ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಎಸ್ಸಿಪಿ ಮತ್ತು ಟಿಎಸ್ಪಿ ಯೋಜನೆಯಡಿ ಕರ್ನಾಟಕ ಸರ್ಕಾರ ನೀಡುತ್ತಿರುವ ಅನುದಾನವನ್ನು ಕುವೆಂಪು ವಿವಿ ಕ್ರಿಯಾಯೋಜನೆಯ ಅನ್ವಯ ಸರ್ಮಪಕವಾಗಿ ಅನುಷ್ಠಾನಗೊಳಿಸುತ್ತಾ ಬಂದಿದೆ. ಆದ್ದರಿಂದ ಈ ಅನುದಾನವನ್ನು 2021-22ನೇ ಸಾಲಿಗೂ ಕೂಡ ಮುಂದುವರೆಸಬೇಕೆಂದು ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಘಟಕದ ವತಿಯಿಂದ ಸೋಮವಾರ ಸಿಂಡಿಕೇಟ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.
2020-21ನೇ ಸಾಲಿಗೆ 50 ಲಕ್ಷ ರೂ. ಅನುದಾನವನ್ನು ಈ ಯೋಜನೆಯಡಿ ಒದಗಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಫೆಲೋಶಿಪ್, ಹಾಸ್ಟೆಲ್ ಮೆಸ್ ಬಿಲ್ ಮತ್ತು ಶುಲ್ಕ ಮರುಭರಿಕೆ ಸೌಲಭ್ಯಗಳನ್ನು ಒದಗಿಸಲು ಈ ಅನುದಾನವನ್ನು ಬಳಕೆ ಮಾಡಲಾಗಿದೆ
ಹೆಚ್ಚುವರಿ 20 ಲಕ್ಷ ರೂ. ಅನುದಾನವನ್ನು ಪುಸ್ತಕಗಳ ಖರೀದಿಗೆ ನೀಡಲಾಗಿದ್ದು ವಿಶ್ವವದ್ಯಾಲಯದ ಗ್ರಂಥಾಲಯ, ಸಹ್ಯಾದ್ರಿ ಕಾಲೇಜು, ಕಡೂರು ಪಿ.ಜಿ.ಕೆಂದ್ರಗಳ ಗ್ರಂಥಾಲಯಗಳಿಗೆ ವಿಷಯವಾರು ಪುಸ್ತಕಗಳ ಖರೀದಿಸಿ ಒದಗಿಸಲಾಗಿದೆ. ಕುವೆಂಪು ವಿಶ್ವವಿದ್ಯಾಲಯಕ್ಕೆ ನೀಡುತ್ತಿರುವ ಅನುದಾನ ಮೊತ್ತವನ್ನು ಸಂಪೂರ್ಣ ಬಳಕೆಮಾಡಿಕೊಂಡು ಪ್ರಮಾಣ ಪತ್ರವನ್ನು ಸರಿಯಾದ ಸಮಯಕ್ಕೆ ಇಲಾಖೆಗೆ ಸಲ್ಲಿಸುತ್ತಿರುವ ಹೆಗ್ಗಳಿಕೆಗೆ ವಿವಿ ಪಾತ್ರವಾಗಿದೆ ಎಂದರು.
ಕುಲಸಚಿವರಾದ ಜಿ. ಅನುರಾಧ, ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಎಂ.ತ್ಯಾಗರಾಜ್, ಹಣಕಾಸು ಅಧಿಕಾರಿ ಎಸ್.ರಾಮಕೃಷ್ಣ, ಘಟಕದ ಸಂಚಾಲಕ ಡಾ.ಉದ್ದಗಟ್ಟಿ ವೆಂಕಟೇಶ್, ಅಧ್ಯಾಪಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post