ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಆಧುನಿಕ ಇಂಟರ್ನೆಟ್ ಯುಗದಲ್ಲಿ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಎಂದು ಸಾಮಾಜಿಕ ಜಾಲ ತಾಣಗಳು ಭರಾಟೆಯಲ್ಲಿ ಸಾಗುತ್ತಿವೆ. ಅಂಗೈನಲ್ಲೇ ಸ್ಮಾರ್ಟ್ ಫೋನ್ ಹಿಡಿದು ಹೆಚ್ ಡಿ ಗುಣಮಟ್ಟದ ಟಿವಿ ನೋಡುವ ಈ ಕಾಲದಲ್ಲಿ ರೇಡಿಯೋಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಜನರಿಗೆ ನಿರಂತರವಾಗಿ ಮನೋರಂಜನೆಯನ್ನು ನೀಡುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಅಷ್ಟೇ ಅಲ್ಲದೇ ಇತ್ತೀಚಿನ ದಿನಮಾನಗಳಲ್ಲಿ ರೇಡಿಯೋಗಳು ತಮ್ಮ ರೂಪ ಬದಲಾಯಿಸಿಕೊಂಡು, ಇನ್ನು ಒಂದು ಹೆಜ್ಜೆ ಮುಂದಿಟ್ಟಿವೆ. ರೇಡಿಯೋಗಳು ಎಫ್.ಎಂ. ರೇಡಿಯೋಗಳಾಗಿ ಬದಲಾಗಿದ್ದು ಆಧುನಿಕ ಮಾಧ್ಯಮಗಳಿಗೆ ಎಲ್ಲೂ ಬಿಟ್ಟುಕೊಡದಂತೆ ತನ್ನ ಸೇವೆಯನ್ನು ಮುಂದುವರೆಸಿದೆ. ಇವು ಕೇವಲ ಒಂದು ಸ್ಥಳಕ್ಕೆ ಮಾತ್ರ ಸೀಮಿತವಾಗಿರದೆ ನಾವು ಸಂಚರಿಸುವ ವಾಹನಗಳಲ್ಲಿಯೂ ಸಹ ಕೇಳಬಹುದಾಗಿದೆ.
ರೇಡಿಯೋ ನಮಗೆ ಮನರಂಜನೆಯನ್ನು ನೀಡುವುದಲ್ಲದೇ ಶಿಕ್ಷಣ, ಪರಿಸರ, ವಿಜ್ಞಾನ, ತಂತ್ರಜ್ಞಾನ, ಕಲೆ, ಸಾಹಿತ್ಯ, ಕೃಷಿಯ ಕುರಿತು ಮಾಹಿತಿ ನೀಡುವುದರೊಂದಿಗೆ ನಮ್ಮ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ತೊಟ್ಟಿಲಾಗಿದೆ. ನಮ್ಮ ನಾಡಿನ ಉಳಿವು, ಬೆಳವಣಿಗೆಯಲ್ಲಿ ರೇಡಿಯೋ ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ರೇಡಿಯೋ ಜಗತ್ತಿಗೆ ನೀಡಿದ ಕೊಡುಗೆಯನ್ನು ನೆನಪಿಸಿಕೊಳ್ಳುವುದಕ್ಕಾಗಿ 2011ರ ನವಂಬರ್ನಲ್ಲಿ ಜರುಗಿದ ಯುನೆಸ್ಕೋದ 36ನೇ ಸಾಮಾನ್ಯ ಸಭೆಯಲ್ಲಿ ಫೆಬ್ರವರಿ 13ನ್ನು ವಿಶ್ವ ರೇಡಿಯೋ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.
ಜಗತ್ತಿನ ಪ್ರತಿಯೊಬ್ಬ ನಾಗರಿಕನಿಗೂ ಸುಲಭವಾಗಿ, ವೇಗವಾಗಿ ತಲುಪಬಹುದಾದ ಮಾಧ್ಯಮ ರೇಡಿಯೋ. ಓಲ್ಡ್ ಈಸ್ ಗೋಲ್ಡ್’ ಎನ್ನುವಂತೆ ರೇಡಿಯೋ ತನ್ನ ಮಹತ್ವವನ್ನು ಇಂದಿಗೂ ಕಳೆದುಕೊಂಡಿಲ್ಲ. ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ರೇಡಿಯೋ ಕೇಳುಗರ ಸಂಖ್ಯೆ ವಿರಳವಾದರೂ ಅದರ ಕೇಳುಗ ವರ್ಗ ಈಗಲೂ ಇದೆ. ಜಗತ್ತಿನಲ್ಲಿ ನಡೆದ ಹೆಚ್ಚಿನ ಘಟನೆಗಳ ಸುದ್ದಿಯನ್ನು ಜನರಿಗೆ ತಲುಪಿಸಿದ್ದೇ ರೇಡಿಯೋ. ಈಗಲೂ ಹಳ್ಳಿ ಜನರ ದೈನಂದಿನ ದಿನದ ಸಂಗಾತಿಯಾಗಿರುವ ರೇಡಿಯೋವನ್ನು ನೆನಪಿಸಲೆಂದೇ ವಿಶ್ವಸಂಸ್ಥೆ ವರ್ಷದಲ್ಲೊಂದು ದಿನವನ್ನು ರೇಡಿಯೋಗಾಗಿ ಮೀಸಲಿರಿಸಿದೆ.
ನಾಲಿಗೆಯಿಲ್ಲದೇ ಮಾತನಾಡುವ ವಸ್ತು ಎಂದೇ ಖ್ಯಾತಿಯಾದ ರೇಡಿಯೋವನ್ನು ಇಟಲಿ ದೇಶದ ವಿಜ್ಞಾನಿ ಜಿ. ಮಾರ್ಕೋನಿ ಆವಿಷ್ಕಾರ ಮಾಡಿದರು. 1886ರಲ್ಲಿ ‘ಹೆನರಿಜ್ ಹಟ್ರ್ಜ್’ ಎಂಬ ವಿಜ್ಞಾನಿ ತರಂಗಗಳ ಸಂಶೋಧನೆಯನ್ನು ಆರಂಭಿಸಿದರು. ಮಾರ್ಕೊನಿಯು ಹಟ್ರ್ಜ್ರವರ ತರಂಗಗಳ ಕುರಿತು ಅಧ್ಯಯನ ಕೈಗೊಂಡು ಜಯ ಸಾಧಿಸಿದರು. ಹೀಗಾಗಿ ಮಾರ್ಕೋನಿಯನ್ನು ರೇಡಿಯೋದ ಜನಕನೆಂದು ಕರೆಯುವರು.
ಮಾರ್ಕೊನಿಯು ೧೮೯೬ರಲ್ಲಿ ಒಂದು ಏರಿಯಲ್ ಮುಖಾಂತರ 15 ಕಿಲೋ ಮೀಟರ್ ದೂರದಲ್ಲಿದ್ದ ಒಂದು ಸ್ಥಳಕ್ಕೆ ತಂತಿ ಇಲ್ಲದೇ ಸಂದೇಶ ಕಳಿಸಿದರು. ಇದೇ ಹೊಸ ತಂತ್ರಜ್ಞಾನದ ಆವಿಷ್ಕಾರಕ್ಕೆ ಕಾರಣವಾಯಿತು. ಇವರು ತಯಾರಿಸಿದ ರಿಸೀವರ್ ಅನ್ನು ‘ಕೋಹಿರರ್’ ಎಂದು ಕರೆಯಲಾಯಿತು.
1906ರಲ್ಲಿ ಮೊಟ್ಟ ಮೊದಲ ಭಾಷಣದ ಪ್ರಸಾರ ಕಾರ್ಯವನ್ನು ಅಮೇರಿಕಾ ಮತ್ತು ಜರ್ಮನಿಯಲ್ಲಿ ಮಾಡಲಾಯಿತು. ಅಮೇರಿಕಾದ ‘ಪಿಟ್ಸ್ಬರ್ಗ್’ನಲ್ಲಿ ಮೊದಲ ಶಾಶ್ವತ ರೇಡಿಯೋ ಪ್ರಸಾರ ಕೇಂದ್ರ ಸ್ಥಾಪನೆಗೊಂಡು ‘ವೆಸ್ಟಿಂಗ್ ಹೌಸ್’ ಎಂಬ ಸಂಸ್ಥೆಯ ಮೂಲಕ ಕಾರ್ಯಾರಂಭ ಮಾಡಿತು. 1922 ರಲ್ಲಿ ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಂಪನಿಯು ಸ್ಥಾಪನೆಯಾಗಿ ನಂತರ ಇದು 1927ರಲ್ಲಿ ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ಆಗಿ ಮಾರ್ಪಟ್ಟಿತು.
ಬಾರತದಲ್ಲಿ ರೇಡಿಯೋ ಪ್ರಾರಂಭವಾದದ್ದು 1927ರಂದು. ರೇಡಿಯೋ ಇಂಡಿಯನ್ ಬ್ರಾಡ್ ಕಾಸ್ಟಿಂಗ್ ಸರ್ವಿಸ್’ ಎನ್ನುವ ಸಂಘಟಿತ ಭಾರತೀಯ ಪ್ರಸಾರ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬಂದಿತು. ಇದರ ಮೊದಲ ಪ್ರಸಾರ ಕೇಂದ್ರವನ್ನು ಭಾರತದ ಬ್ರಿಟಿಷ್ ವೈಸ್ರಾಯ್ ಆದ ಇರ್ವಿನ್ ಮುಂಬಯಿಯಲ್ಲಿ ಉದ್ಘಾಟಿಸಿದರು. 1936 ಇಂಡಿಯನ್ ಬ್ರಾಡ ಕಾಸ್ಟಿಂಗ್ ಸರ್ವಿಸ್ ಹೆಸರಿನ ಬದಲಾಗಿ ‘ಆಲ್ ಇಂಡಿಯಾ ರೇಡಿಯೋ’ ಎಂದು ಕರೆದರೆ, ನಂತರ ಆಕಾಶವಾಣಿ ಎಂದು ಕರೆಯಲಾಯಿತು. ಅಲ್ಲದೇ ರೇಡಿಯೋಕ್ಕೆ ಪ್ರಾರಂಭದ ಸ್ವರ ನೀಡಿದವರು ವಾಲ್ಟರ್ ಕೌಫಮ್ಯಾನ್. ಇದು ಶಿವರಂಜನಿ ರಾಗದಲ್ಲಿದೆ.
ನಮ್ಮ ದೇಶದಲ್ಲಿ ಮೊಟ್ಟ ಮೊದಲು ರೇಡಿಯೋ ಕಾರ್ಯಕ್ರಮ ಪ್ರಸಾರವಾದದ್ದು ಮೈಸೂರಿನಲ್ಲಿ. ಡಾ.ಎನ್.ವಿ. ಗೋಪಾಲಸ್ವಾಮಿಯವರು ಮೈಸೂರಿನಲ್ಲಿ ತಮ್ಮ ಸ್ವಗೃಹ ವಿಠಲವಿಹಾರದಲ್ಲಿ ರೇಡಿಯೋ ಕೇಂದ್ರವನ್ನು 1935ರಲ್ಲಿ ಸ್ಥಾಪಿಸಿದರು. ರಾಷ್ಟ್ರಕವಿ ಕುವೆಂಪುರವರ ಕವನ ವಾಚನದೊಂದಿಗೆ ಭಾರತದಲ್ಲಿ ಅಧಿಕೃತವಾಗಿ ರೇಡಿಯೋ ಪ್ರಸಾರ ಪ್ರಾರಂಭವಾಯಿತು. ಇದನ್ನು ಆಲಿಸಲು ಸ್ವತಃ ಮೈಸೂರಿನ ಮಹಾರಾಜರು ಹಾಜರಾಗಿದ್ದರು. ಅಲ್ಲದೇ ‘ಆಕಾಶವಾಣಿ’ ಎಂಬ ಪದವನ್ನು ಮೊದಲು ಬಳಸಿದ್ದು ಕೂಡಾ ಮೈಸೂರಿನಲ್ಲಿಯೇ.
1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಆಲ್ ಇಂಡಿಯಾ ರೇಡಿಯೋ ಕೇವಲ ೬ ಸ್ಟೇಷನ್ಗಳನ್ನು ಮಾತ್ರ ಹೊಂದಿತ್ತು. 1957ರ ಅಕ್ಟೋಬರ್ನಲ್ಲಿ ವಿವಿಧ ಭಾರತಿ ಕೇಂದ್ರವನ್ನು ರೇಡಿಯೋ ಸಿಲೋನ್ನೊಂದಿಗೆ ಪ್ರಾರಂಭಿಸಲಾಯಿತು. ಅಲ್ಲದೇ ಇದರ ಭಾಗವೆಂಬಂತೆ 1959ರಲ್ಲಿ ದೆಹಲಿಯಲ್ಲಿ ದೂರದರ್ಶನವನ್ನು ಪ್ರಾರಂಭಿಸಲಾಯಿತು. ಆದರೆ 1976ರಲ್ಲಿ ಇದನ್ನು ರೇಡಿಯೋದಿಂದ ಪ್ರತ್ಯೇಕಿಸಲಾಯಿತು. ನಂತರ 1977ರಲ್ಲಿ ಮದ್ರಾಸ್ನಿಂದ ಎಫ್.ಎಂ ಪ್ರಸಾರವನ್ನು ಪ್ರಾರಂಭ ಮಾಡಲಾಯಿತು.
ಇಂದು ದೃಕ್, ಶ್ರವ್ಯ ಮಾಧ್ಯಮಗಳು ಎಷ್ಟೇ ಪ್ರಭಾವಶಾಲಿಯಾದರೂ ಆಕಾಶವಾಣಿಯು ತನ್ನದೇ ಆದ ಶ್ರೋತೃವರ್ಗವನ್ನು ಹೊಂದಿದೆ. ‘ಬಹುಜನ ಹಿತಾಯ ಬಹುಜನ ಸುಖಾಯ’ ಎಂಬ ಆಶಯವನ್ನು ಹೊಂದಿರುವ ಆಕಾಶವಾಣಿಯು ಇಂದು ದೇಶದಲ್ಲಿ 600ಕ್ಕೂ ಅಧಿಕ ಬಾನುಲಿ ಕೇಂದ್ರಗಳನ್ನು ಹೊಂದಿದೆ. 24 ಪ್ರಮುಖ ಹಾಗೂ 146 ಉಪಭಾಗಗಳಲ್ಲಿ ಆಕಾಶವಾಣಿಯಿಂದ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಆದುದರಿಂದ ರೇಡಿಯೋ ಇಂದು ನಮಗೆ ಅತೀ ಅಗತ್ಯ ಹಾಗೂ ಅನಿವಾರ್ಯವಾದ ಮಾಧ್ಯಮಗಳಲ್ಲಿ ಒಂದಾಗಿದೆ.
ಅರ್ಥಪೂರ್ಣ ಸರ್ವವ್ಯಾಪಿಯಾದ ರೇಡಿಯೋ ಅಪರಿಮಿತ ವ್ಯಾಪ್ತಿ ಹೊಂದಿದ್ದು ಕ್ಷಣಾರ್ಧದಲ್ಲಿ ಅಪಾರ ಜನರನ್ನು ತಲುಪಬಲ್ಲ ಸಾಮರ್ಥ್ಯ ಹೊಂದಿದೆ. ಸ್ಥಳೀಯ ಪ್ರಸ್ತುತತೆ, ಸರಳತೆ, ಕಡಿಮೆ ವೆಚ್ಚ, ಆತ್ಮೀಯತೆಯನ್ನು ಹೊಂದಿದ ರೇಡಿಯೋ ಇಂದಿಗೂ ಜನಸಾಮಾನ್ಯರ ಆಪ್ತಮಿತ್ರ, ಒಡನಾಡಿ, ಹಿತಚಿಂತಕವಾಗಿದ್ದು ಎಲ್ಲ ವಯೋಮಾನದ ಶ್ರೋತೃಗಳ ಮನಗೆದ್ದಿದೆ. ಇದು ನೈಸರ್ಗಿಕ ಇಲ್ಲವೇ ಮಾನವ ನಿರ್ಮಿತ ವಿಕೋಪ ಸಂಭವಿಸಿದಾಗ ಆಪತ್ಭಾಂದವವಾಗಿದೆ. ಸಂಷ್ಟದಲ್ಲಿದ್ದವರಿಗೆ ಕಣ್ಣು ಕಿವಿಯಂತಾಗಿದೆ.
ರೇಡಿಯೋ ಆಶ್ಚರ್ಯಕರವಾದ ಮಹಾನ್ ಶಕ್ತಿ, ಅದರಲ್ಲಿ ನಾನು ಭಗವಂತನ ಅದ್ಭುತ ಶಕ್ತಿಯನ್ನು ಕಾಣುತ್ತೇನೆ ಎಂದು ಮಹಾತ್ಮಾ ಗಾಂಧೀಜಿಯವರು ಹೇಳಿದ್ದಾರೆ. ನಮ್ಮ ದೇಶದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಕೂಡ ತಮ್ಮ ಮನದಾಳದ ಮಾತುಗಳನ್ನು ತಿಳಿಸಲು ರೇಡಿಯೋವನ್ನು ಆಯ್ಕೆಮಾಡಿದ್ದು ಶ್ಲಾಘನೀಯ.
ಅಲ್ಲದೇ ಅವರು ರೇಡಿಯೋ ಸಕ್ರೀಯ ಹಾಗೂ ರೋಮಾಂಚಕಾರಿ ಮಾಧ್ಯಮವಾಗಿದ್ದು ನನ್ನ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ದೇಶಾದ್ಯಂತ ಹಲವಾರು ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ. ಇದೊಂದು ಅದ್ಭುತ ಅನುಭವವಲ್ಲದೇ ರೇಡಿಯೋವನ್ನು ಉಳಿಸಿ ಬೆಳೆಸಿ ಎಂದಿದ್ದಾರೆ.
ಎಫ್ಎಂ ತರಂಗಾಂತರದಲ್ಲಿ ರೇಡಿಯೋ ತನ್ನ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿಕೊಂಡಿದೆ. ಸಮುದಾಯ ರೇಡಿಯೋಗಳು ಸಂಸ್ಕೃತಿಯನ್ನು ಕಟ್ಟಿ ಬೆಳಸಲು ಸಹಕಾರಿಯಾಗಿವೆ. ಇತ್ತೀಚಿನ ರೇಡಿಯೋ ಕೇಳುಗರ ಸಂಖ್ಯೆಯನ್ನು ನೋಡುವುದಾದರೆ, ಏಪ್ರಿಲ್ 2020ರಲ್ಲಿ ಅಸೋಸಿಯೇಷನ್ ಆಫ್ ರೇಡಿಯೋ ಅಪರೇಟರ್ಸ್ ಫಾರ್ ಇಂಡಿಯಾ ಸಂಸ್ಥೆಯ ರಿಸರ್ಚ್ ಪಿಪಿಎಲ್ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ರೇಡಿಯೋ ಕೇಳುಗರ ಸಂಖ್ಯೆ ಹೆಚ್ಚಾಗಿದ್ದು ಗರಿಷ್ಟ ಮಟ್ಟ ತಲುಪಿದೆ. ಅಂದರೆ ರೇಡಿಯೋ ಕೇಳುಗರ ಸಂಖ್ಯೆ ೫೧ ಮಿಲಿಯನ್ ದಾಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 44ರಷ್ಟು ಜನರು ರೇಡಿಯೋ ಕೇಳುಗರಿದ್ದು ಈ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕೂಡ ಹಲವು ಯೋಜನೆಗಳನ್ನು ರೇಡಿಯೋಗಳ ಮೂಲಕವೇ ಪ್ರಸಾರ ಮಾಡಲಾಗುತ್ತಿದೆ.
ಲೇಖನ: ಅಮೃತ ಚಂದ್ರಶೇಖರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post