ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಸದಿಗಂತ ಪತ್ರಿಕೆ ವರದಿಗಾರರಾದ ಬಿ.ಡಿ. ರವಿಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಇಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಸಾಗರ ತಾಲ್ಲೂಕಿನ ಆನಂದಪುರ ಬಳಿಯ ಕೆ, ಹೊಸಕೊಪ್ಪದಲ್ಲಿ ಕಲ್ಲು ಗಣಿಗಾರಿಕೆಯಿಂದ ಆಗುತ್ತಿರುವ ದುಷ್ಪರಿಣಾಮ ಮತ್ತು ರಸ್ತೆ ಹಾಳಾಗುತ್ತಿರುವ ಬಗ್ಗೆ ಗ್ರಾಮಸ್ಥರ ದೂರಿನ ಮೇರೆಗೆ ವರದಿಗಾಗಿ ತೆರಳಿದ್ದ ಆನಂದಪುರದ ಪತ್ರಕರ್ತ ಬಿ.ಡಿ. ರವಿ ಅವರ ಮೇಲೆ ಕಲ್ಲುಗಣಿಗಾರಿಕೆಯ `ಬಸವರಾಜು ತನ್ನ ಸಹಚರದೊಂದಿಗೆ ಆಗಮಿಸಿ ಪತ್ರಕರ್ತರ ರವಿಕುಮಾರ್ ಅವರನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುತ್ತಾನೆ. ಇಲ್ಲಿಗೆ ಬಂದು ಯಾವ ಪತ್ರಕರ್ತರೂ ವರದಿ ಮಾಡಬಾರದು ಎಂದು ಬೆದರಿಕೆ ಹಾಕಿದ್ದಲ್ಲದೆ, ಕೊಲೆ ಮಾಡುವುದಾಗಿಯೂ ಜೀವಬೆದರಿಕೆ ಹಾಕಿರುತ್ತಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ಪತ್ರಕರ್ತ ಬಿ.ಡಿ ರವಿಕುಮಾರ್ ಅವರ ಮೇಲಿನ ಹಲ್ಲೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯು ತೀವ್ರವಾಗಿ ಖಂಡಿಸುತ್ತದೆ. ಈ ಹಲ್ಲೆಯ ಹಿಂದೆ ಆಕ್ರಮ ಗಣಿಗಾರಿಕೆಯ ಮಾಫಿಯಾ ಇರುವುದು ಇದರಿಂದ ಬೆಳಕಿಗೆ ಬಂದಂತಾಗಿದೆ. ಹಲ್ಲೆ ನಡೆಸಿದವರ ವಿರುದ್ಧ ಈಗಾಗಲೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ. ಪತ್ರಕರ್ತ ಬಿ.ಡಿ. ರವಿಕುಮಾರ್ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಸವರಾಜು ಮತ್ತಿತರರನ್ನು ಕೂಡಲೆ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಸಂಘ ಆಗ್ರಹಿಸಿದೆ.
ಮನವಿ ನೀಡುವ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ವೈದ್ಯನಾಥ್ ಹೆಚ್.ಯು., ಕೆ.ಎಸ್. ಹುಚ್ರಾಯಪ್ಪ, ಆರ್.ಎಸ್. ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಕಾರ್ಯದರ್ಶಿ ಗಾ.ರಾ. ಶ್ರೀನಿವಾಸ, ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್, ರಾಷ್ಟ್ರೀಯ ಮಂಡಳಿ ಸದಸ್ಯ ಭಂಡಿಗಡಿ ನಂಜುಂಡಪ್ಪ, ಪತ್ರಕರ್ತರಾದ ಆರುಂಡಿ ಶ್ರೀನಿವಾಸಮೂರ್ತಿ, ಆರ್.ಪಿ.ಭರತ್ರಾಜ್ ಸಿಂಗ್, ರೋಹಿತ್, ಸತ್ಯನಾರಾಯಣ, ಇಸ್ಮಾಯಿಲ್ ಕುಟ್ಟಿ, ಸುಬ್ರಹ್ಮಣ್ಯ ಹೊರಬೈಲು, ರಘುರಾಜ್, ಸುರೇಂದ್ರ, ಶಿವಾನಂದ್, ಪುನೀತ್ ಬೆಳ್ಳೂರು, ಕುಮಾರ್, ಶಶಿಕುಮಾರ್ ಮತ್ತಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















