ಕಲ್ಪ ಮೀಡಿಯಾ ಹೌಸ್ | ಸಾಗರ |
ತುಮರಿ ಸೇತುವೆ ಸಂಪರ್ಕಿಸುವ ಅಂಬಾರಗೋಡ್ಲು, ಮತ್ತೊಂದು ಸಂಪರ್ಕ ರಸ್ತೆ ಕಳಸವಳ್ಳಿ ರಸ್ತೆ ನಿರ್ಮಾಣಕ್ಕೆ 600 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #MP Raghavendra ತಿಳಿಸಿದರು.
ತಾಲ್ಲೂಕಿನ ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಕಾಮಗಾರಿಯನ್ನು ಗುರುವಾರ ವೀಕ್ಷಣೆ ಮಾಡಿ, ಸೇತುವೆ ಮೇಲೆ ವಾಹನದ ಮೇಲೆ ಓಡಾಟ ನಡೆಸಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಎರಡೂ ರಸ್ತೆಯನ್ನೂ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಣೆ ಮಾಡಿದ್ದು, ಯಾವ ರೀತಿ ರಸ್ತೆ ನಿರ್ಮಾಣ ಮಾಡಬೇಕು ಎನ್ನುವ ಕುರಿತು ಯೋಜನೆ ರೂಪಿಸುತ್ತಿದ್ದು, ಹದಿನೈದು ದಿನಗಳಲ್ಲಿ ಅಂತಿಮ ಸ್ವರೂಪಕ್ಕೆ ಬರುತ್ತದೆ ಎಂದರು.
ಶರಾವತಿ ಹಿನ್ನೀರಿನ ಪ್ರದೇಶವಾದ ತುಮರಿ ಭಾಗ ತೀರ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಸೇತುವೆ ನಿರ್ಮಾಣದ ನಂತರ ಈ ಭಾಗ ಪ್ರವಾಸೋದ್ಯಮದಲ್ಲಿ ಹೆಚ್ಚು ಪ್ರಚಲಿತಕ್ಕೆ ಬರಲಿದೆ. ಹಿನ್ನೀರನ್ನು ಕೇಂದ್ರವಾಗಿರಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ದಿಪಡಿಸುವುದು, ಸಾವಿರಾರು ಜನ ಪ್ರತಿದಿನ ಈ ಭಾಗಕ್ಕೆ ಪ್ರವಾಸೋದ್ಯಮ ಹಿನ್ನೆಲೆಯಲ್ಲಿ ಬರುವ ವಾತಾವರಣ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.
ಹಿನ್ನೀರಿನ ಜನರ ಅನೇಕ ವರ್ಷಗಳ ಕನಸು ನನಸಾಗುವ ದಿನ ಹತ್ತಿರ ಬಂದಿದೆ. ಜೂನ್ ಕೊನೆವಾರದಲ್ಲಿ ಸೇತುವೆ ಲೋಕಾರ್ಪಣೆಯಾಗಲಿದೆ. ಅನೇಕ ಪ್ರಮುಖರು ಸೇತುವೆ ನಿರ್ಮಾಣಕ್ಕಾಗಿ ಹೋರಾಟ ಸಹ ಮಾಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಸಂಸದರಾಗಿದ್ದಾಗ ಸೇತುವೆ ನಿರ್ಮಾಣ ಪ್ರಸ್ತಾಪವನ್ನು ಕೇಂದ್ರಕ್ಕೆ ಸಲ್ಲಿಸಿದ್ದರು. ಕೇಂದ್ರದಿಂದ ಹಣ ತರಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ನಾಲ್ಕೂವರೆ ವರ್ಷದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಪ್ರಧಾನ ಮಂತ್ರಿಗಳನ್ನು ಲೋಕಾರ್ಪಣೆಗೆ ಕರೆಸಲಾಗುತ್ತದೆ. ಸುಮಾರು 550 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಂಡಿದೆ ಎಂದು ತಿಳಿಸಿದರು.
ಹೊಸನಗರ ಸಮೀಪ 766 ಇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಳ್ಳುತ್ತಿದ್ದು ಒಂದೂವರೆ ಕಿ.ಮೀ. ಸುತ್ತ ಎಂಬಲ್ಲಿ ಹೊಸನಗರ ಸೇತುವೆಯನ್ನು ಮೇಲ್ದರ್ಜೆಗೆ ಏರಿಸಲಾಗುತ್ತದೆ. ಮುಕ್ಕಾಲು ಕಿ.ಮೀ. ಬೆಕ್ಕೋಡಿ ಬ್ರಿಡ್ಜ್, ಹರತಾಳು ಹಾಲಪ್ಪ ನೇತೃತ್ವದಲ್ಲಿ ಪಟಗುಪ್ಪ ಸೇತುವೆ ನಿರ್ಮಾಣವಾಗಿದೆ. ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಹಸಿರುಮಕ್ಕಿ ಸೇತುವೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದ್ದು ಈಗ ಕಾಮಗಾರಿ ನಡೆಯುತ್ತಿದೆ. ಒಟ್ಟಾರೆ ಮಲೆನಾಡು ಭಾಗದ ಪ್ರಮುಖ ಸೇತುವೆಗಳು ನಿರ್ಮಾಣವಾಗುತ್ತಿದೆ. ಕೇಂದ್ರದಿಂದ ಮಲೆನಾಡು ಭಾಗದ ರಸ್ತೆ ಮತ್ತು ಸೇತುವೆಗೆ ಹೆಚ್ಚು ಹಣ ಮಂಜೂರು ಮಾಡಿದ್ದು, ಮಲೆನಾಡು ಮತ್ತು ಕರಾವಳಿ ಭಾಗ ಸಂಪರ್ಕ ಮಾಡಲು ಹೆಚ್ಚು ಅನುಕೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಟಿ.ಡಿ.ಮೇಘರಾಜ್, ಮೈತ್ರಿ ಪಾಟೀಲ್, ಮಲ್ಲಿಕಾರ್ಜುನ ಹಕ್ರೆ, ಪ್ರಸನ್ನ ಕೆರೆಕೈ, ಹೊನಗೋಡು ರತ್ನಾಕರ್, ಭರ್ಮಪ್ಪ ಅಂದಾಸುರ, ರೇವಪ್ಪ ಹೊಸಕೊಪ್ಪ, ಸುವರ್ಣ ಟೀಕಪ್ಪ, ಸಂತೋಷ್ ಶೇಟ್ ಇನ್ನಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post