ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಕ್ಷಯ ತೃತೀಯ #Akshaya Thrithiya ದಿನವಾದ ಶುಕ್ರವಾರ ನಗರದ ಬಹುತೇಕ ಎಲ್ಲ ಚಿನ್ನಾಭರಣ ಮಳಿಗೆಗಳಲ್ಲಿ ಚಿನ್ನ ಖರೀದಿ ಸಂಭ್ರಮ ಮೇರೆ ಮೀರಿತ್ತು. ಮಳಿಗೆಗಳು ಗ್ರಾಹಕರಿಂದ ಗಿಜಿಗುಡುತ್ತಿದ್ದವು.
ಬೆಳಗ್ಗೆ ಒಂಬತ್ತು ಗಂಟೆಯಿಂದಲೇ ಖರೀದಿಗೆ ಜನ ಧಾವಿಸಿದ್ದು, ಜನ ಆಭರಣಗಳ ಅಂಗಡಿಗಳಲ್ಲಿ ನೆರೆದಿದ್ದರು. ವಾರದಿಂದ ಚಿನ್ನಾಭರಣ ಕಾದಿರಿಸಿ ಅಕ್ಷಯ ತೃತೀಯಾ ಶುಭದಿನದಂದು ಚಿನ್ನ ಖರೀದಿಸಿದವರ ಸಂಖ್ಯೆ ಹೆಚ್ಚಿತ್ತು. ಬಹುತೇಕ ಆಭರಣದಂಗಡಿಗಳು ಬೆಳಗ್ಗೆ 8 ರಿಂದಲೇ ತೆರೆದಿದ್ದವು.
ಕೆಲವು ಅಭರಣ ಮಳಿಗೆಗಳಲ್ಲಿ ಆಕ್ಷಯ ತೃತೀಯಾಗೆಂದು ವಿಷೇಶ ಕೊಡುಗೆಗಳನ್ನು ನೀಡಿದ್ದವು. ಗ್ರಾಹಕರನ್ನು ಅಕರ್ಷಿಸಲು ಚಿನ್ನ, ಹರಳು, ವಜ್ರಾಭರಣಗಳ ಮೇಲೆ ಒಂದಷ್ಟು ರಿಯಾಯಿತಿ, ಮೇಕಿಂಗ್ ಶುಲ್ಕದ ಮೇಲೆ ಕಡಿತ ಇತ್ಯಾದಿ ಕೊಡುಗೆಗಳನ್ನು ಘೋಷಿಸಿದ್ದವು.
Also read: ಕಸ್ತೂರಬಾ ಪ್ರೌಢಶಾಲೆಯ ವಿದ್ಯಾರ್ಥಿನಿ ಆಲಿಯಾ ಮೆಹರೂಶ್ ಗೆ 621 ಅಂಕ
ಅಕ್ಷಯ ತೃತೀಯಾದಂದು ಚಿನ್ನ ಖರೀದಿಸಿದರೆ ಸಂಪತ್ತು ಅಕ್ಷಯವಾಗುವುದು ಎಂಬ ನಂಬಿಕೆ ಸಮಾಜದಲ್ಲಿದೆ. ಮುಖ್ಯವಾಗಿ ಮಹಿಳೆಯರು ಚಿನ್ನ ಖರೀದಿಗೆ ಈ ದಿನವನ್ನೇ ಆಯ್ಕೆ ಮಾಡುತ್ತಾರೆ. ಹೀಗಾಗಿ ಚಿನ್ನ ಖರೀದಿ ಜೋರಾಗಿ ಸಾಗಿತ್ತು.
ಈ ಬಾರಿಯ ಅಕ್ಷಯ ತೃತೀಯಾದಂದು ನಿರೀಕ್ಷೆಯಂತೆ ಉತ್ತಮ ಖರೀದಿ ನಡೆಯಿತು. ಕಳೆದ ಒಂದು ವಾರದಿಂದ ಬುಕ್ಕಿಂಗ್ ಕೂಡ ಉತ್ತಮವಾಗಿತ್ತು. ಚಿನ್ನದ ಬೆಲೆ ದುಬಾರಿಯಾಗಿದ್ದರು ಗ್ರಾಹಕರಿಂದ ಖರೀದಿ ಉತ್ಸಾಹಕ್ಕೆ ಕೊರತೆಯಾಗಿರಲಿಲ್ಲ. ಒಂದು ಗ್ರಾಂ ಚಿನ್ನದ ಬೆಲೆ 8 ಸಾವಿರ ರೂ. ಹತ್ತಿರದಲ್ಲಿದೆ. ಆದರೂ ಖರೀದಿಸುವವರ ಸಂಖ್ಯೆಗೇನೂ ಕಡಿಮೆ ಇರಲಿಲ್ಲ.
ನಗರದ ಗಾಂಧಿ ಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಬಾಲರಾಜ್ ಅರಸ್ ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ಚಿನ್ನದ ಅಂಗಡಿಗಳಲ್ಲೂ ಗ್ರಾಹಕರುಗಳಿಂದ ತುಂಬಿ ತುಳುಕುತ್ತಿತ್ತು. ಅಕ್ಷಯ ತೃತೀಯ ಹಿನ್ನಲೆಯಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ಸಾಗಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post