ಕೆದರಿದ ಕೂದಲು, ಉದ್ದನೆಯ ಗಡ್ಡ, ಬಿಳಿಯ ಪೈಜಾಮ ಯಾರು ಅಂತ ಹೇಳಬೇಕಿಲ್ಲ. ಪ್ರತಾಪ್ ಚಂದ್ರ ಸಾರಂಗಿ, ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಹೆಸರು ಕೂಗುತ್ತಿದ್ದಂತೆಯೇ ನೆರೆದ ಆರು ಸಾವಿರ ಗಣ್ಯರಿಂದ ಹರ್ಷೋದ್ಘಾರ, ಕರತಾಡನ. ಪ್ರಧಾನಿ ನರೇಂದ್ರ ಮೋದಿಯವರು, ಅಮಿತ್ ಷಾ, ರಾಜನಾಥ್ ಸಿಂಗ್ ಸೇರಿದಂತೆ ಅನ್ಯ ಸಚಿವ ಸಂಪುಟಕ್ಕೆ ಈ ವ್ಯಕ್ತಿ ಕೈ ಮುಗಿಯುತ್ತಾ ಮುಂದೆ ಸಾಗುತ್ತಿದ್ದರೆ, ಭಾರತವೇ ಎದ್ದು ತನ್ನ ಪರಮ ವೈಭವದತ್ತ ಹೆಜ್ಜೆ ಹಾಕುತ್ತಿದೆಯೇನೋ ಅನ್ನಿಸುತ್ತಿತ್ತು. ನಿಜಕ್ಕೂ ಬಾಲಾಸೋರ್ನ ಜನತೆಗೆ ದೊಡ್ಡ ಸಲಾಮ್.
ಕೋಟಿದ್ವಯ ಘಟಾನುಘಟಿಗಳ ಸೋಲಿಸಿ, ಮೂರನೆಯ ಬಾರಿ ಗೆಲ್ಲಿಸಿ, ಕನಿಷ್ಟ ಹದಿನೈದು ಲಕ್ಷವೂ ಕೈಯಲ್ಲಿ ಇಲ್ಲದ ಸೈಕಲ್ಲಿನಲ್ಲಿ ಓಡಾಡುವ ವ್ಯಕ್ತಿಯ ಬೆನ್ನಿಗೆ ನಿಂತರು. ನೆರೆದ ಗಣ್ಯರ ಸಂಭ್ರಮ ಹೇಳುತ್ತಿತ್ತು ಅಲ್ಲಿ ಏನಾಗುತ್ತಿದೆ ಎಂದು. ಆ ಗಡಸು ಧ್ವನಿ, ಅದರಲ್ಲಿಯ ನಿಖರತೆ ಮತ್ತು ಸೊಗಸಾದ ಸರಳತೆ ಪ್ರತಾಪ್ ಚಂದ್ರ ಸಾರಂಗಿ ಅವರ ಆಗಸದೆತ್ತರಕ್ಕೆ ಕೊಂಡೊಯ್ದಿದ್ದವು. ಇಂತಹ ಒಬ್ಬ ಫಕೀರ ಕೇಂದ್ರ ಸಚಿವನಾಗುವುದು ಮೋದಿಯವರ ಸಂಪುಟದಲ್ಲಿ ಮಾತ್ರ ಸಾಧ್ಯ. ಪ್ರತಾಪ್ ಚಂದ್ರ ಸಾರಂಗಿಯವರ ಜೀವನ ಒಂದು ದಂತಕಥೆ. ಹೋರಾಟದಿಂದ ಆರಂಭವಾಗಿ ಜನರೇ ಗದ್ದುಗೆಗೆ ಏರಿಸಿದ ಜೈತ್ಯಯಾತ್ರೆ.
ಜನವರಿ 4, 1955ರಲ್ಲಿ ಬಾಲಾಸೋರ್ ಜಿಲ್ಲೆಯ ಗೋಪಿನಾಥ್’ಪುರದಲ್ಲಿ ಜನಿಸಿದ ಪ್ರತಾಪ್ ಚಂದ್ರ ಸಾರಂಗಿ ಅವರು ಉತ್ಕಲ್ ವಿಶ್ವವಿದ್ಯಾಲಯದ ಫಕೀರ್ ಮೋಹನ್ ಕಾಲೇಜಿನಲ್ಲಿ ಪದವೀಧರರಾದರು. ಅವರು ಉತ್ತಮ ವಾಗ್ಮಿ, ಒಡಿಯಾ ಮತ್ತು ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದ ಸಾರಂಗಿಯವರಿಗೆ ಮೊದಲಿನಿಂದಲೂ ಅಧ್ಯಾತ್ಮದ ಒಲವು, ವೈರಾಗ್ಯದ ಚಿಂತನೆ. ಸುಮಾರು ತಮ್ಮ ಇಪ್ಪತೆಂಟನೆಯ ವಯಸ್ಸಿನಲ್ಲಿ ಹೊರಟದ್ದು ಬೇಲೂರಿನ ರಾಮಕೃಷ್ಣ ಆಶ್ರಮದ ಕಡೆಗೆ. ಹೇಗೋ ಸ್ವಾಮಿ ಆತ್ಮಸ್ಥಾನಂದರನ್ನು ಭೇಟಿಯಾಗಲು ಯಶಸ್ವಿಯಾಗಿ ತಮ್ಮ ಇಚ್ಛೆಯನ್ನು ಅರುಹಿದರು.
ಪ್ರತಾಪ್ ಚಂದ್ರ ಸಾರಂಗಿಯವರ ವಿವರ ಕೇಳಲಾಗಿ ತಮ್ಮ ಬಗ್ಗೆ ಹಾಗೂ ತಮ್ಮ ವಯೋವೃದ್ಧ ವಿಧವೆ ತಾಯಿ ಕುರಿತು ಹೇಳಿದರು. ಆಗ ಸ್ವಾಮಿಜಿಯವರು ಮೊದಲು ನಿಮ್ಮ ತಾಯಿಯವರನ್ನು ನೋಡಿಕೊಳ್ಳಿ, ಅದೇ ದೊಡ್ಡ ಸೇವೆ ಎಂದು ವಾಪಸ್ಸು ಕಳಿಸಿದರು. ಅಲ್ಲಿಂದ ಹಿಂದಿರುಗಿದ ಪ್ರತಾಪ್ ಚಂದ್ರ ಸಾರಂಗಿ ಅವಿವಾಹಿತರಾಗೇ ಉಳಿದು 2018 ರಲ್ಲಿ ತಮ್ಮ ತಾಯಿ ನಿಧನರಾಗುವವರೆಗೂ ಅವರ ಸೇವೆ ಮಾಡುತ್ತಲೇ ಉಳಿದರು. ಸ್ಥಳೀಯ ಓ ಟಿವಿಗೆ ನೀಡಿದ ಸಂದರ್ಶನದಲ್ಲಿ ತಾನೊಬ್ಬ ಅವಿವಾಹಿತ ಹೊರತು, ಬ್ರಹ್ಮಚಾರಿಯಲ್ಲ ಎಂದಿದ್ದರು.
ಒಡಿಶಾದ ಮೋದಿ ಎಂದು ಖ್ಯಾತರಾದ ಪ್ರತಾಪ್ ಚಂದ್ರ ಸಾರಂಗಿಯವರನ್ನು ಅವರ ಊರಿನ ಜನ ನಾನಾ(ಅಣ್ಣ) ಎಂದೇ ಕರೆಯುತ್ತಾರೆ. ಎರಡು ಬಾರಿ ಶಾಸಕ ಮತ್ತು ಒಮ್ಮೆ ಸಂಸದರಾದ ಇವರ ಬಳಿ ಇರುವುದು ಕೇವಲ 1.5 ಲಕ್ಷ ಚರಾಸ್ತಿ ಮತ್ತು 15 ಲಕ್ಷದಷ್ಟು ಸ್ಥಿರಾಸ್ತಿ. ಇಂತಿದ್ದರೂ ಇವರ 12956 ಮತಗಳ ಅಂತರದ ಗೆಲುವು ಎದುರಾಳಿಗಳು ಯಾರು ಎಂಬುದರಿಂದ ಸಾಬೀತಾಗುತ್ತದೆ. ಅವರ ಎದುರು ಸೋತವರು 2014 ರಲ್ಲಿ ಸಾರಂಗಿಯವರ ವಿರುದ್ಧ ಗೆದ್ದು ಸಂಸದರಾಗಿದ್ದ ಬಿಜೆಡಿಯ 72 ಕೋಟಿಗಳ ಒಡೆಯ ರಬಿಂದ್ರ ಜೇನಾ ಮತ್ತು ಒಡಿಶಾ ಕಾಂಗ್ರೆಸ್ ಅಧ್ಯಕ್ಷ ನಿರಂಜನ ಪಟ್ನಾಯಿಕ್ ಅವರ ಮಗ ಮತ್ತು 104 ಕೋಟಿಗಳ ಶ್ರೀಮಂತ ನಬಜ್ಯೋತಿ ಪಟ್ನಾಯಿಕ್.
ಬಹುಶಃ ಇಡೀ ಪ್ರಚಾರವನ್ನು ಸೈಕಲ್ ಮತ್ತು ಆಟೋರಿಕ್ಷಾಗಳಲ್ಲಿ ಮುಗಿಸಿದ ಸಾರಂಗಿಯವರು ತಮ್ಮ ಅಭಿನಂದನೆಗಳನ್ನು ಆಟೋರಿಕ್ಷಾದಲ್ಲಿ ಹೋಗಿ ಮುಟ್ಟಿಸಿದ ಬಂದಿದ್ದಾರೆ. ಮೂಲತಃ ಹೋರಾಟಗಾರರಾದ ಸಾರಂಗಿಯವರು ಭಜರಂಗ ದಳದ ರಾಜ್ಯಾಧ್ಯಕ್ಷರು ಮತ್ತು ವಿಶ್ವ ಹಿಂದೂ ಪರಿಷತ್ತಿನ ಹಿರಿಯ ಸದಸ್ಯರು. ಅವರ ವಿರುದ್ಧ ಏಳು ಕ್ರಿಮಿನಲ್ ಕೇಸುಗಳಿವೆ. ಮಾಡಿರುವ ಅಪರಾಧ ಇಷ್ಟೇ, ಮದ್ಯ ವಿರೋಧಿ ಪ್ರತಿಭಟನೆ, ಜೇನಾ ವಿರುದ್ಧ ಹೋರಾಟ ಹಾಗೂ ಮತಾಂತರದ ವಿರುದ್ಧ ತಿರುಗಿ ಬಿದ್ದದ್ದು.
ಮಯೂರ್’ಬಂಜ್ ಜಿಲ್ಲೆಯಲ್ಲಿ ಕುಷ್ಟ ರೋಗದಿಂದ ಬಳಲುತ್ತಿದ್ದ ಆದಿವಾಸಿಗಳ ಸೇವೆಗೆ ತಮ್ಮನ್ನು ತೊಡಗಿಸಿಕೊಂಡ ಇವರು, ಅಲ್ಲಿ ಕದ್ದು ಮುಚ್ಚಿ ನಡೆಯುತ್ತಿದ್ದ ಮತಾಂತರವನ್ನು ತಡೆಯಲು ಹೋರಾಡಿದರು. ಅದರಿಂದ ಎಷ್ಟೋ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಆಗ ಯಾರೋ ಮಾಡಿದ ತಪ್ಪಿಗೆ ಜೈಲು ಶಿಕ್ಷೆಗೆ ಅನುಭವಿಸಿದರು. ಚುನಾವಣೆಯಲ್ಲಿ ಪ್ರಮುಖ ವಿಷಯಗಳೆಂದರೆ ಬಿಜು ಜನತಾದಳದ ಅಭ್ಯರ್ಥಿಯ ವಿರುದ್ಧದ 2016ರ ಚಿಟ್ ಫಂಡ್ ಹಗರಣ ಮತ್ತು ನಡೆದ ಸಿಬಿಐ ತನಿಖೆ ಹಾಗೂ ಪ್ರಧಾನಿ ಮೋದಿಯವರ ಸಾಧನೆಗಳು. ನರೇಂದ್ರ ಮೋದಿಯವರ ಪಾದಸೇವಕ ಎಂದು ಹೇಳಿಕೊಳ್ಳುವ ಸಾರಂಗಿ ದೇಶ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಬೇಕು ಎನ್ನುತ್ತಾರೆ. ಮುಖ್ಯಮಂತ್ರಿ ನವೀನ್ ಪಟ್ನಾಯಿಕ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಪ್ರತಾಪ್ ಚಂದ್ರ ಸಾರಂಗಿಯವರ ಬಾಲಾಸೋರ್ ಜಿಲ್ಲೆ ಏನೂ ಸಾಮಾನ್ಯ ಕ್ಷೇತ್ರವಲ್ಲ. ಇಲ್ಲಿ ಬಿಜೆಪಿ, ಬಿಜೆಡಿ ಮತ್ತು ಕಾಂಗ್ರೆಸ್ ಮೂರು ಪಕ್ಷಗಳೂ ಸಮಾನ ಅವಕಾಶ ಹೊಂದಿವೆ. 2009ರ ಮೊದಲು ಮೂರು ಬಾರಿ ಬಿಜೆಪಿ, 2009ರಲ್ಲಿ ಕಾಂಗ್ರೆಸ್’ನ ಶ್ರೀಕಾಂತ್ ಜೇನಾ ಮತ್ತು 2014ರಲ್ಲಿ ಬಿಜೆಡಿಯ ರಬಿಂದ್ರ ಜೇನಾ ಗೆಲುವು ಸಾಧಿಸಿದ್ದಾರೆ. ಭಾರತದಲ್ಲಿ ಇತ್ತೀಚೆಗೆ ನಡೆದ ಮಿಶನ್ ಶಕ್ತಿ ಯೋಜನೆಯ ಪ್ರಯೋಗಾರ್ಥ ಪರೀಕ್ಷೆ ಬಾಲಾಸೋರ್’ನಲ್ಲಿ ನಡೆದಿದ್ದು, ಇದು ಇಸ್ರೋದ ಪ್ರಮುಖ ಪ್ರಯೋಗ ಕೇಂದ್ರಗಳಲ್ಲಿ ಒಂದು.
ಪ್ರಧಾನಿ ನರೇಂದ್ರ ಮೋದಿಯವರು ಬಾಲಾಸೋರ್ನಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ನಿಮ್ಮ ಊರಿನ ಹೆಸರು ಇತಿಹಾಸದ ಪುಟಗಳಲ್ಲಿ ಸೇರಿತು. ಕೃತಕ ಉಪಗ್ರಹಗಳಿಗೆ ಪ್ರತಿಯಾಗಿ ಬಳಸುವ ಮಿಸೈಲ್’ಗಳನ್ನು ಭಾರತ ಕಂಡು ಹಿಡಿಯಲು ಯಶಸ್ವಿಯಾಗಿದೆ ಎಂದಿದ್ದರು. ಅಲ್ಲದೆ ಪ್ರತಾಪ್ ಚಂದ್ರ ಸಾರಂಗಿ ಪ್ರತಿನಿಧಿಸುವ ನೀಲಗಿರಿ ವಿಧಾನಸಭಾ ಕ್ಷೇತ್ರವೂ ಇದೇ ಜಿಲ್ಲೆಯಲ್ಲಿದೆ. 2004ರಲ್ಲಿ ನೀಲಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆದು ಗೆಲುವು ಸಾಧಿಸುತ್ತಾರೆ. ಆದರೆ 2009ರಲ್ಲಿ ಪಕ್ಷೇತರರಾಗಿ ನಿಂತುಕೊಳ್ಳಬೇಕಾಗುತ್ತದೆ. ಅದರ ಹಿಂದಿನ ಕಥೆಯು ರೋಚಕವಾಗಿದೆ.
ಬಿಜೆಪಿ ಪಕ್ಷದಿಂದ ನೀಲಗಿರಿ ಕ್ಷೇತ್ರದ ಬಿ ಫಾರ್ಮ್ ಪಡೆದ ಸಾರಂಗಿಯವರು ಸಾರಿಗೆ ಬಸ್ಸಿನಲ್ಲಿ ಅದನ್ನು ಕಳೆದುಕೊಳ್ಳುತ್ತಾರೆ. ಆಗ ಅವರ ಬಳಿ ಮತ್ತೆ ಬಿ ಫಾರ್ಮ್ ಪಡೆಯಲು ಸಮಯವೂ ಇರುವುದಿಲ್ಲ. ಪಕ್ಷೇತರರಾಗಿ ಸ್ಫರ್ಧಿಸುತ್ತಾರೆ. ಗೆಲ್ಲುತ್ತಾರೆ ಕೂಡ. ಇದು ಜನ ಅವರ ಮೇಲಿಟ್ಟ ನಂಬಿಕೆಗೆ ಸಾಕ್ಷಿ. ಈಗಲೂ ಪುಟ್ಟ ಜೋಪಡಿಯಲ್ಲಿ ಏಕಾಂಗಿಯಾಗಿ ವಾಸಿಸುವ ಇವರ ಮನೆ ಸದಾ ಕಾಲ ಅಭಿಮಾನಿಗಳಿಂದ ತುಂಬಿರುತ್ತದೆ. 1980ರಲ್ಲಿ ಬುಡಕಟ್ಟು ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಲು ತಂದ ಏಕಲ್ ವಿದ್ಯಾಲಯ ಪದ್ಧತಿ ಅಭಿನಂದನಾರ್ಹ. ಏಕಲ್ ವಿದ್ಯಾಲಯ ಎಂದರೆ ಏಕ ಶಿಕ್ಷಕ ಬುಡಕಟ್ಟು ಮಕ್ಕಳಿಗೆ ಒಂದರಿಂದ ಮೂರು ಅಥವಾ ಐದನೆಯ ತರಗತಿಯವರೆಗೆ ಪಾಠ ಹೇಳಿಕೊಡುತ್ತಾರೆ. ಆ ಶಿಕ್ಷಕ ಸ್ಥಳೀಯ ಪ್ರತಿಭಾವಂತ ಯುವಕ ಯುವತಿಯರಾಗಿದ್ದು, ಅವರಿಗೆ ಆ ಹಳ್ಳಿಯ ಜನ ಹಣ ಹೊಂದಿಸಿ ಸಂಬಳ ನೀಡುತ್ತಾರೆ. ತಮಗೆ ಬರುವ ಅಷ್ಟೋ ಇಷ್ಟೋ ಪಿಂಚಣಿ ಮತ್ತು ಕೃಷಿ ಆದಾಯವನ್ನು ಸಾರಂಗಿಯವರು ಶಾಲೆಗಳಿಗೆ ನೀಡುತ್ತಾರೆ. ಆದಿವಾಸಿಗಳು ಹೆಚ್ಚಿರುವ ಬಾಲಾಸೋರ್ ಮತ್ತು ಮಯೂರ್ಬಂಜ್ ಜಿಲ್ಲೆಯ ಬುಡಕಟ್ಟು ವಿದ್ಯಾರ್ಥಿಗಳಿಗೆ ಗಣ ಶಿಕ್ಷಾ ಮಂದಿರ್ ಯೋಜನೆಯಡಿ ಸಮರ್ ಕರಾ ಕೇಂದ್ರಗಳನ್ನು ತೆರೆದಿದ್ದಾರೆ.
ದೆಹಲಿಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಐವತ್ತಾರನೆಯವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರತಾಪ್ ಚಂದ್ರ ಸಾರಂಗಿಯವರಿಗೆ ಈಗ ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಖಾತೆ ದೊರೆತಿದೆ.
ನನ್ನ ಜೀವನ ಬಾಲ್ಯದಿಂದಲೂ ಹೀಗೆ ಇದೆ. ನಾನು ಅಧಿಕಾರದೊಂದಿಗೆ ಬದಲಾಗುವ ಪ್ರಶ್ನೆಯೇ ಇಲ್ಲ. ದೇಶಕ್ಕಾಗಿ ಮತ್ತು ಜನರ ಮೂಲಭೂತ ಸೌಕರ್ಯಗಳಿಗಾಗಿ ಸೇವೆ ಸಲ್ಲಿಸುವುದು ನನ್ನ ಧ್ಯೇಯ. ಎನ್ನುವ ಈ ಸಂತನ ಜೀವನ ಒಂದು ಸಂದೇಶ. ಇಂಥ ಮಕ್ಕಳ ಸದಾ ಭಾರತಾಂಬೆ ನೀಡಲಿ. ಸಿರಿವಂತ ರಾಜಕಾರಣಿಗಳ ನಡುವೆ, ತಮ್ಮ ಸರಳತೆಯಿಂದಲೇ ಸಾಮ್ರಾಟರಾದವರು ಪ್ರತಾಪ್ ಚಂದ್ರ ಸಾರಂಗಿ.
ಲೇಖನ: ಸಚಿನ್ ಪಾರ್ಶ್ವನಾಥ್,
ಬ್ಯಾಕೋಡು, ಸಾಗರ(ತಾ.), ಶಿವಮೊಗ್ಗ
Discussion about this post