ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬದುಕಿನಲ್ಲಿ ಮನುಷ್ಯ ಕೂಡ ಪುಟ್ಬಾಲ್ ಇದ್ದಂತೆ. ಪೆಟ್ಟುಗಳನ್ನು ತಿನ್ನುತ್ತಲೆ ತನ್ನ ವ್ಯಕ್ತಿತ್ವವನ್ನು ಕಳೆದುಕೊಳ್ಳದೆ ಗೆದ್ದು ಬರಬೇಕು ಎಂದು ಬಸವಕೇಂದ್ರದ ಡಾ. ಬಸವಮರಳಸಿದ್ದಶರಣರು ಕರೆ ನೀಡಿದರು.
ಇಲ್ಲಿನ ನೆಹರು ಕ್ರೀಡಾಂಗಣದಲ್ಲಿ ಮಲೆನಾಡು ಕಿಕ್ಕರ್ ಪುಟ್ಬಾಲ್ ಕ್ಲಬ್ ಆಶ್ರಯದಲ್ಲಿ ಅಮಿತ್ ಸ್ಮರಣಾರ್ಥ ಇಂದಿನಿಂದ ಆರಂಭಗೊಂಡ ಎರಡು ದಿನಗಳ ರಾಜ್ಯಮಟ್ಟದ ಹೊನಲು ಬೆಳಕಿನ ಪುಟ್ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತಾನಾಡಿದ ಅವರು, ಜೀವವಿಲ್ಲದ ಪುಟ್ಬಾಲ್ ಎಷ್ಟೇ ಪೆಟ್ಟು ತಿಂದರೂ ತನ್ನ ಆಕಾರವನ್ನು ಕಳೆದುಕೊಳ್ಳುವುದಿಲ್ಲ. ಅದೇ ರೀತಿ ಮನುಷ್ಯ ಕೂಡ ಜೀವನದಲ್ಲಿ ಎಷ್ಟೇ ಪೆಟ್ಟು ತಿಂದರೂ ದ್ವೇಷ, ಸೇಡು, ಬೇಸರಗೊಳ್ಳದೆ ವ್ಯಕ್ತಿತ್ವಪೂರ್ಣದಿಂದ ಬದುಕಬೇಕು ಎಂದರು.

ಕ್ರಿಕೆಟ್ ಮೋಹ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಪುಟ್ಬಾಲ್ ಕ್ರೀಡೆಗೆ ಶಿವಮೊಗ್ಗದಲ್ಲಿ ವ್ಯಕ್ತವಾಗುತ್ತಿರುವ ಆಸಕ್ತಿ ಮೆಚ್ಚುವಂತದ್ದಾಗಿದೆ. ಹಾಗೂ ರಾಜ್ಯಮಟ್ಟದ ಪಂದ್ಯಗಳು ನಡೆಯುತ್ತಿರುವುದು ಆಶಾದಾಯಕ ಎಂದು ಶ್ಲಾಘಿಸಿದರು.
ಹೆಚ್ಚುವರಿ ರಕ್ಷಣಾಧಿಕಾರಿ ಟಿ. ಶೇಖರ್ ಮಾತನಾಡಿ, ಶಿವಮೊಗ್ಗ ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿರುವಂತೆ ಕ್ರೀಡಾ ಕ್ಷೇತ್ರದಲ್ಲೂ ತನ್ನದೇ ಆದ ಹೆಗ್ಗಳಿಕೆಯನ್ನು ಉಳಿಸಿಕೊಂಡಿದೆ. ಕ್ರೀಡೆಯಲ್ಲಿ ಸ್ಪರ್ಧಾ ಮನೋಭಾವ ಇರಬೇಕು. ಸೋಲು – ಗೆಲುವು ಮುಖ್ಯವಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ರಾಷ್ಟ್ರ ಮಟ್ಟದ ಪಂದ್ಯಾವಳಿಯಗಳು ನಡೆಯಲಿ ಎಂದು ಶುಭಕೋರಿದರು.

ಮುಖ್ಯ ಅಥಿಗಳಾಗಿ ಪತ್ರಕರ್ತ ಎನ್. ರವಿಕುಮಾರ್, ಮಲೆನಾಡು ಕಿಕ್ಕರ್ಸ್ ಪುಟ್ಬಾಲ್ ಕ್ಲಬ್ನ ಅಧ್ಯಕ್ಷ ಕ್ಲೆಮೆಂಟ್ ರಾಯನ್, ಹಿರಿಯ ಕ್ರೀಡಾಪಟು ವಿಕ್ಟರ್ ಡಿಸೋಜ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















