ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಚೆನ್ನೈನಿಂದ ಆಗಮಿಸಿರುವ ದಂಪತಿಗೆ ನಗರದ ಹೃದಯ ಭಾಗದಲ್ಲಿರುವ ಪದ್ಮ ರೆಸಿಡೆನ್ಸಿಯಲ್ಲಿ ಕ್ವಾರಂಟೈನ್ ಮಾಡಿರುವ ಹಿನ್ನೆಲೆಯಲ್ಲಿ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಭದ್ರಾವತಿ ಮೂಲದ ದಂಪತಿ ಚೆನ್ನೈನಿಂದ ಆಗಮಿಸಿದ್ದು, ಸದರಿ ಮಹಿಳೆ ಗರ್ಭಿಣಿಯಾಗಿದ್ದಾರೆ. ಇವರಿಬ್ಬರಿಗೂ ಸರ್ಕಾರದ ಕೋವಿಡ್ 19 ನಿಯಮಾವಳಿಗಳಂತೆ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಗಿದ್ದು, ಇಬ್ಬರಿಗೂ ಕೊರೋನಾ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ದಂಪತಿಗಳ ಸ್ವಇಚ್ಚೆಯಂತೆ ಪದ್ಮ ರೆಸಿಡೆನ್ಸಿಯಲ್ಲಿ ಕ್ವಾರಂಟೈನ್’ಗೆ ವ್ಯವಸ್ಥೆ ಮಾಡಲಾಗಿದೆ.
ಇಂದು ಸಂಜೆ ವೇಳೆಗೆ, ದಂಪತಿಗಳನ್ನು ಹೊಟೇಲ್’ಗೆ ಕರೆದುಕೊಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಇವರನ್ನು ಕ್ವಾರಂಟೈನ್’ನಲ್ಲಿ ಇರಿಸುವುದಾದರೆ ಊರಿನಿಂದ ಹೊರ ಭಾಗದಲ್ಲಿ ಅಥವಾ ದೂರದ ಹಾಸ್ಟೆಲ್’ಗಳಲ್ಲಿ ಇರಿಸಿ. ಇದು ಜನವಸತಿ ಹಾಗೂ ಜನನಿಬಿಡ ಪ್ರದೇಶವಾಗಿದ್ದು, ಮುಂದೆ ತೊಂದರೆಯಾದರೆ ಹೊಣೆಯಾರು. ಯಾವುದೇ ಕಾರಣಕ್ಕೂ ಇಲ್ಲಿರಿಸಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ಇಲ್ಲಿನ ಗಂಭೀರತೆಯನ್ನು ಅರಿತ ಪೊಲೀಸರು ಜನರನ್ನು ಚದುರಿಸುವ ಪ್ರಯತ್ನ ಮಾಡಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡಲಿಲ್ಲ.
ಇನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ಮನೋಹರ್, ಕ್ವಾರಂಟೈನ್’ನಲ್ಲಿರಿಸಿರುವ ಮಹಿಳೆ ಗರ್ಭಿಣಿಯಾಗಿದ್ದು, ಹಾಸ್ಟೆಲ್’ನಲ್ಲಿ ಚಾಪೆಯ ಮೇಲೆ ಮಲಗುವುದು ಹಾಗೂ ಕ್ವಾರಂಟೈನ್’ನಲ್ಲಿರುವುದು ಕಷ್ಟವಾಗಿದೆ. ಅಲ್ಲದೇ, ಸರ್ಕಾರದ ಮಾರ್ಗಸೂಚಿಯಂತೆ ಅವರು ಬಯಸುವ ಹೊಟೇಲ್’ನಲ್ಲಿ ಕ್ವಾರಂಟೈನ್’ನಲ್ಲಿರಿಸುವ ಅವಕಾಶವಿದೆ. ಹೀಗಾಗಿ, ದಂಪತಿಯ ಬೇಡಿಕೆಯಂತೆಯೇ ಇಲ್ಲಿ ವ್ಯವಸ್ಥೆ ಮಾಡಿದ್ದೇವೆ ಎಂದರು.
ನಗರಸಭೆ ಪರಿಸರ ಇಂಜಿನೀಯರ್ ರುದ್ರೇಗೌಡ ಮಾತನಾಡಿ, ದಂಪತಿಗೆ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಗಿದೆ. ಕೋವಿಡ್19 ನೆಗೆಟಿವ್ ಬಂದಿರುವುದರಿಂದ ಸ್ಥಳೀಯರು ಯಾವುದೇ ರೀತಿಯಲ್ಲೂ ಹೆದರುವ ಅಗತ್ಯವಿಲ್ಲ. ಅಲ್ಲದೇ, ಕ್ವಾರಂಟೈನ್’ನಲ್ಲಿರುವ ದಂಪತಿಗೆ ಕೊಠಡಿಯಿಂದ ಹೊರಕ್ಕೆ ಬಾರದಂತೆ ಹಾಗೂ ಕಿಟಕಿಗಳಿಂದ ಹೊರಕ್ಕೆ ಉಗಿಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು.
ಇಲ್ಲಿ ಕ್ವಾರಂಟೈನ್’ಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಹೊಟೇಲ್ ಬಳಿಯಲ್ಲಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
Get in Touch With Us info@kalpa.news Whatsapp: 9481252093
Discussion about this post