ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರ ಪಾಲಿಕೆಯಿಂದ ಕೈಗೆತ್ತಿಕೊಂಡಿರುವ ಗೋವಿಂದಾಪುರ ಆಶ್ರಯ ವಸತಿ ಯೋಜನೆಯ ಬಾಕಿ ಕಾಮಗಾರಿಯ ಪ್ರಗತಿ ಕುರಿತಂತೆ ರಾಜ್ಯಮಟ್ಟದ ಅಧಿಕಾರಿಗಳು ಇಲ್ಲಿಗೆ ಇಂದು ಆಗಮಿಸಿ ಎರಡು ದಿನ ಇಲ್ಲೆ ಇದ್ದು ಮಾಹಿತಿ ಪಡೆಯಲಿದ್ದಾರೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ #MLA Channabasappa ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವಿಂದಾಪುರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಜಿ+2 ಮಾದರಿಯ ಆಶ್ರಯ ಮನೆಗಳ ಕೆಲಸ ಕಳೆದ ಏಳು ವರ್ಷಗಳಿಂದ ನಡೆಯುತ್ತಿದೆ. ಆದರೂ ಇನ್ನೂ ಪೂರ್ಣವಾಗಿಲ್ಲ. ಶೀಘ್ರ ಪೂರ್ಣಗೊಳಿಸುವಂತೆ ಸಚಿವರನ್ನು ಕೋರಲಾಗಿತ್ತು. ಅವರು ಇಲ್ಲಿಗೆ ಬಂದು ಸಭೆ ಮಾಡುವುದಾಗಿ ಹೇಳಿದ್ದರು. ಆದರೆ ಬಂದಿರಲಿಲ್ಲ. ಈಗ ರಾಜ್ಯ ಮಟ್ಟದ ಅಧಿಕಾರಿಗಳು ಬರುತ್ತಿದ್ದಾರೆ ಎಂದರು.
ಮೂರು ಸಾವಿರ ಮನೆಗಳಲ್ಲಿ 624 ಮನೆ ಹಂಚಿಕೆಯಾಗಿವೆ. 648 ಮನೆಗಳು ಸಿದ್ಧವಾಗಿವೆ. 1728 ಮನೆ ಪರಿಪೂರ್ಣವಾಗಿ ಆಗಬೇಕಿದೆ. ಮೂಲ ಸೌಕರ್ಯದ ಕೊರೆತೆ ಹಿನ್ನೆಲೆಯಲ್ಲಿ ಮನೆಪಡೆದವರೂ ಇನ್ನೂ ಹೋಗಿಲ್ಲ. ಮೂಲಸೌಕರ್ಯದ ಬಗ್ಗೆಯೂ ಪರಿಶೀಲಿಸಲಾಗುತ್ತದೆ ಎಂದರು.
ಕೊಳಚೆ ಪ್ರದೇಶಕ್ಕೆ ಸಂಬಂಧಿಸಿದಂತೆ ಆಯಾ ಕಾಲಕ್ಕೆ ಅಭಿವೃದ್ಧಿ ಮಾಡಲಾಗಿದೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಬೇಕಿದೆ. ಕೊಳಚೆ ನಿವಾಸಿಗಳ ಸಂಖ್ಯೆಯಲ್ಲಿ ಶಿವಮೊಗ್ಗ 4ನೇ ಸ್ಥಾನದಲ್ಲಿದೆ. ಅದನ್ನು ಒಂದನೇ ಸ್ಥಾನಕ್ಕೆ ತರಲಾಗುತ್ತದೆ. 26 ಕೊಳಚೆ ಪ್ರದೇಶಗಳಿಗೆ ಜಿಲ್ಲಾಧಿಕಾರಿಯಿಂದ ಅಧಿಸೂಚನೆಯಾಗಿದೆ. ತೊಡಕುಗಳನ್ನು ಪರಿಹರಿಸುವ ಕೆಲಸ ಸರ್ಕಾರ ದಿಂದಲೇ ಆಗಬೇಕಿದೆ ಎಂದರು.
ಗೋಪಶೆಟ್ಟಿಕೊಪ್ಪದಲ್ಲಿ 1836 ಮನೆಗಳ ನಿರ್ಮಾಣ ವಾಗುತ್ತಿವೆ. ಅಲ್ಲಿಯೂ ಕೂಡ ಸಾಕಷ್ಟು ಕೆಲಸ ಬಾಕಿ ಇದೆ. ಮೂಲ ಸೌಕರ್ಯಗಳನ್ನು ಒದಗಿಸಲು 13.11 ಕೋಟಿ ರೂ. ಅಗತ್ಯವಾಗಿ ಬಿಡುಗಡೆ ಆಗಬೇಕಿದೆ. ಈ ಎಲ್ಲಾ ಕೆಲಸ ಕಾರ್ಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಸದನದಲ್ಲಿ ಉತ್ತರವನ್ನು ಪಡೆಯಲಾಗಿದೆ ಎಂದರು.
Also read: ಲಿಂಗನಮಕ್ಕಿಯಿಂದ 10 ಸಾವಿರ ಕ್ಯೂಸೆಕ್ಸ್ ನೀರು ಹೊರ ಹರಿವು | ಮುಗಿಲುಮುಟ್ಟಿದ ಹರ್ಷೋದ್ಘಾರ
ಮಳೆ ಹಾನಿಗೆ ಸಂಬಂಧಿಸಿದಂತೆ ಬಿಜೆಪಿ ತಂಡ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದೆ. 22ನೇ ಸಾಲಿನಲ್ಲಿ ಹಾನಿಯಾದ ಮನೆಗಳಿಗೆ ಪರಿಹಾರ ನೀಡಲಾಗಿತ್ತು. 1.20 ಲಕ್ಷ ರೂ. ನೀಡಲಾಗುತ್ತಿತ್ತು. ಯಡಿಯುರಪ್ಪ ಸರ್ಕಾರದ ಲ್ಲಿ ಇದನ್ನು ಹೆಚ್ಚಳ ಮಾಡಲಾಗಿತ್ತು. ಇನ್ನೂ ಬಿಡಿಗಾಸು ಬಂದಿಲ್ಲ. 2023ರಲ್ಲಿ ಬಿದ್ದ ಮನೆಗಳಿಗೆ ಪರಿಹಾರವನ್ನು ನೀಡಿಲ್ಲ. ಅವರಿಗೂ ಈಗ ಕೊಡಲು ಚಿಂತನೆ ನಡೆಸಲಾಗಿದೆ ಎಂದರು.
ಬಿಜೆಪಿಯಿಂದ ಹಮ್ಮಿಕೊಂಡಿರುವ ಮೈಸೂರು ಪಾದಯಾತ್ರೆಗೆ ಶಿವಮೊಗ್ಗದಿಂದಲೂ ಕೂಡ ತಂಡ ಹೋಗಲಿದೆ. ಜಿಲ್ಲೆಯಿಂದ ಸುಮಾರು 3000ಕ್ಕೂ ಹೆಚ್ಚು ಕಾಯಕರ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸುಮಾರು 140 ಕಿ.ಮೀ. ಪಾದಯಾತ್ರೆ ನಡೆಯಲಿದ್ದು, 8 ದಿನಗಳ ಕಾಲ ನಡೆಯಲಿದೆ ಎಂದರು.
ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಕೂಡ ಬೇಗನೆ ಚುನಾವಣೆಯಾಗಬೇಕು ಎಂಬ ಉದ್ದೇಶ ಹೊಂದಿದೆ. ಈ ಬಗ್ಗೆ ಚುನಾವಣಾಧಿಕಾರಿಗಳ ಜೊತೆ ನಮ್ಮ ನಾಯಕರು ಈಗಾಗಲೇ ಮಾತನಾಡಿದ್ದಾರೆ ಎಂದರು.
ಟಿ.ಡಿ. ಮೇಘರಾಜ್, ಮೋಹನ ರೆಡ್ಡಿ, ಶಿವರಾಜ್, ಎನ್.ಕೆ. ಜಗದೀಶ್, ಎನ್.ಜಿ.ನಾಗರಾಜ್, ಮಂಜುನಾಥ್, ದೀನ್ ದಯಾಳ್, ರೇಣುಕಾ ನಾಗರಾಜ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post