ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ರಿಪ್ಪನ್’ಪೇಟೆ: ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ರೈತರಿಗೆ ಅನುಕೂಲ ಕಲ್ಪಿಸಬೇಕೆಂಬ ಸುದುದ್ದೇಶದಿಂದ ಶ್ರೀ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯು ಶಿಥಲೀಕರಣ ಘಟಕ (ಕೋಲ್ಡ್ ಸ್ಟೋರೇಜ್) ಸ್ಥಾಪನೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಶ್ರೀಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ಜಿ. ಭೀಮೇಶ್ವರ ಜೋಷಿ ಹೇಳಿದರು.
ಶ್ರೀಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ವತಿಯಿಂದ ಹೊಸನಗರ ತಾಲೂಕು ರಿಪ್ಪನ್ಪೇಟೆ ಎಪಿಎಂಸಿ ಆವರಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಶ್ರೀಶಾರದಾ ಸೌಹಾರ್ದ ಕೋಲ್ಡ್ ಸ್ಟೋರೇಜ್ (ಶೀತಲೀಕರಣ ಘಟಕ) ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕೆಲ ರೈತರಲ್ಲಿ ಕೆಟ್ಟ ಚಿಂತನೆ ಇದೆ. ಬಹುತೇಕ ರೈತರು ಮನೆ ಬಾಗಿಲಿಗೆ ಬರುವ ಮಧ್ಯವರ್ತಿಗಳಿಗೆ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡುತ್ತಾರೆ. ಹಲವು ಬಾರಿ ವಂಚನೆಗೆ ಒಳಗಾಗಿದ್ದಾರೆ. ಇದು ತಪ್ಪಬೇಕು. ರೈತರು ಬೆಳೆದ ಬೆಳೆಗೆ ಉತ್ತಮ ಧಾರಣೆ ದೊರಕಬೇಕು. ಬೆಳೆ ಕೆಡೆದಂತೆ ಶೇಖರಿಸಿಡುವುದರ ಮೂಲಕ ಮಾರುಕಟ್ಟೆಯಲ್ಲಿ ಉತ್ತಮ ಧಾರಣ ದೊರಕಿದಾಗಿ ಮಾರಾಟ ಮಾಡಬೇಕು. ಇದಕ್ಕಾಗಿಯೇ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ರೈತರಿಗೆ ನೆರವಾಗುವ ಉದ್ದೇಶದಿಂದ ಕೋಲ್ಡ್ ಸ್ಟೋರೇಜ್ನ್ನು ನಿರ್ಮಿಸಿದೆ. ರೈತರು ಘಟಕದ ಸದುಪಯೋಗ ಪಡೆದುಕೊಳ್ಳಬೇಕು. ಜತಗೆ, ಸೌಹಾರ್ದ ಸಹಕಾರಿಯನ್ನು ಬಲಪಡಿಸಬೇಕೆಂದರು.
ರೈತರು ನೆಮ್ಮದಿಯಿಂದ ಇದ್ದಾರೆ ದೇಶ ನೆಮ್ಮದಿಯಾಗಿ ಇರುತ್ತದೆ ಎಂಬುದನ್ನು ಮರೆಯಬಾರದು. ಸರ್ಕಾರ ರೈತರ ಸಂಕಷ್ಟ ನಿವಾರಿಸಲು ಕ್ರಮ ಕೈಗೊಳ್ಳಬೇಕಿದೆ. ರೈತರ ಬವಣೆ, ಸಂಕಷ್ಟ ಸಾಕಷ್ಟಿದೆ. ಪ್ರಕೃತಿ ವಿಕೋಪದಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ. ಬೆಳೆದ ಬೆಳೆ ಸಿಗುತ್ತದೋ, ಇಲ್ಲವೋ ಎಂಬ ಆತಂಕದಲ್ಲಿ, ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರು ಜೀವನ ನಡೆಸುತ್ತಿದ್ದರೂ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ರೈತಾಪಿ ವರ್ಗಕ್ಕೆ ಧೈರ್ಯ ತುಂಬುವ ಕೆಲಸ ಇನ್ನಷ್ಟು ನಡೆಯಬೇಕಿದೆ ಎಂದರು.
ಒಂದು ಕಡೆ ಬೆಲೆ ಕುಸಿತ, ಮತ್ತೊಂದು ಬೆಳೆ ನಾಶದಿಂದಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ರೈತರ ಸಂಕಷ್ಟ ಪರಿಹರಿಸಲು ಸರ್ಕಾರ ಕಟಿಬದ್ಧ ನಿರ್ಣಯ ಕೈಗೊಳ್ಳಬೇಕು. ಬದುಕಲು ಪೂರಕವಾದ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಆತಂಕ ನಿವಾರಿಸಬೇಕಿದೆ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಸುಪ್ರೀಂಕೋರ್ಟ್ ಸಲ್ಲಿಕೆಯಾಗಿರುವ ಪ್ರಮಾಣಪತ್ರವನ್ನು ಶಾಶ್ವತವಾಗಿ ವಾಪಸ್ಸು ಪಡೆಯುವ ದೃಢ ನಿರ್ಧಾರ ತೆಗೆದಿಕೊಳ್ಳಬೇಕು. ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ಅಡಿಕೆ ಬೆಳೆಗಾರರ ಪರ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕೆಂದು ಒತ್ತಾಯಿಸಿದರು.
ಕಂದಾಯ ಮತ್ತು ಅರಣ್ಯ ಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಗೊಂದಲವಿದೆ. ದೇಶಕ್ಕೆ ಸ್ವಾತಂತ್ರ ಬಂದ ದಿನದಿಂದಲೂ ಗೊಂದಲ ಹಾಗೆಯೇ ಮುಂದುವರೆದಿದೆ. ಶೀಘ್ರವಾಗಿ ಗೊಂದಲ ಬಗೆಹರಿಯಬೇಕು. ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ ಶಾಶ್ವತವಾಗಿ ನಿಲ್ಲಬೇಕು. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸೋಲಾರ್ ಕಾಮಗಾರಿ ಉದ್ಘಾಟನೆ ನೆರವೇರಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಶಿತಲೀಕರಣ ಘಟಕ ನಿರ್ಮಾಣ ಮಾಡುವ ಮೂಲಕ ರೈತರಿಗೆ ಆಶಾಕಿರಣವಾಗುವ ಯೋಜನೆಯನ್ನು ಶಾರದ ವಿವಿದ್ದೋದ್ದೇಶ ಸಹಕಾರಿ ಕೈಗೊಂಡಿದೆ. ಬೆಳೆದ ಬೆಳೆಯನ್ನು ಮಧ್ಯವರ್ತಿಗಳಿಗೆ ನೀಡದೆ, ಘಟಕದಲ್ಲಿ ಬೆಳೆಯನ್ನು ಶೇಖರಿಸಿಟ್ಟುಕೊಂಡು ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಬಂದ ಸಂದರ್ಭದಲ್ಲಿ ಮಾರಾಟ ಮಾಡಿ, ಲಾಭ ಗಳಿಸಬೇಕೆಂದು ಸಲಹೆ ನೀಡಿದರು.
ಹಿತ ಚಿಮತನೆ ಇದ್ದಲ್ಲಿ ಯಾವುದೇ ಒಂದು ಸಂಸ್ಥೆ ಹೆಮ್ಮರವಾಗಿ ಬೆಳೆಯಲು ಸಾಧ್ಯ. ಸ್ವಾರ್ಥ, ಸ್ವಹಿತ ಚಿಂತನೆ ಇದ್ದಲ್ಲಿ ಸಂಸ್ಥೆಯ ಪ್ರಗತಿ ಕುಂಠಿತವಾಗುತ್ತದೆ. ಆದರೆ ಶಾರದ ವಿವಿದ್ದೋದ್ದೇಶ ಸಹಕಾರಿ ಕಡಿಮೆ ಅವಽಯಲ್ಲಿ ಹೆಚ್ಚಿನ ಬೆಳವಣಿಗೆ ಕಾಣುತ್ತಿದೆ. ಇದಕ್ಕೆ ಸಹಕಾರಿಯ ಆಡಳಿತ ಮಂಡಿಳಿ ಹಾಗೂ ನೌಕರ ವರ್ಗದವರ ಪಾತ್ರ ಪ್ರಮುಖವಾದದು ಎಂದರು.
ಸಾಗರ ಕ್ಷೇತ್ರ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಅಡಕೆ ಬೆಳೆಗಾರರ ಬಹುದಿನದ ಬೇಡಿಕೆಯಂತೆ ಶಾಸಕ ಅರಗ ಜ್ಞಾನೇಂದ್ರ ನೇತೃತ್ವದಲ್ಲಿ ಟಾಸ್ಕ್ಫೋರ್ಸ್ ರಚನೆಯಾಗಿದೆ. ಹಾಗೆಯೇ ಹೊಸನಗರ ತಾಲೂಕು ನಾಗೋಡಿಯಲ್ಲಿ ಮಂಕಿಪಾರ್ಕ್ ನಿರ್ಮಾಣ ಪ್ರಯತ್ನ ನಡೆಸಲಾಗಿದೆ. ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದನೆ ನೀಡುತ್ತಿದೆ ಎಂದರು.
ತೀರ್ಥಹಳ್ಳಿ ಕ್ಷೇತ್ರ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ರಾಜಕಾರಣವನ್ನು ಮೀರಿ ದೇಶದ ಪ್ರಗತಿ ಕುರಿತು ಚಿಂತನೆ ನಡೆಸಬೇಕು. ಇಲ್ಲವಾದಲ್ಲಿ ದೇಶಕ್ಕೆ ಅಪಾಯ ಉಂಟಾಗಲಿದೆ. ರೆಸಿಪ್ ಒಪ್ಪಂದಕ್ಕೆ ಪ್ರದಾನಿ ನರೇಂದ್ರ ಮೋದಿ ಸಹಿ ಹಾಕದೆ ರೈತರ ಪರ ನಿಲುವು ಪ್ರಕಟಿಸಿದ್ದಾರೆ ಎಂದರು.
ಶಾರದ ವಿವಿದೋದ್ದೇಶ ಸೌಹಾರ್ದ ಸಹಕಾರಿ ಅಧ್ಯಕ್ಷ ಹೆಚ್.ಎಸ್. ಶಿವಶಂಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೌಹಾರ್ಧ ಸಹಕಾರಿ ರೈತರ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವುದು ನಮ್ಮ ಹೆಮ್ಮೆ. ಇದೇ ರೀತಿ ಇದೀಗ ಐದನೇ ಶಾಖೆಯಾಗಿ ರಿಪ್ಪನ್ಪೇಟೆಯಲ್ಲಿ ಕಾಲಿಟ್ಟಿದ್ದು, ಸಹಕಾರಿಯೊಂದಕ್ಕೆ ದೊಡ್ಡ ಸವಾಲು ಎನ್ನುವಂತಹ 10 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿದ್ದೇವೆ. ರೈತರಿಗೆ ಇದು ಉಪಯೋಗವಾಗುತ್ತದೆ ಎಂಬ ನಂಬಿಕೆ ನಮ್ಮದು ಎಂದರು.
ಇದೇ ಸಂದರ್ಭದಲ್ಲಿ ಶ್ರೀಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಡಾ.ಜಿ. ಭೀಮೇಶ್ವರ ಜೋಷಿ ಅವರನ್ನು ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಮ್ಕೋಸ್ ಉಪಾಧ್ಯಕ್ಷ ವೈ.ಎಸ್. ಸುಬ್ರಹ್ಮಣ್ಯ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಎಚ್.ಆರ್. ಯೋಗೇಶ್, ಜಿಪಂ ಸದಸ್ಯರಾದ ಶ್ವೇತಾ ಬಂಡಿ, ಕಲಗೋಡು ರತ್ನಾಕರ್, ಸುರೇಶ್ ಸ್ವಾಮಿರಾವ್, ತಾಪಂ ಅಧ್ಯಕ್ಷ ವಾಸಪ್ಪಗೌಡ, ತಾಪಂ ಸದಸ್ಯ ಎನ್. ಚಂದ್ರೇಶ್, ಗ್ರಾಪಂ ಅದ್ಯಕ್ಷೆ ಶಾರದಾ ಹಿರಿಯಣ್ಣ, ಹೊಸನಗರ ಎಪಿಎಂಸಿ ಅಧ್ಯಕ್ಷ ಹೆಚ್.ವಿ. ಈಶ್ವರಪ್ಪ ಗೌಡ, ಉಪಾಧ್ಯಕ್ಷ ಕುಬೇರನಾಯ್ಕ್, ಸದಸ್ಯ ಬಿ.ಪಿ. ರಾಮಚಂದ್ರ, ಡಿಸಿಸಿ ಬ್ಯಾಂಕ್ ನಿರ್ಧೇಶಕರಾದ ಚನ್ನವೀರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸೌಹಾರ್ಧ ಸಹಕಾರಿ ನಿದೇಶಕ ಜಿ.ಕೆ. ರಮಾಕಾಂತ್ ಸ್ವಾಗತಿಸಿದರು, ಗೋಪಾಲ್ ಎಸ್ ಯಡಗೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಸುಧ ಪ್ರಾರ್ಥಿಸಿದರು.
(ವರದಿ: ಡಾ.ಸುಧೀಂದ್ರ, ಶಿವಮೊಗ್ಗ)
Get In Touch With Us info@kalpa.news Whatsapp: 9481252093
Discussion about this post