ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉತ್ತಮ ಸೇವೆ ಸಲ್ಲಿಸುವ ಮೂಲಕ ರಾಜ್ಯಮಟ್ಟದಲ್ಲಿ ಶಿವಮೊಗ್ಗ ಮಹಿಳಾ ಕೇಂದ್ರ ಕಾರಾಗೃಹವನ್ನು ಮಾದರಿಯಾಗಿ ಗುರುತಿಸುವಲ್ಲಿ ಅನಿತಾ ಎಸ್ ಹಿರೇಮನಿ ಅವರ ಪಾತ್ರ ಪ್ರಮುಖವಾದುದು ಎಂದು ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಶಿವಾನಂದ್ ಆರ್ ಶಿವಪುರೆ ತಿಳಿಸಿದರು.
ಇಲ್ಲಿನ ಮಹಿಳಾ ಕೇಂದ್ರ ಕಾರಾಗೃಹದಲ್ಲಿ ಅಧೀಕ್ಷಕಿಯಾಗಿದ್ದ ಅನಿತಾ ಎಸ್ ಹಿರೇಮನಿ ಅವರು, ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ವರ್ಗವಾಗಿರುವ ಹಿನ್ನಲೆಯಲ್ಲಿ ಅವರ ಬಿಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಅನಿತಾ ಅವರು ಕೆಳ ಹಂತದ ಅಧಿಕಾರಿ ಸಿಬ್ಬಂದಿಗಳ ಜೊತೆ ಅತ್ಯಂತ ಪ್ರೀತಿ ವಿಶ್ವಾಸದಿಂದಿದ್ದರು. ಇವರು ಖೈದಿಗಳನ್ನು ನೋಡುತ್ತಿದ್ದ ದೃಷ್ಟಿಕೋನ ಸಿಬ್ಬಂದಿಗಳಲ್ಲಿ ಕೂಡ ಬದಲಾವಣೆ ತಂದಿತು ಎಂದು ಹೇಳಿದರು.
Also read: ಗಮನಿಸಿ! ಜು.8ರಂದು ಶಿವಮೊಗ್ಗದ ಹೊಸಮನೆ, ಶರಾವತಿ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ
ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಇವರ ತಾಳ್ಮೆ ಹಾಗೂ ಸಮಯಪ್ರಜ್ಞೆ ನಮಗೆಲ್ಲಾ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಕೂಡ ಅವರು ಇದೇ ರೀತಿ ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅನಿತಾ ಎಸ್ ಹಿರೇಮನಿ ಅವರು ಶಿವಮೊಗ್ಗ ಮಹಿಳಾ ಕೇಂದ್ರ ಕಾರಾಗೃಹ ಉತ್ತಮ ಅನುಭವ ನೀಡಿದೆ, ಇಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದ್ದು ವೃತ್ತಿ ಜೀವನದ ಬಹುದೊಡ್ಡ ಸೌಭಾಗ್ಯ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಕೇಂದ್ರ ಕಾರಾಗೃಹದ ಅಧೀಕ್ಷಕರಾಗಿದ್ದ ರಂಗನಾಥ್ ಅವರು ನೀಡಿದ ಪ್ರೋತ್ಸಾಹ ಸ್ಮರಿಸಿಕೊಂಡರು. ಅಧಿಕಾರಿ ಹಾಗೂ ಸಿಬ್ಬಂದಿಗಳು ಚೆನ್ನಾಗಿ ಕೆಲಸ ಮಾಡಿ,ಜೈಲಿಗೆ ಒಳ್ಳೆಯ ಹೆಸರು ತರುವಂತೆ ಹರಸಿ, ನನ್ನ ಸ್ಥಾನವನ್ನು ಪ್ರಭಾರಿ ಅಧಿಕಾರಿಯಾಗಿರುವ ಸವಿತಾ ಅವರು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೈಲರ್ ಸವಿತಾ ಬೆಳ್ಳುಂಡಗಿ ಮಾತನಾಡಿ, ಯಾವುದೇ ಕೆಲಸವನ್ನು ಸಿಟ್ಟು ರಹಿತವಾಗಿ ನಿರ್ವಹಿಸುವ ಕಲೆಯನ್ನು ಅನಿತಾ ಮೇಡಂ ಅವರು ನಮಗೆ ಕಲಿಸಿದ್ದರು. ಅವರ ವರ್ಗಾವಣೆ ನಮಗೆ ಬೇಸರ ತರಿಸಿದೆ ಎಂದರು.
ಇವರ ನೇತೃತ್ವದಲ್ಲಿ ಜೈಲಿನಲ್ಲಿರುವ ಎಲ್ಲಾ ಸಿಬ್ಬಂದಿಗಳು ಒಂದು ತಂಡವಾಗಿ ಕೆಲಸ ಮಾಡುತ್ತಿದ್ದವು, ಬಂಧಿಗಳು ಹಾಗೂ ಸಾರ್ವಜನಿಕರ ಜೊತೆ ಅವರ ಮಧುರ ಒಡನಾಟವು ಎಲ್ಲರಿಗೂ ಮಾದರಿಯಾಗಿದೆ. ಅನಿತಾ ಮೇಡಂ ಜೈಲಿನಲ್ಲಿ ಸಾಕಷ್ಟು ಖೈದಿಗಳ ಮನಪರಿವರ್ತನೆ ಹೆಚ್ಚು ಒತ್ತು ನೀಡಿದರು. ಬಂಧಿಗಳಿಗಾಗಿ ಸಾಕಷ್ಟು ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದರು ಎಂದರು.
ಕಾರ್ಯಕ್ರಮದಲ್ಲಿ ಜೈಲು ಸಿಬ್ಬಂದಿಗಳು ತಮ್ಮ ಮಾತುಗಳನ್ನು ಅಭಿವ್ಯಕ್ತಿಗೊಳಿಸಿ, ಭಾವುಕರಾದರು. ಜೈಲು ಆವರಣದಲ್ಲಿ ಅಧಿಕಾರಿ ಸಿಬ್ಬಂದಿಗಳು ಪುಷ್ಪ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಜೈಲರ್ ಗಳಾದ ಅನಿಲ್ ಕುಮಾರ್, ಮಹೇಶ್, ಸುಷ್ಮಾ, ಶಾಂತಾ, ಆಡಳಿತ ಅಧಿಕಾರಿ ಬಾಬು ಪೂಜಾರಿ, ನ್ಯಾಯವಾಧಿ ಕವಿತಾ ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post