ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪುತ್ತೂರು: ಓಡುವ ನೀರನ್ನು ನಡೆಯಲು ಬಿಡಬೇಕು. ನಡೆಯುವ ನೀರನ್ನು ತೆವಳಲು ಬಿಡಬೇಕು. ತೆವಳುವ ನೀರನ್ನು ನಿಲ್ಲಿಸಬೇಕು. ನಿಲ್ಲಿಸಿದ ನೀರನ್ನು ಭೂಮಿಗೆ ಇಂಗಲು ಬಿಡಬೇಕು. ಆಗ ಮಾತ್ರ ನೀರಿನ ಪ್ರಮಾಣ ಹೆಚ್ಚುತ್ತದೆ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕ ಡಾ.ಶ್ರೀಶ ಕುಮಾರ ಹೇಳಿದರು.
ಇಲ್ಲಿನ ತುಳು ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ತುಳು ಸಂಸ್ಕೃತಿಡ್ ನೀರ್ತ ಬಗ್ಗೆ ಇಪ್ಪುನ ಜೋಕೆ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ತುಳುನಾಡಿನಲ್ಲಿ ಎರಡು ಸಂಸ್ಕೃತಿಗಳಿವೆ. ಒಂದು ಜಲಸಂಸ್ಕೃತಿ ಇನ್ನೊಂದು ಅಗ್ನಿ ಸಂಸ್ಕೃತಿ. ಜಲಸಂಸ್ಕೃತಿ ಮಾತೃ ಪ್ರಧಾನವಾದರೆ, ಅಗ್ನಿ ಸಂಸ್ಕೃತಿ ಪಿತೃ ಪ್ರಧಾನವಾಗಿರುತ್ತದೆ. ವಿದ್ಯಾರ್ಥಿಗಳು ಈ ಸಂಸ್ಕೃತಿಯ ಬಗ್ಗೆ ಅರಿತುಕೊಂಡರೆ ಉತ್ತಮ ಎಂದು ನುಡಿದರು.
ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಇಂಗು ಗುಂಡಿ ಮತ್ತು ಮಳೆಕೊಯ್ಲಗಳನ್ನು ಆರಂಭಿಸಬೇಕು. ಇದರಿಂದ ಸಮಾಜಕ್ಕೆ ನೀರಿನ ಮಹತ್ವ ತಿಳಿಯುತ್ತದೆ. ಆಗ ದೇವಸ್ಥಾನಗಳು ಕೆರೆಯನ್ನು ಜೀರ್ಣೋದ್ಧಾರ ಮಾಡುವತ್ತ ಚಿಂತನೆ ಮಾಡಲು ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ವಿದ್ಯಾರ್ಥಿಗಳು ತುಳುನಾಡಿನ ಸಂಸ್ಕೃತಿಯ ಜೊತೆಗೆ ತುಳು ಭಾಷೆಯನ್ನು ಕಲಿತುಕೊಳ್ಳವುದು ಬಹುಮುಖ್ಯ. ಇದರಿಂದ ವಿದ್ಯಾರ್ಥಿಗಳ ಜ್ಞಾನವು ಹೆಚ್ಚುತ್ತದೆ. ಅಲ್ಲದೆ ತುಳುನಾಡಿನ ಸಂಪತ್ತನ್ನು ಉಳಿಸಿಕೊಳ್ಳವ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ತುಳು ಸಂಘದ ಸಂಯೋಜಕ ಪ್ರೊ. ಎನ್. ನರಸಿಂಹ ಭಟ್ ಮತ್ತು ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಎಂ. ಉಪಸ್ಥಿತರಿದ್ದರು.
ಪ್ರಥಮ ಬಿಎಂಸಿ ವಿದ್ಯಾರ್ಥಿಗಳಾದ ಮನಸ್ವಿ, ಮೇಘಶ್ರೀ ಮತ್ತು ಲಲಿತ ಪಾರ್ಥಿಸಿದರು. ತುಳು ಸಂಘದ ಅಧ್ಯಕ್ಷೆ ಶ್ರೀನಿಧಿ ಸ್ವಾಗತಿಸಿ, ಕಾರ್ಯದರ್ಶಿ ತೇಜಸ್ವಿನಿ ಕೆ. ವಂದಿಸಿದರು. ದ್ವೀತಿಯ ಬಿ.ಕಾಂ. ವಿದ್ಯಾರ್ಥಿ ಸುಷ್ಮಾ ಬಿ. ಕಾರ್ಯಕ್ರಮ ನಿರೂಪಿಸಿದರು.
ವರದಿ: ಅರುಣ್ ಕಿರಿಮಂಜೇಶ್ವರ, ಪುತ್ತೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post