ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಿದ್ದು, ನೀವುಗಳೂ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಭವ್ಯ ಭವಿಷ್ಯ ರೂಪಿಸಲು ಸಾಧ್ಯವಿಲ್ಲ ಎಂದು ಸ್ವಾಮಿ ವಿವೇಕಾನಂದ ಸಂಸ್ಥೆಯ ಕಾರ್ಯದರ್ಶಿಗಳೂ ಆದ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಎಲ್ಲ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಸ್ಪರ್ಧೆ ಇದೆ. ಉತ್ತಮ ಭೌತಿಕ ಮತ್ತು ಶೈಕ್ಷಣಿಕ ಸವಲತ್ತುಗಳನ್ನು ನೀಡುವ ಶಿಕ್ಷಣ ಸಂಸ್ಥೆಗಳ ಉಗಮವಾಗುತ್ತಿರುವ ಕ್ಷೇತ್ರದಲ್ಲಿ ಶಿಕ್ಷಕರ ಜವಾಬ್ದಾರಿ ಅತ್ಯಂತ ಹೆಚ್ಚಿದೆ. ಇದಕ್ಕೆ ಶಿಕ್ಷಕರಾದ ನೀವು ವಿದ್ಯಾರ್ಥಿಗಳ ಬಗೆಗೆ ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಭವ್ಯ ಭವಿಷ್ಯ ರೂಪಿಸಲು ಸಾಧ್ಯವಿಲ್ಲ ಎಂದರು.
ನಿಮ್ಮ ಜ್ಞಾನದ ಹರಿವನ್ನು ವಿಸ್ತಾರಗೊಳಿಸುವ ಗುರುತರವಾದ ಜವಾಬ್ದಾರಿ ಸಂಸ್ಥೆ ಮತ್ತು ಕೆಲಸ ನಿರ್ವಹಿಸುವ ಎಲ್ಲರ ಮೇಲಿದೆ ಎಂದರು.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರವು ಎನ್’ಇಪಿ ಎಂಬ ಶೈಕ್ಷಣಿಕ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದಾಗ ಮಾತ್ರ ಭವಿಷ್ಯವನ್ನು ಕಾಣಲು ಸಾಧ್ಯ. ಉತ್ತಮ ಶಿಕ್ಷಕರಾಗುವವರು ಕೇವಲ ಬೋಧನೆಯಿಂದಲ್ಲ ಅದು ಅನುಷ್ಠಾನಗೊಳಿಸಿದಾಗ ಮಾತ್ರ ಸಾಧ್ಯ ಎಂದರು.
ಜೀವನದಲ್ಲಿ ಯಶಸ್ವಿಯಾಗಲು ಮಾರ್ಗದರ್ಶಕರಾಗಬೇಕು, ಶಿಕ್ಷಕರ ಸಮರ್ಪಣೆ, ತಾಳ್ಮೆ ಮತ್ತು ನಿಸ್ವಾರ್ಥ ಕೆಲಸವನ್ನು ಗೌರವಿಸಲು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಇದು ಭಾರತದ ಎರಡನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಸೂಚಿಸುತ್ತದೆ. ಇಂತಹ ಮಹಾನ್ ಚೇತನರ ಶೈಕ್ಷಣಿಕ ಸೇವೆಯನ್ನು ಮನದಲ್ಲಿ ನೆನಪಿಸಿಕೊಂಡು ನಾವೆಲ್ಲರೂ ಉತ್ತಮ ದೇಶವನ್ನು ಕಟ್ಟುವಲ್ಲಿ ನಾವು ನೀವೇಲ್ಲರೂ ಕೂಡಿ ಕೆಲಸ ಮಾಡೋಣ ಎಂದರು.
ಶಿಕ್ಷಕರು ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳನ್ನು ನೀಡುವ ಮೂಲಕ ಸಮಾಜವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಮಾರ್ಗದರ್ಶಕರು ಮತ್ತು ಸ್ಫೂರ್ತಿ ನೀಡುವವರು. ಅವರು ಕೇವಲ ಶಿಕ್ಷಣವನ್ನು ನೀಡದೆ, ವಿದ್ಯಾರ್ಥಿಗಳ ಬೌದ್ಧಿಕ ಮತ್ತು ನೈತಿಕ ಬೆಳವಣಿಗೆಯನ್ನು ಬೆಂಬಲಿಸುವರಾಗಬೇಕು.
-ಬಿ.ವೈ. ರಾಘವೇಂದ್ರ
ಸಂಸ್ಥೆಯಲ್ಲಿ 15 ವರ್ಷಗಳಿಂದ ಕೆಲಸ ನಿರ್ವಹಿಸಿದವರಿಗೆ ಸೇವಾ ಸಿರಿ ಪ್ರಶಸ್ತಿ, ಸಂಶೋಧನಾ ಕ್ಷೇತ್ರದಲ್ಲಿ ಅಭ್ಯಾಸ ಮಾಡಿ ಪಿಎಚ್’ಡಿಯಲ್ಲಿ ಡಾಕ್ಟರೇಟ್ ಪಡೆದವರಿಗೆ ಗೌರವ ಸನ್ಮಾನ, ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳಾಗಿ ಶಿಕ್ಷಕ ವೃತ್ತಿಯಲ್ಲಿ ಸಾಧನೆ ಮಾಡಿ ಶಿವಮೊಗ್ಗ ಜಿಲ್ಲಾ ಶಿಕ್ಷಕ ಪ್ರಶಸ್ತಿಗೆ ಭಾಜನರಾದವರಿಗೆ ಅಭಿನಂದನಾ ಸನ್ಮಾನ ಹಾಗೂ ತಮ್ಮ ವಿಷಯಗಳಲ್ಲಿ ವಿದ್ಯಾರ್ಥಿಗಳು 100% ಅಂಕಗಳನ್ನು ಗಳಿಸಿ ತೇರ್ಗಡೆಯಾಗಿರುವ ಶಿಕ್ಷಕರುಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಡಾ ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ನೆರವೇರಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ಪುಸ್ತಕವನ್ನು ಬರೆದು ಸಾಧನೆ ಮಾಡಿದ ಪ್ರಾಚಾರ್ಯರಾದ ಡಾ. ಜಿ.ಎಸ್. ಶಿವಕುಮಾರ್, Educational Psychology, ಸಹಾಯಕ ಪ್ರಾಧ್ಯಾಪಕರಾದ ಡಾ. ಎಚ್. ರವಿ, “Awareness of Life Skills among B.Ed Student Teachers” ಸಹಾಯಕ ಪ್ರಾಧ್ಯಾಪಕರಾದ ಡಾ. ಎಂ. ಯದುಕುಮಾರ್, “Pedagogy of School Subject Chemistry” ಪುಸ್ತಕವನ್ನು ಬರೆದು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ ಶಿಕ್ಷಕರುಗಳಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಶಿವಮೊಗ್ಗ ಮೈತ್ತಿ ನರ್ಸಿಂಗ್ ಕಾಲೇಜಿನಿಂದ ತಯಾರಿಸಲ್ಪಟ್ಟ ವಿಸ್ಮಯ ನಿಯತಕಾಲಿಕೆಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಇದೇ ವೇಳೆ ನಿವೃತ್ತ ಶಿಕ್ಷಕ ಹಾಗೂ ಸಮಾಜ ಸುಧಾರಕರಾದ ದುರ್ಗಪ್ಪ ಶಿಕ್ಷಕರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಎಲ್ಲ ಅಂಗಸಅಸ್ಥೆಗಳ ಪ್ರಾಚಾರ್ಯರು, ಮುಖ್ಯಸ್ಥರು, ಬೋಧಕ ಬೋಧಕೇತರ ವರ್ಗದವರು ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ದ್ವಿತೀಯ ಮತ್ತು ಚತುರ್ಥ ಸೆಮಿಸ್ಟರ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವು ಉತ್ತಮವಾಗಿ ಮೂಡಿಬಂದಿತು.
ಪ್ರಶಿಕ್ಷಣಾರ್ಥಿಗಳಾದ ಆರ್. ಶೃತಿ ಮತ್ತು ತಂಡದವರು ಪ್ರಾರ್ಥಿಸಿ, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯರು ಹಾಗೂ ಆಡಳಿತ ಮಂಡಳಿ ಪ್ರತಿನಿಧಿಗಳಾದ ಡಾ.ಜಿ.ಎಸ್. ಶಿವಕುಮಾರ್ ಸ್ವಾಗತಿಸಿದರು. ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ.ಕೆ.ಸಿ. ರವೀಂದ್ರ ಅವರು ವಂದನಾರ್ಪಣೆ ಮಾಡಿ, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಎಚ್. ರವಿ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















