ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಪ್ರೀತಿಯ ಸಂಸದರಾದ ಶ್ರೀ ಬಿ.ವೈ. ರಾಘವೇಂದ್ರ ಅವರಿಗೆ
ನಮ್ಮ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯರಾದ ಶ್ರೀ ಬಿ.ವೈ. ರಾಘವೇಂದ್ರ ಆಯ್ಕೆಯಾದ ಒಂದು ವರ್ಷದಲ್ಲಿಯೇ ಅಪೂರ್ವ ಸಾಧನೆಗೈದಿರುವುದು ನಮಗೆಲ್ಲಾ ಹೆಮ್ಮೆ ತರುವ ಸಂಗತಿಯಾಗಿದೆ.
ರಾಜ್ಯದ ಮುಖ್ಯಮಂತ್ರಿಗಳಾದ ಜನಪ್ರಿಯ ಮತ್ತು ರೈತರ ಧ್ವನಿಯಾಗಿರುವ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರ ಆಶೀರ್ವಾದ ಪಡೆದು ಅವರ ಮಾರ್ಗದರ್ಶನದಲ್ಲಿ ಮಹತ್ಸಾಧನೆ ಮಾಡುವತ್ತ ಮುನ್ನಡೆದಿದ್ದೀರಿ.
ಒಂದು ವರ್ಷದಲ್ಲಿ ಕೆಲವು ಮಹತ್ವದ ಜನೋಪಯೋಗಿ ಚಟುವಟಿಕೆಗಳನ್ನು ಕೈಗೆತ್ತಿಕೊಂಡು ಸಂಪೂರ್ಣ ಈಡೇರಿಕೆ ಮಾಡುವುದು ಜನಪ್ರತಿನಿಧಿಗಳಿಗೆ ಹಗುರವಾದ ಕಾರ್ಯವೇನಲ್ಲ.
ಯುವ ಕಣ್ಮಣಿಯಾಗಿರುವ ಶ್ರೀ ಬಿ.ವೈ. ರಾಘವೇಂದ್ರ, ನಿಮ್ಮ ಕಠಿಣ ನಿರ್ಧಾರಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೂಲಕ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸರ್ವತೋಮುಖ ಪ್ರಗತಿಗೆ ಅಗತ್ಯವಾದ ಕಾರ್ಯಗಳನ್ನ ಸಫಲವಾಗುವಂತೆ ಮಾಡಿರುವುದು ನಮಗೆಲ್ಲಾ ಸಂತೋಷದ ವಿಚಾರ. ಶಿವಮೊಗ್ಗ ಲೋಕಸಭಾ ಕ್ಷೇತ್ರ ಜಿಲ್ಲೆಯೇ ಅಲ್ಲದೇ ಸನಿಹದ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರವನ್ನೂ ಒಳಗೊಂಡು ವಿಶಾಲತೆ ಹೊಂದಿದೆ.
ಶಿವಮೊಗ್ಗ ಜಿಲ್ಲೆಗೆ ಶಕ್ತ ಸಾರಿಗೆ ಸಂಪರ್ಕ ಸೌಲಭ್ಯಗಳ ಅಗತ್ಯವಿದೆ. ರೈಲ್ವೆ ನಿಲ್ದಾಣಗಳ ನವೀಕರಣ, ಮಾರ್ಗ ವಿಸ್ತರಣೆ ಮತ್ತು ವಿಮಾನ ಸಾರಿಗೆ ಬಗ್ಗೆ ಮುಂದಾಲೋಚಿಸಿ ಮುಂದಡಿಯಿಟ್ಟಿರುವಿರಿ.
ಕುಂಸಿ ಹಾಗೂ ಅರಸಾಳು ರೈಲ್ವೆ ನಿಲ್ದಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಸಿರುವುದು ನಿಮ್ಮ ಗ್ರಾಮೀಣ ಜನತೆಯ ಕಾಳಜಿಯನ್ನು ಬಿಂಬಿಸುತ್ತದೆ. ಶಿವಮೊಗ್ಗದ ಸಮೀಪದ ಕೋಟೆಗಂಗೂರಿನಲ್ಲಿ ರೈಲ್ವೇ ಟರ್ಮಿನಲ್ ಸ್ಥಾಪನೆಗೆ ಕ್ರಮಕೈಗೊಂಡಿರುವುದು ಶ್ಲಾಘನೀಯ.
ಜನತೆಯ ಪ್ರಯಾಣ ಸೌಕರ್ಯಕ್ಕೆ ಹಲವು ಹೊಸ ರೈಲುಗಳನ್ನು ಚಲಿಸುವಂತೆ ಮಾಡಲು ನೀವು ಮನಃಪೂರ್ವಕ ಪ್ರಯತ್ನಪಟ್ಟಿದ್ದೀರಿ. ಜನಾಶತಾಬ್ದಿ ರೈಲು ವಾರದ ಎಲ್ಲಾ ದಿನಗಳಲ್ಲೂ ಚಲಿಸುತ್ತಿದೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಕೂಲವಾಗಿದೆ. ಶಿವಮೊಗ್ಗದಿಂದ ರೇಣಿಗುಂಟ ಮಾರ್ಗವಾಗಿ ತಿರುಪತಿ ತಲುಪಬಹುದು. ಅಲ್ಲದೇ ಶಿವಮೊಗ್ಗದಿಂದ ಚೆನ್ನೈಗೂ ನೇರ ರೈಲು ಸಂಪರ್ಕ ಕಲ್ಪಿಸಲಾಗಿದೆ.
ಶಿವಮೊಗ್ಗದ ಸೋಗಾನೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಿರುವ ಅಡೆತಡೆಗಳನ್ನು ನಿವಾರಿಸಿರುವುದು ಒಂದು ಅಪ್ರತಿಮ ಹೆಜ್ಜೆಯಾಗಿದೆ. ಉದ್ಯೋಗಿಗಳ ಆರೋಗ್ಯ ಕಾಳಜಿಗೆ ಆದ್ಯತೆ ನೀಡಿದ ನಿಮ್ಮ ಕಾಳಜಿ ಮೆಚ್ಚುವಂಥದ್ದು. ಈ ದಿಸೆಯಲ್ಲಿ ಇಎಸ್’ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಭೂಮಿಯ ಅಗತ್ಯವಿತ್ತು. ಅದನ್ನು ಮನಗಂಡು ಸಂಸದರಾಗಿ ನೀವು ಜಿಲ್ಲಾಡಳಿತದೊಂದಿಗೆ ಸೂಕ್ತ ವ್ಯವಹರಿಸಿ ಸಫಲರಾದರು. ಶೀಘ್ರದಲ್ಲಿಯೇ ಆಸ್ಪತ್ರೆ ನಿರ್ಮಾಣಕಾರ್ಯ ಪ್ರಾರಂಭವಾಗಲಿದೆ ಎಂಬುದೂ ಆಶಾದಾಯಕವಾಗಿದೆ.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಅನುಷ್ಠಾನದಲ್ಲಿ ನೀವು ವಹಿಸಿದ ಪಾತ್ರ ಅನನ್ಯ. ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರ ಜನ್ಮದಿನದ ಸಂದರ್ಭದಲ್ಲಿ ಸುಮಾರು ಒಂದು ಲಕ್ಷ ಜನರಿಗೆ ಆರೋಗ್ಯ ಕಾರ್ಡ್ಗಳನ್ನು ಉಚಿತವಾಗಿ ವಿತರಿಸಿ ನೀವು ಜನಸಾಮಾನ್ಯರ ಆರೋಗ್ಯಕ್ಕೆ ಮಿಡಿದ ಹೃದಯವಂತರಾಗಿ ತೋರಿದ್ದೀರಿ.
ಭದ್ರಾವತಿ ವಿಐಎಸ್’ಎಲ್ ಕಾರ್ಖಾನೆ ರಾಜ್ಯದ ಪ್ರತಿಷ್ಠಿತ ಉದ್ಯಮಗಳಲ್ಲೊಂದು. ಖಾಸಗೀಕರಣವಾಗುವ ಹಂತಕ್ಕೆ ಹೋದಾಗ ಆ ಪ್ರಯತ್ನವನ್ನು ತಡೆದು ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವಲ್ಲಿ ಹೋರಾಟ ನಡೆಸಿ ಅಗತ್ಯ ಅನುದಾನ ಪಡೆಯುವತ್ತ ಸಾಕಷ್ಟು ಶ್ರಮಿಸಿದ್ದೀರಿ. ಶಿವಮೊಗ್ಗದಲ್ಲಿ ನೆನೆಗುದಿಗೆ ಬಿದ್ದಿದ್ದ ರೈಲ್ವೆ ವಲಯದಲ್ಲಿನ ರಿಂಗ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ರಸ್ತೆ ನಿರ್ಮಾಣ ಚಟುವಟಿಕೆ ಆರಂಭಿಸಿರುವುದು ನಮಗೆ ಸಂತೋಷ ತಂದಿದೆ. ಶಿವಮೊಗ್ಗ ಜಿಲ್ಲೆಯಲ್ಲಿನ ಸಾಗರದ ಗಣಪತಿ ದೇವರ ಕೆರೆ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೀಯ ಉದ್ಯಾನವನ ಸಂರಕ್ಷಣಾ ಸಂಸ್ಥೆಯ ಮೂಲಕ ಪಡೆಯಲು ಕೇಂದ್ರ ಸಚಿವರನ್ನು ಒತ್ತಾಯಿಸಿರುವುದನ್ನು ನಿಮ್ಮ ಅಭಿಮಾನಿಗಳಾಗಿ ನಾವೆಲ್ಲರೂ ಗಮನಿಸಿದ್ದೇವೆ, ಹೆಮ್ಮೆ ಪಟ್ಟಿದ್ದೇವೆ.
ಸಾಗರ ಟೌನ್’ನಲ್ಲಿ ಹಾದುಹೋಗುವ ಹೆದ್ದಾರಿ 206 (ಹೊಸ ಸಂಖ್ಯೆ 69) ಚತುಷ್ಪಥ ಮಾರ್ಗವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಂಡಿರುವಿರಿ. ಜೊತೆಗೆ ಶಿವಮೊಗ್ಗ- ಶಿಕಾರಿಪುರ-ಹಾನಗಲ್-ತಡಸ ರಸ್ತೆಗೆ ಹಾಗೂ ಶಿವಮೊಗ್ಗ-ಹೊನ್ನಾಳಿ-ಮಲೇಬೆನ್ನೂರು-ಹರಿಹರ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸಲೂ ನೀವು ಕಾರ್ಯಶೀಲರಾಗಿದ್ದೀರಿ.
ಶಿವಮೊಗ್ಗದ ಜನಾಕರ್ಷಕ ತಾಣ, ತ್ಯಾವರೆಕೊಪ್ಪದ ಹುಲಿ-ಸಿಂಹ ಧಾಮ. ಅದರ ಸಮಗ್ರ ಅಭಿವೃದ್ಧಿ ಯೋಜನೆಗೆ ನಿಮ್ಮ ಪ್ರಯತ್ನದಿಂದ ಅಂಗೀಕಾರ ದೊರೆತಿದೆ. ರಾಜ್ಯದಲ್ಲಿಯೇ ಪ್ತಪ್ರಥಮವಾಗಿ ಕಾಡುಕೋಣ ಸಫಾರಿ ಆರಂಭದ ಯೋಜನೆಯನ್ನು ಇಲ್ಲಿ ಸೇರಿಸಿರುವುದೂ ಸ್ತುತ್ಯರ್ಹವಾದುದಾಗಿದೆ. ಶಿವಮೊಗ್ಗ ಆಧುನಿಕ ನಾಗರಿಕತೆಗೆ ಮೈಯೊಡ್ಡಿಕೊಳ್ಳುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಸೈಕಲ್ ಟ್ರ್ಯಾಕ್, ಒಳ ವರ್ತುಲ ಮಾರ್ಗ, ತುಂಗಾನದಿ ಉತ್ತರದಂಡೆಯಲ್ಲಿ ಮೂಲಭೂತ ಸೌಕರ್ಯಗಳಾದ ಪಾದಚಾರಿ ಸೇತುವೆ, ವಾಯುವಿಹಾರ ಪಥ ಸೌಲಭ್ಯ ಕಲ್ಪಿಸಲು ಕಾಮಗಾರಿ ಚಾಲನೆಯಾಗಿರುವುದು ಹರ್ಷದಾಯಕ.
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ನಿಮ್ಮಿಂದಾಗುತ್ತಿರುವ ಕೊಡುಗೆಗಳು ಅಪಾರ. ಕೊಡಚಾದ್ರಿ- ಕೊಲ್ಲೂರು ನಡುವೆ ಕೇಬಲ್ ಕಾರ್ ಸೌಲಭ್ಯ. ಜೋಗ ಜಲಪಾತದಲ್ಲಿ ಜಿಪ್ ಲೈನ್ ವ್ಯವಸ್ಥೆ, ಶಿವಮೊಗ್ಗದ ಸನಿಹದ ಕಲ್ಲೂರು ಮಂಡ್ಲಿಯಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದ ಸಾಹಸ ಕ್ರೀಡಾ ಕೇಂದ್ರದ ಯೋಜನೆ ಮಂಜೂರಾಗುವಂತೆ ಮಾಡಿರುವಿರಿ. ಹೊಸನಗರ ತಾಲೂಕಿ ನಗರ ಕೋಟೆಯ ಅಭಿವೃದ್ಧಿ, ಉಡುತಡಿಯಲ್ಲಿ ದೆಹಲಿ ಅಕ್ಷರಧಾಮದ ಮಾದರಿ ಸಂರಚನೆ ನಿರ್ಮಾಣ, ಭದ್ರಾವತಿ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಕ್ಕೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಸುವಲ್ಲಿ ಈಗಾಗಲೇ ನೀವು ದಾಪುಗಾಲಿಕ್ಕಿದ್ದೀರಿ.
ಈಗಾಗಲೇ ನಿಮ್ಮ ಪ್ರಯತ್ನದಿಂದಾಗಿ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡಿರುವುದು ಇಲ್ಲಿನ ಪ್ರವಾಸಿತಾಣಗಳನ್ನು ಆಕರ್ಷಗೊಳಿಸುವಲ್ಲಿ ವಿನೂತನ ಹೆಜ್ಜೆಯಾಗಿದೆ.
ನೀವು ಸಂಸದರಾದ ಒಂದು ವರ್ಷದ ಅವಧಿಯಲ್ಲಿ ಮಾಡಿರುವ ಸಾಧನೆ ಕಡಿಮೆಯೇನಲ್ಲ. ಅಲ್ಪಾವಧಿಯಲ್ಲಿ ಅಪಾರವಾಗಿದೆ. ಒಬ್ಬ ಸಚಿವರಾಗಿ ಮಾಡಬಹುದಾದ ಸಾಧನೆಗಳಿಗೆ ನೀವು ಸಂಕಲ್ಪಶೀಲ ಸಂಸದರಾಗಿ ಶ್ರಮಿಸಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ. ಕೇಂದ್ರ, ರಾಜ್ಯ ಸರಗಕಾರಗಳಿಗೆ ಸೇತುವೆಯಾಗಿ ಮತ್ತು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರ ಬೆಂಬಲದಿಂದ ಅವರ ಅಭಿವೃದ್ಧಿಯ ಕನಸುಗಳಿಗೂ ಸಾಕಾರ ನೀಡುತ್ತಿರುವ ನಿಮ್ಮ ಕಾರ್ಯಶೀಲತೆ ಜನಮನ್ನಣೆಗೆ ಪಾತ್ರವಾಗಿದೆ.
ಇತ್ತೀಚಿನ ಕೊರೋನಾ ವೈರಸ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಾಗಿರುವ ಲಾಕ್ ಡೌನ್ ಸನ್ನಿವೇಶದಲ್ಲಿ ನಿಮ್ಮ ನಡೆ ಇನ್ನಷ್ಟೂ ತೀವ್ರವಾಗಿದೆ. ತುರ್ತು ನೆರವಿಗೆ ಹೆಲ್ಪ್ ಲೈನ್ ಸ್ಥಾಪನೆ, ಅಗತ್ಯವಿರುವವರಿಗೆ ದಿನಸಿ ಕಿಟ್’ಗಳ ವಿತರಣೆ, ಅನ್ಯ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರಿಗೆ ಸ್ವಸ್ಥಾನಕ್ಕೆ ಮರಳಲು ಸಾರಿಗೆ ವ್ಯವಸ್ಥೆ ಮಾಡಿ ಮಾನವೀಯ ಮೌಲ್ಯ ತೋರಿದ್ದೀರಿ.
ಇಂತಹ ಅನೇಕ ಜನೋಪಯೋಗಿ, ಜನೋಪಕಾರಿ ಕಾರ್ಯಗಳನ್ನು ಮಾಡಿರುವಿರಿ. ನಾನೀಗ ಕೆಲವನ್ನು ಮಾತ್ರ ಸ್ಮರಿಸಿಕೊಂಡೆ. ಹೀಗಾಗಿ ನಿಮ್ಮಲ್ಲಿನ ಜನಸಂವೇದನಾಶೀಲತೆಯಿಂದ ನೀವೊಬ್ಬ ಸಮರ್ಥ ಸಂಸದರೆಂದು ರುಜುವಾತುಪಡಿಸಿದ್ದೀರಿ. ನಿಮ್ಮ ಮೇಲೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಜನತೆಯ ಮಮತೆಯ ಮಳೆಗೆರೆಯಲಿ.
ನಿಮ್ಮಿಂದ ಮುಂಬರುವ ವರ್ಷಗಳಲ್ಲಿ ಸಮಾಜಮುಖಿ ಚಟುವಟಿಕೆಗಳು ಹೇರಳವಾಗಿ ನಡೆಯಲಿ. ಸಂಸದರಾಗಿ ಒಂದು ಸಂವತ್ಸರ ಕಳೆದಿರುವ ನಿಮಗೆ ಭಗವಂತನು ಅಂತಹ ಶಕ್ತಿ ಸಾಮರ್ಥ್ಯ ನೀಡಲಿ ಎಂದು ಹೃದಯಪೂರ್ವಕವಾಗಿ ಹಾರೈಸುತ್ತೇನೆ.
ಮತ್ತೊಮ್ಮೆ ಶುಭಾಶಯಗಳು
ನಿಮ್ಮ
ಲೇಖಕರು: ಸದಸ್ಯರು, ರಾಜ್ಯ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್
ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ
Get in Touch With Us info@kalpa.news Whatsapp: 9481252093
Discussion about this post