ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೊರೋನಾ ಅವಧಿಯಲ್ಲಿ ಕಲಾವಿದರ ಬದುಕು ದುಸ್ತರವಾಗಿದ್ದು, ಕಷ್ಟದಲ್ಲಿರುವ ಎಲ್ಲ ಕಲಾವಿದರಿಗೆ ಸಂಘ ಸಂಸ್ಥೆಗಳ ಸಹಾಯಹಸ್ತದ ನೆರವು ಮುಖ್ಯ ಎಂದು ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ಅಧ್ಯಕ್ಷ ಮಂಜುನಾಥ್ ಕದಂ ಹೇಳಿದರು.
ಶಿವಮೊಗ್ಗದ ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕುಟುಂಬ ಮಿಲನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಅಪೇಕ್ಷಾ ಮಂಜುನಾಥ್ (ಜ್ಯೂನಿಯರ್ ವಿಷ್ಣುವರ್ಧನ್) ಹಾಗೂ ಆರಾಧ್ಯ (ಜ್ಯೂನಿಯರ್ ಅಂಬರೀಷ್) ಅವರನ್ನು ಸನ್ಮಾನಿಸಿ ಮಾತನಾಡಿದರು.
ವಿಶ್ವದ ಎಲ್ಲಡೆಯು ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚುವ ಮೂಲಕ ಎಲ್ಲ ವರ್ಗದ ಜನರ ಜೀವನವನ್ನು ಸಮಸ್ಯೆಗೆ ತಳ್ಳಿತು. ಎರಡು ವರ್ಷದ ಅವಧಿಯಲ್ಲಿ ಅನೇಕ ತೊಂದರೆಗಳು ಉಂಟಾಯಿತು. ಕಲಾವಿದರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಯಿತು. ಇಂತಹ ವೇಳೆಯಲ್ಲಿ ಕಷ್ಟದಲ್ಲಿರುವ ಕಲಾವಿದರಿಗೆ ನೆರವು ಒದಗಿಸುವ ಕಾರ್ಯ ಸಂಘ ಸಂಸ್ಥೆಗಳಿAದ ಆಗಬೇಕು ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಅಪೇಕ್ಷಾ ಮಂಜುನಾಥ್ ಮಾತನಾಡಿ, ರಾಜ್ಯಾದ್ಯಂತ ಸಾವಿರಾರು ಕಾರ್ಯಕ್ರಮಗಳನ್ನು ನೀಡಿದ್ದು, ವಿವಿಧ ಸಂಘ ಸಂಸ್ಥೆಗಳು ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿವೆ. ನಮ್ಮೂರಿನಲ್ಲಿ ಸಿಗುವ ಸನ್ಮಾನವು ಸದಾ ವಿಶೇಷವಾಗಿರುತ್ತದೆ ಎಂದು ಹೇಳಿದರು.
ನನ್ನ ಜೀವನದಲ್ಲಿ ಸಂಪಾದಿಸುವ ಹಣದಲ್ಲಿ ಅನಾಥಾಶ್ರಮ, ರಕ್ತದಾನ ಶಿಬಿರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ಒದಗಿಸುವ ಕಾರ್ಯಕ್ಕೆ ವಿನಿಯೋಗಿಸುತ್ತೇನೆ. ಸಾಮಾಜಿಕ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಸನ್ಮಾನ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್ಕುಮಾರ್, ನಿವೃತ್ತ ಡಿಪಿಐ ಚಂದ್ರಶೇಖರಯ್ಯ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಸತೀಶ್ಚಂದ್ರ, ಮಾಜಿ ಅಧ್ಯಕ್ಷ ಎಸ್.ಗಣೇಶ್, ಕೆ.ಜಿ.ರಾಮಚಂದ್ರರಾವ್, ಎಚ್.ಬಿ.ಆದಿಮೂರ್ತಿ, ಹೊಸತೋಟ ಸೂರ್ಯನಾರಾಯಣ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post