ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಹಚೇತನ ವತಿಯಿಂದ ನಿರ್ಮಿತವಾಗಿರುವ ಕವಿಕಂಡ ಯುಗಾದಿ ಕವನ ಸಂಕಲನ ಪುಸ್ತಕವನ್ನು ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತದ ಪ್ರತೀ ಸಂಪ್ರದಾಯಕ್ಕೂ – ಹಬ್ಬಕ್ಕೂ ತನ್ನದೇ ಆದ ವಿಶಿಷ್ಟತೆ ಇದೆ. ಹೊಸ ವರ್ಷಕ್ಕೆ ಕ್ಯಾಲೆಂಡರ್ ಹಾಕುವ ಪರಿಯನ್ನು ಬಹಳಾ ನೋಡಿದ್ದೇವೆ. ಆದರೆ ಕವನಗಳನ್ನು ಹಂಚುವ ಪರಿಯನ್ನು ಕಂಡಿದ್ದೇ ಸಹಚೇತನದಿಂದ. ಸಾಹಿತ್ಯ ಹಂಚುವ ಕಾರ್ಯ ಸರಸ್ವತಿಯನ್ನು ಆರಾಧಿಸಿದಂತೆ, ಮನೆಯ ಎಲ್ಲಾ ಮನಸ್ಸುಗಳನ್ನು ಬೆಳಗಿಸಿದಂತೆ ಎಂದರು.
ಸುಮಾರು 83 ಕವಿಗಳ ಕವನಗಳ, 112 ಪುಟಗಳ ಸಂಪೂರ್ಣ ಮಾಲಿಕೆಯನ್ನು ಈ ಬಾರಿಯ ಕವನ ಸಂಕಲನ ಹೊತ್ತು ತಂದಿರುವುದು ಕವಿಹೃದಯಿಗಳಲ್ಲಿ ಕಾವ್ಯೋನ್ಮಾದವನ್ನು ಹೆಚ್ಚಿಸಿದೆ. ಈ ಸಂಪುಟಕ್ಕೆ ಸುಂದರ ಮುಖಪುಟವನ್ನು ನಿಖಿಲ್ ಆಚಾರ್ರವರು ಒದಗಿಸಿದ್ದು, ಸುಶ್ರೀ ಪ್ರಕಾಶನದಿಂದ ಇದು ಪ್ರಕಟಗೊಂಡಿದೆ. ಸುಮಾರು 1000 ಪ್ರತಿಯನ್ನು ಉಚಿತವಾಗಿ ಸಾಹಿತ್ಯ ಬಳಗದಲ್ಲಿ ಹಂಚುವ ಸಹಚೇತನ ತಂಡ, ಒಂದು ದಶಕಗಳ ಸಾರ್ಥಕ ಸಾಹಿತ್ಯಸೇವೆಯನ್ನು ಗೈಯುತ್ತಿದ್ದಾರೆ ಎಂದರು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಹಚೇತನದ ಗೌರವಾಧ್ಯಕ್ಷರಾದ ಎಸ್. ಎನ್. ಚನ್ನಬಸಪ್ಪ(ಚೆನ್ನಿ) ಅಧ್ಯಕ್ಷರಾದ ಎನ್. ಆರ್. ಪ್ರಕಾಶ್(ಆಚಿ), ನೃತ್ಯಗುರು ಸಹನಾ ಚೇತನ್, ಚೇತನ್, ಡಾ. ನಾಗಮಣಿ, ಮಾಲತೇಶ್, ಹರೀಶ್ ಕಾರ್ಣಿಕ್, ಲಕ್ಷ್ಮೀನಾರಾಯಣ್, ವಿನಯ್, ಆದರ್ಶ ಉಪಸ್ಥಿತರಿದ್ದರು.
ಪುಸ್ತಕ ಕುರಿತು:
ಯುಗಾದಿ ಸಮಯದಲ್ಲಿ 11 ವರ್ಷಗಳಿಂದ ಸತತವಾಗಿ ಈ ಪ್ರಸ್ತಕ ಪ್ರಕಟಗೊಳ್ಳುತ್ತಿದ್ದು, ಮೊತ್ತಮೊದಲು ಪುಟ್ಟ ಅಂಚೆ ಕಾರ್ಡ್ ಮಾದರಿಯ ಶುಭಾಶಯ ವಿನಿಮಯ ಪತ್ರದಿಂದ ಪ್ರಾರಂಭವಾದ ಇವರ ಈ ಕಾರ್ಯ ಈಗ ಜಗತ್ತಿನಾದ್ಯಂತ ನೆಲೆಸಿರುವ ಕನ್ನಡಿಗರ ಅಚ್ಚುಮೆಚ್ಚಿನ ಪುಸ್ತಕವಾಗಿ ಹೊರಹೊಮ್ಮಿದೆ. ಅಮೇರಿಕಾ, ಇಂಗ್ಲೆಂಡ್, ದುಬೈ, ಕತಾರ್, ನೆದರ್ಲ್ಯಾಂಡ್, ಫ್ರಾನ್ಸ್, ಸಿಂಗಾಪುರ್, ಶ್ರೀಲಂಕಾದ ಕನ್ನಡಿಗರ ಮನೆಮನೆಗೆ ತಲುಪುವ ಈ ಹೊತ್ತಿದೆ ಇಂದು ವಿಶ್ವಮಾನ್ಯವಾಗಿದೆ ಎಂದರೆ ಸಹಚೇತನದ ಕಾರ್ಯವೈಖರಿಯನ್ನು ಶ್ಲಾಘಿಸಲಾಗುತ್ತಿದೆ.
ಈ ಬಾರಿಯೂ ಮತ್ತಷ್ಟು ವಿಶೇಷಗಳ ಸರಮಾಲೆಯನ್ನು ತಮ್ಮ ಪುಸ್ತಕದಲ್ಲಿ ಹೊತ್ತು ತಂದಿರುವ ಇವರು, ನಮ್ಮ ನಾಡಿನ ಹಿರಿಯ ಕವಿಗಳಾದ ದಿವಂಗತ ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು, ಕೆ. ಎಸ್. ನಿಸಾರ್ ಅಹ್ಮದ್, ಎಚ್. ಆರ್. ಲೀಲಾವತಿ, ಬಿ. ಆರ್. ಲಕ್ಷ್ಮಣರಾವ್, ಸುಬ್ರಾಯ ಚೊಕ್ಕಾಡಿ ಹಾಗೂ ಡಾ. ಎಚ್. ಎಸ್. ವೆಂಕಟೇಶಮೂರ್ತಿಯವರ ಕವನಗಳು ಸೇರಿದಂತೆ, ಅನಿವಾಸಿ ಭಾರತೀಯರ ಹಲವು ಕವಿತೆಗಳನ್ನು ಈ ಪುಸ್ತಕದಲ್ಲಿ ಸೇರಿಸಿದ್ದಾರೆ. ಜೊತೆಗೆ ನಮ್ಮ ಕನ್ನಡ ನಾಡು ಯುಗಾದಿಯಂತೆಯೇ ಸದಾ ಕಾಲವೂ ಗುಪ್ತಗಾಮಿನಿಯಂತೆ ಸಾಹಿತ್ಯಾಸಕ್ತರ, ಕವಿಗಳ ಹರಿವನ್ನು ಹರಿಸುತ್ತಲೇ ಇರುತ್ತದೆ, ಅದಕ್ಕೆ ಕೊನೆಯೇ ಇಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ 70 ಕ್ಕೂ ಹೆಚ್ಚು ಯುವ ಕವಿಗಳ ಹೊಸ ಹೊಸ ಕವಿತೆಗಳು ಇದರಲ್ಲಿ ಅಡಕವಾಗಿವೆ.
ಭಾಷಣಕಾರರಿಗಂತೂ ತಮ್ಮ ಭಾಷಣಗಳಲ್ಲಿ ಯುಗಾದಿಯ ಬಗ್ಗೆ ಸುಂದರ ಕವನದ ಸಾಲುಗಳನ್ನು ಉಲ್ಲೇಖಿಸಲು ಹಲವು ಪುಸ್ತಕಗಳನ್ನು ತಡಕಾಡುವ ಅಶ್ಯಕತೆಯೇ ಇಲ್ಲ. ಇವರ ಕವನಗುಚ್ಚವೇ ಹಲವು ದಶಕಗಳಿಗಾಗುವಷ್ಟು ರಸನಿಮಿಷಗಳನ್ನು ನಮ್ಮ ಮುಂದೆ ತೆರೆದಿಡುತ್ತದೆ. ಇದು ಕೇವಲ ಕನ್ನಡ ನಾಡಿನ ಭಾಷೆ ನೆಲ ಹಾಗೂ ಸಂಸ್ಕೃತಿಯ ಉಳಿವಿಗಾಗಿ ನಾವು ಮಾಡುತ್ತಿರುವ ಸಾರ್ಥಕ ಸೇವೆಯಷ್ಟೇ ಎನ್ನುತ್ತಾರೆ ಇದರ ಮುಖ್ಯ ರೂವಾರಿ ನೃತ್ಯಗುರು ಸಹನಾ ಚೇತನ್.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post