ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ #Mahathobara Shri Mahalingeshwara Temple ಜೀರ್ಣೋದ್ದಾರಕ್ಕೆ ಮಾಸ್ಟರ್ ಪ್ಲಾನ್ ರೂಪಿಸಲು ನಿರ್ಧರಿಸಿದ್ದು, ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಗಿದೆ.
ದೇವಾಲಯದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಶನಿವಾರ ಸಂಜೆ ದೇಗುಲದ ಸಭಾಂಗಣದಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಶಾಸಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ 25 ಮಂದಿಯನ್ನು ಒಳಗೊಂಡ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಯಿತು.
ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ನಡೆದ ಮೊದಲ ಸಭೆಯಲ್ಲೇ ಹಲವು ಉದ್ಯಮಿಗಳಿಂದ ಸುಮಾರು 13.75 ಕೋಟಿ ರೂ. ನೀಡುವ ಕುರಿತಾಗಿ ವಾಗ್ದಾನ ನೀಡಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ ಅವರು, ಸುಮಾರು 60 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ಧಾರವೂ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಇದಕ್ಕಾಗಿ ಸರ್ಕಾರದಿಂದ 11 ಕೋಟಿ ರೂಪಾಯಿ ಅನುದಾನ ಪ್ರತ್ಯೇಕವಾಗಿ ಬರಲಿದೆ. ಮುಂದಿನ ಎರಡು ವರ್ಷದಲ್ಲಿ ಜೀರ್ಣೋದ್ಧಾರ ಕಾರ್ಯ ಆಗಲಿದೆ ಎಂದು ತಿಳಿಸಿದರು.
ಏನೆಲ್ಲಾ ಜೀರ್ಣೋದ್ಧಾರ ಕಾರ್ಯ ಆಗಲಿದೆ?
ಒಟ್ಟು 60 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯಲಿದ್ದು, ಉದ್ಯಮಿಗಳಿಂದ ಒಟ್ಟು 13.75 ಕೋಟಿ ರೂಪಾಯಿ ಹಾಗೂ ರಾಜ್ಯ ಸರ್ಕಾರದಿಂದ 11 ಕೋಟಿ ರೂಪಾಯಿ ಅನುದಾನ ಬರಲಿದೆ. ಇದರಲ್ಲಿ, ಕೆರೆಗೆ 3.25 ಕೋಟಿ ರೂಪಾಯಿ, ಕೆರೆಯ ಸುತ್ತ ಸ್ಥಳದ ಅಭಿವೃದ್ಧಿಗೆ 2.75 ಕೋಟಿ ರೂಪಾಯಿ, ರಸ್ತೆಗೆ 3 ಕೋಟಿ ರೂಪಾಯಿ, ತಡೆಗೋಡೆಗೆ 2 ಕೋಟಿ ರೂಪಾಯಿ ವ್ಯಯಿಸಲು ಸಮಿತಿ ಯೋಚಿಸಿದೆ.
ಪ್ರಮುಖವಾಗಿ, ದೇವಾಲಯದ ಎದುರಿನ ನಾಗನ ಗುಡಿ ಹಾಗೂ ಅಯ್ಯಪ್ಪನ ಗುಡಿ ಸ್ಥಳಾಂತರ ಆಗಲಿದ್ದು, ಇದಕ್ಕಾಗಿ ಪ್ರತ್ಯೇಕ ಭಕ್ತರ ಸಭೆ ಕರೆಯಲಾಗುತ್ತದೆ. 15 ದಿನದೊಳಗೆ ಶಿಲಾನ್ಯಾಸ ನೆರವೇರಿಸಿ ಕಾಮಗಾರಿ ಆರಂಭಿಸಲಾಗುತ್ತದೆ.
ಈ ಕುರಿತಂತೆ ಮಾತನಾಡಿದ ಶಾಸಕ ಅಶೋಕ್ ಕುಮಾರ್ ರೈ, ಮಹಾಲಿಂಗೇಶ್ವರನಿಗೆ ಸೇರಿದ ಜಾಗ ಮಹಾಲಿಂಗೇಶ್ವರನಿಗೆ ಸೇರಬೇಕೆಂಬುದು ನಮ್ಮ ಆಶಯವಾಗಿತ್ತು. ಸುಮಾರು ಶೇ.60ರಷ್ಟು ಈ ಕಾರ್ಯ ಪೂರ್ಣಗೊಂಡಿದೆ. ದೇವಾಲಯದ ಮಾಸ್ಟರ್ ಪ್ಯಾನ್’ನಂತೆ ಕೆಲಸ ಆಗಬೇಕು. ಎಲ್ಲಾ ಪಕ್ಷದವರನ್ನು, ಎಲ್ಲಾ ಉದ್ಯಮಿಗಳನ್ನು ಸೇರಿಸಿಕೊಂಡು ವ್ಯವಸ್ಥಿತವಾಗಿ ಜೀರ್ಣೋದ್ಧಾರ ಸಮಿತಿ ರಚನೆ ಮಾಡಲಾಗಿದೆ ಎಂದರು.
ಸಮಿತಿಗೆ ಯಾರೆಲ್ಲಾ ಆಯ್ಕೆಯಾದರು?
ದೇವಾಲಯದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾಗಿ ಬಂಜಾರ ಪ್ರಕಾಶ್ ಶೆಟ್ಟಿ, ಸದಾಶಿವ ಶೆಟ್ಟಿ ಕನ್ಯಾನ, ಬಿಂದು ಸಂಸ್ಥೆಯ ಅಧ್ಯಕ್ಷ ಸತ್ಯಪ್ರಕಾಶ್, ಅಧ್ಯಕ್ಷರಾಗಿ ಶಾಸಕ ಅಶೋಕ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ದೇಗುಲದ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಆರ್ಥಿಕ ಸಮಿತಿಯ ಹೊರರಾಜ್ಯದ ಅಧ್ಯಕ್ಷರಾಗಿ ಸಂತೋಷ್ ರೈ ನಳೀಲು, ಕಾರ್ಯಾಧ್ಯಕ್ಷರಾಗಿ ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯ ವಿನಯ ಸುವರ್ಣ, ದಿಗ್ದರ್ಶಕರಾಗಿ ಕೇಶವಪ್ರಸಾದ್ ಮುಳಿಯ ಸೇರಿದಂತೆ 25 ಮಂದಿಯ ಸಮಿತಿ ರಚಿಸಲಾಗಿದೆ.
ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಮುಂಬೈ ಉದ್ಯಮಿ ಶಶಿಕುಮಾರ್, ಉದ್ಯಮಿಗಳಾದ ಎಸ್.ಕೆ. ಆನಂದ್, ಮುರಳೀಧರ ಶೆಟ್ಟಿ, ಮಿತ್ರಂಪಾಡಿ ಜಯರಾಮ ರೈ ಅಬುದಾಬಿ, ಮಾನೂರು ನರಸಿಂಹ ಕಾಮತ್, ಪ್ರಕಾಶ್ ಕಾಮತ್, ಗಣೇಶ್ ಕಾಮತ್, ಗೋಪಾಕೃಷ್ಣ ಭಟ್, ಎನ್. ಶಿವಪ್ರಸಾದ್ ಶೆಟ್ಟಿ ಕಿನಾರ, ಕೋಟಿ-ಚೆನ್ನಯ ಜೋಡುಕೆರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಶಿವರಾಮ ಆಳ್ವ, ಅಮರನಾಥ ಗೌಡ ಬಪ್ಪಳಿಗೆ, ರಾಜರಾಮ ಶೆಟ್ಟಿ ಕೋಲ್ಪಗುತ್ತು, ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ರಾಮದಾಸ ಗೌಡ, ರವೀಂದ್ರನಾಥ ರೈ ಬಳ್ಳಮಜಲು ಇದ್ದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಬಂಜಾರ, ಕನ್ಯಾನ ಸದಾಶಿವ ಶೆಟ್ಟಿ, ಸತ್ಯಶಂಕರ್ ಭಟ್, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ನಿಕಟಪೂರ್ವ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯ ಬಲರಾಮ ಆಚಾರ್ಯ ಮಾತನಾಡಿದರು.
ಸದಸ್ಯೆ ಕೃಷ್ಣವೇಣಿ, ಪಿ.ವಿ. ದಿನೇಶ್, ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ಸುಭಾಷ್ ರೈ ಬೆಳ್ಳಿಪಾಡಿ, ನಳಿನಿ ಪಿ. ಶೆಟ್ಟಿ, ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ, ನ್ಯಾಯವಾದಿ ಮಹೇಶ್ ಕಜೆ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















