ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಂದಿನ ಶತಮಾನೋತ್ಸವ ಸಂದರ್ಭದ ವೇಳೆಗೆ ನವಭಾರತ ನಿರ್ಮಾಣದ ದೂರದೃಷ್ಠಿಯನ್ನು ಕೇಂದ್ರ ಬಜೆಟ್ ಹೊಂದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಇಂದು ಕೇಂದ್ರ ವಿತ್ತೀಯ ಸಚಿವೆ ನಿರ್ಮಲ ಸೀತಾರಾಮನ್ ಅವರು, ಭಾರತ ದೇಶವು 75ನೆಯ ವರ್ಷದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮುಂದಿನ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಭಾರತ ದೇಶ ಯಾವ ರೀತಿ ಪ್ರಗತಿ ಹೊಂದಬೇಕೆಂಬ ದೂರದೃಷ್ಟಿಯ ಆಯವ್ಯಯ ಮಂಡಿಸಿದ್ದಾರೆ ಎಂದಿದ್ದಾರೆ.

ಭವ್ಯ ಭಾರತ ಕನಸು ಕಂಡ ಪ್ರಧಾನಿ ನರೇಂದ್ರ ಮೋದೀಜಿಯವರ ನೇತೃತ್ವದ ಕೇಂದ್ರ ಸರ್ಕಾರದ ಈ ವರ್ಷದ ಆಯವ್ಯಯದಲ್ಲಿ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಹ ಅನುಕೂಲ ಕಲ್ಪಿಸುವುದರೊಂದಿಗೆ ದೇಶದ ಜಿಡಿಪಿ ಪ್ರಮಾಣವನ್ನು ಶೇ.10ರಷ್ಟು ಏರಿಕೆಯಾಗುವ ನಿಟ್ಟಿನಲ್ಲಿ ಸ್ಪಷ್ಟ ಯೋಜನೆಗಳನ್ನು ಘೋಷಿಸಿದ್ದಾರೆ ಎಂದಿದ್ದಾರೆ.

ಪಿ.ಎಂ. ಗತಿಶಕ್ತಿ ಯೋಜನೆ, ಎಲ್ಲರನ್ನೂ ಒಳಗೊಂಡ ಸಮಗ್ರ ಅಭಿವೃದ್ಧಿ, ಉತ್ಪಾದನಾ ವಲಯಕ್ಕೆ ವೇಗ ನೀಡಿಕೆ ಹಾಗೂ ಬಂಡವಾಳ ಹೂಡಿಕೆಗೆ ಕ್ರಮ ಈ ರೀತಿಯ 4 ಆಧಾರ ಸ್ತಂಭಗಳಿನ್ನಟ್ಟುಕೊಂಡು ೨೦೨೨ರ ಬಜೆಟ್’ನಲ್ಲಿ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.
ಇನ್ನು ಪ್ರಮುಖವಾಗಿ, ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಬಜೆಟ್ ಭಾಷಣವನ್ನು ಟ್ಯಾಬ್ ಮೂಲಕ ಮಂಡಿಸುವುದರೊಂದಿಗೆ, ಕಾಗದ ರಹಿತ ವ್ಯವಸ್ಥೆಗೆ ಮುನ್ನುಡಿ ಇಟ್ಟು ಡಿಜಿಟಲಿಕರಣದ ಮಹತ್ವ ಸಾರಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟದಿಂದಾಗಿ ನಲುಗಿದ ಆರ್ಥಿಕತೆಗೆ ಬಲ ನೀಡುವ ಎಲ್ಲಾ ರೀತಿಯ ಕ್ರಮಗಳನ್ನು ವಿತ್ತ ಮಂತ್ರಿಗಳು ಕೈಗೊಂಡಿದ್ದಾರೆ. ದೇಶದ ಭವ್ಯ ಭವಿಷ್ಯಕ್ಕಾಗಿ ಉತ್ತಮ ಬಜೆಟ್ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















