ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಸನಗರ ತಾಲೂಕಿನ ರಿಪ್ಪನ್ಪೇಟೆ, ನಗರ ಹಾಗೂ ಹೊಸನಗರ ಸುತ್ತಲಿನ ಐದು ದೇವಸ್ಥಾನಗಳಲ್ಲಿ ಬೀಗ ಒಡೆದು ಕಳ್ಳತನ ಮಾಡಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರ್ಕಾರಿ ಶಾಲೆಯ ಶಿಕ್ಷಕ ಸೇರಿದಂತೆ ಇಬ್ಬರನ್ನು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಗಾಳಪೂಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವಸಂತ್ಕುಮಾರ್ ತಂಬಾಕದ (40) ಹಾಗೂ ರಾಣೆಬೆನ್ನೂರು ತಾಲ್ಲೂಕು ಗುಡ್ಡದಬೇವಿನಹಳ್ಳಿ ಗ್ರಾಮದ ನಿವಾಸಿ ಕಾರು ಚಾಲಕ ಸಲೀಂ ಕಮ್ಮಾರ (28) ಬಂಧಿತರು.
ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆ, ನಗರ ಹಾಗೂ ಹೊಸನಗರದಲ್ಲಿ ಐದು, ಹಾವೇರಿ ಜಿಲ್ಲೆಯ ಹಾವೇರಿ ಗ್ರಾಮೀಣ ಠಾಣೆ, ಹಂಸಬಾವಿ ಹಾಗೂ ಹಿರೇಕೆರೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಐದು ಹಾಗೂ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಬನವಾಸಿ, ಶಿರಸಿ ಗ್ರಾಮೀಣ ಹಾಗೂ ಅಂಕೋಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಎಂಟು ಸೇರಿದಂತೆ ಒಟ್ಟು 18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.
ಬಂಧಿತರಿಂದ ಮಾರುತಿ ನೆಕ್ಸಾ ಎಸ್ ಕ್ರಾಸ್ ಕಾರು, ಬಜಾಜ್ ಪ್ಲಾಟಿನಂ ಬೈಕ್, 2.29 ಲಕ್ಷ ನಗದು, 9 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿಯ ಆಭರಣ, ಹಿತ್ತಾಳೆಯ 140 ಗಂಟೆಗಳು, 27 ದೀಪದ ಕಂಬ, 22 ಹಿತ್ತಾಳೆಯ ತೂಗು ದೀಪಗಳು, ಏಳು ತಾಮ್ರದ ಕೊಡಗಳು, ಪೂಜಾ ಸಾಮಗ್ರಿಗಳು ಸೇರಿದಂತೆ ಒಟ್ಟು 19,20,285 ಬೆಲೆಯ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
Also read: ಭದ್ರಾವತಿಯ ಖ್ಯಾತ, ಹಿರಿಯ ಆಡಿಟರ್ ಶ್ರೀಪಾದ್ ವಿಧಿವಶ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















