ಕಲ್ಪ ಮೀಡಿಯಾ ಹೌಸ್
ಸಾಗರ: ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯುವವರ ಪಟ್ಟಿಯಲ್ಲಿ ನನ್ನ ಹೆಸರು ಸಮೀಪದಲ್ಲಿದೆ ಎಂದು ಶಾಸಕ ಹಾಲಪ್ಪ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡುತ್ತಿದ್ದೇನೆ ಎಂದರು.
ರಾಜಕೀಯವಾಗಿಯಲ್ಲದಿದ್ದರೂ ನಮ್ಮ ಪಕ್ಷದ ವ್ಯವಸ್ಥೆಯಲ್ಲಿ ನನಗೂ ವಯಸ್ಸಾಗುತ್ತಾ ಬಂದಿದೆ. ಆದ್ದರಿಂದ ಸಚಿವ ಸ್ಥಾನ ಕೊಡಿ ಎಂದು ಬೇಡಿಕೆ ಇರಿಸಿದ್ದೇನೆ. ನನ್ನ ಹೆಸರು ಪರಿಗಣನೆ ಹಂತದಲ್ಲಿರುವುದು ಗಮನದಲ್ಲಿದೆ. ನಾಲ್ಕು ತಾಲೂಕಿನಲ್ಲಿ ಮೂರು ಬಾರಿ ಶಾಸಕನಾಗಿದ್ದೇನೆ. ಲಾಬಿ ಮಾಡಲು ದೆಹಲಿಗೆ ಹೋಗುವುದಿಲ್ಲ. ನನ್ನ ಹೆಸರು ಸಚಿವ ಸ್ಥಾನಕ್ಕೆ ತೀರ ಹತ್ತಿರದಲ್ಲಿದೆ ಎಂದರು.

ನಮ್ಮ ಹಿರಿಯರು ಏನು ಮಾಡುತ್ತಾರೆ ಗೊತ್ತಿಲ್ಲ. ಎಂಟತ್ತು ಜನ ಹಿರಿಯರನ್ನು ಕೈಬಿಡುತ್ತಾರೆನ್ನುವ ಮಾಹಿತಿ ಮಾಧ್ಯಮಗಳಲ್ಲಿದೆ. ಬಿಜೆಪಿಯಲ್ಲಿ ಪೂರ್ಣ ಜಾತಿ ಹಿನ್ನೆಲೆಯಲ್ಲಿ ಮಂತ್ರಿ ಸ್ಥಾನ ನೀಡುವುದು ಕಡಿಮೆ. ಸಮಯ ಸಂದರ್ಭ, ಭೌಗೋಳಿಕ ಹಿನ್ನೆಲೆಯಲ್ಲಿ ಸಚಿವ ಸ್ಥಾನ ನೀಡುತ್ತಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಮಾಜವಾದಿ ತತ್ವ ಬದಿಗಿರಿಸಿ ಬಿಜೆಪಿ ಅತಿಹೆಚ್ಚು ಸ್ಥಾನಗಳಿಸುವಂತೆ ಮಾಡುವಲ್ಲಿ ಈಡಿಗ ಸಮುದಾಯದ ಪಾತ್ರ ಪ್ರಮುಖ. ಈಗ ಈಡಿಗ ಸಮುದಾಯ ಬೇರೆಬೇರೆ ಕಡೆ ಚದುರಿ ಹೋಗುತ್ತಿದೆ. ಇಂತಹ ಹೊತ್ತಿನಲ್ಲಿ ನನಗೆ ಸಚಿವ ಸ್ಥಾನ ನೀಡಿದರೆ ಪುನಃ ಈಡಿಗ ಸಮುದಾಯ ಬಿಜೆಪಿಯಲ್ಲಿಯೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















