ಎಲ್ಲರಿಂದಲೂ ಪ್ರಶಂಸಿಸಲ್ಪಟ್ಟರು. ಪ್ರತಿಭೆ ಯಾರಪ್ಪನ ಸ್ವತ್ತೂ ಅಲ್ಲ. ಸಾಧಕನ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲವೇ ಆಗಿದೆ. ಸಾಧಿಸುವ ಹುಮ್ಮಸ್ಸಿನ ಪ್ರಮೀಳಾ ಶೆಟ್ಟಿಯವರ ಎಲ್ಲ ಕನಸುಗಳು ಈಡೇರಿ ಇನ್ನಷ್ಟು ಸಾಧನೆ ಗೈದು, ಸನ್ಮಾನ, ದಾಖಲೆಗಳ ಗರಿ ನಿಮ್ಮ ಮಡಿಲಿಗೆ ಸೇರಿ ಸಾಧನೆಯ ಶಿಖರದ ತುತ್ತ ತುದಿಯಲ್ಲಿ ಮಿನುಗುವ ದ್ರುವ ತಾರೆ ನೀವಾಗಿ ಎಂಬ ಹಾರೈಕೆ ನಮ್ಮದು.
(ಪ್ರಮೀಳಾ ಶೆಟ್ಟಿಯವರು ಚೆನ್ನೈನ ಗಿನ್ನಿಸ್ ರೆಕಾರ್ಡ್ ಕಾರ್ಯಕ್ರಮದಲ್ಲಿ ವಾಚಿಸಿದ ಕವನ)
ಅಂಕಗಳೇನು ಅಂತಸ್ತುಗಳೇನು
ಅಂದವೇನು ಯಾವುದಿದ್ದರೆನಯ್ಯಾ
ಪ್ರತಿಭೆಯ ಪ್ರಜೆಗಳ ಮುಂದೆ
ಹಿತಶತ್ರುಗಳಿದ್ದರೇನು ಬಂಧು-ಬಾಂಧವರಿದ್ದರೇನು
ಬಡವ ಬಲ್ಲಿಗರಿದ್ದರೇನಯ್ಯಾ
ಜಗಜಗಿಸುವ ಪ್ರತಿಭೆಗೆ
ತಿಳಿದವರಾದರೇನು ತಿಳಿಯದವರಾದರೇನು
ಹಿರಿಯ ಕಿರಿಯವರಾದರೇನು
ಕಂಡು ಕಾಣದವರಾದರೇನು
ಪ್ರತಿಭೆ ಎಂದೆಂದು ಪ್ರತಿಭೆ ಅಲ್ಲವೇ
ಸೋತು ಗೆದ್ದವರಾದರೇನು
ಗೆದ್ದು ಸೋತವರಾದರೇನು
ಬಿದ್ದು ಎದ್ದು ನಿಲ್ಲುವರಯ್ಯಾ
ನಾಡ ಕೀರ್ತಿಯ ದೀಪ ಬೆಳಗಿಸುವ
ಪ್ರತಿಭೆ ನಮ್ಮದಯ್ಯಾ…
(ಪ್ರಮೀಳಾ ಶೆಟ್ಟಿ ಸೋಮೇಶ್ವರ)
ಭಾವಚಿತ್ರಗಳು: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
Get In Touch With Us info@kalpa.news Whatsapp: 9481252093, 94487 22200
Discussion about this post