ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಾಮನ ನೆನೆ ಮನವೇ
ಚೈತ್ರದ ಆರಂಭದೊಂದಿಗೆ ರಾಮ ನವಮಿಯ, ರಾಮೋತ್ಸವ, ಸಂಗೀತೋತ್ಸವದ ಝೇಂಕಾರವೂ ಕಳೆಗುಟ್ಟುತ್ತದೆ. ರಾಮ ನಿತ್ಯ ನೂತನನಾದರೂ, ನಮ್ಮೊಳಗೇ ಅವನಿದ್ದರೂ ಆತನ ಅನಂತಾನಂತ ಭಾವ ಮಾತ್ರ ಇಂದಿಗೂ ಸಾಮಾನ್ಯರಿಗೆ ನಿಟುಕದಂತಿದೆ.
ಆಗಸದಿ ಒಮ್ಮೆಲೇ ಸುಳಿಯಿತು ಮಿಂಚು, ಕನಸಿನ ರೆಪ್ಪೆಗಳಲ್ಲಿ ಮಿಂಚಿ ಮಾಯವಾದ ಸೆರಗಿನಂಚಿನಂತೆ! ಆ ಬೆಡಗಿನಲಿ, ಬೆಳಕಿನಾ ಸಿರಿಯಲಿ, ಬಳ್ಳಿಯಂತೆ ಬಳುಕಿ ನವಿರೇಳಿಸಿದ ರೋಮಾಂಚನದಲಿ ಆದೇನೋ ಆಕರ್ಷಣೆ… ಕ್ಷಣಗಳು ಉರುಳಿದರೂ, ಕಣ್ಣಂಚಿನ ನೋಟ ಸರಿದರೂ ಚಿತ್ತ ಭೂಮಿಕೆಯ ಸ್ಮರಣಿಕೆಗಳು, ನೆನಪಿನಂಗಳದಿ ಅಂಕುರಾರ್ಪಣೆಗೊಂಡ ಚಿತ್ರಣಗಳು… ಸುಳಿ ಸುಳಿದಾಡುವ ಮತ್ತೆ ಮತ್ತೆ ಮಾರ್ದನಿಸುವ ಆ ನಿನಾದಗಳು.
ಹೌದು, ಪ್ರತಿ ಮುಂಗಾರಿಗೊಮ್ಮೆ ಮಿಂಚು ಸುಳಿದು ಮಾಯವಾಗುವಂತೆ, ಭೋರ್ಗರೆವ ವರ್ಷಧಾರೆಗೆ ಮೂನ್ಸೂಚನೆ ನೀಡುವಂತೆ ಚೈತ್ರನ ಆಗಮನದೊಂದಿಗೆ ರಾಮ ನವಮಿ ಇಣುಕುತ್ತದೆ. ಶ್ರೀರಾಮನ ಜನನವನ್ನು ನೆನಪಿಸುತ್ತದೆ. ರಾಮೋತ್ಸವದ ಮೆರಗು, ಬಿನ್ನಾಣ ಕಳೆದು ಹೋದ ನಂತರ ಮತ್ತದೇ ಜೀವನ. ಅದೇ ಗೊಣಗು, ತಿಣುಕು, ಹುಡುಕು. ಜನನ ಮರಣಗಳ ಚಕ್ರವಿರುವಂತೆ, ಸಂವತ್ಸರಗಳ ಆಗಮನ, ನಿಗರ್ಸಮನವೂ ಅಷ್ಟೇ ನಿರಂತರ. ಪ್ರತಿ ಸಂವತ್ಸರದ ಆದಿಯಲ್ಲಿ, ಚೈತನ್ಯ ಆಗಮನದೊಂದಿಗೆ ಶ್ರೀರಾಮನ ಅವತಾರವಾಗುತ್ತದೆ. ಆ ಕ್ಷಣ ಸರಿದಂತೆ ರಾಮ ನವಮಿಯ ಸಡಗರ, ಸಂಭ್ರಮ, ನಿನಾದವೂ ಸರಿದು ಹೋಗುತ್ತದೆ ಅಥವಾ ಯಾಂತ್ರಿಕತಯೊಳಗೆ ಒಂದಾಗುತ್ತದೆ.
ರಾಮ ಎಂಬ ಆಂತರ್ಯದ ತೇಜಸ್ಸು
ರಾ ಎಂಧರೆ ಬೆಳಕು, ಕಾಂತಿ ಎಂದರ್ಥ. ಆಂಗ್ಲಪದಗಳಾದ ರೇಸ್ ಮತ್ತು ರೇಡಿಯನ್ಸ್ ಪದಗಳ ಮೂಲವಿರುವುದು ರಾಮ ಎಂಬ ಪದದಲ್ಲಿ, ಮ ಎಂದರೆ ಸ್ವಯಂ ಅಥವಾ ನಾನು. ನಮ್ಮೋಳಗಿನ ಪ್ರಜ್ವಲಿಸುವ ಬೆಳಕು, ನಮ್ಮ ಹೃದಯದೊಳಗಿನ ಕಾಂತಿಯೇ ರಾಮ. ಇನ್ನೊಂದರ್ಥದಲ್ಲಿ ಹೇಳುವುದಾದರೆ ಸೃಷ್ಟಿಯ ಪ್ರತಿಯೊಂದು ಜೀವರಾಶಿಯ ಕಣಕದಲ್ಲಿರುವ ಪ್ರಭೆಯು ರಾಮ. ಭಗವಾನ್ ಶ್ರೀರಾಮ ಸತ್ಯಸಂಧನಾಗಿ, ಆದರ್ಶ ರಾಜನಾಗಿ ಗುರುತಿಸಿಕೊಂಡವನು. ಮಹಾತ್ಮ ಗಾಂಧಿ ಒಮ್ಮೆ ಹೇಳಿದ್ದರು: ನೀವು ನನ್ನಿಂದ ಎಲ್ಲವನ್ನೂ ಕಸಿದುಕೊಳ್ಳಿ. ನಾನು ಬದುಕುತ್ತೇನೆ. ಆದರೆ ನೀವು ನನ್ನಿಂದ ರಾಮನನ್ನು ಕಸಿದುಕೊಂಡರೆ ಮಾತ್ರ ಅಸ್ತಿತ್ವದಲ್ಲುಳಿಯಲಾರೆ.
ದಶರಥ ಮತ್ತು ಕೌಶಲ್ಯೆಯ ಮಗ ರಾಮ. ಹೆಸರೇ ಸೂಚಿಸುವಂತೆ ಸಂಸ್ಕೃತದಲ್ಲಿ ದಶರಥ ಎಂದರೆ ಹತ್ತು ರಥಗಳು ಎಂದೂ, ಕೌಶಲ್ಯ ಎಂದರೆ ಕೌಶಲ್ಯ/ನೈಪುಣ್ಯ ಎಂದ ಎಂದರ್ಥ. ಪಂಚೇಂದ್ರಿಯಗಳು ಮತ್ತು 5 ಕರ್ಮೇಂದ್ರೀಯಗಳನ್ನು ದಶರಥ ಎಂಬ ಪದ ಸೂಚಿಸುತ್ತದೆ. ದಶರಥಗಳನ್ನು ಮುನ್ನಡೆಸುವ ಕೌಶಲ್ಯಯುತ ಚಾಲಕರೇ ರಾಮನಿಗೆ ಜನ್ಮನೀಡಬಲ್ಲರು. ಯಾವಾಗ ಪಂಚೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳನ್ನು ಕೌಶಲ್ಯದಿಂದ ಬಳಸುತ್ತೇವೋ ಆಗ ಮಾತ್ರ ನಮ್ಮೊಳಗೆ ಕಾಂತಿಯ ಉಗಮವಾಗುತ್ತದೆ. ಶ್ರೀರಾಮನ ಜನನವಾಗಿದ್ದು ಅಯೋಧ್ಯೆಯಲ್ಲಿ. ಯಾವ ಜಾಗದಲ್ಲಿ ಯುದ್ಧ ಅಥವಾ ಸಂಘರ್ಷ ನಡೆಯಲು ಸಾಧ್ಯವಿಲ್ಲವೋ ಅದಕ್ಕೆ ಅಯೋಧ್ಯಾ ಎಂದು ಹೆಸರು. ಮನಸ್ಸಿನಲ್ಲಿ ಯಾವಾಗ ಸಂಘರ್ಷವಿರುವುದಿಲ್ಲವೋ ಆಗಲೇ ಬೆಳಕು ಹರಿಯುತ್ತದೆ.
ಪಂಚಭೂತಗಳು ಮತ್ತು ಇಂದ್ರಿಯಗಳ ಒಟ್ಟಾರೆ ರೂಪವೇ ಈ ಸೃಷ್ಟಿ ಹಾಗಿದ್ದರೆ ವಸ್ತು ಅಥವಾ ಇಂದ್ರಿಯಗಳಲ್ಲಿ ಯಾವುದು ಮುಖ್ಯವಾಗುತ್ತದೆ?
ನಿಸ್ಸಂಶಯವಾಗಿಯೂ ಇಂದ್ರಿಯಗಳೇ. ಏಕೆಂದರೆ, ಟೆಲಿವಿಷನ್ಗಿಂತಲೂ ನಿಮ್ಮ ನೇತ್ರಗಳು ಮಹತ್ವಪೂರ್ಣವಾದುವು. ಸಂಗೀತ ಅಥವಾ ಸದ್ದಿಗಿಂತಲೂ ಕಿವಿಗಳು ಬಹಳ ಮುಖ್ಯ. ಆದರೆ ಬಹಳಷ್ಟು ಮಂದಿಗೆ ಈ ಸಂಗತಿ ಅರ್ಥವಾಗುವುದೇ ಇಲ್ಲ. ಬದಲಾಗಿ ವಾಸ್ತವಕ್ಕೆ ತದ್ವಿರುದ್ಧವಾದದ್ದನ್ನೇ ಅವರು ಸತ್ಯ ಎಂದು ಭಾವಿಸಿರುತ್ತಾರೆ. ಟಿ.ವಿಯನ್ನು ಹೆಚ್ಚು ವೀಕ್ಷಿಸುವುದು ಕಣ್ಣುಗಳಿಗೆ ಕ್ವೇಮವಲ್ಲ ಎನ್ನುವುದು ಅವರಿಗೆ ತಿಳಿದಿರುತ್ತದೆ. ಆದರೆ ಅವರು ದೃಷ್ಟಿಯನ್ನು ಕಡೆಗಣಿಸಿ, ಟಿ. ವಿ. ವೀಕ್ಷಣೆಯನ್ನು ಮುಂದುವರಿಸುತ್ತಾರೆ. ತಮ್ಮ ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದ ಆಹಾರದ ಅಗತ್ಯವಿಲ್ಲ ಎನ್ನುವುದು ಅವರಿಗೆ ತಿಳಿದಿರುತ್ತದೆ. ಆದರೂ ಬಾಯಿಚಪಲಕ್ಕೆ ಶರಣಾಗಿ ಹೆಚ್ಚು ಆಹಾರ ಸೇವಿಸುತ್ತಾರೆ. ಇನ್ನು ಇಂದ್ರಿಯಗಳಿಗಿಂತಲೂ ಮುಖ್ಯವಾದದ್ದೆಂದರೆ ನಮ್ಮ ಮನಸ್ಸು ಯಾವಾಗ ಮನಸ್ಸನ್ನು ಕಡೆಗಣಿಸಿ ಕೇವಲ ಇಂದ್ರಿಯಗಳನ್ನು ಪುರಸ್ಕರಿಸುತ್ತಾ ಸಾಗುತ್ತಿರೋ ಆಗ ನೀವು ಖಿನ್ನತೆಗೊಳಗಾಗುತ್ತಿರಿ. ಅಂದರೆ ನಿಮ್ಮ ಕಡುಬಯಕೆಗಳೆಲ್ಲ ವಸ್ತುಗಳತ್ತಲೇ ಹೆಚ್ಚು ಕೇಂದ್ರೀಕೃಯವಾದಾಗ ಖಿನ್ನತೆ ಆವರಿಸುತ್ತದೆ. ಮನಸ್ಸು ಕಡುಬಯಕೆ ಮತ್ತು ಹೇವರಿಕೆ ಎಂಬ ಎರಡು ಅಂಶಗಳ ಜಟಾಪಟಿಯಿಂದಲೇ ಜೀವಂತವಾಗಿದೆ.
ಹಾಗಿದ್ದರೆ ಮನಸ್ಸಿನಲ್ಲಿಯ ಈ ಹೊಡೆದಾಟವನ್ನು- ಸಂಘರ್ಷವನ್ನು ನಿಲ್ಲಿಸುವುದು ಹೇಗೆ? ಧ್ಯಾನ (ಮೆಡಿಟೇಷನ್) ಮತ್ತು ಉಸಿರಾಟದ ವಿಧಾನಗತಿ ಈ ಪ್ರಶ್ನೆಗೆ ಉತ್ತರವಾಗಿ ನಿಲ್ಲುತ್ತವೆ. ಇವುಗಳ ಸಹಾಯದಿಂದ ಮನುಷ್ಯರು ಪರಮಾನಂದದ ಸ್ಥಿತಿಯನ್ನು ಪಡೆಯಬಹುದು. ಆನಂದವೇ ಆರಾಮ ಎನ್ನುವುದು ಅರ್ಥಮಾಡಿಕೊಳ್ಳಿ!
ಧ್ಯಾನ ಮತ್ತು ಉಸಿರಾಟದ ಮೇಲೆ ನಿಯಂತ್ರಣ ಸಾಧಿಸುವುದರಿಂದ ದೈಹಿಕ ಆರೋಗ್ಯ ಮತ್ತು ಮಾನಸಿಕ ಶುದ್ಧೀಕರಣ ಸಾಧ್ಯವಾಗುತ್ತದೆ. ನಮ್ಮ ಬುದ್ಧಿಶಕ್ತಿ ಭಾವನೆಗಳು ಸ್ವಚ್ಛವಾಗುತ್ತವೆ. ನಮ್ಮನಾಳುತ್ತಿರುವ ನಮ್ಮೊಳಗಿನ ಅವಕಾಶ/ಜಾಗವೂ ಪರಿಶುದ್ಧವಾಗುತ್ತದೆ. ಆಂತರ್ಯದಲ್ಲಿರುವ ಈ ಜಾಗದಿಂದಲೇ ನಮ್ಮ ಎಲ್ಲಾ ಯೋಚನೆಗಳು ಮತ್ತು ಭಾವನೆಗಳು ಹುಟ್ಟಿಕೊಳ್ಳುತ್ತವೆ. ನೀವು ಇವುಗಳ ಕೈಗೊಂಬೆಗಳಷ್ಟೆ. ಯಾವಾಗ ನಿಮ್ಮ ಭಾವನೆಗಳು ಏರತೊಡಗುತ್ತವೋ, ಆಗ ನೀವು ಅವುಗಳಿಗೆ ಬಲಿಪಶುಗಳಾಗುತ್ತೀರಿ. ನಿಮ್ಮ ಆಲೋಚನೆಯ ಸ್ವರೂಪವೇ ಪೂರ್ವಗ್ರಹದಿಂದ ಕೂಡಿದೆ ಎಂದಾದರೆ, ನೀವು ಅದಕ್ಕೆ ತಕ್ಕಂತೆಯೇ ವರ್ತಿಸುತ್ತೀರಿ. ನಾವು ಹೇಗೆ ಯೋಚಿಸುತ್ತೇವೆ, ನಮ್ಮ ಭಾವನೆಗಳು ಹೇಗಿವೆ, ನಮ್ಮೊಳಗೆ ಏನು ನಡೆಯುತ್ತಿದೆ ಎನ್ನುವುದನ್ನು ನಾವು ಒಳಗಣ್ಣು ತೆರೆದು ನೋಡುವುದು ಬಹಳ ಅಪರೂಪವಾಗಿಬಿಟ್ಟಿದೆ. ನಾವು ಯೋಚಿಸುವ ಮೊದಲೇ ಕಾರ್ಯನಿರ್ವಹಿಸಿಬಿಡುತ್ತೇವೆ. ನಮ್ಮ ಭಾವನೆಗಳ ಗುದ್ದಾಟವನ್ನು ಪರಿಹರಿಸುವ ಮುನ್ನವೇ ಮುಂದಡಿಯಿಟ್ಟುಬಿಡುತ್ತೇವೆ.
ಅರಿವು-ನಿಯಮ
ನಮ್ಮೊಳಗೆ ಹಲವು ನಿಯಮಗಳನ್ನು ಮಾಡಿಕೊಂಡಿರುತ್ತೇವೆ. ಈ ನಿಯಮಗಳು ಮನೆಯ ಕಾವಲು ಗಾರನಂತೆ ವರ್ತಿಸುತ್ತವೆ. ನಿಯಮಗಳು ಕಾವಲುಗಾರನಾದರೆ, ಭಾವನೆಗಳೇ ಮನೆಯ ಒಡೆಯ. ಯಾವಾಗ ಮನೆಯೊಡೆಯ ಗೇಟಿನ ಬಳಿ ಬರುತ್ತಾನೋ, ಆಗ ಕಾವಲುಗಾರ ಸುಮ್ಮನೇ ಬಾಗಿಲು ತೆರೆದು ಒಡೆಯನನ್ನು ಒಳಗೆ ಕಳುಹಿಸುತ್ತಾನೆ. ನಿಮ್ಮೊಳಗೆ ನಿತ್ಯ ನಡೆಯುತ್ತಿರುವುದು ಇದೇ ಪ್ರಕ್ರಿಯೆ ಎನ್ನುವುದನ್ನು ಅರ್ಥಮಾಡಿಕೊಳ್ಳಿ. ಸತ್ಯವೆಂದರೆ ನಮ್ಮ ದುರಾಸೆ, ಕೋಪ, ಅಸೂಯೆ, ಅಸಹನೆಯನ್ನು ಹೇಗೆ ನಿಯಂತ್ರಿಸಬೇಕು ಎನ್ನುವುದನ್ನು ನಮಗೆ ಶಾಲೆಯಲ್ಲಾಗಲಿ ಅಥವಾ ಮನೆಗಳಲ್ಲಾಗಲಿ ಯಾರೂ ಕಲಿಸಿಕೊಟ್ಟಿಲ್ಲ, ನಮ್ಮ ಎಲ್ಲಾ ಕಾರ್ಯಗಳಿಗೂ ಕಾರಣವಾದಂಥ ಈ ಮನಸ್ಸನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನೂ ಯಾರೂ ಕಲಿಸಿಕೊಡುವುದಿಲ್ಲ, ನಾವೆಲ್ಲರೂ ಒಂದೇ-ಪರಸ್ಪರರನ್ನು ಬಿಟ್ಟರೆ ಬೇರ್ಯಾರೂ ಇಲ್ಲ. ನಮ್ಮ ಭೂಮಿ ಚಿಕ್ಕದಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ನಾವು ಬಾಹ್ಯಾಕಾಶಕ್ಕೇ ಹೋಗಿ ನೋಡಬೇಕಿಲ್ಲ. ನಾವು ನಮ್ಮೊಳಗಿನ ಅನಂತ ಅಕಾಶದಲ್ಲಿ ಕಣ್ತೆರೆದರೂ ಈ ಸತ್ಯದ ಅರಿವಾಗುತ್ತದೆ. ಈ ಸಂಪೂರ್ಣ ಸೃಷ್ಟಿಯನ್ನು ದೊಡ್ಡ ಮನಸ್ಸೊಂದು ನಿರ್ವಹಿಸುತ್ತಿದ್ದರೆ, ನಮ್ಮ ಜೀವನವನ್ನು ನಿಭಾಯಿಸುತ್ತಿರುವುದು ಸಣ್ಣ ಮನಸ್ಸು ಕೆಲವೊಮ್ಮೆ ಈ ದೊಡ್ಡ ಮನಸ್ಸು ಗೆಲುವು ಸಾಧಿಸಿದರೆ, ಇನ್ಮೊಮ್ಮೆ ಚಿಕ್ಕ ಮನಸ್ಸು ವಿಜಯಿಯಾಗುತ್ತದೆ. ಸಣ್ಣ ಮನಸ್ಸು ಗೆದ್ದರೆ ದುಃಖವಾಗುತ್ತದೆ. ದೊಡ್ಡ ಮನಸ್ಸು ಗೆದ್ದಾಗ ಸಂತಸ ಪ್ರತ್ಯಕ್ಷವಾಗುತ್ತದೆ.
ನಮ್ಮೊಳಗಿನ ರಾಮಾಯಣ
ಇಂದು ನಮ್ಮೊಳಗೇ ನಡೆಯುತ್ತಿದೆ ಸಂಪೂರ್ಣ ರಾಮಾಯಣ. ರಾಮ ಎಂದರೆ ಸ್ವಯಂ. ಲಕ್ಷ್ಮಣ ಎಂದರೆ ಅರಿವು. ಸೀತೆಯೇ ಮನಸ್ಸು ರಾವಣನೇ ಅಹಂ, ಸೀತೆ ಬಂಗಾರದ ಜಿಂಕೆಗೆ ಆಕರ್ಷಿತಳಾದಳು! ಮನಸ್ಸಿನ ಗುಣವೇ ಚಂಚಲ. ಯಾವುದಾದರೂ ವಸ್ತುವಿನೆಡೆಗೆ ಆಕರ್ಷಿತವಾದರೆ ಅದು ಕೂಡಲೇ ಅದರತ್ತ ಹರಿಯುತ್ತದೆ. ಮನಸ್ಸನ್ನು ಅಹಂ ಅಪರಿಹರಿಸಿಬಿಡುತ್ತದೆ ಮತ್ತು ಸ್ವಯಂನಿಂದ ಅದನ್ನು ಬೇರ್ಪಡಿಸುತ್ತದೆ. ಇನ್ನು ಹನುಮಂತನನ್ನು ಪವನಪುತ್ರ (ವಾಯುವಿನ ಮಗ) ಎನ್ನಲಾಗುತ್ತದೆ. ಸೀತೆಯನ್ನು ಕರೆತರಲು ರಾಮನಿಗೆ ಹನುಮ ಸಹಾಯ ಮಾಡುತ್ತಾನೆ. ಹೀಗಾಗಿ ಹನುಮ ಮತ್ತು ಲಕ್ಷ್ಮಣನ ಸಹಾಯದಿಂದ (ಉಸಿರಾಟ ಮತ್ತು ಅರಿವು) ಸೀತೆ(ಮನಸ್ಸು) ರಾಮನನ್ನು (ಸ್ವಯಂ) ಸೇರುತ್ತಾಳೆ. ಪ್ರಾಣಾಯಾಮವೆಂದರೇನು? ಅರಿವಿನಿಂದ ಉಡಿರಾಡುವುದೇ ಪ್ರಾಣಾಯಾಮ. ಮೆಡಿಟೇಷನ್ನ ಕೆಲವೇ ದಿನಗಳ ಅಭ್ಯಾಸವೂ ಕೂಡ ಮನಸ್ಸು ಶಾಂತಗೊಳಿಸಿ ನಿಮ್ಮ ಜೀವನದ ಗುಣಮಟ್ಟವನ್ನು ಬದಲಿಸಬಲ್ಲದು. ನಮ್ಮ ಉಸಿರಿನಲ್ಲಿ ಬಹಳಷ್ಟು ರಹಸ್ಯಗಳು ಅಡಕವಾಗಿವೆ. ಗಮನಿಸಿ ನೋಡಿ-ಭಿನ್ನ ಭಿನ್ನ ಭಾವನೆಗೆ ತಕ್ಕಂತೆ ನಮ್ಮ ಉಡಿರಾಟದ ಲಯವೂ ಭಿನ್ನವಾಗಿರುತ್ತದೆ. ಯಾವಾಗ ನಿಮಗೆ ನೇರವಾಗಿ ಮನಸ್ಸನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲವೋ, ಆಗ ಉಸಿರಾಟದ ಮೂಲಕ ಅದನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು. ಉಡಿರಾಟದ ಮೇಲೆ ಹಿಡಿತವಿದ್ದರೆ ಮಾನಸಿಕ ದುಗುಡಗಳಿಗೆ ಔಷಧಗಳ ಅಗತ್ಯವಿರುವುದಿಲ್ಲ.
ಮನಸ್ಸು ಶಾಂತವಾದಾಗ ಸಂಪೂರ್ಣ ವಿಶ್ರಾಂತಿ ಅಥವಾ ಮೆಡಿಟೇಷನ್ ಸಾಧ್ಯವಾಗುತ್ತದೆ. ದೇವರೊಬ್ಬನೇ ಅಸ್ತಿತ್ವದಲ್ಲಿದ್ದಾನೆ ಎಂಬ ಈ ಅನುಭವ ಅಥವಾ ನಿಶ್ಚಿತಾಭಿಪ್ರಾಯವೇ ಸಮಾಧಿ. ಎಲ್ಲಾ ರೀತಿಯ ಪ್ರತಿಭೆ, ಶಕ್ತಿ ಮತ್ತು ಸದ್ಗುಣಗಳ ತಾಯಿ ಎಂದು ಸಮಾಧಿ ಸ್ಥಿತಿಯನ್ನು ಕರೆಯಬಹುದು. ಒಬ್ಬ ಪ್ರಾಪಂಚಿಕ ವ್ಯಕ್ತಿಗೂ ಕೂಡ ಸಮಾಧಿಯ ಅಗತ್ಯವಿರುತ್ತದೆ. ಏಕೆಂದರೆ ಆತನೂ ಶಕ್ತಿ ಮತ್ತು ಸದ್ಹುಣಗಳನ್ನು ಬಯಸುತ್ತಿರುತ್ತಾನೆ. ಎಲ್ಲಾ ವಿಧದ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಿಂದ ಹಿಂದಕ್ಕೆ ಸರಿಯುವುದೇ ವಿಶ್ರಾಂತಿ. ವಿಶ್ರಾಂತಿ ಎನ್ನುವುದು ನಮ್ಮ ದೇಹ ವ್ಯವಸ್ಥೆಯಲ್ಲಿ ನಿದ್ರೆಯ ರೂಪದಲ್ಲಿ ಅಸ್ತಿತ್ವದಲ್ಲಿದೆ. ನಿದ್ರೆಯು ಚಟುವಟಿಕೆಯ ಖಾಸಾ ಗೆಳೆಯ. ಆದರೆ ಸಮಾಧಿಯೆನ್ನುವುದು ಪ್ರಜ್ಞಾಪೂರ್ವಕ ವಿಶ್ರಾಂತಿ. ಸಮಾಧಿಯು ಜೀವನದ ಖಾಸಾ ಗೆಳೆಯ! ನಾವು ಸಂಪೂರ್ಣ ಸಾಮರ್ಥ್ಯದೊಂದಿಗೆ ಬದುಕಬೇಕೆಂದರೆ, ಸಮಾಧಿ ಸ್ಥಿತಿ ಅತ್ಯಗತ್ಯ.
ಮನಸ್ಸು ಮನಸ್ಸೇ ಇಲ್ಲದ ಸ್ಥಿತಿಯನ್ನು ತಲುಪುವುದು ಮತ್ತು ತನ್ನ ಮೂಲ ಬಿಂದುವಿಗೆ ಹಿಂದಿರುಗುವುದೇ ಧ್ಯಾನ. ನೀವು ಅನವಶ್ಯಕವಾಗಿ ಒತ್ತಡ, ಚಿಂತೆಯನ್ನು ಹೊತ್ತು ಅಡ್ಡಾಡುತ್ತೀದ್ದೀರಿ. ಈಗ, ಈ ಕ್ಷಣದಲ್ಲಿ ಜಾಗೃತವಾಗಿರುವಂತೆ ನಿಮ್ಮ ಮನಸ್ಸಿಗೆ ತರಬೇತಿ ನೀಡಿ. ಯಾವಾಗ ಮನಸ್ಸಿನ ಹಾರಾಟ ನಿಲ್ಲುತ್ತದೋ ಆಗ ಮಾತ್ರ ನೀವು ಸಂಪೂರ್ಣ ವಿಶ್ರಾಂತಿ ಮತ್ತು ಪರಿಪೂರ್ಣ ಜಾಗೃತಿಯನ್ನು ಅನುಭವಿಸುತ್ತೀರಿ. ಆ ಸ್ಥಿತಿಯಲ್ಲಿ ನಿಮ್ಮ ಎಲ್ಲಾ ಅಂಗಗಳೂ ನಿಮ್ಮೊಂದಿಗೆ ಸಹಕರಿಸುತ್ತಿವೆ ಮತ್ತು ನೀವು ಸೃಷ್ಟಿಯೊಡನೆ ಒಂದಾಗುತ್ತೀರಿ. ಆಗ, ಆ ಸಮಯದಲ್ಲಿ ರಾಮ ಜನಿಸುತ್ತಾನೆ!
ವಾಲ್ಮೀಕಿ ಮಹರ್ಷಿಗಳು ರಾಮಾಯಣದ ಕೊನೆಯ ಭಾಗದಲ್ಲಿ ಪ್ರಸಂಗವೊಂದನ್ನು ಉಲ್ಲೇಖಿಸುತ್ತಾರೆ. ಸೂಕ್ಷ್ಮವಾಗಿ ಅರ್ಥಮಾಡಿಕೊಂಡರೆ ರಾಮನ ಕುರಿತ ಜಿಜ್ಞಾಸೆಗಳೆಲ್ಲವೂ ಪರಿಹಾರವಾಗುತ್ತದೆ. ಅವರೆನ್ನುತ್ತಾರೆ, ಈ ಪ್ರಪಂಚವೆನ್ನುವುದು ಜನನ, ಮರಣಗಳ ವರ್ತುಲ. ಜೀವನ್ಮರಣ ಚಕ್ರದ ಪ್ರತಿಯೊಂದು ಹಂತವನ್ನು ಕಲ್ಪವೆನ್ನುತ್ತಾರೆ. ಪ್ರತಿಯೊಂದು ಕಲ್ಪವೂ ನಾಲ್ಕು ಯುಗ ಅಥವಾ ಭಾಗಗಳನ್ನು ಒಳಗೊಂಡಿದೆ. ತ್ರೇತಾಯುಗವು ದ್ವಿತೀಯ ಕಲ್ಪವಾಗಿದೆ. ಈ ಯುಗದಲ್ಲಿ ಶ್ರೀರಾಮನು ಅಯೋಧ್ಯೆಯಲ್ಲಿ ಜನ್ಮತಾಳಿದ್ದಾನೆ. ಒಂದು ದಿನ ಅವನ ಉಂಗುರ ನಾಗಲೋಕದೊಳಗೆ ಜಾರಿ ಹೋಗುತ್ತದೆ. ವಾನರವೊಂದು ತನ್ನೊಡೆಯನನ್ನು ಕಾಪಾಡುವ ಹೊಣೆಗಾರಿಕೆ ಮರೆತು ಕಲ್ಪಿತ ಮುದ್ರಿಕೆಯ ಜಾಡನ್ನು ಅರಸಿ ಹೋಗುತ್ತದೆ. ರಕ್ಷಕನಿಲ್ಲದ ಶ್ರೀರಾಮ ಕಾಲಪುರುಷನ ವಶವಾಗುತ್ತಾನೆ.
ರಾಮನ ಅವತಾರ
ಪ್ರತಿಯೊಂದು ಜೀವದ ಆದಿಗೂ ಕೊನೆಯಿರುವಂತೆ ರಾಮನ ಅವತಾರ ಸಮಾಪ್ತಿಯ ಕ್ಷಣ ಸನ್ನಿಹಿತವಾಗಿರುತ್ತದೆ. ರಾಮನ ಆಪ್ತೇಷ್ಟನೊಬ್ಬನು ಹೇ ರಾಮ ಕಾಲಪುರುಷನನ್ನು ಎದುರುಗೊಳ್ಳುವ ಸಮಯ ಬಂದಿತೆನ್ನುತ್ತಾನೆ. ಜಾತಸ್ಯ ಮರಣಂ ಧ್ರುವಂ(ಹುಟ್ಟಿದಾತ ಕೊನೆಯುಸಿರು ಎಳೆಯಲೇಬೇಕು) ಎನ್ನುವ ಸತ್ಯ ಅರಿತ ರಾಮನಿಗೆ ಆ ಮಾತುಗಳಲ್ಲಿ ಅಂತಹದ್ದೇನು ವಿಶೇಷ ಕಾಣುವುದಿಲ್ಲ. ಅವನೆದೆಯ ಬಡಿತ ಒಂದಿನಿತೂ ಸ್ತಬ್ಧವಾಗುವುದಿಲ್ಲ. ಅವನು ಸಮಚಿತ್ತದಿಂದಲೇ ಎಲ್ಲವನ್ನು ಸ್ವೀಕರಿಸುತ್ತಾನೆ. ಮಂದಹಾಸ ಬೀರುತ್ತಲೇ ಓಹ್ ಯಮನ ಆಗಮನದೊಂದಿಗೆ ವೈಕುಂಠಕ್ಕೆ ಹಿಂದಿರುಗುವ ಸಮಯವೂ ಹತ್ತಿರವಾಯಿತು ಎನ್ನುತ್ತಾನೆ ಶ್ರೀರಾಮ. ಸಾವಿನಂಚಿನಲ್ಲಿದ್ದರೂ ಶ್ರೀರಾಮನೇನು ಅಂಜಲಿಲ್ಲ, ಅಳುಕಲಿಲ್ಲ. ಆದರೆ ಯಮನೇ ಅಯೋಧ್ಯೆಯನ್ನು ಪ್ರವೇಶಿಸಲು ಹಿಂಜರಿದ. ಕಾರಣವಿಷ್ಟೇ ರಾಮನ ಅಂತರಂಗದ ಅರಮನೆ ಕಾಯುತ್ತಾ ನಿಂತಿದ್ದ ಹನುಮನೆಲ್ಲಿ ತನ್ನನ್ನು ಕಾಡುತ್ತಾನೋ, ಅಪ್ಪಳಿಸುತ್ತಾನೋ, ಬಡಿದೋಡಿಸುತ್ತಾನೋ ಎನ್ನುವ ಭೀತಿ ಅವನಿಗೆ.
ರಾಮನ ಉಪಾಯ
ಯಮನ ಪುರ ಪ್ರವೇಶಕ್ಕೆ ಹನುಮ ಆ ಸ್ಥಳದಿಂದ ಕದಲಲೇ ಬೇಕಿತ್ತು. ರಾಮನಿಗೂ ಈ ವಿಷಯ ತಿಳಿದಿತ್ತು. ರಾಮ ಒಂದು ಉಪಾಯ ಹೂಡಿದ. ತನ್ನ ಕೈಬೆರಳೊಳಗಿನ ಮುದ್ರಿಕೆಯನ್ನು ಅರಮನೆಯ ನೆಲದ ಸಂದಿನೊಳಗೆ ಬೀಳಿಸಿದ. ಕಣ್ಣಳತೆಯಿಂದ ಸರಿದು ಮಾಯವಾದ ಮುದ್ರಿಕೆಯನ್ನು ಹುಡುಕಿ ಕೊಡುವಂತೆ ಹನುಮನಿಗೆ ಸೂಚಿಸಿದ. ಹನುಮನಾದರೋ ತನ್ನ ಗಾತ್ರವನ್ನು ಕೀಟಕ್ಕಿಂತಲೂ ಕಿರಿದಾಗಿಸಿಕೊಂಡು, ಸೂಕ್ಷ್ಮಾಣುಜೀವಿನಂತೆ ದೇಹ ಧರಿಸಿ ಆ ಸಂದಿಯೊಳಗೆ ಇಣುಕುತ್ತಾನೆ. ಹೀಗೆ ಮುದ್ರಿಕೆ ಹುಡುಕ ಹೊರಟ ಹನುಮನನ್ನು ಆ ದಾರಿ ನಾಗಲೋಕದತ್ತ ಕರೆದೊಯ್ಯುತ್ತದೆ. ನಾಗಲೋಕದಲ್ಲಿ ಹನುಮ ವಾಸುಕಿಯನ್ನು ಭೇಟಿಯಾಗುತ್ತಾನೆ. ತಾನು ಬಂದ ಕಾರಣವನ್ನು ವಾಸುಕಿಗೆ ವಿವರಿಸುತ್ತಾನೆ.
ಎಲ್ಲಿ ನೋಡಿದರಲ್ಲಿ ಶ್ರೀರಾಮ
ವಾಸುಕಿ ಹನುಮನನ್ನು ನಾಗಲೋಕದ ಮಧ್ಯಭಾಗದತ್ತ ಕರೆದೊಯ್ಯುತ್ತಾನೆ. ಅಲ್ಲಿ ಉಂಗುರಗಳಾ ಪರ್ವತವೇ ಇರುತ್ತದೆ. ಆ ಪರ್ವತದಲ್ಲಿ ಒಮ್ಮೆ ಜಾಲಾಡು, ನಿನ್ನ ಪ್ರಭು ರಾಮನ ಮುದ್ರಿಕೆ ಸಿಕ್ಕೇ ಸಿಗುತ್ತದೆ ಎನ್ನುತ್ತಾನೆ ವಾಸುಕಿ. ಹನುಮಂತ ಅರೆಕ್ಷಣ ವಿಚಲಿತಗೊಳ್ಳುತ್ತಾನೆ. ಮುಗಿಲೆತ್ತರದ ಕಸದ ರಾಶಿಯಲ್ಲಿ ಸೂಜಿಗಾಗಿ ಹುಡುಕಾಡಿದಂತಾಯಿತಲ್ಲ ನನ್ನ ಪರಿಸ್ಥಿತಿ. ಹೇ ಪ್ರಭು ನಾನೀಗ ಏನು ಮಾಡಲಿ? ಹುಡುಕದ ಹಾಗೇ ಹಿಂದಿರುಗಿದರೆ ನಿನ್ನ ಮಾತು ಮೀರಿದಂತಾಗುತ್ತದೆ. ಅದು ನನ್ನಿಂದ ಸಾಧ್ಯವಾಗದ ಮಾತು. ಮುಂದೇನು ಮಾಡಬೇಕೋ ತಿಳಿಯದಾಗಿದೆ. ಪ್ರಭು ನೀನೇ ದಾರಿ ತೋರಬೇಕು ಜೈ ಜೈ ಶ್ರೀರಾಮ ಎನ್ನುತ್ತಲೇ ಹನುಮ ಆ ಉಂಗುರದ ಪರ್ವತದ ಮೇಲೆ ತನ್ನ ಕೈಯನ್ನಿಡುತ್ತಾನೆ. ಕೈಯಾರೆ ಒಂದು ಉಂಗುರವನ್ನು ತೆಗೆದುಕೊಳ್ಳುತ್ತಾನೆ. ಅವನ ಕೈಗೆ ದೊರೆತ ಮೊದಲ ಉಂಗುರವೇ ಶ್ರೀ ರಾಮನ ಮುದ್ರಿಕೆಯಾಗಿರುತ್ತದೆ. ಚಕಿತನಾದ ಹನುಮ ಮತ್ತೊಂದು, ಮಗದೊಂದು ಹೀಗೆ ಒಂದಾದ ಮೇಲೆ ಒಂದೊಂದು ಉಂಗುರವನ್ನು ತೆಗೆದುಕೊಳ್ಳುತ್ತಾ ಹೋಗುತ್ತಾನೆ. ಎಲ್ಲವೂ ಪ್ರಭು ಮುದ್ರಿಕೆಯೇ ಆಗಿರುತ್ತದೆ. ಅವನಿಗೋ ಸಖೇದಾಶ್ಚರ್ಯ. ಇದೇನಿದು ಈ ಪರ್ವತದೊಳಗಿನ ಎಲ್ಲಾ ಉಂಗರವೂ ಶ್ರೀರಾಮನದ್ದೇ ಆಗಿವೆ. ಏನಿದರ ಅಂತರಾರ್ಥ? ಎಂದು ಕೊಳ್ಳುತ್ತಾನೆ. ರಾಮನೆಂಬಾತ ಮಾಣಿಕ್ಯ ಪರ್ವತವಿದ್ದಂತೆ. ಆ ಪರ್ವತದೊಳಗಿನ ಪ್ರತಿಯೊಂದು ತುಣುಕೂ ಮಾಣಿಕ್ಯವೇ ಎಲ್ಲವೂ ರಾಮ ಸ್ವರೂಪವೇ. ಅಂತೆಯೇ ಸೃಷ್ಟಿಯೂ, ಸೃಷ್ಟಿಯೊಳಗಿನ ರಹಸ್ಯವೂ. ರಹಸ್ಯವನ್ನು ಭೇದಿಸುತ್ತಾ, ಛೇದಿಸುತ್ತಾ ಹೋದಂತೆಲ್ಲಾ ಭಗವಂತನ ಇರುವುಕೆ ಸ್ವಷ್ಟವಾಗುತ್ತಲೇ ಹೋಗುತ್ತದೆ. ಒಮ್ಮೆ ಭಗವಂತ ವಿಶ್ವವ್ಯಾಪಕನಾಗಿದ್ದಾನೆ ಎಂದರಿವು ಮೂಡಿದ ಕೂಡಲೇ ನಮ್ಮ ಹುಡುಕಾಟ ನಿಲ್ಲುತ್ತದೆ. ಮನಸ್ಸು ಅವನೊಳಗೇ ವಿಲೀನವಾಗುತ್ತದೆ. ಆಗಷ್ಟೇ ನಮ್ಮ ಮರ್ಕಟ ಬುದ್ದಿಯೂ ಬದಿಗೆ ಸರಿದೀತು. ಹುಡುಕಾಟವೆಂಬ ಹುಡುಗಾಟವೂ ನಿಂತೀತು.
ಕಾಯುವಿಕೆಯ ಹಿಂದೇನಿದೆ?
ಪ್ರತಿ ಸಂವತ್ಸರದ ಹುಟ್ಟಿನೊಂದಿಗೆ, ಚೈತ್ರದ ಚಿಗುರಿನೊಂದಿಗೆ ರಾಮನ ಬರವಿಗಾಗಿ ಕಾಯುವುದು ತಪ್ಪಿಲ್ಲ. ರಾಮ ಮುದ್ರಿಕೆಗಾಗಿ ಹನುಮ ಹುಡುಕಾಟ ನಡೆಸಿದ ಘಟನೆ ನಡೆದು ಅದೆಷ್ಟೋ ಕಲ್ಪಗಳೇ ಕಳೆದಿವೆ. ಬದಲಾದ ಕಾಲಮಾನಕ್ಕೆ ತಕ್ಕಂತೆ ರಾಮಾಯಣವೂ ಬದಲಾಗಿದೆ. ಆದಾಗ್ಯೂ ಬದಲಾವಣೆಯ ಪರ್ವದಲ್ಲಿ ರಾಮನೊಂದಿಗೆನ ಮೂಲಸತ್ವ ಇಂದಿಗೂ ಹಾಗೆ ಉಳಿದಿದೆ. ನಂಬಿಕೆಗಳ ಪರ್ವದಲ್ಲಿ ದೈವದ ಕುರುಹಿಗಾಗಿ ಹುಡುಕಾಟ ನಿತ್ಯ ನಿರಂತರವಾಗಿದೆ. ಅಂತಹದ್ದೊಂದು ಹುಡುಕಾಟ ಈಗಿನದಲ್ಲ. ರಾಜ, ಮಹಾರಜರ ಕಾಲದಲ್ಲೂ ಇತ್ತು. ಬದಲಾದ ಕಾಲಮಾನದಲ್ಲಿ ರಾಮಾಯಣವನ್ನು, ರಾಮನನ್ನು ಅರ್ಥೈಸಿಕೊಂಡ ರೀತಿ ಬದಲಾದರೂ ಹುಡುಕಾಟವಿನ್ನೂ ಕೊನೆಯಾಗಿಲ್ಲ. ಜಗದಗಲ ವ್ಯಾಪಿಸಿರುವ ರಾಮನ ಅನಂತ ರೂಪವನ್ನು ಅರಸದೆ ಯಾವುದೋ ಒಂದು ಘಳಿಗೆಯನ್ನು ಅರೆಸಿಕೊಂಡು ಹೋಗುತ್ತಿದ್ದೇವೆ. ನಮ್ಮೆದುರಿನ ಆ ಘಳಿಗೆ ರಾಮನು ಉದಯಿಸಿದ ಕ್ಷಣವಿರಬಹುದು ಎಂದು ಭಾವಿಸಿ ಕಾತರಿಸುತ್ತಿದ್ದೇವೆ.
ರಾಮಾಯಣವೇ ಶ್ರದ್ಧಾ ಕೇಂದ್ರ
ಶ್ರೀರಾಮ ನಮ್ಮ ದೇಶದ ಬದುಕಿನಲ್ಲಿ ಬೆರೆತು ಹೋಗಿರುವ ಮಹಾ ಪುರುಷ. ಸಮಾಜದ ಎಲ್ಲ ಸ್ತರದ ಜನರಿಗೂ ರಾಮಾಯಣದೊಂದಿಗೆ ಒಂದಲ್ಲ ಒಂದು ಬಗೆಯ ಸಂಬಂಧವುಂಟು. ರಾಮಭಕ್ತಿಯಂತೂ ಒಂದು ದೊಡ್ಡ ಪ್ರವಾಹ. ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ರಾಮಕಥೆಯನ್ನು ಒಳಗೊಳ್ಳದ ಸಾಮಾಜಿಕ ಸ್ತರಗಳಿಲ್ಲ. ರಾಮನ ಗುಡಿಗಳು, ರಾಮ ಮಂದಿರಗಳು, ರಾಮ ಭಜನಾ ಮಂಡಲಿಗಳು, ರಾಮನು ಪ್ರತಿಷ್ಠಾಪಿಸಿದನೆನ್ನುವ ಶಿವಾಲಯಗಳು, ಶಿಲ್ಪದಲ್ಲಿ ರಾಮಕಥೆಯನ್ನು ನಿರೂಪಿಸುವ ಉಬ್ಬುಶಿಲ್ಪಗಳು, ರಾಮಕಥೆಯನ್ನು ಅಭಿನಯಿಸುವ ಯಕ್ಷಗಾನ, ಬಯಲಾಟ, ನಾಟಕ, ಸಿನಿಮಾಗಳು. ರಾಮಲೀಲಾದಂಥ ಸಾಮೂಹಿಕ ಆಚರಣೆಗಳು. ರಾಮನವಮಿ ಬಂತೆಂದರೆ ದೊಡ್ಡ ಪೆಂಡಾಲಲ್ಲಿ ನಡೆಯುವ ರಾಮೋತ್ಸವದ ಮಾಹೆಯಾನೆ ಸಂಗೀತ್ಸೋವಗಳು. ಹಳ್ಳಿಹಳ್ಳಿಯಲ್ಲಿ ಕಾಣುವ ಕುಟುಂಬ ಸಮೇತ ಇರುವ ಶ್ರೀರಾಮಮೂರ್ತಿಯ ಮೂಲ ಮೂರ್ತಿಗಳು. ನಿತ್ಯ ಭಜನೆಗಳು, ರಾಮಭಕ್ತ ಹನುಮಂತನಿಗಾಗಿ ಹಳ್ಳಿಗೊಂದು ಗುಡಿ… ಈ ಮರದ ಅಡಿ ರಾಮ ಕುಳಿತಿದ್ದನೆನ್ನುವುದು, ಈ ಬಂಡೆಯ ಮೇಲೆ ಸೀತೆಯ ಸೆರಗು ಬಿದ್ದಿತ್ತೆನ್ನುವುದು… ಇದು ರಾಮಗಿರಿ… ಇಲ್ಲಿರುವ ಸರೋವರದಲ್ಲಿ ಸೀತೆ ಸ್ನಾನ ಮಾಡಿದಳೆನ್ನುವುದು… ಈಗಲೂ ನಮ್ಮ ಹಳ್ಳಿಗಳಲ್ಲಿ ನೂರಕ್ಕೆ ಎಂಭತ್ತು ಹೆಸರು ರಾಮಮೂಲವಾದವು. ಪುರುಷರಿಗೆ ಮಾತ್ರವಲ್ಲ ಹೆಣ್ಣುಮಕ್ಕಳಿಗೂ ರಾಮನ ಹೆಸರು.
ಇನ್ನು ಸಾಹಿತ್ಯಕ್ಕೆ ಬಂದರೆ ಕಿಕ್ಕಿರಿದ ರಾಮಕಥೆಗಳಿಂದಾಗಿ ಕಾಲಿಡಲು ತೆರಪಿಲ್ಲ ಎನ್ನುವ ಕುಮಾರವ್ಯಾಸನ ಉದ್ಗಾರ! ರಾಮಯಣದ ವೈದಿಕ ಸಂಪ್ರದಾಯ.. ಜೈನ ಸಂಪ್ರದಾಯ.. ಬೌದ್ಧ ಸಂಪ್ರದಾಯ.. ಭಾರತದ ಆಚೆಗೂ ಬೆಳೆದ ರಾಮಪದ! ಕಾಂಬೋಡಿಯಾ, ಜಾವ, ಬಾಲಿ, ಸುಮಾತ್ರ, ಜಪಾನಿನಲ್ಲೂ ರಾಮ ದೇವಾಲಯಗಳು, ಭಿನ್ನಭಿನ್ನ ರಾಮ ಕಥೆನಗಳು, ಅದ್ಭುತ ರಾಮಾಯಣ ಶಿಲ್ಪಗಳು (ಜಾವಾದಲ್ಲಿ ಪ್ರಂಬನಾನ್ ಎಂದು ಖ್ಯಾತವಾಗಿರುವ 44 ರಾಮಾಯಣದ ಶಿಲ್ಪಗಳು ಜಗದ್ವಿಖ್ಯಾವಾಗಿವೆ.) ವಿಯಟ್ನಾಮಿನ ಚಂಪಾ ಎಂಬ ಸ್ಥಳದಲ್ಲಿ ಆದಿಕವಿ ವಾಲ್ಮೀಕಿಗಾಗಿಯೇ ನಿರ್ಮಿಸಿದ ದೇವಾಲಯವಿದೆ. ಕ್ರಿಸ್ತಪೂರ್ವ ಮೂರರಲ್ಲೋ ನಾಲ್ಕರಲ್ಲೋ ರಚಿತವಾದ ಈ ವಾಲ್ಮೀಕಿ ಕೃತ ರಾಮಾಯಣ ಆಚಂದ್ರಾರ್ಕ ಪ್ರಚಲಿತವಿದ್ದೀತೆಂದು ಇದನ್ನು ಮೊದಲು ಕಟ್ಟಿದ ಪುಣ್ಯಾತ್ಮ ಕಲ್ಪಿಸಿರಲಿಕ್ಕೂ ಸಾಧ್ಯವಿಲ್ಲ.. ಹೀಗೆ ರಾಮ ಕಥೆಯು ಭಕ್ತಿಯೊಂದಿಗೆ, ಬದುಕಿನೊಂದಿಗೆ, ಜನಪದದೊಂದಿಗೆ ಬೆರೆತು ಹೋದ ಮಹಾಕಥನ. ಮಗ ಹೇಗಿರಬೇಕು, ಹೆಂಡತಿ ಹೇಗಿರಬೇಕು, ಗೆಳೆಯ ಹೇಗಿರಬೇಕು, ತಾಯಿ ಹೇಗಿರಬೇಕು ಮತ್ತು ಹೇಗಿರಬಾರದು ಎಂಬುದನ್ನು ರೋಮಾಂಚನಗೊಳಿಸುವಂಥ ಮಾದರಿಗಳ ಮೂಲಕ ಕಟ್ಟಿಕೊಡುವ ರಾಮಾಯಣ ಒಮ್ಮೆ ಹುಟ್ಟಿದ್ದಲ್ಲ; ಮತ್ತೆ ಮತ್ತೆ ಆವಿರ್ಭವಿಸುವಂಥದ್ದು. ರಾಮಾಯಣವು ಹೇಗೆ ಯಾವಾಗ ನಮ್ಮ ಮನಸ್ಸನ್ನು ಪ್ರವೇಶಿಸುವುದೆನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಅದಕ್ಕೆ ರಾಮಾಯಣವನ್ನು ಕುರಿತು ಒಂದು ಪ್ರಸಿದ್ಧ ಹೇಳಿಕೆಯುಂಟು: ರಾಮಾಯಣವನ್ನು ಮೊದಲಬಾರಿ ಯಾರೂ ಓದುವುದಿಲ್ಲ ಎಂದು! ನಾವು ಓದುವ ಮುನ್ನವೇ ರಾಮಾಯಣ ಹೇಗೋ ನಮ್ಮ ಒಳಬಾಳನ್ನು ಪ್ರವೇಶಿಸಿರುತ್ತದೆ.
ರಾಮಾಯಣದ ಕಥನವನ್ನು ನಿತ್ಯ ಪಾರಾಯಣ ಮಾಡುವ ರಾಮಭಕ್ತರಾದ ಕಾವ್ಯಾಸಕ್ತರು ಈಗಲೂ ಅಲ್ಲಲ್ಲಿ ಕಾಣುವುದುಂಟು. ಮಾಸ್ತಿ, ಪುತಿನ ಮೊದಲಾದ ಹಿರಿಯರು ರಾಮಾಯಣದ ನಿತ್ಯಪಾರಾಯಣದಲ್ಲಿ ತೊಡಗಿದ್ದವರು. ಹೀಗೆ ರಾಮಾಯಣವೊಂದು ಶ್ರದ್ಧಾಕೇಂದ್ರ. ಆದರ್ರವಾದ ಭಾವ ಜಗತ್ತು. ನಮ್ಮನ್ನು ಸರಿದಾರಿಯಲ್ಲಿ ನಡೆಸಲು ಸದಾ ಯತ್ನಿಸುವ ಮಾರ್ಗದರ್ಶೀ ಪ್ರಭೆ!
Get in Touch With Us info@kalpa.news Whatsapp: 9481252093
Discussion about this post