ಶಿಕಾರಿಪುರ: ತಾಲೂಕಿನಲ್ಲಿ ಎಲ್ಲೆಲ್ಲಿ ಸರ್ಕಾರಿ ಖಾಲಿ ಜಾಗ, ಜಮೀನುಗಳಿವೆ. ಅದನ್ನು ತಾಲೂಕು ದಂಡಾಧಿಕಾರಿಗಳು ಅಲ್ಲಿಗೆ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಮಾಜಿ ಮುಖ್ಯಮಂತ್ರಿ, ವಿಧಾನ ವಿಧಾನಸಭಾ ಪ್ರತಿಪಕ್ಷದ ನಾಯಕ, ಶಾಸಕ ಬಿ.ಎಸ್. ಯಡಿಯೂರಪ್ಪ ತಾಕೀತು ಮಾಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿರುವ ಡಿ ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು ಪಟ್ಟಣದಲ್ಲಿ ಖಾಲಿ ನಿವೇಶನ ಇಲ್ಲದೇ ಇರುವುದರಿಂದ, ಶಿರಾಳಕೊಪ್ಪಕ್ಕೆ ಸ್ಥಳಾಂತರ ಮಾಡುವ ಬಗ್ಗೆ ಚರ್ಚಿಸಿ ಮಾತನಾಡುವಾಗ ಪಟ್ಟಣದಲ್ಲಿಯೇ ಐಬಿ ಹಿಂಭಾಗ, ಚನ್ನಮಲ್ಲಿಕಾರ್ಜುನ ಶಾಲೆಯ ಹಿಂಭಾಗ, ಗೃಹ ನಿರ್ಮಾಣ ಮಂಡಳಿ ಪಕ್ಕದ ಬಳಿ ಖಾಲಿ ನಿವೇಶನಗಳಿದ್ದು, ವಿದ್ಯಾರ್ಥಿ ನಿಲಯವನ್ನು ಆದಷ್ಟು ಪಟ್ಟಣದಲ್ಲಿಯೇ ನಿರ್ಮಾಣ ಮಾಡುವಂತಾಗ ಬೇಕು ಎಂದು ಸಲಹೆ ನೀಡಿದರು.
ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ, ಸುಮಾರು ಎರಡು ಕೋಟಿ ಎಂಬತ್ತೇಳು ಲಕ್ಷ ರೂಪಾಯಿ ಮೌಲ್ಯದ ಕಟ್ಟಡ ನಿರ್ಮಾಣ ಹಾಗೂ ಕಾಮಗಾರಿಗೆ ಪಟ್ಟಣದಲ್ಲಿಯೇ ಸೂಕ್ತ ನಿವೇಶನಗಳಿದ್ದು ಇದನ್ನ ತಾಲೂಕು ದಂಡಾಧಿಕಾರಿಗಳು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.
ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಮೂರು ಬಾರಿ ಟೆಂಡರ್ ಕರೆಯಲಾಗಿದೆ ಆದರೆ ಟೆಂಡರ್ ಪ್ರಕ್ರಿಯೆ ಆರಂಭವಾಗದೆ ಇರುವುದರಿಂದ ಪಂಚಾಯಿತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಎರಡು ಕೋಟಿ ಹದಿನಾರು ಲಕ್ಷ ಮೌಲ್ಯದ ಕಾಮಗಾರಿಗೆ ಇದುವರೆಗೂ ಟೆಂಡರ್ ಪ್ರಕ್ರಿಯೆ ನಡೆದಿಲ್ಲ ಏಕೆ ಎಂದು ಪ್ರಶ್ನಿಸಿದಾಗ, ಪಂಚಾಯಿತಿ ರಾಜ್ ಸಹಾಯಕ ಎಂಜಿನಿಯರ್ ಎರಡು ಬಾರಿ ಟೆಂಡರ್ ಕರೆದು ಜಯಾನಾಯ್ಕ್ ಎಂಬ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಅವರು ಆರೋಗ್ಯ ಸರಿಯಿಲ್ಲ ಎಂದು ಕಾರಣ ನೀಡುತಿದ್ದಾರೆ ಎಂದು ತಿಳಿಸಿದರು.
ಆಗ ಕೆಲವು ಸದಸ್ಯರು ಅನೇಕ ಕಡೆಗಳಲ್ಲಿ ಕಳಪೆ ಕಾಮಗಾರಿ ನಡೆದಿದೆ ಇದನ್ನು ಸಭಾಧ್ಯಕ್ಷರು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪರವರು ಕೂಡಲೇ ಅವರ ಟೆಂಡರನ್ನು ರದ್ದುಪಡಿಸಿ, ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಸೂಚಿಸಿದರು. ಅದರಂತೆ ಅನೇಕ ಕಾಮಗಾರಿಗಳಿಗೆ ಪರ್ಸೆಂಟೇಜ್ ಪಡೆದು ಸುಮ್ಮನಿರದೆ ಎಲ್ಲೆಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ, ಎಲ್ಲೆಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಲ್ಲೆಲ್ಲಿ ಕಳಪೆ ಕಾಮಗಾರಿ ನಡೆದಿದೆ ಎಂಬುದನ್ನ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಸೂಕ್ತ ಕ್ರಮ ಕೈಗೊಳ್ಳುವ ಕೆಲಸ ಸಹಾಯಕ ಎಂಜಿನಿಯರ್ ರವರು ಮಾಡಬೇಕು ಕಳಪೆ ಕಾಮಗಾರಿ ನಡೆದರೆ ನೀವೇ ಜವಾಬ್ದಾರರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಕೆಡಿಪಿ ಸದಸ್ಯ ಭಂಡಾರಿ ಮಾಲತೇಶ, ಪಟ್ಟಣದ ಹುಚ್ಚುರಾಯಸ್ವಾಮಿ ದೇವಸ್ಥಾನದ ಬಳಿ ಇರುವ ಪುಷ್ಕರಣಿಯನ್ನು ಋಗ್ವೇದ ಎಂಬ ಖಾಸಗಿ ಸಂಸ್ಥೆಯು ಸ್ವಚ್ಛತೆ ಮಾಡಿದೆ. ಹುಚ್ಚುರಾಯ ಸ್ವಾಮಿ ಕೆರೆ ಹಾಗೂ ಅಲ್ಲಿಯ ಪುಷ್ಕರಣಿಯು ಭಾರಿ ನೀರಾವರಿ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಅದರ ನಿರ್ವಹಣೆಗೆ ಸರ್ಕಾರದಿಂದ ಕೋಟ್ಯಾಂತರ ರೂಪಾಯಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಆದರೂ ಖಾಸಗಿ ಸಂಸ್ಥೆಗಳ ಮೂಲಕ ಅಲ್ಲಿ ಸ್ವಚ್ಛತೆ ಕಾರ್ಯ ನಡೆದಿದೆ. ಇಲಾಖೆಯಿಂದ ಯಾವುದೇ ರೀತಿಯ ಸ್ವಚ್ಛತೆ ನಡೆಯುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಇಲಾಖೆಯ ಸಹಾಯಕ ಎಂಜಿನಿಯರ್ ನಾವು ಅಲ್ಲಿಯ ಸ್ವಚ್ಛತೆಗಾಗಿ ಒಬ್ಬರನ್ನು ನೇಮಕ ಮಾಡಲಾಗಿದ್ದು ಅದರ ಸ್ವಚ್ಛತಾ ಕಾರ್ಯ ಅವರು ನಿರ್ವಹಿಸುತಿದ್ದಾರೆ ಎಂದರು.
ಮುಖ್ಯಮಂತ್ರಿಯಾಗಿ, ಸಂಸದರಾಗಿ, ಈಗ ಮತ್ತೆ ಶಾಸಕರಾಗಿ ಪ್ರಥಮ ಬಾರಿಗೆ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ತಾಲೂಕಿನಲ್ಲಿ ವಿವಿಧ ಇಲಾಖೆಯಿಂದ ಈ ರೀತಿಯ ಅನೇಕ ಸಮಸ್ಯೆಗಳ ಸರಮಾಲೆಗಳು ಕಂಡು ಬಂದಿತು. ಇದರಿಂದ ಕೆಲಕಾಲ ಬೇಸರಗೊಂಡಿದ್ದ ಅವರು ಮುಂದಿನ ಸಭೆಯಲ್ಲಿ ಎಲ್ಲಾ ರೀತಿಯಲ್ಲೂ ಎಲ್ಲಾ ಇಲಾಖೆಗಳು ತಪ್ಪುಗಳನ್ನು ಸರಿಪಡಿಸಿಕೊಂಡು ಸಭೆಗೆ ಹಾಜರಾಗಲು ಸೂಚಿಸಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಸುಬ್ರಹ್ಮಣ್ಯ, ಉಪಾಧ್ಯಕ್ಷೆ ಮಮತಾ ರಾಜಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನರಸಿಂಗ್ ನಾಯ್ಕ್, ಅರುಂಧತಿ ರಾಜೇಶ್, ಮಮತಾ ಸಾಲಿ, ಕೆಡಿಪಿ ಸದಸ್ಯರಾದ ಉಮೇಶ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)
Discussion about this post