ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಲೈನ್ ಮ್ಯಾನ್ ಇಸ್ ಪವರ್ ಮ್ಯಾನ್ ಎನ್ನುವ ವಾಸ್ತವದ ಬುತ್ತಿ ಕಟ್ಟಿಕೊಂಡು ಬದುಕು ರೂಢಿಸಿಕೊಂಡಿರುವ ಈ ಹೊತ್ತಿನ ಕಾಲಮಾನದಲ್ಲಿ ಪವರ್ (ಕರೆಂಟ್) ಇಲ್ಲದೆಯೇ. ದಿನದ ಕೆಲಸಗಳು ಮುಂದು ಸಾಗದಾಗಿದೆ, ಅಂತಹದೊಂದು ಜನಜೀವನ ವ್ಯವಸ್ಥೆ ನಮ್ಮಗಳ ಮುಂದಡಿ ಇದೆ. ಒಂದು ತಲೆಮಾರಿನ ಕೆಳಗೆ ಪಚ್ಚಪ್ಪ- ಈರಣ್ಣನವರ ಸೌದೆ ಡಿಪೋಗಳು ಕಾಣೆಯಾಗಿ ಅದರ ಕುರುಹುಗಳು ಇಲ್ಲದಾಗಿದೆ. ಬೆಚ್ಚನೇ ಬಿಸಿ ನೀರಿಗಾಗಿ ಪವರ್ ಬೇಕು, ಅಡುಗೆಗೂ ಕರೆಂಟ್, ನಿದ್ದೆಗೂ ಕರೆಂಟ್, ಮನೋರಂಜನೆಗೂ ಕರೆಂಟ್, ಕೆಲಸಕ್ಕೂ ಕರೆಂಟ್ ಅನಿವಾರ್ಯತೆ ಆವರಿಸಿಕೊಂಡಿದೆ. ಬೆಳ್ಳಂ ಬೆಳಿಗ್ಗೆ ಎದ್ದು ಕಿಟ್ಟಪ್ಪನ ಬಣವೆಯಿಂದ ಕದ್ದು ಒಂದು ಪೆಂಡಿ ಒಣ ಹುಲ್ಲು ತಂದು ಬೆಂಕಿಯಿಟ್ಟು ಸುತ್ತಾ ಕೈ ಉಜ್ಜಿ ಚಳಿ-ಚಳಿಯನ್ನು ಕಾವಿಟ್ಟುಕೊಳ್ಳುವುದು ನೆನಪಾಗಿಯೇ ಉಳಿದಿದೆ.
ಹೌದು… ಇಂತಹ ಆಧುನಿಕತೆಯ ಮಹಾಪರ್ವದಲ್ಲಿ Power Is ultimate ಎನ್ನುವ ತೀರ್ಮಾನಕ್ಕೆ ಬಂದು ಬಿಟ್ಟಿದ್ದೇವೆ. ಇರಲಿ ಪ್ರಾಕೃತಿಕ ವರದಾನ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೂ ಪವರ್ (ಕರೆಂಟ್)ನ್ನು ಅಮರಿಕೊಂಡೇ ಸಾಗೋಣ.
ಇದು ವಾಸ್ತವ ಟಿಪ್ಪಣಿ ಕೂಡ. ಆದರೆ ಇಂತಹ ಅನಿವಾರ್ಯತೆಯಲ್ಲಿ ಬದುಕು ನಾಗರಿಕರದ್ದಾದರೆ ಇನ್ನೂ ಕರೆಂಟ್ ಸರಬರಾಜು ಒದಗಿಸುವ ಲೈನ್ ಮ್ಯಾನ್ ವೃತ್ತಿ ಕುರಿತಾಗಿ ಚರ್ಚಿಸಿ ಅವಲೋಕಿಸುವುದಾದರೆ ಇದೊಂದು ಸಾಹಸವೇ ಸರಿ. ಈ ವೃತ್ತಿಯೇನು ಸುರಕ್ಷಿತವಾದುದ್ದಲ್ಲ. ಎಂತಹ ಅನಾಹುತವಾದರೂ ತಂದೊಡ್ಡಬಹುದು, ನಾಗರಿಕ ಅನಿವಾರ್ಯತೆಯನ್ನು ಪೂರೈಸಲು ಲೈನ್ ಮ್ಯಾನ್ ಹುದ್ದೆಗಳು ಯಾವ ಸಂಕಷ್ಟಗಳ ಸವಾಲನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ನಮ್ಮೆಲ್ಲರ ಕಣ್ಣ ಸುಳಿಯಲ್ಲಿ ಸುಳಿದು ಸರಿಯುತ್ತಲೇ ಇರುತ್ತದೆ.
ಒಂದು ರೀತಿಯಲ್ಲಿ ಗಡಿ ಯೋಧರಂತೆ ಕಾಣುವ ಲೈನ್ ಮ್ಯಾನ್’ಗಳು ತಮ್ಮ ಸಾವನ್ನು ಹೆಗಲಲ್ಲಿಟ್ಟುಕೊಂಡೇ ತಮ್ಮ ವೃತ್ತಿಯಲ್ಲಿ ಮಗ್ನರಾಗುತ್ತಾರೆ. ಇದು ಅಕ್ಷರಶಃ ಸತ್ಯ. ಇದಕ್ಕೆ ಜೀವಂತ ಉದಾಹರಣೆಗಳನ್ನು ವಿಸ್ತೃತಗೊಳಿಸುವ ಸರಕುಗಳು ಸಗಟುಗಳಾಗುತ್ತದೆ. ಸಬ್’ಸ್ಟೇಷನ್’ಗಳು, ಟ್ರಾನ್ಸ್’ಫಾರ್ಮರ್’ಗಳು, ವಿದ್ಯುತ್ ಕಂಬಗಳು, ಪ್ರಾಕೃತಿಕ ವಿಕೋಪಕ್ಕೆ ಒಳಗಾದರೆ ಅಥವಾ ಲೈನ್ ಜಂಪ್ ಆದರೆ ಅಥವಾ ಶಾರ್ಟ್ ಆದರೆ ಲೈನ್ ಮ್ಯಾನ್ ಅಲ್ಲಿಗೆ ಬಂದಿಳಿಯುತ್ತಾನೆ. ಯಾವ ಹೊತ್ತಾದರು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ತನ್ನ ಕಾಯಕದಲ್ಲಿ ತೊಡಗಿದಾಗ ಆತ ಕಂಬದಲ್ಲಿ ಶಾಕ್ ಒಳಗಾಗಿ ಅಲ್ಲಿಯೇ ಸುಟ್ಟು ಹೋಗಿ ನೇತಾಡುವುದನ್ನು ನೋಡಿದ್ದೇವೆ. ತೀವ್ರತರ ಮಳೆಗಾಳಿ ಬೀಸಿ ಉರುಳಿ ಬೀಳುವ ಮರಗಳು ವಿದ್ಯುತ್ ತಂತಿಯ ಎಳೆದುಕೊಂಡೇ ಬೀಳುವ ಸ್ಥಿತಿಗಳು ನಗರ-ಪಟ್ಟಣಗಳಲ್ಲಿ ನಡೆಯುತ್ತದೆ. ಅದಾಗ ಅರಿವಿಲ್ಲದೆ ನಾಗರಿಕ ಹೆಜ್ಜೆಗಳಿಗೆ ಜೀವಹಾನಿಯಾಗಬಹುದೆಂದು ಲೈನ್ ಮ್ಯಾನ್ ನಿಜಕ್ಕೂ ತನ್ನ ಜೀವವನ್ನು ಮುಡಿಪಾಗಿಟ್ಟು ತನ್ನ ವೃತ್ತಿಯನ್ನು ನಿರ್ವಹಿಸುತ್ತಾನೆ.
ಇನ್ನೂ ಹಳ್ಳಿಗಾಡು, ಅರಣ್ಯ ಪ್ರದೇಶ ಇತರೆಡೆ ಕರ್ತವ್ಯ ನಿರ್ವಹಿಸಲು ತೆರಳುವ ಲೈನ್ ಮ್ಯಾನ್’ಗಳಿಗೆ ನಿಜಕ್ಕೂ ಕುಡಿಯುವುದಕ್ಕೆ ನೀರು ಕೂಡ ಸಿಗುವುದಿಲ್ಲ, ಹಸಿವಿನ ಒಣ-ಬಣದ ಹೊಟ್ಟೆಯತ್ತ ಗಮನಹರಿಸದೇ ಪವರ್ ಲೈನ್ ಸರಿಪಡಿಸುವ ನಿಟ್ಟಿನಲ್ಲಿ ಸಿಡಿಲು-ಮಳೆ- ಬರಬಿಸಿಲಿನ ತಾಪಕ್ಕೂ ಮೈಯೊಡ್ಡಿ ಕೆಲಸ ಮಾಡುವ ಲೈನ್ ಮ್ಯಾನ್’ಗಳಿಗೆ ನಾವು ಯೋಧರಿಗೆ ಗೌರವಿಸಿ ಸೆಲ್ಯೂಟ್ ಮಾಡುವಂತೆ ಲೈನ್’ಮ್ಯಾನ್’ಗಳಿಗೂ ಅದೇ ಭಾವದಿಂದ ಸೆಲ್ಯೂಟ್ ಮಾಡಬೇಕಾಗಿದೆ.
ಯಾವ ಊರ ಹಬ್ಬವಾದರೇನು-ಜಾತ್ರೆಯಾದರೇನು ಲೈನ್ -ಮ್ಯಾನ್ ಡ್ಯೂಟಿಯಲ್ಲಿರಬೇಕು. ಇಂತಹದೊಂದು ಸಂದಿಗ್ಧತೆಯಲ್ಲಿ ಕರ್ತವ್ಯ ನಿರ್ವಹಿಸುವ ಲೈನ್ ಮ್ಯಾನ್’ಗಳನ್ನು ಬಹುತೇಕ ನಾಗರಿಕ ಸಮುದಾಯ ನಡೆಸಿಕೊಳ್ಳುವುದಾದರು ಹೇಗೆ..? ಅದು ದುರ್ವರ್ತನೆಯ ಪರಮಾವಧಿಯನ್ನು ಮೀರಿಸುತ್ತದೆ. ಇಂತಹ ಅಮಾನವೀಯ ಮನಸುಗಳು ನಮ್ಮದಾಗಿರಬಾರದು ನಿಜ. ಆದರೆ ಪವರ್ (ಕರಂಟ್) ನಂಬಿಕೊಂಡೇ ಬದುಕುತ್ತಿರುವ ನಾಗರಿಕ ಬವಣೆಗಳು ಕೇವಲ ಕೆಲಸಕ್ಕಾಗಿ, ವಿದ್ಯಾಭ್ಯಾಸಕ್ಕಾಗಿ, ಮನೋರಂಜನೆಗಾಗಿ, ಅಡುಗೆಗಾಗಿ, ಬೆಚ್ಚನೆ ಬಿಸಿ ನೀರಿಗಾಗಿ ಮಾತ್ರದಿ ಅಲ್ಲದೆ ಅತ್ಯಂತ ತುರ್ತು ಪರಿಸ್ಥಿತಿಯಲ್ಲಿ ನಾಗರಿಕನಿಗೆ ಅಗತ್ಯ ಪವರ್ ಬೇಕಾಗಿರುತ್ತದೆ. ಮನೆಯಲ್ಲಿ ವೃದ್ಧಾಪ್ಯದವರೋ..? ಕೆಲಸಕ್ಕೆಂದು ಸರಂಜಾಮಿಸಿಕೊಂಡ ಎಲೆಕ್ಟ್ರಾನಿಕ್ ಉಪಕರಣಗಳು ಆನ್’ನಲ್ಲಿಯೇ ಇರುತ್ತೇವೆ ಎನ್ನುವ ಕಾರಣಕ್ಕೋ..? ಅಥವಾ ರೋಗಿಯ ಉಪಚಾರಕ್ಕೋ..? ಅಥವಾ ಕಗ್ಗತ್ತಲಿನಲ್ಲಿ ಕಳೆದ ಬದುಕುಗಳ ರಕ್ಷಣೆಗೋ..? ಈ ಪವರ್ ಅನಿವಾರ್ಯತೆಗಳು ಕಾಣುತ್ತೇವೆ.
ಯಾಕೆಂದರೆ ಮನುಷ್ಯ ಜೀವಿ ತನ್ನ ಜೀವನಕ್ಕಾಗಿ ಮೂಲ ಪರಂಪರೆಯನ್ನು ಮರೆತು ಎಲ್ಲಾ ಕಾಲಕ್ಕೂ ಕರೆಂಟ್ ಬೇಕೆ, ಬೇಕು ಎಂದು ಅಮರಿಕೊಂಡಿರುವುದರಿಂದಲೇ ಈ ಹೊತ್ತಿನ ಜಟಾಪಟಿಗೂ ಕಾರಣವಾಗಿದೆ.
ಇಂತಿವ ತುರ್ತು ಅನಿವಾರ್ಯತೆಗಳ ನಡುವೆ ಲೈನ್ ಮ್ಯಾನ್ ವೃತ್ತಿಗಳು ಅದ್ಯಾಗೆ ವೃತ್ತಿಯನ್ನು ನಿಭಾಯಿಸಬೇಕು ಎನ್ನುವುದನ್ನು ಅವರು ಅರ್ಥೈಸಿಕೊಳ್ಳಬೇಕು ಹಾಗೂ ಪರಿಸ್ಥಿತಿಯನ್ನು ವಿಕೋಪಕ್ಕೆ ತರುವಂತೆ ನಾಗರಿಕನು ವ್ಯಥಾ ಹೋಗಬಾರದು. ಎಲ್ಲಾ ರಂಗಗಳಲ್ಲಿಯೂ ಇರುವಂತೆ ಒಂದಿಷ್ಟು ಅಧಮರು ಎಲ್ಲೆಡೆ ಇದ್ದೇ ಇರುತ್ತಾರೆ. ಯಾವ ರಂಗವನ್ನು ಅವರು ಬಿಟ್ಟಿಲ್ಲ. ಈ ಕಾರಣಕ್ಕಾಗಿ ಅವರ ವೃತ್ತಿಯನ್ನು ಅಲ್ಲಗಳೆದು ಇರುವ ಪ್ರಾಮಾಣಿಕತೆ ಹಾಗೂ ಕರ್ತವ್ಯ ಸಾರ್ವಜನಿಕ ಪಾಲನೆಯಲ್ಲಿ ತೊಡಗಿಸಿಕೊಂಡಿರುವವರನ್ನು ನಿಂದಿಸಿದರೆ ಅದು ತರವಲ್ಲ. ಲೈನ್ ಮ್ಯಾನ್ ಹುದ್ದೆ ಅತೀವ ಸಾವು-ಸಂಕಟಗಳ ನಡುವೆಯಿದ್ದು ನಮ್ಮಗಳ ಮನೆ-ಮನ ಬೆಳಕಿಗಾಗಿ ಅವರುಗಳು ಎದುರಿಸುವ ನಿಜದ ಸ್ಥಿತಿಗಳನ್ನು ಮನಗಂಡು ಆತ್ಮಪೂರ್ವಕವಾಗಿ ನಾನು ಸೆಲ್ಯೂಟ್ ಮಾಡುತ್ತೇನೆ. ಅಲ್ಲದೆ ಗೌರವಿಸುತ್ತೇನೆ. ಆದರೆ ಅಧಮರಿಗಾಗಿ ಅಲ್ಲ ಏಕೆಂದರೆ ನಾಗರಿಕ ಅನಿವಾರ್ಯಗಳ ಕಾರಣಗಳಿಗಾಗಿ ಒಂದಿಷ್ಟು ಬರಳಣಿಕೆಯ ಅಧಮರು ಲೈನ್ ಮ್ಯಾನ್ ವೇಷದಲ್ಲಿ ನಾಗರಿಕ ಪೀಡಕರಾಗಿರುವುದು ಸಾರ್ವಜನಿಕರಿಗೆ ತಿಳಿದ ವಿಷಯವೇ ಆಗಿದೆ. ಅಂತಹವರ ಮಾತು, ದರ್ಪ, ನೇರವಾಗಿ ಅಪಮಾನಿಸುವಂತೆ ಮೀಟರ್ ಬೋರ್ಡಿಗೆ ಕೈ ಹಾಕಿ ಕರೆಂಟ್ ತೆಗೆಯುವುದು, ಮಾತಾಡಿದರೆ ಮೀಟರ್ ಕಿತ್ತುಕೊಂಡೇ ಹೋಗುವುದಾಗಿ ಬೆದರಿಸುವುದು, ನೋಡಿದರೆ ಎಂತಹ ಮೀಟರ್ ಬಡ್ಡಿ ಮಾಫಿಯಾಕ್ಕಿಂತಲ್ಲೂ ಕಡಿಮೆ ಇಲ್ಲದಂತೆ ವರ್ತನೆಗಳು ಕಣ್ಣಾರೆ ನೋಡಿಯೂ ಮೌನವಹಿಸುವ ದುರ್ಗತಿಗಳಿವೆ.
ಇಂತಹ ಅನೇಕ ಘಟಾನುವಳಿಗಳನ್ನು ನಾನು ನೋಡಿದ್ದೇನೆ. ಅದರಲ್ಲಿ ಎದುರಾದ ಒಂದು ಘಟನೆಯಲ್ಲಿ ಹರಿಗೆ ನಾಗ ಎಂಬುವ ಅಧಮನೊರ್ವ ಆಗತಾನೆ ಮಾಂಸದ ತುಂಡುಗಳನ್ನು ಬಾಯಲ್ಲಿ ಚಪ್ಪರಿಸಿ ಬಂದವನಂತೆ ಟೀತ್ ಸ್ಟಿಕ್ ಬಾಯಲ್ಲಿ ಇಟ್ಟುಕೊಂಡೇ ಸಾರ್ವಜನಿಕರಿಗೆ ಎದುರಾಗುತ್ತಾನೆ. ಅವನಿಗೆ ಐವತ್ತು ಅಥವಾ ನೂರು ರೂಪಾಯಿ ಕರೆನ್ಸಿ ತೋರಿಸಿದರೆ ಮಾತ್ರ ಇರುವ ಐನೂರು ಬಿಲ್ಪಾ ಪಾವತಿಸಿ ಎಂದು ಹೇಳಿ ತೆರಳುತ್ತಾನೆ. ಇಲ್ಲವೇ ಇಲ್ಲದ ಸಂಗತಿಗಳನ್ನೆಲ್ಲಾ ದುಂಡಾವರ್ತನೆಯಂತೆ ಬೀರಿ ಮೀಟರ್ ಕಿತ್ತು ಪರ್ಮನೆಂಟ್ ಕ್ಲೋಸ್ ಮಾಡುತ್ತೇನೆ ಎಂದು ಬೆದರಿಕೆ ಹಾಕುವ ಪರಿ ಯಾವ ಪಟಾಲಂ ಮ್ಯಾನಿಗೂ ಇಲ್ಲದಂತೆ ಈ ಲೈನ್ ಮ್ಯಾನ್ ವರ್ತನೆ ಮಿತಿ ಮೀರಿದೆ. ಇಂತಹವರನ್ನು ಉನ್ನತ ಮಟ್ಟದ ಅಧಿಕಾರಿಗಳು ಸಾರ್ವಜನಿಕ ಸಂಪರ್ಕಕ್ಕೆ ಬಾರದಂತೆ ಇರುವ ಕರ್ತವ್ಯದಲ್ಲಿ ನಿಯೋಜಿಸಬೇಕು. ಯಾಕೆಂದರೆ ಇಂತಹ ಉಪಟಳದಿಂದ ನಿಜಕ್ಕೂ ಲೈನ್ ಮ್ಯಾನ್ ಗಿರುವ ಸಾರ್ವಜನಿಕ ಗೌರವಗಳು ಇಲ್ಲದಂತಾಗುತ್ತದೆ. ಇಂತಹ ಕೆಲ ಪೀಡಕರ ಪೀಡನೆಗಳು ಹೊರತು ಪಡಿಸಿದರೆ ಲೈನ್ ಮ್ಯಾನ್ ಕರ್ತವ್ಯ ಸಾರ್ವಜನಿಕ ವಲಯದಲ್ಲಿ ಅತ್ಯಂತ ಗೌರವಕ್ಕೆ ಪಾತ್ರವಾದ, ಸ್ಮರಿಸಲೇ ಬೇಕಾದ ಹುದ್ದೆಯೇ ಆಗಿದೆ. ಕೆಲ ಪೀಡನೆಗಳನ್ನು ಬದಿಗೊತ್ತಿ ಸಾವಿನ ಸರಸದಲ್ಲಿ ಕರ್ತವ್ಯ ಪಾಲನೆಯಲ್ಲಿ ತೊಡಗುವ ಎಲ್ಲಾ ಲೈನ್ ಮ್ಯಾನ್ ಗಳಿಗೆ ನಮ್ಮ ಎದೆಗುಡಿಯಿಂದಲೇ ನಮಿಸೋಣ.
ಲೇಖನ: ಗಾ.ರಾ. ಶ್ರೀನಿವಾಸ್
Get in Touch With Us info@kalpa.news Whatsapp: 9481252093
Discussion about this post