ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನನ್ನದು ಹಿಂದೂ ಧರ್ಮ, ನನ್ನದು ಇಸ್ಲಾಂ ಧರ್ಮ, ನನ್ನದು ಕ್ರಿಶ್ಚಿಯನ್, ನನ್ನದು ಬೌದ್ಧ ಧರ್ಮ ಎಂದು ಜಗತ್ತಿನಾದ್ಯಂತ ದಿನ ನಿತ್ಯವೂ ಸಂಘರ್ಷಗಳನ್ನು ನೋಡುತ್ತಿರುತ್ತೇವೆ. ಇದನ್ನು ನೋಡುವ ಭಗವಂತ ನಗುತ್ತಾ ಇರುತ್ತಾನೆ. ಅಧರ್ಮದ ಹಾದಿಗೆ ಅಡಿ ಇಟ್ಟವನನ್ನು ನಿಯಾಮಕ ಯಮಧರ್ಮರಾಜ ಹಿಂಬಾಲಿಸುತ್ತಿರುತ್ತಾನೆ.
ಭಗವಾನ್ ಶ್ರೀಕೃಷ್ಣನ ಅಂತ್ಯಕಾಲದಲ್ಲಿ ದೂತನೊಬ್ಬ ಓಡೋಡಿ ಬರುತ್ತಾನೆ. ‘ಭಗವಂತಾ, ನಿಮ್ಮ ಅಣ್ಣ ಬಲರಾಮ ದೇವರು ಸಾಗರಕ್ಕಿಳಿದು ಶೇಷ ರೂಪದಲ್ಲಿ ಹೋಗಿಬಿಟ್ಟರು. ನಾನು ಹಿಂಬಾಲಿಸಿದೆ. ಅವರು ಸಮುದ್ರದೊಳಗೆ ಸರಿದು ಬಿಟ್ಟರು’ ಎಂದು ಆ ದೂತ ಹೇಳಿದ. ಅವನ ಮುಖದಲ್ಲಿ ಯಾವುದೇ ಆತಂಕ ಕಾಣುತ್ತಿರಲಿಲ್ಲ. ಆಗ ಶ್ರೀಕೃಷ್ಣನು ಮುಗುಳು ನಗುತ್ತಾ, ‘ಹೇ ಅಂತಕಾ, ಆತಂಕ ಇಲ್ಲದವನು ಎಂದರೆ ನೀನು ಮಾತ್ರ. ಜೀವಿಯನ್ನು ಕೊನೆಯವರೆಗೆ ಹಿಂಬಾಲಿಸುವವನೂ ನೀನೆ ಕಣಯ್ಯಾ’ ಎಂದು ಶ್ರೀಕೃಷ್ಣನು ನಕ್ಕ. ಒಡನೆಯೆ ಆ ದೂತನು ಯಮಧರ್ಮರಾಜನ ರೂಪ ತಾಳಿ, ’ಭಗವಂತಾ ನಿಮ್ಮ ನಿರ್ಗಮನದ ವೇಳೆಯೂ ಸಮೀಪಿಸುತ್ತಿದೆ. ಕ್ಷೀರಸಾಗರದಲ್ಲಿ ಬಲರಾಮದೇವರು ಶೇಷನಾಗಿ ಪವಡಿಸಿಯೂ ಆಗಿದೆ. ಇನ್ನು ನೀವು ಹೋಗುವುದೊಂದೇ ಬಾಕಿ ಉಳಿದಿದೆ’ ಎಂದು ಕರಮುಗಿದ ಯಮಧರ್ಮರಾಜ. ಅಂತೂ ಶ್ರೀಕೃಷ್ಣನೂ ಪ್ರಕೃತಿ ನಿಯಮಕ್ಕೆ ಶಿರಬಾಗಲೇ ಬೇಕಾಯ್ತು. ವೈಕುಂಠ ಸೇರಿದ.
ಇದೇ ಪ್ರಕೃತಿಯ ಧರ್ಮ. ಅದನ್ನು ಉಲ್ಲಂಘಿಸಿ ಮುಂದುವರೆದವರು ಯಾರೂ ಇಲ್ಲ. ಶ್ರೀಮನ್ಮಧ್ವಾಚಾರ್ಯ ಗುರುವರೇಣ್ಯರು ಹೇಳಿದಂತೆ, ಅನಾಯಾಸೇನ ಮರಣಂ, ವಿನಾ ದೈನ್ಯೇನ ಜೀವನಂ ಕೃಪಯಾ ಭಕ್ತವತ್ಸಲಾ ಎಂದು ಜಗದ ನಿಯಮಕ್ಕೆ ಶಿರಬಾಗುತ್ತಾ ಪ್ರಾರ್ಥಿಸಿದರು.
ಯಾವುದು ಧರ್ಮ? ಪೂಜೆ ಮಾಡುವುದೋ? ಯಾಗ ಯಜ್ಞ ಮಾಡುವುದೋ? ದಾನ ಧರ್ಮ ಮಾಡುವುದೋ?
ಪ್ರತಿಯೊಂದು ವಿಚಾರಕ್ಕೂ ಅದರದ್ದೇ ಆದ ನಿಯಮವಿದೆ. ಅ ಮನುಷ್ಯನಿಗೆ ನೂರು ಅಪಮೃತ್ಯು ಮತ್ತು ಒಂದು ಸಹಜ ಮೃತ್ಯು ಇದೆ. ಧರ್ಮ ಪ್ರಕಾರ ಇದ್ದಾಗ ಕನಿಷ್ಟವಾಗಿಯಾದರೂ ಅಪಮೃತ್ಯುವನ್ನು ಜೈಸಬಹುದು. ಸಹಜ ಮೃತ್ಯುವು ಪ್ರಕೃತಿ ನಿಯಮ. ಅದಕ್ಕೆ ಶಿರಬಾಗದವರು ಯಾರೂ ಇಲ್ಲ ಈ ಜಗತ್ತಿನಲ್ಲಿ. ಇದನ್ನೇ ಧರ್ಮ ಎನ್ನುತ್ತಾರೆ. ಸ್ವಯಂ ರಾಮಕೃಷ್ಣರೇ ಇದಕ್ಕೆ ಶಿರಬಾಗಿದ್ದಾರೆ. ಆದರೆ ಅಪಮೃತ್ಯುವನ್ನು ಜೀವನ ಕ್ರಮ, ಆಹಾರ ನಿಯಮದಿಂದ ಶೇಕಡಾ ಐವತ್ತರಷ್ಟು ಈ ಕಲಿಯುಗದಲ್ಲಿ ಗೆಲ್ಲಬಹುದು ಮತ್ತು ಗೆದ್ದು ತೋರಿಸಿದವರು ಇದ್ದಾರೆ.
ಯಾವುದು ಅಧರ್ಮ?
ಕರ್ಕಶ ಧ್ವನಿವರ್ಧಕ ಹಾಕಿ ದೇವರ ಪ್ರಾರ್ಥನೆ ಮಾಡುತ್ತಾ, ಸಾರ್ವಜನಿಕರಿಗೆ ಹಿಂಸೆ ನೀಡುವುದು ಧರ್ಮವಲ್ಲ. ಮತಾಂಧತೆಯಲ್ಲಿ, ಇಡೀ ದೇಶವನ್ನು ಇಸ್ಲಾಮೀಕರಣ ಮಾಡುತ್ತೇವೆ ಎನ್ನುವುದು ಧರ್ಮವಲ್ಲ. ಅಯೋಧ್ಯೆಯಲ್ಲಿ ರಾಮ ಮಂದಿರವಾದರೆ ಅವನನ್ನು ಹತ್ಯೆ ಮಾಡುತ್ತೇನೆ, ಇವನನ್ನು ಹತ್ಯೆ ಮಾಡುತ್ತೇನೆ ಎಂಬುದು ಯಾವ ಧರ್ಮ?
ಶಬರಿಮಲೆಗೆ ಮುಟ್ಟಿನ ಪ್ರಾಯದ ಸ್ತ್ರೀಯರಿಗೆ ಯಾಕೆ ಪ್ರವೇಶ ಕೊಡಬಾರದು ಎಂದು ನ್ಯಾಯಾಲಯದ ಮೆಟ್ಟಲೇರುವುದು ಧರ್ಮವಾದೀತೇ? ಯಾಗ ಯಜ್ಞ ಮಾಡುತ್ತಾ ಹೊಗೆ ಎಬ್ಬಿಸಿ ಪಕ್ಕದ ಮನೆಗೆ ತೊಂದರೆ ಕೊಡುವುದು ಧರ್ಮವಲ್ಲ. ಅಮಿಷಗಳಿಂದಲೋ, ಬಲತ್ಕಾರದಿಂದಲೋ, ಒಬ್ಬರ ಕಷ್ಟಕ್ಕೆ ಸಹಾಯ ಮಾಡಿ ಅದರ ದುರ್ಲಾಭದಿಂದ ಮತಾಂತರ ಮಾಡುತ್ತಾ ಹೋಗುವುದು ಧರ್ಮವಲ್ಲ. ಕಲಬೆರಕೆ ವ್ಯಾಪಾರ ಮಾಡಿ ಮಾರಿ ಬಂದ ಲಾಭದಿಂದ ಶಾಲಾ-ಕಾಲೇಜು, ಅನಾಥಾಶ್ರಮ ಕಟ್ಟಿಸಿ ದಾನ ಮಾಡಿದರೆ ಅದು ಧರ್ಮವಾಗದು.
ಮಂತ್ರಿ, ಮುಖ್ಯಮಂತ್ರಿ, ಮಾಗಧರಾಗಿ ಪ್ರಜಾಜನರ ಕೊಳ್ಳೆ ಹೊಡೆದು ದಾನ ಮಾಡುವುದು ಧರ್ಮವಲ್ಲ. ನಮ್ಮದೇ ಹಣದಲ್ಲಿ ಅಪಥ್ಯ ಆಹಾರ ಸೇವಿಸುವುದು ಧರ್ಮವಲ್ಲ. ತನ್ನ ಸುಖಕ್ಕಾಗಿ ಮುಗ್ಧ ಪ್ರಾಣಿಗಳ ವಧೆ ಮಾಡಿ ತಿನ್ನುವುದೂ ಧರ್ಮವಲ್ಲ. ಪ್ರಜೆಗಳ ಓಟಿಗಾಗಿ ಹಣ ಹೆಂಡ ಸುರಿದು ಮತ ಪಡೆದು ಮಂತ್ರಿಯಾಗುವುದೂ ಧರ್ಮವಲ್ಲ. ದಾರಿ ಹೋಕರನ್ನು ದರೋಡೆ ಮಾಡಿ ಬಡವರಿಗೆ ದಾನ ಮಾಡುವುದು ಧರ್ಮವೇ? ಮೇಜಿನ ಅಡಿಯಲ್ಲಿ ಲಂಚ ನೀಡಿ ಪರೀಕ್ಷೆಯಲ್ಲಿ ಪಾಸಾದರೆ ಅದನ್ನು ಧರ್ಮವೆಂದರೆ ಸರಿಯಾದೀತೇ? ಲಂಚ ಕೊಟ್ಟು ಸರಕಾರಿ ಉದ್ಯೋಗ ಪಡೆದರೆ? ಅದೂ ಧರ್ಮವಲ್ಲ. ಯಾವುದೋ ಕೋರ್ಟು ಪ್ರಕರಣದಲ್ಲಿ ನ್ಯಾಯಾಧೀಶರಿಗೆ ಲಂಚ ಕೊಟ್ಟೋ, ಜೀವ ಬೆದರಿಕೆ ಹಾಕಿಯೋ, ನ್ಯಾಯ ತೀರ್ಮಾನ ತನ್ನವಪರವಾಗಿ ಮಾಡಿಕೊಳ್ಳುವುದು ಯಾವ ಧರ್ಮ?
ಮನುಷ್ಯನಾಗಿ ಹುಟ್ಟಿ ಧನ ಸಂಪಾದಿಸಿ, ತನ್ನ ಹಣದಲ್ಲೇ ಕಂಡ ಕಂಡಲ್ಲಿ, ಕಂಡ ಕಂಡದ್ದನ್ನು ತಿಂದು, ಹೆಂಡ ಕುಡಿಯುವಂತದ್ದೂ ಧರ್ಮವಲ್ಲ. ಅಯ್ಯೋ ಅವನು ಸಂಪಾದಿಸಿದ್ದರಲ್ಲಿ ಮಜಾ ಮಾಡ್ತಾನ್ರೀ, ನಿಮಗೇನು ಬಂತು ಇದರಲ್ಲಿ? ಎಂದು ಹೇಳುವವರಿರಬಹುದು. ನಾನಿಲ್ಲಿ ಹೇಳುವುದು ಯಾವುದು ಧರ್ಮ ಎಂದಷ್ಟೆ. ನಿಂದಿಸಲು ಹೇಳುತ್ತಿಲ್ಲ. ಪುರೋಹಿತರೋ, ವೈದ್ಯರೋ, ಜ್ಯೋತಿಷ್ಯರೋ ಹಣದ ಆಸೆಯಿಂದ ಕರ್ಮ ಮಾಡುವುದನ್ನು ಧರ್ಮ ಎಂದು ಹೇಳಲಾಗದು.
ಯಾರು ದೇಹಕ್ಕೆ ಬೇಕಾದ ನಿಯಮವನ್ನು(ಧರ್ಮ) ಸರಿಯಾಗಿ ಪಾಲಿಸುತ್ತಾ ಜೀವನ ಮಾಡುತ್ತಾರೋ ಅವರು ದೀರ್ಘಾಯುಷ್ಯ ಆರೋಗ್ಯದಿಂದ ಬಾಳುತ್ತಾರೆ. ದೇಹದ ಧರ್ಮ ಪಾಲಿಸಿದಾಗಲೇ ಸದ್ಬುದ್ಧಿ ಉಂಟಾಗುವುದು. ಅಪಥ್ಯ ಎಂಬುದು ಕೇವಲ ಆಹಾರಕ್ಕೇ ಸೀಮಿತವಲ್ಲ. ಧರ್ಮ ಪಾಲನೆ ಮಾಡದ ಸಕಲ ನಡೆ ನುಡಿಗಳೂ, ವ್ಯವಹಾರವೂ ಅಪಥ್ಯವೇ ಆಗುತ್ತದೆ. ಯಾರು ಅಪಥ್ಯದಲ್ಲಿ ಇರುತ್ತಾರೆಯೋ ಅಂತವರು ನಿತ್ಯ ದೇವರ ಸ್ತುತಿ ಮಾಡಿದರೂ, ಹೋಮ-ಹವನ, ದಾನ ಧರ್ಮ ಮಾಡಿದರೂ ರೋಗ ರುಜಿನಗಳಿಂದ ಬಳಲಿ ಅಲ್ಪಾಯುಗಳಾಗಿ ಗತಿಸುತ್ತಾರೆ. ಮಠದ ಸ್ವಾಮಿಗಳೊಬ್ಬರಿಗೆ ಇಂತಹ ದುರ್ಮರಣ, ಅನಾರೋಗ್ಯ ಹೇಗೆ ಬಂತಪ್ಪಾ? ವೃತ ನಿಯಮಗಳ ಪಾಲನೆ ಮಾಡುತ್ತಿದ್ದರು. ಆಹಾರದಲ್ಲೂ ಪಥ್ಯ ಇತ್ತು. ದೇವರಿಗೆ ಕರುಣೆ ಇಲ್ಲಾರೀ ಎನ್ನುತ್ತೇವೆ. ಆದರೆ ಅಂತಹ ಪಥ್ಯ ಇದ್ದರೂ, ಅವರ ನಡೆಗಳೂ ಪಥ್ಯವಾಗಿಲ್ಲದಿದ್ದರೆ ಅಲ್ಪಾಯವೇ. ಒಬ್ಬ ಪ್ರಖ್ಯಾತ ಗುರುಗಳು ಬೆಳಿಗ್ಗೆ ಹಿಮಚ್ಛಾದಿತ ಕ್ಷೇತ್ರದಲ್ಲಿ ಇರುತ್ತಾರೆ. ನಂತರ ವಿಮಾನದ ಮೂಲಕ ಸುಡುಬಿಸಿಲಿನ ನಾಡಿಗೆ ಬಂದಿಳಿಯುತ್ತಾರೆ, ಮತ್ತೆ ಅಲ್ಲಿಂದ ತೇವ ಭರಿತ ನಾಡಿಗೆ ಹೋಗುತ್ತಾರೆ. ಕೇಳಿದರೆ ಧರ್ಮ ಪ್ರಚಾರ ಎಂದು ಹೇಳಬಹುದು. ಹೌದಾಗಿರಲೂಬಹುದು. ಆದರೆ ಇವರ ನಡೆ ದೇಹಕ್ಕೆ ಅಪಥ್ಯವೇ ಆಗಿದೆ. ಇದನ್ನು ನೋಡಿಕೊಳ್ಳದೆ ಕಾಪಾಡಿಕೊಳ್ಳದೆ ಹೋದರೆ ಅನಾರೋಗ್ಯ ಪೀಡಿತರಾದರೆ ಏನು ಸಾಧನೆ ಮಾಡಬಹುದು ಹೇಳಿ? ಶರೀರ ಮಾಧ್ಯಂ ಖಲು ಧರ್ಮಸಾಧನಂ ಎಂದು. ಶರೀರವೇ ರೋಗ ಪೀಡಿತವಾದರೆ ಏನು ಧರ್ಮ ಸಾಧನೆ ಮಾಡಬಹುದು?
ಮೊದಲು ದೇಹಾರೋಗ್ಯ ಪಾಲನೆ ಮಾಡಿಕೊಂಡರೆ ದೇಶದ ಆರೋಗ್ಯ ಸರಿಮಾಡಬಹುದು. ಧರ್ಮ ಎಂಬುದು ಒಂದು ನಿಯಮ. ಇದೊಂದು ವಿಚಾರ. ಇದರ ಪಾಲನೆ ಮಾಡಿ ಎಂದೇ ಪ್ರಾಜ್ಞರು ಧರ್ಮೋ ರಕ್ಷತಿ ರಕ್ಷಿತಃ ಎಂದು ಸಲಹೆ ನೀಡಿದರು.
Get in Touch With Us info@kalpa.news Whatsapp: 9481252093
Discussion about this post