ದಿನ ನಿತ್ಯ ನೋಡುತ್ತೇವೆ. ಒಂದು ಪಕ್ಷವು ಇನ್ನೊಂದು ಪಕ್ಷವನ್ನು ಬೈಯುವುದು, ನಿಂದಿಸುವುದನ್ನು. ಮಾಡ್ಕೊಳ್ಳಿ ಬಿಡಿ. ಆದರೆ ಯಾರು ಮಾಡಬೇಕಾದದ್ದು ಎಂದು ಯೋಚಿಸಬೇಕು. ನಿನ್ನ ನಾಲಿಗೆ ಸೀಳ್ತೇನೆ, ಕೈ ಕಡ್ದಾಕಿ ಬಿಡ್ತೇನೆ ಎಂಬ ಡೈಲಾಗಿಗೆ ದರಿದ್ರ ಇಲ್ಲ. ಯಾರು ಇದನ್ನು ಹೇಳಬೇಕಾದವರು?
ಒಂದು ಕ್ಷೇತ್ರಕ್ಕೆ ಒಬ್ಬ ಜನಪ್ರತಿನಿಧಿ ಬೇಕೇಬೇಕು. ಇದು ಪ್ರಜಾಪ್ರಭುತ್ವದ ನಿಯಮ. ಇದು ಯಾವ ಪಕ್ಷದಿಂದಲೂ ಪ್ರತಿನಿಧಿಸುವ ಹಕ್ಕು ಇದೆ. ಅಂತಹ ಪ್ರತಿನಿಧಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರವು ಕೇವಲ ಪ್ರಜೆಗಳಿಗೆ ಇರುತ್ತದೆ. ಆ ಆಯ್ಕೆಯಾದ ಪ್ರತಿನಿಧಿಯು ದೇಶಕ್ಕೆ ಒಂದು ನಿಗದಿತ(ಈಗ ಐದು ವರ್ಷ) ಅವಧಿಯವರೆಗೆ ಆ ಕ್ಷೇತ್ರಕ್ಕೆ ಅರ್ಪಣೆಯಾಗುತ್ತಾನೆ. ಯಾವಾಗ ಅರ್ಪಣೆ ಆಗುತ್ತಾನೋ ಅಂದಿನಿಂದ ಆ ಅವಧಿ ಪೂರ್ಣವಾಗುವವರೆಗೆ ಆ ಪ್ರತಿನಿಧಿಯು ಕೇವಲ ದೇಶದ, ಕ್ಷೇತ್ರದ ಅಭಿವೃದ್ಧಿಗೆ, ರಕ್ಷಣೆಗೆ ಮಾತ್ರ ಸೀಮಿತ ಆಗಿರುತ್ತಾನೆ.
ಪ್ರಮುಖವಾಗಿ ಈಗ ಆ ಪ್ರತಿನಿಧಿಯು ಪಕ್ಷಾತೀತವಾಗಿರಬೇಕು. ಅವರು ನನಗೆ ವಿರುದ್ದವಾಗಿದ್ದರು, ನನ್ನನ್ನು ಸೋಲಿಸಲು ಬಯಸಿದರು ಎಂಬ ಚಿಂತನೆ ಇರಬಾರದು. ನನ್ನ ಕೆಲಸ ಏನಿದೆಯೋ ಅದನ್ನು ಪಕ್ಷಾತೀತವಾಗಿ ಮಾಡಲೇಬೇಕು. ಇಲ್ಲಿ ಅವನ ಮನೆಯ ಸಂಸಾರವೂ ಕೂಡಾ ಸಮಾನವೇ ಆಗುತ್ತದೆಯೇ ಹೊರತು, ಮನೆಯ, ಸಂಸಾರದ ಪರವಾಗಿ ಕೆಲಸ ಮಾಡಬಾರದು. ಇದು ಪ್ರತಿನಿಧಿಗೆ ವಿಧಿಸಲ್ಪಟ್ಟ ಪ್ರಜಾತಾಂತ್ರಿಕ ನಿಯಮ. ಇದರ ಉಲ್ಲಂಘನೆ ಮಾಡಿದರೆ ಇದರಷ್ಟು ದೊಡ್ಡ ದ್ರೋಹ ಇನ್ನೊಂದಿಲ್ಲ. ಆದರೆ ಈಗ ಅನೇಕಾನೇಕ ಪ್ರತಿನಿಧಿಗಳು ಈ ನಿಯಮಕ್ಕೆ ಬದ್ಧವಾಗಿಲ್ಲ. ಹಳೆಯ ವೈಯಕ್ತಿಕ, ಪಕ್ಷದೊಳಗಿನ ದ್ವೇಷವನ್ನೇ ಪ್ರತಿನಿಧಿಯಾದ ಮೇಲೆ ಮುಂದುರೆಸುತ್ತಾರೆ. ಇಷ್ಟಕ್ಕೇ ಮುಗಿಯುವುದಿಲ್ಲ. ಬಾಯಿಗೆ ಬಂದಂತೆ ಬೈಯುತ್ತಾ, ತನ್ನ ಕರ್ತವ್ಯವನ್ನೇ ಮರೆತು, ಪ್ರಜೆಗಳಿಗೆ ಹಿಂಸೆಯಾಗುವ ತರಹ ನಡೆದುಕೊಳ್ಳುತ್ತಾರೆ.
ಪ್ರತೀ ಪಕ್ಷದಲ್ಲಿ ಕ್ಷೇತ್ರ ಕ್ಷೇತ್ರಕ್ಕೊಬ್ಬ ವಕ್ತಾರನನ್ನು ಇಟ್ಟಿರುತ್ತಾರೆ. ಆದರೆ ಅವನು ಮಾಡುವ ಕೆಲಸವನ್ನು ಪ್ರತಿನಿಧಿಗಳೇ ಮಾಡಲು ಹೋಗಿ, ತಾನು ಮಾಡುವ ಕೆಲಸವನ್ನು, ಮಾಡಬೇಕಾದ ಕೆಲಸವನ್ನು ಬಿಟ್ಟು ಬಿಡುತ್ತಾರೆ. ಪಕ್ಷ ಇರುವುದು ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಕ್ಕಾಗಿ. ತಾನು ಕಳುಹಿಸಿದ ಅಭ್ಯರ್ಥಿಯು ಚುನಾಯಿತ ಪ್ರತಿನಿಧಿ ಆದಮೇಲೆ, ಅವನಿಗೇನಾದರೂ ಇನ್ನೊಂದು ಪಕ್ಷವು ಅವಹೇಳನವೋ, ಹಿಂಸೆಯೋ ಮಾಡಿದಾಗ ಅವನ ಪಕ್ಷದ ಪದಾಧಿಕಾರಿಗಳು ಉತ್ತರಿಸಬೇಕೇ ಹೊರತು ಆ ಪ್ರತಿನಿಧಿಯು, ತನ್ನನ್ನು ಆರಿಸಿದ ಉದ್ದೇಶವನ್ನು ಮರೆತು ಅವನೇ ಕಾಳಗಕ್ಕಿಳಿದಾಗಲೇ ಅಭಿವೃದ್ಧಿ ಕುಂಠಿತವಾಗುವುದು. ಆತನಿಗೆ ಹಿಂಸೆಯಾದಾಗ, ಅವನು ಅವನ ಪಕ್ಷದ ಅಧ್ಯಕ್ಷರಿಗೆ, ’ಹೀಗೆ ತೊಂದರೆಯಾಗುತ್ತಿದೆ’ ಎಂದು ತಿಳಿಸಬೇಕು. ಆಗ ಪಕ್ಷವು ಯಾವುದಾದರೊಂದು ತೀರ್ಮಾನಕ್ಕೆ ಬರಲಿ. ಆದರೆ ಆ ಚುನಾಯಿತ ಪ್ರತಿನಿಧಿ ಕಾಳಗಕ್ಕಿಳಿದರೆ ಆ ಪ್ರತಿನಿಧಿತ್ವದ ಉದ್ದೇಶ ಹಾಳಾಗುತ್ತದೆ. ಯಾವ ಕಾಲು ಜಾರಿದರೂ ಸೊಂಟಕ್ಕೇ ಪೆಟ್ಟು ಎಂಬಂತೆ, ಈ ಸ್ಥಿತಿಯೂ ಪ್ರಜೆಗಳಿಗೇ ಮಾರಕ.
ಹಾಗಾಗಿ, ಯಾವುದೇ ಪಕ್ಷವಿರಲಿ ಆ ಪಕ್ಷವು ಕಳುಹಿಸುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕ ಪ್ರಸಂಗ ಮಾತನಾಡಲು ಬಿಡಬಾರದು. ಆ ಪ್ರತಿನಿಧಿಯು ಆಡಳಿತಾತ್ಮಕ ವಿಚಾರಗಳನ್ನು ಮಾತನಾಡುವಲ್ಲಿಗೇ ಸೀಮಿತವಾಗಿರಬೇಕು. ಪಕ್ಷವು ತನ್ನ ಪ್ರತಿನಿಧಿಗೆ ತೊಂದರೆಯಾದಾಗ ಅಧಿಕೃತವಾಗಿ ಕ್ರಮ ತೆಗೆದುಕೊಳ್ಳುವಂತಾಗಬೇಕು. ಉದಾ: ಒಬ್ಬ ಮುಖ್ಯಮಂತ್ರಿಯೋ, ಪ್ರಧಾನಮಂತ್ರಿಗೋ ಆಡಳಿತಾತ್ಮಕವಾಗಿ ನಿಂದನೆಗಳು ಬಂದಾಗ ಅದನ್ನು ಸಮರ್ಥನೆ ಮಾಡಿಕೊಳ್ಳಬೇಕಾದದ್ದು ಆ ಪಕ್ಷದ ಒಳಗಿರುವ ಜವಾಬ್ದಾರಿಯುತ ನಾಯಕರದ್ದು. ಪ್ರತಿನಿಧಿಗಳು ಕಲಹಕ್ಕಿಳಿದರೆ ಅಭಿವೃದ್ಧಿ ಕುಂಠಿತವಾಗುತ್ತದೆ.
ಈ ರೀತಿಯ ನಿಯಮ ಪಾಲನೆ ಮಾಡಿದರೆ ಪಕ್ಷಗಳ ವರ್ಚಸ್ಸು ಉತ್ತಮವಾಗುತ್ತದೆ, ಪ್ರತಿನಿಧಿಗಳ ಮೇಲೆ ಪ್ರಜೆಗಳ ಪ್ರೀತಿಯೂ ಹೆಚ್ಚಾಗುತ್ತದೆ. ‘ನೀವು ಏನು ನಿರ್ಧಾರ ತೆಗೆದುಕೊಳ್ಳುವಿರಿ’ ಎಂದು ಮಾಧ್ಯಮಗಳು ಪ್ರಶ್ನಿಸಿದರೆ, ನಮ್ಮ ಪಕ್ಷದ ವಕ್ತಾರರು ಉತ್ತರಿಸುತ್ತಾರೆ ಎಂದಷ್ಟೇ ಹೇಳಿದರೆ ಸಮಸ್ಯೆ ಅಲ್ಲಿಗೇ ನಿಲ್ಲುತ್ತದೆ.
ಇದನ್ನು ಎಲ್ಲ ರಾಜಕೀಯ ಪಕ್ಷಗಳು ಎಂದಿಗೆ ಅರ್ಥ ಮಾಡಿಕೊಂಡು, ಕಾರ್ಯಗತ ಮಾಡುತ್ತವೆಯೋ?
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post