ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರೈತರ ಸರ್ವಾಂಗೀಣ ಅಭಿವೃದ್ಧಿಗೆ ಜ್ಞಾನ, ತಂತ್ರಜ್ಞಾನ ಮತ್ತು ನವೀನತೆಯ ಸಂಗಮವಾಗಿರುವ “ಕೃಷಿ ವಸ್ತು ಪ್ರದರ್ಶನ–2025” ಇನ್ನೇನು 2 ದಿನಗಳಲ್ಲಿ, ಅಂದರೆ ಡಿ.22ರಂದು ವಿಜೃಂಭಣೆಯಿಂದ ನಡೆಯಲಿದೆ.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, #Keladi Shivappanayaka VV ಶಿವಮೊಗ್ಗ ಹಾಗೂ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಇರುವಕ್ಕಿ ಇವರ ಸಂಯುಕ್ತಾಶ್ರಯದಲ್ಲಿ, ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ–2025 ರ ಅಂಗವಾಗಿ ಈ ಮಹತ್ವದ ಪ್ರದರ್ಶನವನ್ನು ಶಿಕಾರಿಪುರ ತಾಲೂಕಿನ ಚುರ್ಚಿಗುಂಡಿ ಗ್ರಾಮ ಒನ್ ಕೇಂದ್ರದ ಮುಂಭಾಗದಲ್ಲಿ ಆಯೋಜಿಸಲಾಗಿದೆ.
ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಪರವಾಗಿ, ಕಳೆದ ಮೂರು ತಿಂಗಳ ಅವಧಿಯಲ್ಲಿ ಕಲ್ಮನೆ, ಹಿತ್ತಲ, ಚುರ್ಚಿಗುಂಡಿ, ಈಸೂರು ಹಾಗೂ ಚಿಕ್ಕಜೋಗಿಹಳ್ಳಿ ಗ್ರಾಮಗಳಲ್ಲಿ ವಾಸವಿದ್ದು ರೈತರೊಂದಿಗೆ ನೇರ ಸಂಪರ್ಕ ಸಾಧಿಸಿದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು, ವಿವಿಧ ವಿಷಯಗಳ ಕುರಿತು ಗುಂಪು ಚರ್ಚೆ ಹಾಗೂ ವಿಧಾನಾತ್ಮಕ ಪ್ರದರ್ಶನಗಳನ್ನು ನಡೆಸಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ನವೀನ ಆಲೋಚನೆಗಳು ಮತ್ತು ತಾಂತ್ರಿಕ ಮಾಹಿತಿ ನೀಡಿದ್ದು, ಅದೇ ಅನುಭವದ ಆಧಾರದಲ್ಲಿ ಈ ಕೃಷಿ ವಸ್ತು ಪ್ರದರ್ಶನ–2025 ಅನ್ನು ಆಯೋಜಿಸಿದ್ದಾರೆ.
ಈ ಮಹತ್ವದ ಕೃಷಿ ವಸ್ತು ಪ್ರದರ್ಶನದಲ್ಲಿ 85ಕ್ಕೂ ಹೆಚ್ಚು ಕೃಷಿ ಮಳಿಗೆಗಳು ಸ್ಥಾಪನೆಯಾಗಿದ್ದು, ರೈತರಿಗೆ ಬೇಕಾದ ಕೃಷಿ ಯಂತ್ರೋಪಕರಣಗಳು, ಸಿರಿಧಾನ್ಯ ಮತ್ತು ಮೌಲ್ಯವರ್ಧಿತ ಉತ್ಪನ್ನಗಳು, ಜೈವಿಕ ಹಾಗೂ ಸಾವಯವ ಉತ್ಪನ್ನಗಳು, ಬೀಜ–ರಸಗೊಬ್ಬರ ಕಂಪನಿಗಳ ಮಾಹಿತಿ, ನವೀನ ಕೃಷಿ ತಂತ್ರಜ್ಞಾನ ವಸ್ತುಗಳು ಒಂದೇ ಸ್ಥಳದಲ್ಲಿ ಲಭ್ಯವಾಗಲಿವೆ.
ಪ್ರದರ್ಶನದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಸ್ವತಃ ನಿರ್ಮಿಸಿರುವ ತಾಂತ್ರಿಕ ಮಳಿಗೆಗಳು ಗಮನ ಸೆಳೆಯಲಿವೆ. ಇವುಗಳಲ್ಲಿ, ಭತ್ತದ ನವೀನ ತಂತ್ರಜ್ಞಾನ ಮಾಹಿತಿ, ಜೈವಿಕ ಗೊಬ್ಬರಗಳು ಮತ್ತು ಅವುಗಳ ಉಪಯೋಗ, ಅಡಿಕೆ ಬೆಳೆ ವೈಜ್ಞಾನಿಕ ನಿರ್ವಹಣೆ ,ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ , ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ, ಮೆಕ್ಕೆಜೋಳ ಬೆಳೆಯ ತಂತ್ರಜ್ಞಾನ, ಸಾವಯವ ಕೃಷಿ ಪದ್ಧತಿಗಳು, ಬಾಳೆ ಬೆಳೆ ಆಧುನಿಕ ವಿಧಾನಗಳು, ಸಮಗ್ರ ಕೃಷಿ ಪದ್ಧತಿ , ಹೈನುಗಾರಿಕೆ ಇತ್ಯಾದಿ ವಿಷಯಗಳ ಬಗ್ಗೆ ನೇರ ಮಾಹಿತಿ ಮತ್ತು ಪ್ರಾಯೋಗಿಕ ವಿವರಗಳನ್ನು ರೈತರಿಗೆ ಒದಗಿಸಲಾಗುತ್ತದೆ.
ಎಲ್ಲಾ ಗ್ರಾಮಗಳ ರೈತರು, ಸ್ವಸಹಾಯ ಸಂಘಗಳು, ಯುವ ರೈತರು, ಕೃಷಿ ವಿದ್ಯಾರ್ಥಿಗಳು ಹಾಗೂ ಕೃಷಿ ಪ್ರೇಮಿಗಳು ಈ ರೈತರ ಹಬ್ಬದಲ್ಲಿ ಭಾಗವಹಿಸಿ ಜ್ಞಾನ ಮತ್ತು ತಂತ್ರಜ್ಞಾನದಿಂದ ತಮ್ಮ ಕೃಷಿಯನ್ನು ಮತ್ತಷ್ಟು ಸದೃಢಗೊಳಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















