ಶಿವಮೊಗ್ಗ: ತಾಲೂಕಿನ ಪುರದಾಳು ಗ್ರಾಮದ ಶ್ರೀ ಉದ್ಭವ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಉದ್ಬವ ಬಸವೇಶ್ವರ ದೇವಸ್ಥಾನದ ರಥೋತ್ಸವ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಕಾರ್ಯಕ್ರಮವನ್ನು ಮಾ.4 ಮತ್ತು ಮಾ.5ರಂದು ಆಯೋಜಿಸಲಾಗಿದೆ.
ಶ್ರೀ ಉದ್ಬವ ಬಸವೇಶ್ವರ ಸ್ವಾಮಿಗೆ ಮಹಾಶಿವರಾತ್ರಿ ಪ್ರಯುಕ್ತ ಮಾ.4ರಂದು ಬೆಳಿಗ್ಗೆ ಗಂಗಾಪೂಜಾ, ಮಹಾಗಣಪತಿ, ರುದ್ರಕಳಸ ಪೂಜಾ, ಏಕವಾರು ರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಳಾರತಿ ಜರುಗಲಿದೆ. ಅದೇ ದಿನ ಸಂಜೆ-5.30ಕ್ಕೆ ಅಪಾರ ಭಕ್ತಾಭಿಮಾನಿಗಳೊಂದಿಗೆ ಶ್ರೀ ಸ್ವಾಮಿಯ ರಾಜಬೀದಿ ಉತ್ಸವ ಜರುಗಲಿದೆ. ನಂತರ ಪುಲ್ವಾಮಾ ದಾಳಿಯಿಂದ ಹುತಾತ್ಮರಾದ ಯೋಧರಿಗೆ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಂಜೆ 7.30ಕ್ಕೆ ಎಂ.ಜೆ.ಮೆಲೋಡಿಸ್ (ಅಂಧ ಕಲಾವಿದರು) ಗೋಪಾಳ ಇವರಿಂದ ಸುಗಮ ಸಂಗೀತ ಹಾಗೂ ಊರು ಮನೆ ಬಳಗದ ವತಿಯಿಂದ ಯಕ್ಷಗಾನ ಕಲಾವಿದರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ.
ರಾತ್ರಿ 9 ಗಂಟೆಯಿಂದ ಪುರದಾಳು ಬಸವೇಶ್ವರ ಯಕ್ಷಗಾನ ಮಂಡಳಿ ಸಹಯೋಗದೊಂದಿಗೆ, ಯಕ್ಷ ಸಂವರ್ಧನಾ (ರಿ) ಶಿವಮೊಗ್ಗ, ಶ್ರೀ ಪರಮೇಶ್ವರ ಹೆಗಡೆ ಐನಬೈಲು ಇವರ ನಿರ್ದೇಶನದಲ್ಲಿ ಶಿವರಾತ್ರಿ ಪ್ರಯುಕ್ತ ಪುರದಾಳು ಗ್ರಾಮದಲ್ಲಿ “ಭೀಷ್ಮವಿಜಯ ಮತ್ತು ಮಾರುತಿ ಪ್ರತಾಪ” ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗ ಅಭಿನಯಿಸಲಿದ್ದಾರೆ.
ಮಾ.5ರಂದು ಮಂಗಳವಾರ ಬೆಳಿಗ್ಗೆ 9-30ಕ್ಕೆ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗವಿರುತ್ತದೆ. ಮಧ್ಯಾಹ್ನ 2-00 ಗಂಟೆಗೆ ಅನ್ನ ಸಂತರ್ಪಣೆ ಜರುಗಲಿದೆ.
ಎಲ್ಲಾ ಆಸ್ತಿಕ ಮಹನಿಯರು ಬಂಧು-ಮಿತ್ರರು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಥಾಶಕ್ತಿಯಾಗಿ ತನು-ಮನ-ಧನಗಳಿಂದ ಸಹಕರಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಸ್ಥಾನ ಆಡಳಿತ ಮಂಡಳಿ ಕೋರಿದೆ.
Discussion about this post