ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಯುವ ಜನತೆಯೇ ದೇಶದ ಭವಿಷ್ಯದ ಪರಿವರ್ತನಾಕಾರರು, ಸೃಷ್ಟಿಕರ್ತರು, ನಿರ್ಮಾತೃಗಳು ಹಾಗೂ ನಾಯಕರು. ಆದರೆ ಅವರಿಗೆ ಸೂಕ್ತ ಶಿಕ್ಷಣ, ಕೌಶಲಗಳು ಮತ್ತು ಉತ್ತಮ ಆರೋಗ್ಯ ದಕ್ಕಿದಾಗ ಮಾತ್ರ ಅವರು ದೇಶದ ಭವಿಷ್ಯ ಬದಲಿಸಬಲ್ಲರು ಎಂದು #Shikaripura ಶಿಕಾರಿಪುರ ತಹಶೀಲ್ದಾರ್ ಯು. ವಾಣಿ ಅಭಿಪ್ರಾಯಪಟ್ಟರು.
ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಮತ್ತು ಕುಮದ್ವತಿ ವಾಣಿಜ್ಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
Also Read>> ಪರಪ್ಪನ ಅಗ್ರಹಾರದ ಕ್ವಾರಂಟೈನ್ ಸೆಲ್’ಗೆ ಶಾಸಕ ವಿನಯ್ ಕುಲಕರ್ಣಿ
ಸವಾಲುಗಳ ನಡುವೆಯೂ ಯುವಕರು ಬದಲಾವಣೆಗಳಿಗೆ ಹೊಂದಿಕೊಳ್ಳುವುದಷ್ಟೇ ಅಲ್ಲ, ಹೊಸ ಮಾನದಂಡಗಳನ್ನು ಸ್ಥಾಪಿಸುವ ವಿಶ್ವಾಸವಿರಬೇಕು. ಸಕಾರಾತ್ಮಕ ಚಿಂತನೆಯುಳ್ಳ ಯುವ ಜನರೇ ದೇಶದ ನಿಜವಾದ ಶಕ್ತಿ. ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆ ಇಂದಿನಿಂದಲೇ ಆರಂಭಿಸಿದರೆ ಉನ್ನತ ಸ್ಥಾನವನ್ನು ಅಲಂಕರಿಸಲು ಸಾಧ್ಯ ಎಂದು ಕಿವಿಮಾತು ಹೇಳಿದರು.
ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಪ್ರತಿನಿಧಿಗಳು ಹಾಗೂ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಿ.ಎಸ್. ಶಿವಕುಮಾರ್ ಮಾತನಾಡಿ, ಭಾರತದ ಯುವಜನತೆ ಅತ್ಯಂತ ಬೆಲೆ ಬಾಳುವ ಆಸ್ತಿಯಷ್ಟೇ ಅಲ್ಲ. ಅತ್ಯಂತ ಭರವಸೆದಾಯಕ ಭಾಗವೂ ಹೌದು. ಇದು ದೇಶಕ್ಕೆ ವಿಶಿಷ್ಟ ಜನಸಂಖ್ಯಾ ಅನುಕೂಲತೆ ಒದಗಿಸಿದೆ ಎಂದರು.
ನಿಜವಾದ ನಾಯಕತ್ವವು ಧೈರ್ಯ, ಸಾಮರ್ಥ್ಯ ಮತ್ತು ಸ್ಪಷ್ಟ ದೃಷ್ಟಿಕೋನದ ಮೇಲೆ ನಿರ್ಮಾಣವಾಗಿರುತ್ತದೆ. ಯುವಜನತೆಗೆ ಹೆಚ್ಚು ಮಾರ್ಗದರ್ಶನ ಮತ್ತು ವೃತ್ತಿ ಸಮಾಲೋಚನೆಗಳ ಅವಶ್ಯಕತೆಯಿದ್ದು ಯುವಕರು ತಮ್ಮನ್ನು ತಾವು ಮೌಲ್ಯಮಾಪನಕ್ಕೆ ಅಳವಡಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ ಎಂದು ಹೇಳಿದರು.
ಪ್ರಾಚಾರ್ಯರಾದ ಡಾ. ರವೀಂದ್ರ ಕೆಸಿ ಹೊಸ ತಾಂತ್ರಿಕ ಕೌಶಲ್ಯಗಳನ್ನು ಕಲಿಯಲು ಯುವಜನತೆ ಸಿದ್ಧಗೊಳ್ಳಬೇಕು. ಸದ್ಯ ಇರುವ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯ ಅರಿವಿನೊಂದಿಗೆ ಯುವಜನತೆ ಹೆಜ್ಜೆ ಹಾಕಿದರೆ ಮಾತ್ರ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.
ಅಂತಿಮ ವರ್ಷದ ಬಿಕಾಂ, ಬಿಎಸ್ಸಿ ಹಾಗೂ ಎಂಕಾಂ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪದಕಗಳನ್ನು ವಿತರಿಸಲಾಯಿತು.
ಸಹಾಯಕ ಪ್ರಾಧ್ಯಾಪಕರಾದ ಆರ್. ಕೋಟೋಜಿರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಎಚ್.ಆರ್. ಪೂರ್ಣಿಮಾ ವಾರ್ಷಿಕ ವರದಿಯನ್ನು ಓದಿದರು.
ಪ್ರಕಾಶ್ ಉಪಾಧ್ಯಾಯ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿ ಅಕ್ಷತಾ ಪ್ರಾರ್ಥಿಸಿ, ಉಪನ್ಯಾಸಕಿ ಎಚ್.ವಿ. ಅಶ್ವಿನಿ ಸ್ವಾಗತಿಸಿದರು. ಧಾನೇಶ್ವರಿ ನಿರೂಪಿಸಿ, ಎಚ್.ಆರ್. ರಮ್ಯಾ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















