ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ #Akhila Karnataka Brahmana Mahasabha Election ಏ.13ರಂದು ನಡೆಯಲಿದ್ದು, ಇದೇ ಮೊದಲ ಬಾರಿಗೆ ರಾಜ್ಯಾಧ್ಯಕ್ಷರ ಮತ್ತು ಜಿಲ್ಲಾಧ್ಯಕ್ಷರ ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವೇದಮೂರ್ತಿ ಡಾ.ಭಾನುಪ್ರಕಾಶ ಶರ್ಮ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಎಲ್.ಟಿ. ತಿಮ್ಮಪ್ಪ ಅವರನ್ನು ಬೆಂಬಲಿಸಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಹಾಗೂ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ್ ಭಾಗವತ್ ಮತದಾರರಲ್ಲಿ ಮನವಿ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿದ್ದ ಅಶೋಕ್ ಹಾರ್ನಳ್ಳಿ ಅವರ ಬೆಂಬಲದಿಂದ ನಾವು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ. ನಮ್ಮದೇ ತಂಡದ ಸುಮಾರು 10 ಜನರು ವಿವಿಧ ಜಿಲ್ಲೆಗಳಿಂದ ಈಗಾಗಲೇ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಸೇರಿದಂತೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದ್ದು, ಸಾಗರದ ಎಲ್.ಟಿ. ತಿಮ್ಮಪ್ಪ ಅವರು ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಿದ್ದು, ಅವರನ್ನು ಗೆಲ್ಲಿಸಬೇಕು ಎಂದರು.
ಡಾ. ಭಾನುಪ್ರಕಾಶ್ ಶರ್ಮಾ ಅವರು ಕಳೆದ 30 ವರ್ಷಗಳಿಂದ ವಿವಿಧ ಸಂಸ್ಥೆಗಳ ಪದಾಧಿಕಾರಿಗಳಿಗಾಗಿ 3 ಬಾರಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಶ್ವಹಿಂದೂ ಪರಿಷತ್ನೊಂದಿಗೆ ಗುರುತಿಸಿಕೊಂಡಿದ್ದಾರೆ. ವಿಪ್ರ ಜನರ ಸೇವೆಯನ್ನೇ ಪ್ರಮುಖ ಎಂದು ತಿಳಿದುಕೊಂಡಿದ್ದಾರೆ. ಧರ್ಮಜಾಗೃತಿ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ಹೀಗೆ ಹಲವು ಸಮಾಜಮುಖಿ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ಭಾನುಪ್ರಕಾಶ್ ಅವರನ್ನು ಗೆಲ್ಲಿಸಬೇಕು ಎಂದರು.
Also read: ಬೇಸಿಗೆ ರಜೆ | ಬೆಂಗಳೂರು-ಮಂತ್ರಾಲಯ-ಕಲಬುರಗಿ ರೈಲು ಪ್ರಯಾಣಿಕರಿಗೆ ಬಿಗ್ ಗುಡ್ ನ್ಯೂಸ್
ಜಿಲ್ಲಾ ಪ್ರತಿನಿಧಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಲ್.ಟಿ. ತಿಮ್ಮಪ್ಪ ಮಾತನಾಡಿ, ನಮ್ಮ ತಂದೆ ಎಲ್.ಟಿ.ತಿಮ್ಮಪ್ಪ ಹೆಗ್ಡೆ ಅವರು ಶಾಸಕರಾಗಿ ಕೆಲಸ ಮಾಡಿದವರು. ಸಾಮಾಜಿಕ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದರು. ಅವರ ನೆರಳಿನಲ್ಲಿಯೇ ನಾನು ಕೆಲಸ ಮಾಡುತ್ತ ಬಂದಿದ್ದೇನೆ. ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ನಿರ್ದೇಶಕನಾಗಿ ಕೆಲಸ ಮಾಡಿರುವೆ. ರೋಟರಿಯಲ್ಲೂ ಕೂಡ ಕೆಲಸ ಮಾಡಿರುವೆ. ಹಲವು ಕಾರ್ಯಕ್ರಮಗಳನ್ನು ರೋಟರಿ ಮೂಲಕ ಸೇವೆ ಮಾಡಿದ ಅನುಭವ ನನಗಿದೆ. ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷನಾಗಿದ್ದಾಗ, ಅಡಿಕೆ ಬೆಳೆಗಾರರ ಪರವಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದೇನೆ. ಇದೀಗ ಜಿಲ್ಲಾ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದೇನೆ. ನನ್ನನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಚುನಾವಣೆಯು ಏ.13ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಕೋಟೆ ರಸ್ತೆಯಲ್ಲಿರುವ ವಾಸವಿ ವಿದ್ಯಾಲಯದಲ್ಲಿ ನಡೆಯಲಿದೆ. ಸುಮಾರು 3570 ಮತದಾರರಿದ್ದು, ಸಾಗರದಲ್ಲಿಯೇ 700 ಮತಗಳಿವೆ ಎಂದ ಅವರು ಫೆ.05ರಂದು ಬಿ.ಹೆಚ್.ರಸ್ತೆಯಲ್ಲಿರುವ ಶ್ರೀಮಾತಾ ಮಾಂಗಲ್ಯ ಮಂದಿರದ ಶತಮಾನೋತ್ಸವ ಮಂದಿರದಲ್ಲಿ ಸಂಜೆ 6.30ಕ್ಕೆ ಸ್ನೇಹ ಮಿಲನ ಕಾರ್ಯಕ್ರಮವಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾ.ಭಾನುಪ್ರಕಾಶ್ ಶರ್ಮ ಉಪಸ್ಥಿತರಿರುತ್ತಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಂತೋಷ್, ರವೀಶ್, ಶಂಕರನಾರಾಯಣ ಹೊಳ್ಳ, ಪೂರ್ಣಾನಂದ, ರವಿಕಿರಣ್, ವೆಂಕಟೇಶ್ ರಾವ್, ನಾಗರಾಜ್ ಗೋರೆ, ಶ್ರೀಪತಿಭಟ್, ಸಚ್ಚಿದಾನಂದ, ಸುಧೀಂದ್ರ ಕಟ್ಟೆ, ಮುರಳೀಧರ್, ಸೂರ್ಯನಾರಾಯಣ ಎಂ.ಎಸ್., ಸುನೀತಾ, ಉಷಾ ವೆಂಕಟೇಶ್, ಕೃಷ್ಣಮೂರ್ತಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post