ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣ ಮುಂತಾದ ಜ್ಞಾನ ಕ್ಷೇತ್ರಗಳಲ್ಲಿ ದೈವವನ್ನು ಸ್ಮರಣೆ ಮಾಡುವುದು ನಮ್ಮ ಕಾಯಕಕ್ಕೆ ಉತ್ತಮ ಫಲಿತಾಂಶ ಬರಲೆಂದು ಎಂದು ಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿಗಳು ಮತ್ತು ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಜಿ.ಎಸ್. ಶಿವಕುಮಾರ್ ತಿಳಿಸಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಕುಮದ್ವತಿ ಕೇಂದ್ರಿಯ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಬೇಕು. ಗೆದ್ದೇ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗಬೇಕು. ನಾವು ಓದಲು ಬಂದಿದ್ದೇನೆ, ಓದಬೇಕು ಎನ್ನುವ ಪ್ರಜ್ಞೆಯೊಂದಿಗೆ ನಿರಂತರ ಅಧ್ಯಯನ ನಡೆಸಿದಲ್ಲಿ ಯಶಸ್ಸಿನ ದಾರಿ ಸುಗಮವಾಗಲಿದೆ’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜೊತೆಗೆ ವಿದ್ಯಾರ್ಥಿಗಳು ತಮ್ಮ ಬದುಕಿನ ಉದ್ದಕ್ಕೂ ಶಿಸ್ತು ಸಹನೆಯಿಂದ ಪೋಷಕರ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ಉತ್ತಮ ವ್ಯಕ್ತಿತ್ವ ನಿರ್ಮಿಸಿಕೊಂಡು ಸಮಾಜದ ಸತ್ಪ್ರಜೆಗಳು ನೀವಾಗಬೇಕು. ಜಗತ್ತಿನ ಅತ್ಯುತ್ತಮ ಶ್ರೇಷ್ಠ ವ್ಯಕ್ತಿಗಳೆಂದರೆ ಅದು ನೀವೇ. ನ್ಯೂನತೆಗಳ ಕುರಿತು ಹೆಚ್ಚು ಯೋಚಿಸಬೇಡಿ. ನಿಮ್ಮ ಶಕ್ತಿಯ ಬಗ್ಗೆ ಹೆಚ್ಚು ಯೋಚಿಸಿ, ಏಕೆಂದರೆ ನಿಮ್ಮನ್ನು ನಿಮ್ಮ ಯೋಚನೆಗಳು ಆಳುತ್ತವೆ. ಹೀಗಾಗಿ ಆಲೋಚನೆಗಳು ಉತ್ತಮವಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಮುಂದಿನ ಜೀವನ ಉಜ್ವಲವಾಗಿ ಬೆಳಗಲಿ ಎಂದು ಶುಭ ಹಾರೈಸಿದರು.
ಕುಮದ್ವತಿ ವಿಜ್ಞಾನ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ. ವೀರೇಂದ್ರ ಅವರು ಮಾತನಾಡಿ, ಯಾರು ಬದುಕಿನಲ್ಲಿ ಪ್ರಯತ್ನ ಮತ್ತು ಶ್ರಮದ ಬೆವರನ್ನು ಸುರಿಸುತ್ತಾರೋ ಅವರು ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ. ಈ ಯಶಸ್ಸನ್ನು ಕಾಣಲು ಇಚ್ಛಾಶಕ್ತಿ ಮತ್ತು ಚಿಕ್ಕ ಚಿಕ್ಕ ಪ್ರಯತ್ನವನ್ನು ನಿತ್ಯವೂ ನಿರಂತರವಾಗಿ ಸದ್ದಿಲ್ಲದೆ ನಡೆಯುತ್ತಿರಬೇಕು ಎಂದು ಕರೆ ನೀಡಿದರು.
ಮೈತ್ರಿ ಪ್ರಾಥಮಿಕ ಮತ್ತು ಕುಮದ್ವತಿ ಪ್ರೌಢಶಾಲೆಯ ಪ್ರಾಚಾರ್ಯರಾದ ಪಿ. ವಿಶ್ವನಾಥ ಅವರು ಮಾತನಾಡಿ, ವಿದ್ಯಾರ್ಥಿಗಳು ಅಂಕಗಳ ಜೊತೆಗೆ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಿ. ನಡೆ ನುಡಿಗಳು ನಿಮ್ಮ ಗುರಿಗೆ ಒಂದಾಗಿದ್ದರೆ ದೈವ ನಿಮ್ಮೊಟ್ಟಿಗೆ ಇರುತ್ತದೆ ಎಂದು ತಿಳಿಸಿದರು.
ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ಪ್ರಾಂಶುಪಾಲರಾದ ಎಚ್.ಡಿ. ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳಿಗೆ ಸೀಮಿತವಾಗದೆ ಬದುಕಿನ ಎಲ್ಲಾ ಸ್ಥರಗಳಿಗೂ ಹೊಂಕೊಂಡು ಜೀವನ ನಡೆಸಿ. ಮುಂದೆ ಬರುವ ಪರೀಕ್ಷೆಯನ್ನು ಎಲ್ಲರೂ ಚೆನ್ನಾಗಿ ಮಾಡಿ ಎಂದು ಶುಭ ಹಾರೈಸಿದರು.
ವಿದ್ಯಾರ್ಥಿಗಳಾದ ದಿಶಾ ಭಟ್ ಮತ್ತು ಸಮೀರ್ ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು. ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಸಲ್ಲಿಸಿ ಅವರಿಗೆ ವಿವಿಧ ಬಗೆಯ ನೃತ್ಯ ಆಟೋಟಗಳ ಮೂಲಕ ಮನರಂಜನೆ ನೀಡಲಾಯಿತು.
ಶಿಕ್ಷಕಿಯರಾದ ಕೀರ್ತಿ ಹತ್ತನೇ ತರಗತಿ ವಿದ್ಯಾರ್ಥಿಗಳ ಅವರ ಶಾಲಾ ದಿನಗಳಲ್ಲಿ ಕಳೆದ ಅತ್ಯುತ್ತಮ ನೆನಪುಗಳನ್ನು ಪಿಪಿಟಿ ಪ್ರದರ್ಶಿಸುವುದರ ಮೂಲಕ ನೆನಪುಗಳನ್ನು ಮೆಲಕು ಹಾಕಿದರು.
ಆರ್. ಪ್ರಭು ಹಾಗೂ ಬೋಧಕ ಬೋಧಕೇತರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಿ. ನಿರೀಕ್ಷಾ ಮತ್ತು ವೇದ ನಿರೂಪಿಸಿ ಶ್ರೇಯಾ ಸ್ವಾಗತಿಸಿದರು. ಭುವನ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















