ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಐಎಸ್ಎಲ್ ಕಾರ್ಖಾನೆ ಉಳಿವಿಗೆ ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯಿಂದ ಫೆ.4ರಂದು ಶಿವಮೊಗ್ಗದಿಂದ ವಿಐಎಸ್ಎಲ್ವರೆಗೆ VISL ಪಾದಯಾತ್ರೆ ನಡೆಸಲಾಗುವುದು ಎಂದು ಶಿವಮೊಗ್ಗ ಆಮ್ ಆದ್ಮಿ ಪಾರ್ಟಿ ನಗರ ಘಟಕ ತಿಳಿಸಿದೆ.
ಜಿಲ್ಲೆಯ ಹೆಮ್ಮೆಯ ಕೈಗಾರಿಕೆಯಾಗಿದ್ದ ವಿಐಎಸ್ಎಲ್ ಕಾರ್ಖಾನೆಯನ್ನು ಸರ್ಕಾರ ಮುಚ್ಚುವ ಹುನ್ನಾರ ನಡೆಸಿದ್ದು, ಕಾರ್ಮಿಕರು ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರದ ಈ ನಿರ್ಧಾರವನ್ನು ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸುತ್ತಿದ್ದು, ಸಾವಿರಾರು ಕಾರ್ಮಿಕರು ಕಾರ್ಖಾನೆ ಮುಚ್ಚುವುದರಿಂದ ಬೀದಿಗೆ ಬೀಳಲಿದ್ದು, ಜಿಲ್ಲೆಯ ಆರ್ಥಿಕ ಚಟುವಟಿಕೆಗಳು ಇನ್ನಷ್ಟು ಕುಂಠಿತಗೊಳ್ಳಲಿದೆ.
ವರ್ಷಕ್ಕೆ 2 ಲಕ್ಷ ಉದ್ಯೋಗ ಸೃಷ್ಟಿಮಾಡುತ್ತೇವೆಂದು ಅಧಿಕಾರಕ್ಕೆ ಬಂದ ಬಿಜೆಪಿ, ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಮುಚ್ಚುವ ಮೂಲಕ ಖಾಸಗಿ ಲಾಬಿಗೆ ಮಣಿಯುತ್ತಿದೆ. ಆದ್ದರಿಂದ ವಿಐಎಸ್ಎಲ್ ಕಾರ್ಮಿಕರ ಹೋರಾಟವನ್ನು ಬೆಂಬಲಿಸಿ ಫೆ.4ರಂದು ಶನಿವಾರ ಬೆಳಿಗ್ಗೆ 8 ಗಂಟೆಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಸೇವಾಕಾಂಕ್ಷಿ ನೇತ್ರಾವತಿ ಟಿ. ಅವರ ನೇತೃತ್ವದಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ರಸ್ತೆಯಲ್ಲಿರುವ ವೀರಭದ್ರ ಟಾಕೀಸ್ ಬಳಿಯ ಸರ್ಎಂವಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆವರೆಗೆ ಪಾದಯಾತ್ರೆ ನಡೆಸಲಿದ್ದಾರೆ.
Also read: ವಿದ್ಯೆ ಎಂಬ ಯಾಗದ ಮೂಲಕ ಎಲ್ಲರಿಗೂ ಒಳಿತನ್ನು ಆಶಿಸೋಣ: ರವಿ ಚನ್ನಣ್ಣನವರ್
ಜಿಲ್ಲೆಯ ಹೆಮ್ಮೆಯ ಕಾರ್ಖಾನೆ ಉಳಿಸಲು ಆಮ್ ಆದ್ಮಿ ಪಾರ್ಟಿಯ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು, ಸಾರ್ವಜನಿಕರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಾವಿರಾರು ಕಾರ್ಮಿಕರು ನಿರುದ್ಯೋಗಿಗಳಾಗುವುದನ್ನು ತಪ್ಪಿಸಲು ಈ ಹೋರಾಟದಲ್ಲಿ ಭಾಗವಹಿಸುವಂತೆ ಆಮ್ ಆದ್ಮಿ ಪಾರ್ಟಿಯ ನಗರ ಘಟಕ ಅಧ್ಯಕ್ಷರಾದ ಸುರೇಶ್ ಕೋಟೆಕಾರ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post