ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #KSEshwarappa ಅವರ ಪುತ್ರ ಕೆ.ಈ. ಕಾಂತೇಶ್ ಅವರಿಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೇಟ್ ವಂಚಿತವಾದ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಭಕ್ತ ಸಭೆ ತುಂಬಿ ತುಳುಕುತ್ತಿದೆ.
ಬಿಜೆಪಿ ಟಿಕೇಟ್ ಘೋಷಣೆಗೂ ಮುನ್ನವೇ ಈ ಸಭೆಯನ್ನು ಕರೆಯಲಾಯಿತು. ಆದರೆ, ಟಿಕೇಟ್ ಘೋಷಣೆಯಲ್ಲಿ ಹಾವೇರಿಯಿಂದ ಕಾಂತೇಶ್’ಗೆ #KEKanteesh ಟಿಕೇಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಈಶ್ವರಪ್ಪ ಅಭಿಮಾನಗಳು ಹಾಗೂ ಹಿತೈಷಿಗಳ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಭಕ್ತರ ಸಭೆ ಹೆಚ್ಚು ಮಹತ್ವ ಪಡೆದುಕೊಂಡಿದೆ.
ಯಾರು ಏನೆಂದರು?
ಷಡ್ಯಂತ್ರದಿಂದ ನಮ್ಮ ಯುವಕನಿಗೆ ಟಿಕೇಟ್ ವಂಚನೆ ಮಾಡಲಾಗಿದೆ. ಕಷ್ಟದ ಸಂದರ್ಭದಲ್ಲಿ ಕ್ಷೇತ್ರದೊಂದಿಗೆ ಈಶ್ವರಪ್ಪ ಕುಟುಂಬ ನಿಂತಿದೆ. ಸಮಾಜ ಹಾಗೂ ಹಿಂದುತ್ವವನ್ನು ನಗರದಲ್ಲಿ ಸಂಘಟಿಸಲು ಈಶ್ವರಪ್ಪನವರ ನಿರ್ಧಾರ ಅಮೂಲ್ಯವಾದುದು.
-ರಮೇಶ್ ಬಾಬು, ವಿಎಚ್’ಪಿ ಮಾಜಿ ಜಿಲ್ಲಾಧ್ಯಕ್ಷರು
ಮೊದಲಿನಿಂದಲೂ ನ್ಯಾಯಪರವಾಗಿ ಹೋರಾಟ ಮಾಡಿಕೊಂಡು ಬಂದ ಈಶ್ವರಪ್ಪ ಅವರು ಬಿಜೆಪಿ ಯಾವುದೇ ರೀತಿಯ ಅಧಿಕಾರದಿಂದ ದೂರವಿದ್ದ ಕಾಲದಿಂದಲೂ ಶ್ರಮವಹಿಸಿ ದುಡಿದವರು. ಪಕ್ಷ ಸಮಾನತೆಯ ಸೂತ್ರವನ್ನು ಹೆಣೆಯಬೇಕಿತ್ತು. ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಹೈಕಮಾಂಡ್ ಸೂಕ್ಷ್ಮವಾಗಿ ವರ್ತಿಸಬೇಕಿತ್ತು. ಆದರೆ, ಈಗ ಉದ್ಬವಿಸಿರುವ ಸಮಸ್ಯೆ ಕೇವಲ ಈಶ್ವರಪ್ಪ ಅವರದ್ದು ಮಾತ್ರವಲ್ಲ. ಪಕ್ಷದ ಎಲ್ಲ ಹಿರಿಯರ ಸ್ವಾಭಿಮಾನದ ಪ್ರಶ್ನೆಯಾಗಿದೆ. ಪಕ್ಷವನ್ನು ಉಳಿಸಲು ನಾವೂ ಸಹ ಸ್ವಾಭಿಮಾನದಿಂದಲೇ ನಡೆದುಕೊಳ್ಳಬೇಕು. ಮೋದಿ ಅವರ ಹೊರತಾಗಿ ಬೇರೆ ಯಾರೂ ಪ್ರಧಾನಿಯಾಗಬಾರದು. ಹೀಗಿ, ಮೋದಿ ಮತ್ತೆ ಪ್ರಧಾನಿ ಆಗುವ ದೃಷ್ಠಿಯಿಂದ ಈಶ್ವರಪ್ಪ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಪ್ರತಿಯೊಬ್ಬರೂ ಬೆಂಬಲಿಸಬೇಕು.
-ಶೇಷಾಚಲ, ವಾಸವಿ ಸಮಾಜದ ಪ್ರಮುಖರು
Also read: ನಮ್ಮದು ಯುದ್ಧಕಾಲೇ ಶಸ್ತ್ರಾಭ್ಯಾಸ ಅಲ್ಲ | ಸಂಸದ ರಾಘವೇಂದ್ರ ಖಡಕ್ ಸಂದೇಶ ರವಾನೆ
ಈಶ್ವರಪ್ಪ ಅವರು ಮಾಡದ ಸಮಾಜಮುಖಿ ಕೆಲಸಗಳಿಲ್ಲ. ಕೇವಲ ರೋಷಾವೇಶದಿಂದ ಮಾತನಾಡುವುದರಿಂದ ಅವರಿಗೆ ಸಹಾಯವಾಗುವುದಿಲ್ಲ. ಈಶ್ವರಪ್ಪ ಹಾಗೂ ಕಾಂತೇಶ ಅವರು ಹಾವೇರಿಯಲ್ಲಿ ಬಹಳಷ್ಟು ಸಂಚರಿಸಿ, ಸಂಘಟನೆ ಮಾಡಿದ್ದಾರೆ. ಕಾಂತೇಶ್ ಅವರಿಗೆ ಟಿಕೇಟ್ ದೊರೆಯದಿರುವುದು ನಮಗೆ ನೋವಾಗಿದೆ. ಆದರೆ, ಈಗ ಈಶ್ವರಪ್ಪ ಅವರು ಚುನಾವಣೆಯಲ್ಲಿ ನಿಂತು ಗೆದ್ದರೆ ಅದು ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವ ಉದ್ದೇಶದಿಂದಾಗಿದೆ.
-ಮಹಾಲಿಂಗಸ್ವಾಮಿ, ವೀರಶೈವ ಸಮಾಜದ ಪ್ರಮುಖರು
ಜಿಲ್ಲೆಯಲ್ಲಿ ನಮ್ಮ ಸಮಾಜದ ಮಂದಿ 50 ಸಾವಿರ ಮಂದಿಯಿದ್ದೇವೆ. ಈಶ್ವರಪ್ಪ ಅವರು ಏನೇ ನಿರ್ಧಾರ ಕೈಗೊಂಡರೂ ನಾವು ಅವರ ಬೆಂಬಲಕ್ಕೆ ಇದ್ದೇವೆ. ನಮಗೆ ಗೆಲ್ಲಿಸುವ ಶಕ್ತಿ ಮಾತ್ರವಲ್ಲ ಸೋಲಿಸುವ ಶಕ್ತಿಯೂ ಇದೆ.
-ಗಜೇಂದ್ರ ಸ್ವಾಮಿ, ಭಾವುಸರ ಕ್ಷತ್ರಿಯ ಸಮಾಜ
ಈಶ್ವರಪ್ಪ ಅವರು ಪಕ್ಷವನ್ನು ಕಟ್ಟುವಲ್ಲಿ ಎಷ್ಟು ತ್ಯಾಗ ಮಾಡಿ, ಶ್ರಮ ವಹಿಸಿದ್ದಾರೆ ಎಂಬುದನ್ನು ವರಿಷ್ಠರು ಗಮನದಲ್ಲಿ ಇರಿಸಿಕೊಳ್ಳಬೇಕು. ಎಲ್ಲರ ಅಭಿಪ್ರಾಯ ಪಡೆದು ಈಶ್ವರಪ್ಪ ಅವರು ಒಂದು ಸೂಕ್ತ ನಿರ್ಧಾರ ಕೈಗೊಳ್ಳಲಿ.
-ಎ.ಜೆ. ರಾಮಚಂದ್ರ
ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ ಕೆ.ಎಸ್. ಈಶ್ವರಪ್ಪ ಅವರನ್ನೂ ಸಹ ಪಕ್ಷ ಗುರುತಿಸಿ ಡಿಸಿಎಂ ಸ್ಥಾನದವರೆಗೂ ಬೆಳೆಸಿದೆ. ಸದಾಕಾಲ ಬ್ರಾಹ್ಮಣ ಸಮಾಜದೊಂದಿಗೆ ಈಶ್ವರಪ್ಪ ಅವರು ಬೆನ್ನಿಗೆ ನಿಂತಿದ್ದಾರೆ. ರಾಜಕಾರಣದಲ್ಲಿ ಆವೇಶದ ಮಾತುಗಳು ಫಲಿಸುವುದಿಲ್ಲ. ಇದು 500 ವರ್ಷಗಳ ಕಾಯುವಿಕೆಯ ರಾಮಮಂದಿರ ನನಸಾದ ಚುನಾವಣೆಯಾಗಿದ್ದು, ಮೋದಿಯವರ ಚುನಾವಣೆ, ಸಿಎಎ ಜಾರಿಯ ಚುನಾವಣೆಯಾಗಿದೆ. ಈಗ ನಾವು ಸ್ಪರ್ಧಿಸಿದರೆ ಅದು ಮೋದಿ ವಿರುದ್ಧ ಸ್ಪರ್ಧಿಸಿದಂತಾಗುತ್ತದೆ. ಕಾಂತೇಶ್ ಅವರ ರಾಜಕೀಯ ಭವಿಷ್ಯದ ದೃಷ್ಠಿಯಿಂದ ಯಾವುದೇ ರೀತಿಯಲ್ಲೂ ದುಡುಕದೇ ಅತ್ಯಂತ ಸೂಕ್ಷ್ಮವಾಗಿ ಚಿಂತಿಸಿ ಈಶ್ವರಪ್ಪ ಅವರು ಸೂಕ್ತ ನಿರ್ಧಾರ ಕೈಗೊಳ್ಳಬೇಕು.
-ನಟರಾಜ್ ಭಾಗವತ್, ಬ್ರಾಹ್ಮಣ ಸಮಾಜ
ಸಭೆಯಲ್ಲಿ ಮಾಜಿ ಮೇಯರ್ ಸುವರ್ಣ ಶಂಕರ್, ಸುನೀತಾ ಅಣ್ಣಪ್ಪ, ಶಿವಕುಮಾರ್, ಉಪಮೇಯರ್ ಸುರೇಖ ಮುರಳೀಧರ್, ಬಿಜೆಪಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಆರತಿ ಅ.ಮಾ ಪ್ರಕಾಶ್, ಪ್ರದಾನ ಕಾರ್ಯದರ್ಶಿ ಯಶೋಧ, ಸೀತಾ ಲಕ್ಷ್ಮೀ ಸೇರಿದಂತೆ ಹಲವರಿದ್ದರು.
ಸಭೆಗೆ ಶಾಸಕ ಚನ್ನಬಸಪ್ಪ, ಜ್ಞಾನೇಶ್ವರ್, ಎಸ್. ದತ್ತಾತ್ರಿ, ನಗರಾಧ್ಯಕ್ಷ ಮೋಹನ್ ರೆಡ್ಡಿ, ನವಿಲೆ ಮಂಜುನಾಥ್ ಸೇರಿದಂತೆ ಹಲವರು ಗೈರಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post