ಶಿವಮೊಗ್ಗ: ನಗರದಲ್ಲಿ ಹೆಚ್ಚಿನ ಪ್ರಮಾಣದ ಸಾಕ್ಷರರಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿ ಜಿಲ್ಲೆಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಬೇಕು. ಜಿಲ್ಲೆಯನ್ನು ರಾಜ್ಯದಲ್ಲೇ ನಂ.1 ಸ್ಥಾನಕ್ಕೇರಿಸುವುದು ನಗರದ ಜನರ ಕೈಯಲ್ಲಿದೆ ಎಂದು ಜಿಲ್ಲಾ ಪಂಚಾಯತಿ ಸಿಇಒ ಕೆ. ಶಿವರಾಮೇಗೌಡ ಸಲಹೆ ನೀಡಿದರು.
ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ಸಿಟಿ ಸೆಂಟರ್ ಮಾಲ್ನಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿವಮೊಗ್ಗ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಮತದಾನದ ಪ್ರಮಾಣದಲ್ಲಿ ಹೆಚ್ಚಾಗಿದೆ. ನಗರ ಭಾಗಗಳಲ್ಲಿ ಹೆಚ್ಚಿನ ಅಕ್ಷರಸ್ಥರೆ ಇದ್ದರೂ ಸಹ ಮತದಾನ ಪ್ರಮಾಣದಲ್ಲಿ ಕುಸಿತ ಕಂಡಿದೆ. ನಗರ ವಾಸಿಗಳು ಮನಸ್ಸು ಮಾಡಿದರೆ ಮತದಾನದಲ್ಲಿ ಜಿಲ್ಲೆಯನ್ನು ರಾಜ್ಯ ಹಾಗೂ ರಾಷ್ಟ್ರದಲ್ಲಿ ಪ್ರಥಮ ಸ್ಥಾನಕ್ಕೇರಿಸಲು ಸಾಧ್ಯವಿದೆ ಎಂದವರು ಅಭಿಪ್ರಾಯಪಟ್ಟರು.
ಜಿಲ್ಲಾದ್ಯಂತ ಈಗಾಗಲೇ ಸಾಕಷ್ಟು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಲಿದ್ದು ಮೊದಲನೇ ಸ್ಥಾನಕ್ಕೇರುವ ಭರವಸೆ ಇದೆ ಎಂದವರು ಹೇಳಿದರು.
ಕೆನರಾ ಬ್ಯಾಂಕ್ ಕನ್ನಡಿಗ ಟೀಂನಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು. ಮಹಾನಗರ ಪಾಲಿಕೆ ಸ್ವೀಪ್ ತಂಡದ ಮುಖ್ಯಸ್ಥ ಸುರೇಶ್, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಶ್ರೀಧರ್, ಸಮನ್ವಯ ಕಾಶಿ, ಅನುಪಮಾ ಇತರರು ಹಾಜರಿದ್ದರು.
Discussion about this post