ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೇಂದ್ರ ಸರ್ಕಾರ ದೇಶದಾದ್ಯಂತ 2022 ರಲ್ಲಿ ನಡೆಸಿದ ಸ್ಥಳೀಯ ಸಂಸ್ಥೆಗಳ ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಉತ್ತಮ ಶ್ರೇಯಾಂಕ ಪಡೆದಿದ್ದು, ಅ. 1 ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ವಿತರಿಸಲಿದ್ದಾರೆ ಎಂದು ಮೇಯರ್ ಸುನಿತಾ ಅಣ್ಣಪ್ಪ ತಿಳಿಸಿದರು.
ಅವರು ಇಂದು ಪಾಲಿಕೆ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಯ ವಿವಿಧ ವಿಭಾಗಗಳಲ್ಲಿ ತೋರಿರುವ ಕಾರ್ಯಕ್ಕಾಗಿ ಈ ಪ್ರಶಸ್ತಿ ಲಭಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಘನತ್ಯಾಜ್ಯ ವಸ್ತು ನಿರ್ವಹಣೆ -2016 ರ ನಿಯಮದಂತೆ ಕೆಲವು ವಿನೂತನ, ನವೀನ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಮತ್ತು ಸಮರ್ಪಕವಾಗಿ ವಿಲೇ ಮಾಡಿರುವುದರಿಂದ ಈ ಪ್ರಶಸ್ತಿ ಲಭಿಸಿದೆ ಎಂದರು.
ಈ ಪ್ರಶಸ್ತಿ ದೇಶದ 12 ಮಹಾನಗರ ಪಾಲಿಕೆಗಳಿಗೆ ಲಭಿಸಿದ್ದು, ಶಿವಮೊಗ್ಗ ಎಷ್ಟನೇ ಸ್ಥಾನ ಪಡೆದಿದೆ ಎಂಬುದು ಅಂದು ಘೋಷಣೆಯಾಗಲಿದೆ. ಸೆ. 20 ಮತ್ತು 30 ರಂದು ಎರಡು ದಿನಗಳ ಪ್ರಶಸ್ತಿ ಪಡೆದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಕಾಲ ಸೆಮಿನಾರ್ ನಡೆಯಲಿದೆ ಎಂದರು.
ಪಾಲಿಕೆ ವತಿಯಿಂದ ಬಯೋ ಮೇಥನೇಷನ್ ಘಟಕ ಕಾರ್ಯಾರಂಭ ಮಾಡಿರುವುದು, ಶೂನ್ಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ, ಹಸಿ ಮತ್ತು ಒಣ ಕಸ ವಿಂಗಡಿಸಲು ಪಾಲಿಕೆ ವ್ಯಾಪ್ತಿಯಲ್ಲಿರುವ ಸುಮಾರು 84,300 ಮನೆಗಳಿಗೆ ಡಸ್ಟ್ ಬಿನ್ ವಿತರಣೆ ಮಾಡಿರುವುದು, ಘನತ್ಯಾಜ್ಯ ಸಂಗ್ರಹಿಸಿ ಸಾಗಾಣಿಕೆ ಮಾಡಲು ಈ ವರ್ಷ ಹೊಸ ವಾಹನಗಳ ಖರೀದಿ, ಪಾರಂಪರಿಕ ತ್ಯಾಜ್ಯ ವಿಲೇವಾರಿ, ಬಯಲುಶೌಚ ಮುಕ್ತ, ಕಟ್ಟಡಗಳ ಭಗ್ನಾವಶೇಷ ತ್ಯಾಜ್ಯ ಸಂರಕ್ಷಿಸಲು ವಿಶೇಷ ಯೋಜನೆ, ದ್ರವ ತ್ಯಾಜ್ಯ ನಿರ್ವಹಣೆ, ಹಲವಾರು ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡು ಸುಂದರ ನಗರವನ್ನಾಗಿಸಿರುವುದಕ್ಕೆ ಈ ಪ್ರಶಸ್ತಿ ಲಭಿಸಿದೆ ಎಂದರು.
ಮಹಾನಗರ ಪಾಲಿಕೆಗೆ ರಾಷ್ಟ್ರದಲ್ಲಿಯೇ ಉತ್ತಮ ಶ್ರೇಯಾಂಕ ಪ್ರಶಸ್ತಿ ಪಡೆದಿರುವುದಕ್ಕೆ ಪಾಲಿಕೆಯ ಅನೇಕ ಅಧಿಕಾರಿಗಳು ಪೌರ ಕಾರ್ಮಿಕರು ಕಾರಣರಾಗಿದ್ದಾರೆ. ಇದರಲ್ಲಿ ಅತಿ ಮುಖ್ಯವಾಗಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್(ಪರಿಸರ) ಅಮೋಘ್ ಎಸ್. ಕವಲಗಿ ಕೂಡ ಒಬ್ಬರು. ಎರಡು ವರ್ಷದಿಂದ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದರ ಜೊತೆಗೆ ಪೌರ ಕಾರ್ಮಿಕರ ಮತ್ತು ಪಾಲಿಕೆಯ ಎಲ್ಲಾ ಸದಸ್ಯರ ಶ್ರಮವೂ ಅಡಗಿದೆ.
-ಮೇಯರ್
ಕೇಂದ್ರ ಸರ್ಕಾರ ಕಳೆದ 9 ವರ್ಷದಿಂದ ಸ್ವಚ್ಛ ಸರ್ವೇಕ್ಷಣೆ ನಡೆಸುತ್ತಿದ್ದು, ರಾಜ್ಯದ 280 ಸ್ಥಳೀಯ ಸಂಸ್ಥೆಗಳಲ್ಲಿ ಫೆಬ್ರವರಿಯಿಂದ ಮೇ ಅಂತ್ಯದವರೆಗೆ ಸರ್ವೇಕ್ಷಣೆ ನಡೆಸಿದೆ. ಇದರಲ್ಲಿ ಶಿವಮೊಗ್ಗ ಪಾಲಿಕೆ ಸಹ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ವಿಶೇಷವಾಗಿ 10 ಕೋಟಿ ರೂ. ಅನುದಾನ ಸಿಗಲಿದೆ ಎಂದು ಆಯುಕ್ತ ಕೆ. ಮಾಯಣ್ಣಗೌಡ ತಿಳಿಸಿದರು.
ನವದೆಹಲಿಗೆ ಮೇಯರ್, ಆಯುಕ್ತ, ಇಂಜಿನಿಯರ್ ಅಮೋಘ್ ಮತ್ತು ಅಧಿಕಾರಿಯೊಬ್ಬರು ತೆರಳಿ ಪ್ರಶಸ್ತಿ ಪಡೆಯಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಎಸ್.ಎನ್. ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಧೀರರಾಜ್ ಹೆಚ್. ಹೊನ್ನವಿಲೆ, ಅನಿತಾ ರವಿಶಂಕರ್, ಕಲ್ಪನಾ, ರಾಜು, ಹೆಚ್.ಎಂ. ಶಿರೀಶ್, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಮಾರಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಗೋವಿಂದಪ್ಪ, ಪೌರ ಕಾರ್ಮಿಕರಾದ ನರಸಮ್ಮ, ಮಂಜುನಾಥ್, ಉಮೇಶ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post