ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಎನ್ ಎಂ ಓ ಮತ್ತು ವಿಕಾಸ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ನಗರದ ಸಿಮ್ಸ್ ವೈದಕೀಯ ಕಾಲೇಜು, ಶರಾವತಿ ದಂತ ವೈದ್ಯಕೀಯ ಕಾಲೇಜು, ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜು, ಸುಬ್ಬಯ್ಯ ವೈದ್ಯಕೀಯ ಕಾಲೇಜುಗಳಿಂದ ಸುಮಾರು 65 ವೈದ್ಯಕೀಯ ಪದವಿಯನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಮತ್ತು ಶಿವಮೊಗ್ಗದ ಪ್ರಖ್ಯಾತ ವೈದ್ಯರು ಭಾಗವಹಿಸಿ ಉಚಿತವಾಗಿ ವೈದ್ಯಕೀಯ ಸೇವೆಯನ್ನು ಸಲ್ಲಿಸಿದರು.
ಜಿಲ್ಲಾಧಿಕಾರಿ ಸೆಲ್ವಮಣಿ ಅವರು ಮಾತನಾಡಿ, ಸುಮಾರು 5000ಕ್ಕೂ ಹೆಚ್ಚು ಜನರನ್ನು ಒಂದೇ ದಿನದಲ್ಲಿ ತಪಾಸಣೆ ನಡೆಸಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಮುಂದಿನ ವಿದ್ಯಾರ್ಥಿ ಜೀವನ ಯಶಸ್ಸನ್ನು ಕಾಣಲು ಶುಭಾಶಯಗಳನ್ನು ತಿಳಿಸಿ ವಿದ್ಯಾರ್ಥಿ ಜೀವನದಲ್ಲಿ ಒಂದು ಮಹೋನ್ನತ ಕೆಲಸವನ್ನು ಮಾಡಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಮಧುಕರ್ ( ತೇಜಸ್ ಟ್ರಸ್ಟ್ ನ ವಿಶ್ವಸ್ಥರು) ಮಾತನಾಡಿ, ಭಾರತ ಇಂದು ಅನೇಕ ಸಾಧನೆಗಳನ್ನು ಮಾಡಿದೆ. 2047ರಲ್ಲಿ ಭಾರತ ಅನೇಕ ಸಾಧನೆಗಳನ್ನು ಮಾಡುತ್ತಾ ವಿಶ್ವದ ಗುರುವಾಗಿ ಮಾರ್ಗದರ್ಶನ ಮಾಡಲಿದೆ. ಮುಂದಿನ 5 ವರ್ಷಗಳಲ್ಲಿ ಆರ್ಥಿಕತೆಯಲ್ಲಿ 3 ನೆಯ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಭಾರತಾಂಬೆ ಸಿಂಹಾಸನದಲ್ಲಿ ವಿರಾಜಮಾನರಾಗಿ ಎಲ್ಲಾ ರಂಗದಲ್ಲೂ ಮುನ್ನಡೆ ಸಾಧಿಸಿ, ಜಗತ್ತಿಗೆ ಮಾರ್ಗದರ್ಶನ ಮಾಡುವಂತಾಗಲು ನಾವು ಇನ್ನಷ್ಟು ಸೇವಾ ತತ್ಪರರು ಆಗಬೇಕು ಎಂದು ಕರೆ ನೀಡಿದರು.
ಸೇವೆಯ ಪರಿಕಲ್ಪನೆಯ ಬಗ್ಗೆ ವಿಸ್ತಾರವಾಗಿ ಮಾತನಾಡಿದ ಅವರು ಸೇವೆ ಎಂದರೆ ಪ್ರತಿ ಪಲಾಪೆಕ್ಷೆ ಇಲ್ಲದೆ ಎಲ್ಲರಿಗೂ ಒಳಿತನ್ನು ಬಯಸುವುದು. ಏನಾದರೂ ದಾನ ಮಾಡುವುದು ಎಂದರೆ ಅದು ನನ್ನದಲ್ಲ ಎಂಬ ಭಾವನೆಯಿಂದ ಮಾಡಬೇಕು ಎಂಬುದಾಗಿ ಸೇವೆಯ ಉದಾತ್ತಾತೆಯ ಹಲವು ಮುಖಗಳನ್ನು ಪರಿಚಯಿಸಿದರು.
ವೈದ್ಯಕೀಯ ವಿದ್ಯಾರ್ಥಿಗಳನ್ನು ನಾರಾಯಣ ಸ್ವರೂಪರೆಂದು ಮಾತುಗಳನ್ನು ಪ್ರಾರಂಭಿಸಿ ದೇವರಂತೆ ಸಮಾಜದ ಸೇವೆಯನ್ನು ಮಾಡಬೇಕು ಎಂದು ವಿನಂತಿಸಿದರು.
ನಗರದ ಸುಮಾರು 4457 ಜನರಿಗೆ ವೈದ್ಯಕೀಯ ತಪಾಸಣೆಯನ್ನು ನಡೆಸಲಾಯಿತು, 65 ಮಕ್ಕಳಿಗೆ ಮತ್ತು 2257 ಜನರಿಗೆ ದಂತ ತಪಾಸಣೆಯನ್ನು ನಡೆಸಲಾಯಿತು. ನಗರದ 50 ಸೇವಾ ಬಸ್ತಿಗಳಲ್ಲಿ ಇರುವ ಜನರ ಮನೆಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮಧ್ಯಾಹ್ನದ ಮಾತೃ ಭೋಜನವನ್ನು ಸವಿದರು.
Also read: ವಿಐಎಸ್ಎಲ್ ಶತಮಾನೋತ್ಸವ ಕಾರ್ಯಕ್ರಮದ ಬೃಹತ್ ವೇದಿಕ ನಿರ್ಮಾಣಕ್ಕೆ ಚಾಲನೆ
ಕಾರ್ಯಕ್ರಮದ ಸಮಾರೋಪದಲ್ಲಿ ವಿದ್ಯಾರ್ಥಿಗಳು ಮತ್ತು ವೈದ್ಯರು ಪುಟ್ಟ ಮನೆಗಳಲ್ಲಿ ಬಿಸಿಬಿಸಿಯಾದ ಆಹಾರವನ್ನು ಸವಿದ ಅನುಭವಗಳನ್ನು ಹಂಚಿಕೊಂಡರು. ಕೆಳಗೆ ಕೂತು, ಪ್ರೀತಿಯಿಂದ ಬಡಿಸಿದ ಆಹಾರವನ್ನು ಸ್ವೀಕಾರ ಮಾಡಿದೆವು ಎಂದು ತಮ್ಮ ಅನುಭವವನ್ನು ಹಂಚಿಕೊಂಡು ಎನ್ ಎಂ ಓ ತಂಡ ಈ ಶಿಬಿರಕ್ಕಾಗಿ ಕಳೆದ ಒಂದು ತಿಂಗಳಿಂದ ಅನೇಕ ತಯಾರಿಗಳನ್ನು ನಡೆಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ವೈದ್ಯರು ಮತ್ತು ಶಿಬಿರದಲ್ಲಿ ಭಾಗವಹಿಸಿದ ಎಲ್ಲಾರಿಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















