ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ Amith Shah ಅವರ ದೂರವಾಣಿ ಕರೆಯ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ನಾಳೆ ನವದೆಹಲಿಗೆ ತೆರಳಲಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಅಮಿತ್ ಶಾ ಅವರು ಕರೆ ಮಾಡಿದ್ದರು. ದೆಹಲಿಗೆ ಬನ್ನಿ ಎಂದು ಕರೆದಿದ್ದಾರೆ. ಹೀಗಾಗಿ, ನಾಳೆ ಅಲ್ಲಿಗೆ ತೆರಳಿ ಸಂಜೆ ಭೇಟಿಯಾಗಲಿದ್ದೇನೆ ಎಂದು ತಿಳಿಸಿದರು.
ಅಮಿತ್ ಶಾ ಕರೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೆ.ಎಸ್. ಈಶ್ವರಪ್ಪ, ಕೇಂದ್ರ ಸಚಿವ ಅಮಿತ್ ಶಾ ಕರೆ ಮಾಡಿದ್ದಾರೆ. ಅವರ ಕೋರಿಕೆಯ ಮೇರೆಗೆ ದೆಹಲಿಗೆ ಹೋಗುತ್ತೇನೆ. ಆದರೆ, ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿರ್ಧಾರ ಮಾಡಿದ್ದೇನೆ. ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡಿಯೇ ಮಾಡುತ್ತೇನೆ ಎಂದು ಈಶ್ವರಪ್ಪ ಪುನರುಚ್ಚರಿಸಿದ್ದಾರೆ.
ಅಮಿತ್ ಶಾ #AmitShah ಅವರು ಕರೆ ಮಾಡಿ ಸ್ಫರ್ಧೆ ಬೇಡ ಎಂದರು. ಆದರೆ, ನಾನು ಸ್ಪರ್ಧೆ ಮಾಡುವುದರಿಂದ ಶುದ್ದೀಕರಣ ಆಗಲಿದೆ ಎಂದೆ. ದೆಹಲಿಗೆ ಬನ್ನಿ ಮಾತನಾಡೋಣ ಎಂದರು. ಆದರೆ, ದೆಹಲಿಗೆ ಬಂದ ನಂತರ ಸ್ಪರ್ಧೆ ಬೇಡ ಎನ್ನುವ ಹಾಗಿಲ್ಲ ಎಂದು ತಿಳಿಸಿದೆ. ಇದು ಸೂಚನೆಯಲ್ಲ, ಪ್ರಾರ್ಥನೆ ಎಂದರು. ನೀವು ದೊಡ್ಡವರು ನಿಮ್ಮೊಂದಿಗೆ ವಾದಿಸುವುದಿಲ್ಲ ಎಂದೆ. ಮಾತನಾಡೋಣ ದೆಹಲಿಗೆ ಬನ್ನಿ ಎಂದಿದ್ದಾರೆ. ಹೀಗಾಗಿ, ನಾಳೆ ಸಂಜೆ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಲಿದ್ದೇನೆ ಎಂದು ತಿಳಿಸಿದರು.
ರಾಜ್ಯ ರಾಜಕೀಯ ಕುಟುಂಬದ ಕೈಯಲ್ಲಿದೆ. ಕಾಂಗ್ರೆಸ್ ಸಂಸ್ಕೃತಿ ರಾಜ್ಯ ಬಿಜೆಪಿಯಲ್ಲಿ ಬೆಳೆಯುತ್ತಿದೆ. ಅಪ್ಪ ಮಕ್ಕಳ ಕೈಯಲ್ಲಿರುವ ಪಕ್ಷವನ್ನು ಮುಕ್ತಗೊಳಿಸಬೇಕು ಎಂದು ಅವರಿಗೆ ತಿಳಿಸಿದ್ದೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















