ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಾಲೆಗಳಲ್ಲಿ ವಿದ್ಯಾರ್ಥಿ ನಾಯಕರ ಆಯ್ಕೆ ಮತದಾನದ ಮೂಲಕ ಸಾಗಿದ್ದು ಮಕ್ಕಳಿಗೆ ಚಿಕ್ಕಂದಿನಿಂದಲೇ ಚುನಾವಣಾ ಮಜಲುಗಳನ್ನು ಅರಿಯಲು ನೆರವಾಗಿದೆ ಎಂದು ಶಾಲಾ ಪ್ರಾಚಾರ್ಯರು ಮತ್ತು ಶಾಲಾ ಸಂಸತ್ತು ರಚನಾ ಚುನಾವಣೆಯ ಮುಖ್ಯಾಧಿಕಾರಿಗಳಾದ ವಿಶ್ವನಾಥ ಪಿ ತಿಳಿಸಿದರು.
ನಗರದ ಕುಮದ್ವತಿ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆಯ ಆದೇಶದಂತೆ ಸೋಮವಾರ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ರಚನೆಯ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿಗಳೆ ಅಭ್ಯರ್ಥಿಗಳಾಗಿ ಚುನಾವಣೆ ಪ್ರಕ್ರಿಯೆಯಂತೆ ನಾಮಪತ್ರ ಸಲ್ಲಿಕೆ, ಪರಿಶೀಲನೆ, ಮತ ಯಾಚನೆ ನಂತರ ಚುನಾವಣೆಯ ಮತದಾನ ಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆಯ ಈ ಕ್ರಮ ಶ್ಲಾಘನೆಗೆ ಕಾರಣವಾಗಿದೆ. ಈ ಕಾರ್ಯಕ್ರಮವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಸಂಸದೀಯ ವ್ಯವಹಾರಗಳ ಇಲಾಖೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಪ್ರೌಢಶಾಲಾ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ. ಶಾಲಾ ಹಂತ, ಜಿಲ್ಲಾ ಹಂತ, ತಾಲ್ಲೂಕು ಹಂತ ಹಾಗೂ ರಾಜ್ಯ ಹಂತದಲ್ಲಿ ಆಯೋಜಿಸಲಾಗುತ್ತದೆ. ಸಮಾಜದಲ್ಲಿ ಪ್ರಚಲಿತ ಸಮಸ್ಯೆಗಳನ್ನು ತೆಗೆದುಕೊಂಡು ಅಣುಕು ಸಂಸತ್ ಕಲಾಪಗಳನ್ನು ಆಯೋಜಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ವಿವಿಧ ಪಾತ್ರಗಳನ್ನು ನೀಡಿ ಅವರಿಗೆ ಕಲಾಪಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗುತ್ತದೆ. ಶಾಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ
Also read: ಸಚಿವ ಸ್ಥಾನ ಹೈಕಮಾಂಡ್ ನಿರ್ಧಾರ; ನೀಟ್ ರದ್ದುಪಡಿಸಬೇಕು: ಮಧು ಬಂಗಾರಪ್ಪ
ವಿದ್ಯಾರ್ಥಿಗಳು ಮತದಾರರ ಪಟ್ಟಿಯ ಆಧಾರದ ಮೇಲೆ ಸರದಿ ಸಾಲಿನಲ್ಲಿ ನಿಂತು ಮತದಾನದ ಹಕ್ಕನ್ನು ಚಲಾಯಿಸಿದರು. ಚುನಾವಣಾ ಆಯೋಗದ ಮಾದರಿಯಲ್ಲಿಯೇ ಮತಗಟ್ಟೆ, ಮತಪೆಟ್ಟಿಗೆ ಹಾಗೂ ಮತದಾನ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗಿದ್ದು, ಶಾಲಾ ಆವರಣವು ಪ್ರಜಾಪ್ರಭುತ್ವದ ಹಬ್ಬದ ವಾತಾವರಣವನ್ನು ಪಡೆದುಕೊಂಡಿತ್ತು. ಶಾಲೆಗಳಲ್ಲಿ ಶಾಲಾ ಸಂಸತ್ ಚುನಾವಣೆ ನಡೆಸುವುದು ಮಕ್ಕಳಿಗೆ ವಿಶೇಷ ಅನುಭವ ನೀಡುತ್ತದೆ. ಪ್ರತೀ ಮಗು ಉಲ್ಲಾಸ ಹಾಗೂ ಕುತೂಹಲದಿಂದ ಮತದಾನ ಮಾಡುವುದನ್ನು ಹತ್ತಿರದಿಂದ ಕಂಡಿದ್ದೇನೆ. ಶಾಲೆಯಲ್ಲಿ ಇಂತಹ ವಿಶೇಷ ಕಾರ್ಯಕ್ರಮಗಳನ್ನು ನಡೆಸುವುದರಿಂದ ಮಕ್ಕಳ ಕುತೂಹಲ ಹೆಚ್ಚಿ ಶಾಲಾ ದಾಖಲಾತಿ ಕೂಡ ಹೆಚ್ಚಳವಾಗುತ್ತದೆ. ನಮ್ಮ ಶಾಲೆಯು ಗುಣಮಟ್ಟದಲ್ಲಿ ಉತ್ತಮವಾಗಿದ್ದು ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿವೆ ಎಂದು ಚುನಾವಣೆಯ ಉಪ ಚುನಾವಣಾ ಅಧಿಕಾರಿಗಳು ಮತ್ತು ಪ್ರಭಾರಿ ಮುಖ್ಯ ಶಿಕ್ಷಕರಾದ ಪ್ರಶಾಂತ ಕುಬಸದ ತಿಳಿಸಿದರು.
ಶಾಲಾ ಸಂಸತ್ತಿನ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಪರಿಚಯಿಸುವ ಜೊತೆಗೆ ನಾಯಕತ್ವದ ಕೌಶಲ್ಯಗಳನ್ನು ಬೆಳೆಸುವ ಮಹತ್ವದ ಅವಕಾಶ ದೊರೆತಿದೆ ಎಂದು ಶಾಲಾ ಸಂಸತ್ತು ರಚನಾ ಉಸ್ತುವಾರಿಗಳು ಮತ್ತು ಸಮಾಜ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಚಂದ್ರಮತಿ ಎಸ್.ಟಿ ರವರು ತಿಳಿಸಿದರು.
ಶಿಕ್ಷಕರಾದ ಹಾಲಸ್ವಾಮಿ, ಚಂದ್ರಶೇಖರ್, ರೇಷ್ಮಾ ಬಾನು, ಮಂಜುಳಾ ಪಾಟೀಲ್,ಲಲಿತಾ, ವಿದ್ಯಾ, ನಿಂಗಪ್ಪ, ಸ್ಮಿತಾ ಮತದಾನದ ಕೇಂದ್ರದ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.ವಿದ್ಯಾರ್ಥಿಗಳೆ ಪೋಲಿಸ್ ಅಧಿಕಾರಿಗಳಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








