Read - 3 minutes
ಸಂವಾದ ಕಾರ್ಯಕ್ರಮದಲ್ಲಿ ತಮ್ಮ ರಾಜಕೀಯ ಜೀವನದ ಕುರಿತು ವಿವಿಧ ಸಂಗತಿಗಳನ್ನು ತೆರೆದಿಟ್ಟರು. ಹಿಂದೆ ನನಗೆ ಚುನಾವಣೆ ನಿಲ್ಲುವ ಆಸೆ ಇರಲಿಲ್ಲ. ಗೆಲುವು ಸಾಧಿಸುವ ವಿಶ್ವಾಸವೂ ಇರಲಿಲ್ಲ. ಆದರೆ ಮುಖಂಡರ ಸೂಚನೆಯಂತೆ ನಿಲ್ಲಬೇಕಾಯಿತು. ಆದರೆ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿದೆ. ಅಲ್ಲಿಂದ ಇಲ್ಲಿಯವರೆಗೆ ಹಿರಿಯರ ಸೂಚನೆ ಪಾಲಿಸಿಕೊಂಡು ಬಂದಿದ್ದೇನೆ ಎಂದರು.
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪಕ್ಷದ ಮುಖಂಡರ ಆಜ್ಞೆಯಂತೆ ಈ ಹಿಂದೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ವಿರುದ್ಧವೂ ಸ್ಪರ್ಧಿಸಿದ್ದೆ, ಈಗ ಪಕ್ಷದ ಹಿರಿಯರ ಆಜ್ಞೆಯಂತೆ ರಾಜಕೀಯ ನಿವೃತ್ತಿ ಘೋಷಿಸಿದ್ದೇನೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ KSEshwarappa ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಇಂದು ಪ್ರೆಸ್ ಟ್ರಸ್ಟ್, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ನನಗೆ ಹಲವು ಸ್ಥಾನಮಾನಗಳನ್ನು ನೀಡಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ತಮಗೆ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಇದೀಗ ಪಕ್ಷದ ಮುಖಂಡರ ಆಜ್ಞೆಯನ್ನು ಅನುಸರಿಸಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದೇನೆ. ಆಕ್ರೋಷಿತ ಕಾರ್ಯಕರ್ತರನ್ನೂ ಸಮಾಧಾನ ಪಡಿಸಿದ್ದೇನೆ ಎಂದರು.
ಆದರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮುನಿಸು ಕಸಿವಿಸಿ ಆಯ್ತು. ಹೀಗಾಗಿ ಅವರಿಗೆ ಬಹಿರಂಗ ಪತ್ರ ಬರೆದೆ. ಈ ಬೆಳವಣಿಗೆ ನಮ್ಮ ಪಕ್ಷಕ್ಕೆ ವಿಶೇಷ ಅನ್ನಿಸಿದೆ ನಿಜ. ನಾನು ಸಾಮಾನ್ಯ ಕಾರ್ಯಕರ್ತನಂತೆ ವರ್ತಿಸಿದ್ದೇನೆ ಅಷ್ಟೇ. ಸಂಘ ಪರಿವಾರದ ಹಿರಿಯರೂ ಮನೆಗೆ ಬಂದು ಶ್ಲಾಘಿಸಿದರು. ನಿನ್ನೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ತಮಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ. ಇದು ಬಿಜೆಪಿ ಸಂಸ್ಕೃತಿ ಎತ್ತಿ ತೋರಿಸುತ್ತದೆ ಎಂದರು.
ರಾಯಣ್ಣ ಬ್ರಿಗೇಡ್ ಮಾಡಿದ್ದು ಹಿಂದುಳಿದವರ ಸಂಘಟನೆಗಾಗಿ. ಅದು ಕೂಡ ರಾಜಕೀಯೇತರ ಸಂಘಟನೆಯಾಗಿತ್ತು. ಎಲ್ಲಾ ಪಕ್ಷದವರೂ ಆ ಸಂಘಟನೆಯಲ್ಲಿ ಇದ್ದರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಎಂದೂ ಜಾತಿ ಪರ ರಾಜಕೀಯ ಮಾಡಿಲ್ಲ. ಅವರು ಎಂದಿಗೂ ಜಾತಿವಾದಿಯಾಗಿಲ್ಲ. ನರೇಂದ್ರ ಮೋದಿ ಅವರ ನೀತಿಯೇ ಯಡಿಯೂರಪ್ಪ ಅವರದ್ದು ಆಗಿದೆ. ಎಲ್ಲಾ ಧರ್ಮದವರು ಒಟ್ಟಾಗಿ ಹೋಗಬೇಕು ಅನ್ನೋದು ಮೋದಿ ಪಾಲಿಸಿಕೊಂಡು ಬಂದಿದ್ದಾರೆ. ಅದನ್ನೇ ಯಡಿಯೂರಪ್ಪನವರು ಕೂಡ ಪಾಲಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಹಿಂದೆ ಕಾಂಗ್ರೆಸ್ ಬಲಿಷ್ಠ ಪಕ್ಷವಾಗಿತ್ತು. ಕಾಂಗ್ರೆಸ್ ನಿಂದ ಯಾರೇ ನಿಂತರೂ ಗೆಲ್ಲುತ್ತಿದ್ದರು. ಬಿಜೆಪಿಯಲ್ಲಿ ಸ್ಪರ್ಧಿಸಲೂ ಅಭ್ಯರ್ಥಿ ಹುಡುಕಬೇಕಿತ್ತು. ಆತ್ಮವಿಶ್ವಾಸದಿಂದ ಕಟ್ಟಿದ ಬಿಜೆಪಿ ಇದೀಗ ಸಾಕಷ್ಟು ಬೆಳೆದಿದೆ. ದೇಶದಾದ್ಯಂತ ಬಿಜೆಪಿ ಹೆಮ್ಮರವಾಗಿ ಬೆಳೆದಿದೆ ಎಂದು ಹೇಳಿದರು.
ಆಪರೇಷನ್ ಕಮಲ ಎನ್ನುತ್ತಾರೆ. ಆದರೆ ನಮ್ಮ ಪಾರ್ಟಿಗೆ ಬರುತ್ತೇವೆ ಅನ್ನುವವರಿಗೆ ಬೇಡ ಅನ್ನಲಿಕ್ಕೆ ಆಗುತ್ತದೆಯೇ? ನಾವಾಗಿ ಯಾರನ್ನೂ ಕರೆದಿರಲಿಲ್ಲ. ಅವರಾಗೇ ರಾಜೀನಾಮೆ ನೀಡಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಆಮೇಲೆ ಅವರನ್ನು ಗೆಲ್ಲಿಸಿದ್ವಿ. ಬಿಜೆಪಿಗೆ ಆದರ್ಶವಿದೆ, ಹೀಗಾಗಿ ಬೆಳೆದಿದೆ ಎಂದರು.
ನರೇಂದ್ರ ಮೋದಿ ದೇಶದ ಪ್ರಧಾನಿ ಆದರೆ ಗಲಭೆ ಆಗುತ್ತೆ ಅಂತಾ ಕೆಲವರು ಬೊಬ್ಬೆ ಹೊಡೆದರು. ಆದರೀಗ ಇಡೀ ಜಗತ್ತು ಮೋದಿ, ಭಾರತದ ಜತೆಗಿದೆ. ಬಿಜೆಪಿಯಲ್ಲಿ ಒಂದು ಕೋಟಿ ಕಾರ್ಯಕರ್ತರಿದ್ದಾರೆ. ನನ್ನ ಪುತ್ರ ಕಾಂತೇಶ್ ಕೂಡ ಕೋಟಿ ಕಾರ್ಯಕರ್ತರಲ್ಲಿ ಒಬ್ಬ. ಬಿಜೆಪಿಯಲ್ಲಿ ಎಲ್ಲವೂ ಸರಿಯಿದೆ ಅಂತ ಹೇಳಲ್ಲ. ಆದರೆ ಒಂದೇ ಕುಟುಂಬಕ್ಕೆ ಪಕ್ಷ ಸೀಮಿತವಾಗಿರಬಾರದು ಅನ್ನೋದು ಪಕ್ಷದ ನಿಲುವು. ಆ ನಿಟ್ಟಿನಲ್ಲಿ ನಮ್ಮ ಪಕ್ಷ ಬಹುತೇಕ ಯಶಸ್ವಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಸುರ್ಜೇವಾಲಾ ಟೀಕೆಗೆ ಪ್ರತಿಕ್ರಿಸಿದ ಈಶ್ವರಪ್ಪ, ಕೋರ್ಟ್, ತನಿಖೆ ಬಗ್ಗೆ ಕಾಂಗ್ರೆಸ್ ಗೆ ನಂಬಿಕೆ ಇದೆಯೇ? ರಾಹುಲ್ ಗಾಂಧಿ ವಿರುದ್ಧ ಕೋರ್ಟ್ ತೀರ್ಪು ನೀಡಿದೆ. ನನಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಇದ್ಯಾವುದಕ್ಕೂ ನಿಮಗೆ ನಂಬಿಕೆ ಇಲ್ಲ. ಕಾಂಗ್ರೆಸ್ ಟೀಕೆಗೆ ನಾನು ಜಗ್ಗುವುದು ಇಲ್ಲ, ಬಗ್ಗುವುದು ಇಲ್ಲ ಎಂದು ತಿರುಗೇಟು ನೀಡಿದರು.
ಈ ಬಾರಿ ಚುನಾವಣೆಯಲ್ಲಿ ತಮ್ಮ ಸೊಸೆ ಸ್ಪರ್ಧಿಸುವಂತೆ ಒತ್ತಾಯ ಬಂದಿದ್ದು ನಿಜ. ಹಿರಿಯರು ನನ್ನ ಸೊಸೆಗೆ ಸ್ಪರ್ಧಿಸುವಂತೆ ಹೇಳಿದ್ದರು. ಆದರೆ ನಾನು ಬೇಡ ಅಂದೆ. ನಮ್ಮ ಪಕ್ಷ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ಬಾರಿ ಹಲವು ಮಹಿಳೆಯರಿಗೆ ಅವಕಾಶ ನೀಡಿದೆ. ನನ್ನ ವೈಯಕ್ತಿಕ ತೀರ್ಮಾನ ಬೇರೆಯಿರಬಹುದು. ಆದರೆ ಹಿರಿಯ ಸೂಚನೆ ಪಾಲಿಸಲೇ ಬೇಕು ಎಂದರು.
ಹಿಂದುತ್ವ ಜೀವನ ಪದ್ಧತಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಭಾವನೆ ಬಿಜೆಪಿಯಲ್ಲಿ ಇದೆ. ಆದರೆ ರಾಷ್ಟ್ರದ್ರೋಹಿ ಮುಸ್ಲಿಂ ಗೂಂಡಾಗಳಿಗೆ ನನ್ನ ಧಿಕ್ಕಾರವಿದೆ. ನನ್ನ ಮನೆಗೆ ಮುಸ್ಲಿಮರೂ ಬರ್ತಾರೆ, ಕ್ರಿಸ್ತರೂ ಬರ್ತಾರೆ. ಮುಸಲ್ಮಾನರ ಟೋಪಿ ಹಾಕಿದರೆ ಮಾತ್ರ ಮುಸಲ್ಮಾನರ ಪರವಲ್ಲ. ನಾನು ಮಸಲ್ಮಾನರ ವಿರೋಧಿಯಲ್ಲ, ಕ್ರಿಶ್ಚಿಯನ್ನರ ವಿರೋಧಿಯಲ್ಲ. ನಾನು ದೇಶದ್ರೋಹಿಗಳ ವಿರೋಧಿಯಷ್ಟೇ. ದೇಶ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಳ್ಳುವವರನ್ನು ತಿಳಿಸಲು ಸಾಧ್ಯವಿಲ್ಲ ಎಂದರು.
Discussion about this post