ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಒಬ್ಬ ಜನಪ್ರತಿನಿಧಿ ಜನಪ್ರಿಯ ಜನಪ್ರತಿನಿಧಿ ಹೇಗೆ ಆಗಬಹುದು ಎನ್ನುವುದಕ್ಕೆ ನಮ್ಮ ಉಡುಪಿ ಶಾಸಕರಾದ ರಘುಪತಿ ಭಟ್ ಅವರು ಅತ್ಯುತ್ತಮ ಉದಾಹರಣೆ.
ದೇಶ ರಾಜ್ಯ ತನ್ನೂರಿನ ಜನರಿಗೆ ಕಷ್ಟ ಬಂದಾಗ ಅಪ್ಪಟ ಸೇನಾನಿಯ ಹಾಗೆ ಸೆಟೆದು ನಿಲ್ಲುವ ಭಟ್ ಅವರು ಹುಟ್ಟು ಹೋರಾಟಗಾರ ಎಂದರೆ ತಪ್ಪಾಗಲಾರದು. ದೇಶಕ್ಕೆ ದೇಶವೇ ಕೊರೋನ ಹೆಮ್ಮಾರಿಯನ್ನು ಹೇಗೆ ಮಣಿಸುವುದು ಎಂದು ತಲೆ ಮೇಲೆ ಕೈಹೊತ್ತು ಕುಳಿತಿರುವಾಗ ಉಡುಪಿ ಶಾಸಕರು ಊರಿಗೆ ಬಂದ ಮಾರಿಯನ್ನು ಮಣಿಸಲು ಸದ್ದಿಲ್ಲದೇ ಸಮರಭ್ಯಾಸ ಮಾಡುತ್ತಿದ್ದರು. ಉಸ್ತುವಾರಿ ಸಚಿವರ ಮಾರ್ಗದರ್ಶನದ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಸಾಲು ಸಾಲು ಮೀಟಿಂಗ್ ಮಾಡಿ ಉಡುಪಿಯಲ್ಲಿ ಕೊರೊನ ನಿಯಂತ್ರಣದ ಬಗ್ಗೆ ಚರ್ಚೆ ಮಾಡುತಿದ್ದರು.

ಕೊರೋನಾ ಎನ್ನುವ ಮಹಾಮಾರಿ ದೇಶ ರಾಜ್ಯವನ್ನು ದಾಟಿ ಉಡುಪಿ ಜಿಲ್ಲೆಗೆ ಕಾಲಿಡುವ ಮುನ್ನವೇ ಎಚ್ಚೆತ್ತುಕೊಂಡ ಭಟ್ರು ಮಣಿಪಾಲ ಸಂಸ್ಥೆಯ ಮುಖ್ಯಸ್ಥರ ಜೊತೆ ಮಾತನಾಡಿ ರಾಜ್ಯದಲ್ಲೇ ಪ್ರಥಮವಾಗಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಟಿಎಂಎ ಪೈ ಖಾಸಗಿ ಆಸ್ಪತ್ರೆಯನ್ನು ನಿಗದಿಪಡಿಸಿದರು. ಅದೇ ರೀತಿ ಎಸ್ಡಿಎಂ ಅವರೊಂದಿಗೆ ಮಾತನಾಡಿ ಉದ್ಯಾವರದಲ್ಲಿ 150 ಬೆಡ್’ಗಳನ್ನು ಕ್ವಾರಂಟೈನ್’ಗಾಗಿ ವ್ಯವಸ್ಥೆಯನ್ನು ಮಾಡಿದರು.
ಭಟ್ ಅವರ ಈ ಮುಂಜಾಗ್ರತಾ ಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಯಿತು. ಈ ಸಂದರ್ಭದಲ್ಲಿ ಭಟ್ರ ಜೊತೆ ಕೊರೋನಾ ನಿಯಂತ್ರಿಸಲು ಹಾಗೂ ನೊಂದ ಜನರ ನೆರವಿಗೆ ನಿಂತು ಮಾದರಿ ಜಿಲ್ಲೆಯಾಗಿಸುವಲ್ಲಿ ಹೆಗಲುಕೊಟ್ಟ ಜಿಲ್ಲಾಧಿಕಾರಿಗೂ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುತ್ತೇನೆ.
ರಾಜಕಾರಣಿಗಳು ಎಲ್ಲವನ್ನು ವೋಟಿಗಾಗಿ ಮಾಡುತ್ತಾರೆ ಎನ್ನುವ ಅಪವಾದವಿದೆ. ಆದರೆ ರಘುಪತಿ ಭಟ್ ಅವರು ತನ್ನ ಕ್ಷೇತ್ರದಲ್ಲಿ ವೋಟ್ ಇಲ್ಲದ ಉತ್ತರಕನ್ನಡ ಭಾಗದ ಸಾವಿರ ಸಾವಿರ ವಲಸೆ ಕಾರ್ಮಿಕರಿಗೆ ಪ್ರತಿನಿತ್ಯಾ ಊಟವನ್ನು ಒದಗಿಸಿದರು. ನನ್ನ ಕ್ಷೇತ್ರದಲ್ಲಿ ಯಾರೊಬ್ಬರೂ ಊಟವಿಲ್ಲದೆ ಹಸಿದು ಮಲಗಲು ಯಾವ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು. ಭಟ್ರ ಈ ಹೇಳಿಕೆಯಿಂದ ನಮಗೆ ಅರ್ಥವಾಗುತ್ತದೆ ಅವರ ಹೃದಯ ಶ್ರೀಮಂತಿಗೆ ಎಂತಹದ್ದು ಎನ್ನುವುದು. ಕೆಲ ಕೇಂದ್ರ ಹಾಗೂ ರಾಜ್ಯ ಸಚಿವರು ಮನೆಯಲ್ಲೇ ಕುಳಿತಿರುವ ಸಂದರ್ಭದಲ್ಲಿ ಭಟ್ರು ನನ್ನ ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿ ಬಡ ಬಗ್ಗರ ಬಗ್ಗೆ ತೋರಿದ ಪ್ರೀತಿ ಕಾಳಜಿ ಕಂಡು ರಾಜ್ಯದ ಪ್ರತಿಷ್ಠಿತ ಸುದ್ದಿ ಮಾಧ್ಯಮಗಳು ಭಟ್ ಅವರ ಕಾರ್ಯ ವೈಖರಿಯನ್ನು ರಾಜ್ಯದ ಮೂಲೆ ಮೂಲೆಗೆ ತಲುಪುವಂತೆ ಪ್ರಯತ್ನವನ್ನು ಮಾಡಿದವು.

ಹಿಂದಿನ ಡಿಸಿ 7 ಜನರ ಕಮಿಟಿ ಮಾಡಿ 7 ದಿನಗಳಲ್ಲಿ ಮರಳು ದಿಬ್ಬಗಳನ್ನು ಹಂಚಿಕೆ ಮಾಡಬೇಕಾದ ಜಿಲ್ಲಾಧಿಕಾರಿ ಒಂದು ತಿಂಗಳುಗಳ ಕಾಲ ಸುಮ್ಮನೆ ಕಾಲ ಹರಣ ಮಾಡಿದರು ಎನ್ನುವ ಒಂದೇ ಒಂದು ಕಾರಣಕ್ಕೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಜಿಲ್ಲೆಯ ಅಭಿವೃದ್ಧಿಗೆ ಮಾರಕವಾಗುವ ಡಿಸಿ ನಮಗೆ ಬೇಡ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ವರ್ತಿಸುವ ಜನಸ್ನೇಹಿ ಜಿಲ್ಲಾಧಿಕಾರಿ ನಮ್ಮ ಜಿಲ್ಲೆಗೆ ಬೇಕೆಂದು ಜಿ. ಜಗದೀಶ್ ಎನ್ನುವ ದಕ್ಷ ಅಧಿಕಾರಿಯನ್ನು ಉಡುಪಿಗೆ ಕರೆತಂದ ಉಡುಪಿ ಶಾಸಕರಿಗೆ ಅನಂತ ಅನಂತ ಧನ್ಯವಾದಗಳು.
ಕಳೆದ ವರ್ಷ ಉಡುಪಿ ಜಿಲ್ಲೆಯ ಜನರು ಮರಳಿನ ಸಮಸ್ಯೆಯಿಂದ ಪರಿತಪಿಸುತ್ತಿದ್ದಾಗ, ಕಳೆದ ಬೇಸಿಗೆಯಲ್ಲಿ ಉಡುಪಿ ನಗರದ ಜನತೆಗೆ ನೀರಿನ ಅಭಾವ ಆದಾಗ, ಈ ವರ್ಷ ಉಡುಪಿಯ ಜನತೆ ಭಯಾನಕ ಕೊರೋನಾ ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿದಾಗ ಒಬ್ಬ ಜವಾಬ್ದಾರಿಯುತ ಮನೆಯ ಮಗನ ನೆಲೆಯಲ್ಲಿ ಸಹಾಯಕ್ಕೆ ನಿಲ್ಲುವ ಭಟ್ರು ನೂರಾರು ಕಾಲ ಸುಖವಾಗಿ ಬಾಳಲಿ ಎನ್ನುವುದು ನನ್ನ ಅಂತರಂಗದ ಆಶಯ.
Get in Touch With Us info@kalpa.news Whatsapp: 9481252093







Discussion about this post