ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಹಿಂದೂ ಧರ್ಮದೊಳಗಿನ ಅಸಮಾನತೆ, ಅಸ್ಪೃಷ್ಯತೆ, ಧರ್ಮ ಮೇಲಾಟದ ದೌರ್ಜನ್ಯಗಳನ್ನು ಸ್ವತಃ ಅನುಭವಿಸಿದ್ದ ಡಾ. ಬಾಬು ಜಗಜೀವನ್ ರಾಮ್, ಅವುಗಳನ್ನು ಸಾತ್ವಿಕವಾಗಿ ಪ್ರತಿಭಟಿಸುವ ಮಾರ್ಗವನ್ನು ಅನುಸರಿಸಿದ ಸಮಾಜ ಸುಧಾರಕ ಎಂದು ಬೆಂಗಳೂರು ವಿವಿಯ ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಚಾಲಕರಾದ ಡಾ. ಬಿ ಗಂಗಾಧರ್ ಅವರು ಅಭಿಪ್ರಾಯಪಟ್ಟರು.
ಕುವೆಂಪು ವಿವಿಯ Kuvempu University ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಬುಧವಾರ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದೊಳಗಿನ ಶೋಷಣೆಗಳನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ಗಟ್ಟಿದನಿಯಲ್ಲಿ ಒಗ್ಗೂಡಿದ ಹೋರಾಟಕ್ಕೆ ಮುಂದಾಗುವ ಹಾದಿ ತುಳಿಯುವವರಾಗಿದ್ದರೆ, ಡಾ. ಬಾಬು ಜಗಜೀವನ್ ರಾಮ್ ಅವರು ಅವುಗಳಿಂದ ವೈಯಕ್ತಿಕವಾಗಿ ದೂರು ಉಳಿದು ತಮ್ಮ ಪ್ರತಿಭೆ, ಸಾಮರ್ಥ್ಯದ ಆಧಾರದಲ್ಲಿ ಪ್ರತಿಭಟಿಸುತ್ತಿದ್ದರು. ಜಾತಿ ಶೋಷಣೆಗೆ ಒಳಗಾದರೂ ಸಹ ಮೇಲ್ವರ್ಗಗಳ ವಿರುದ್ಧ ದ್ವೇಷ ಬೆಳೆಸಿಕೊಳ್ಳದ ಅವರು, ದಲಿತರು ಶಿಕ್ಷಣ ಪಡೆದು ಸ್ವಾಭಿಮಾನಿಗಳಾಗಿ ಸ್ವಸಾಮರ್ಥ್ಯದ ಆಧಾರದಲ್ಲಿ ಮೇಲೆ ಬರಬೇಕು ಎಂದು ಪ್ರತಿಪಾದಿಸಿದರು ಮತ್ತು ಅನುಸರಿಸಿದವರು ಎಂದು ತಿಳಿಸಿದರು.
ಡಾ. ಬಾಬೂಜಿ ಅವರು ಭಾರತ ಸರ್ಕಾರದ ಕೃಷಿ, ಕಾರ್ಮಿಕ, ನಾಗರೀಕ ವಿಮಾನಯಾನ, ರೇಲ್ವೇ ಸೇರಿದಂತೆ ಹತ್ತಾರು ಸಚಿವಾಲಯಗಳನ್ನು ನಿಭಾಯಿಸಿ, ಉಪಪ್ರಧಾನಿಯಾಗಿ ಜನಪರ ಕಾರ್ಯಗಳನ್ನು ಕೈಗೊಂಡರು. ಸ್ವಾತಂತ್ರೋತ್ತರ ಭಾರತ ನಿರ್ಮಾಣಕಾರರು ಮತ್ತು ಸಮಾಜ ಸುಧಾರಕರ ಸಾಲಿನಲ್ಲಿ ಕೆಲವೇ ಮಹನೀಯರನ್ನು ನೆನೆಯುವ ಪರಿಪಾಠ ಭಾರತದಲ್ಲಿದೆ. ಡಾ. ಜಗಜೀವನ್ ರಾಮ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಹುನ್ನಾರಗಳು ನಡೆದಿದ್ದು, ಪ್ರಸ್ತುತದ ವಿದ್ಯಾರ್ಥಿಗಳು ಅವರನ್ನು ಅಧ್ಯಯನಿಸುವ ಮೂಲಕ ಭಾರತದ ಶ್ರೇಷ್ಠ ನಾಯಕನೊಬ್ಬನನ್ನು ಅಮರರನ್ನಾಗಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
Also read: ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ
ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಆಹಾರೋತ್ಪನ್ನಗಳ ಕೊರತೆಯ ಸಮಸ್ಯೆಯಿದ್ದ ಭಾರತವನ್ನು, ಹಸಿರು ಕ್ರಾಂತಿಯ ಮೂಲಕ ಬೇಳೆಕಾಳುಗಳ, ಆಹಾರೋತ್ಪನ್ನಗಳ ಯತೇಚ್ಛ ಶೇಖರಣೆ ಮಾಡಬಲ್ಲ ಸಶಕ್ತ ಭಾರತವನ್ನು ನಿರ್ಮಿಸಿದರು. ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಭಾರತದ ಎಲ್ಲ ತಳಸಮುದಾಯಗಳ ಪ್ರತಿನಿಧಿಯಾಗಿ ಡಾ. ಬಾಬು ಜಗಜೀವನ್ ರಾಮ್ ಭಾರತ ಸರ್ಕಾರದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದರು ಎಂದು ತಿಳಿಸಿದರು. ಕೃಷಿ ಸಚಿವರಾಗಿ ಡಾ. ಬಾಬು ಜಗಜೀವನ್ ರಾಮ್ ಪಾತ್ರ ವಿಷಯ ಕುರಿತು ಕನ್ನಡ ಭಾರತಿಯ ಡಾ. ನೆಲ್ಲಿಕಟ್ಟೆ ಸಿದ್ದೇಶ್ ವಿಚಾರ ಮಂಡಿಸಿದರು.
ಈ ಸಂದರ್ಭದಲ್ಲಿ ಮುಖ್ಯಅತಿಥಿಗಳಾಗಿ ವಿವಿಯ ಕುಲಸಚಿವೆ ಜಿ ಅನುರಾಧ, ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ. ಸತ್ಯಪ್ರಕಾಶ್ ಎಂ. ಆರ್., ಪ್ರೊ. ರಾಮೇಗೌಡ, ಪ್ರೊ. ಗುರುಲಿಂಗಯ್ಯ, ಡಾ. ಬಿ. ತಿಪ್ಪೇಸ್ವಾಮಿ, ಡಾ. ಬಿ. ಎಚ್. ಅಂಜನಪ್ಪ, ಡಾ. ವೆಂಕಟೇಶ್, ಡಾ. ಉದ್ದಗಟ್ಟಿ ವೆಂಕಟೇಶ್, ಡಾ. ಹಸೀನಾ ಹಾಗೂ ವಿವಿಯ ಅಧ್ಯಾಪಕೇತರ ನೌಕರರ ಸಂಘದ ಶ್ರೀನಿವಾಸ್, ಡಾ. ಅಣ್ಣಯ್ಯ, ವಿವಿಧ ವಿಭಾಗಗಳ ಉಪನ್ಯಾಸಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post