ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿಕ್ಕಮಗಳೂರು: ಹೃದಯಾಘಾತದಿಂದ ಅಕಾಲಿಕ ಸಾವನ್ನಪ್ಪಿದ ಪ್ರಗತಿಪರ ಚಿಂತಕ, ಬಜರಂಗದಳ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರ ಅಂತ್ಯ ಸಂಸ್ಕಾರವು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆಯಿತು. ಕುಟುಂಬಿಕರು, ಸ್ನೇಹಿತರ ಸಮ್ಮುಖದಲ್ಲಿ ನಡೆದ ಮಹೇಂದ್ರ ಕುಮಾರ್ ಅಂತ್ಯ ಸಂಸ್ಕಾರಕ್ಕೆ ಸಂಘಟನೆಯ ಸ್ನೇಹಿತರು, ಹೋರಾಟಗಾರರು, ರಾಜಕೀಯ ನಾಯಕರು ಸಾಕ್ಷಿಯಾದರು.
ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಅಂತಿಮ ನಮನ ಸಲ್ಲಿಸಿದರು. ವೈಚಾರಿಕತೆಯಲ್ಲಿ ತದ್ವಿರುದ್ಧ ನಿಲುವು ಹೊಂದಿದವರಾದರೂ ಸಾವಿನ ಸುದ್ದಿ ತಿಳಿಯುತ್ತಲೇ ಪ್ರಮೋದ್ ಮುತಾಲಿಕ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದರು. ಮಹೇಂದ್ರ ಕುಮಾರ್ ಅವರು ಬಹಳ ಒಳ್ಳೆಯ ಸ್ವಭಾವ, ಒಳ್ಳೆಯ ವಿಚಾರವಂತರು. ವೈಚಾರಿಕ ಚಿಂತನೆ ಬದಲಾದರೂ ಅವರಲ್ಲಿದ್ದ ದೇಶದ ಬಗೆಗಿನ ಕಳಕಳಿ ಕಡಿಮೆಯಾಗಿರಲಿಲ್ಲ. ಅವರ ನಿಧನ ಅನ್ನೋದು ಕರ್ನಾಟಕದ ಹೋರಾಟಗಾರರಿಗಾದ ನಷ್ಟ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಸಂತಾಪ ಸೂಚಿಸಿದ್ದರು.
ಇನ್ನು ಸಂಜೆ ಮನೆಗೆ ಪಾರ್ಥಿವ ಶರೀರ ಆಗಮಿಸುತ್ತಲೇ, ಕೊಪ್ಪದಲ್ಲಿರುವ ಮಹೇಂದ್ರ ಕುಮಾರ್ ಅವರ ನಿವಾಸಕ್ಕೆ ಆಗಮಿಸಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಭಾವುಕರಾದರು.
ಸಂಘಟನೆ, ಸಿದ್ಧಾಂತ ವಿಭಿನ್ನವಾಗಿದ್ದರೂ ಪ್ರಮೋದ್ ಮುತಾಲಿಕ್ ಅವರು ಮಹೇಂದ್ರ ಕುಮಾರ್ ಅವರ ಒಡನಾಟ ಬಿಟ್ಟಿರಲಿಲ್ಲ. ಪ್ರಬಲ ಹಿಂದುತ್ವವಾದಿಯಾಗಿದ್ದ ಪ್ರಮೋದ್ ಮುತಾಲಿಕ್ ಪಾಲಿಗೆ ಮಹೇಂದ್ರ ಕುಮಾರ್ ಹಿಂದುತ್ವದ ಶಿಷ್ಯ’ ಅನ್ನೋ ಹಾಗಿದ್ದರು. ಆದರೆ 2008 ರ ಚರ್ಚ್ ದಾಳಿಯ ನಂತರ ಮಹೇಂದ್ರ ಕುಮಾರ್ ಬಜರಂಗದಳ ಸಂಘಟನೆ ತೊರೆದು ಪ್ರಗತಿಪರ ಹಾಗೂ ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಳ್ಳಲು ಆರಂಭಿಸಿದ್ದರು. ಆದರೆ ಹಿಂದೂ ಮಹೇಂದ್ರ ಕುಮಾರ್ ಅವರ ಕಾರ್ಯಚಟುವಟಿಕೆ ಕಂಡವರು ಯಾರೂ ವಿರೋಧಿಸಿರಲಿಲ್ಲ. ಸಂಘಟನೆಯ ಮೇಲ್ವರ್ಗದ ನಾಯಕರಿಂದಾದ ಅನ್ಯಾಯದ ಬಗ್ಗೆ ಮಾತಾಡುತ್ತಲೇ ಬಂದಿದ್ದರು.
ಶನಿವಾರ ಮುಂಜಾವು ಸಾವಿಗೀಡಾದ ಸುದ್ದಿ ಹರಿದಾಡುತ್ತಿದ್ದಂತೆ ಕೆಲವರು ಅದರಲ್ಲೂ ವಿಕೃತಿ ಮೆರೆದಿದ್ದರು. ಆದರೆ ಪ್ರಬಲ ಹೋರಾಟಗಾರರ ಪ್ರಮೋದ್ ಮುತಾಲಿಕ್ ಆ ಎಲ್ಲಾ ಭೇದ ಭಾವಗಳನ್ನು ಮೀರಿ ಓರ್ವ ಉತ್ತಮ ಸ್ನೇಹಿತ, ವಿಚಾರವಾದಿ ಅನ್ನೋ ನೆಲೆಗಟ್ಟಿನಲ್ಲಿ ಖುದ್ದು ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ. ಆ ಮೂಲಕ ಸಾವಿಗೆ ಯಾವುದೇ ಸಿದ್ಧಾಂತವಿಲ್ಲ ಅನ್ನೋದನ್ನ ಸಾರಿ ಹೇಳಿದ್ದಾರೆ. ಇನ್ನು ಮಂಗಳೂರು ಭಾಗದ ಪ್ರಮುಖ ಹಿಂದೂ ನಾಯಕ, ವಿಶ್ವ ಹಿಂದೂ ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಕೂಡಾ ತನ್ನ ಹಳೆಯ ಸ್ನೇಹಿತನ ಅಕಾಲಿಕ ನಿಧನಕ್ಕೆ ಫೇಸ್ ಬುಕ್ ನಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
(ವರದಿ: ಡಿ.ಎಲ್. ಹರೀಶ್)
Get in Touch With Us info@kalpa.news Whatsapp: 9481252093
Discussion about this post