ಕಲ್ಪ ಮೀಡಿಯಾ ಹೌಸ್ | ಐಗಿನ ಬೈಲು(ಸಾಗರ) |
ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸಲು ಮಕ್ಕಳು ಶ್ರಮಿಸಬೇಕು ಎಂದು ತಾಲೂಕಿನ ಐಗಿನ ಬೈಲು ಶಾಲೆಯ ಆವರಣದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೇರಿಯಪ್ಪ ಕರೆ ನೀಡಿದರು.
79 ನೇ ಸ್ವಾತಂತ್ರೋತ್ಸವದ ಅಂಗವಾಗಿ ಸಾಗರ ತಾಲೂಕು ಶಿವಮೊಗ್ಗ ಜಿಲ್ಲೆಯ ಐಗಿನ ಬೈಲು ಶಾಲೆಯ ಆವರಣದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೇರಿಯಪ್ಪ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಮಾತನಾಡಿ, ಭಾರತವು 200 ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ಮುಕ್ತವಾದ ದಿನ 1947 ಆಗಸ್ಟ್ 15. ಅಂದು ಭಾರತವು ಪ್ರಜಾಸತಾತ್ಮಕ ರಾಷ್ಟ್ರವಾಗಿ ನಿರ್ಮಾಣವಾಯಿತು. ಹೀಗಾಗಿ, ಆಗಸ್ಟ್ 15 ನಮಗೆ ಅತ್ಯಂತ ಪ್ರಮುಖವಾದ ದಿನ. ನಮ್ಮ ದೇಶವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಮುಕ್ತಗೊಳಿಸಲು ವೀರ ಸ್ವಾತಂತ್ರ ಹೋರಾಟಗಾರರು ಶ್ರಮಿಸಿದ್ದಾರೆ ಎಂದರು.
ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಕ್ಕಳ ತಾಯಿಂದಿರು ಭಾಗವಹಿಸಿ ರಾಷ್ಟ್ರೀಯ ಹಬ್ಬಗಳಲ್ಲಿ ಭಾರತದ ಭವ್ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅನುಸರಿಸುವ ಪದ್ಧತಿಯನ್ನು ಮಕ್ಕಳು ಹಾಗೂ ಪೋಷಕರು ರೂಡಿಸಿಕೊಳ್ಳಬೇಕು. ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸವನ್ನು ತಾಯಿಂದಿರು ಮಾಡಬೇಕು ಎಂದರು.
ಗ್ರಾಮ ಪಂಚಾಯ್ತಿ ಹಾಗೂ ಸ್ಥಳೀಯರು ನೀಡಿದ್ದ ಸಿಹಿಯನ್ನು ಮಕ್ಕಳಿಗೆ 79 ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು. ಶಾಲೆಯ ಶಿಕ್ಷಕ ವೃಂದದವರಿಂದ ಮಕ್ಕಳಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿತ್ತು.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಾಷಣ ಮತ್ತು ದೇಶ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮದೊಂದಿಗೆ 79 ನೇ ಸ್ವಾತಂತ್ರೋತ್ಸವದ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಮತ್ತು ಪೋಷಕರು ಮತ್ತು ಅಂಗನವಾಡಿಯಿಂದ 5 ನೇ ತರಗತಿಯವರೆಗಿನ ಎಲ್ಲ ಮಕ್ಕಳು ಹಾಗೂ ಹಲವು ಗಣ್ಯರು ಹಾಗೂ ಸಂಸ್ಥೆಯ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
(ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post