ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಚ್ಚು ಕಟ್ಟು ರೈತರ ಸಮಸ್ಯೆಗಳನ್ನು ಬಗೆ ಹರಿಸಲು ನಮಗೂ ತುಡಿತವಿದೆ. ಆದರೆ, ಅನುದಾನದ ಕೊರತೆ ಕಾಡಾದಲ್ಲಿ ಎದ್ದು ಕಾಣುತ್ತಿದೆ. ಕಳೆದೆರಡು ವರ್ಷದಿಂದ ಕೊರೋನಾದಂತಹ ಮಹಾ ಮಾರಿಯಿಂದಾಗಿ ನಮ್ಮ ಸರಕಾರ ಕೂಡ ಕಷ್ಟದಲ್ಲಿಯೇ ರೈತರ ಹಾಗೂ ಸಮಾಜದ ತೊಡಕುಗಳನ್ನು ನಿವಾರಿಸಲು ಪಣ ತೊಟ್ಟು ನಿಂತಿದ್ದು, ಈ ಸಮಸ್ಯೆಗಳನ್ನೆಲ್ಲಾ ಹಿಮ್ಮೆಟ್ಟಿ ಜನಸಾಮಾನ್ಯರ ಮನಸ್ಸನ್ನು ಸಹ ಗೆದ್ದು ತೋರಿಸಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಅಧ್ಯಕ್ಷರು ಕೆ.ಬಿ. ಪವಿತ್ರರಾಮಯ್ಯ ತಿಳಿಸಿದರು.
ಅವರು ಶುಕ್ರವಾರ ತಾಲ್ಲೂಕಿನ ಬಿ.ಬೀರನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಸುರಿದ ಮಳೆಯಿಂದಾಗಿ ಅತಿವೃಷ್ಟಿ ಉಂಟಾಗಿದ್ದು, ಬೀರನಹಳ್ಳಿಯ ವಿವಿದಡೆ ರೈತರು ಜಮೀನಿಗೆ ತೆರಳುವ ರಸ್ತೆ, ತೋಟದ ಅಂಚಿನ ತಡೆಗೊಡೆ, ಹಾಗೂ ಸೇತುವೆ ಕೊಚ್ಚಿ ಹೋಗಿದ್ದು, ಆದ್ದರಿಂದ ರೈತರು ಕಳೆದೆರಡು ದಿನಗಳ ಹಿಂದೆ ಕಛೇರಿಗೆ ಭೇಟಿ ನೀಡಿ ಈ ಸಮಸ್ಯೆ ಕುರಿತು ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಶೀಲಿಸಿ, ಬೀರನಹಳ್ಳಿ ಗ್ರಾ.ಪಂ ಗೆ ಭೇಟಿ ನೀಡಿ, ರೈತರ ಸಮಸ್ಯೆ ಕುರಿತು ಚರ್ಚಿಸಿದರು. ನಂತರ ಸಮಸ್ಯೆಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನಂತರ ಮಾತನಾಡಿದರು.
ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟಕ್ಕೂ ಅಧಿಕ ಮಳೆಯಾಗಿದ್ದು, ಹಲವು ಭಾಗಗಳಲ್ಲಿ ರೈತರು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂದು ಸ್ಥಳದಲ್ಲಿಯೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಬಿ. ಬೀರನಹಳ್ಳಿಯಲ್ಲಿ ಹಾನಿಗೊಳಗಾದ ಪ್ರದೇಶದ ಕಾಮಗಾರಿಯ ಅಂದಾಜು ಮೊತ್ತದ ಕುರಿತು ಮಾಹಿತಿ ನೀಡಲು ಸೂಚಿಸಿದರು.
ಭದ್ರಾ ಕಾಡಾ ಪ್ರಾಧಿಕಾರಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸಂಬಂಧ ಪಟ್ಟ ಇಲಾಖೆ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ, ಅನುದಾನ ಬಿಡುಗಡೆ ಮಾಡುವುದರ ಕುರಿತು ಭರವಸೆಯನ್ನೂ ಸಹ ನೀಡಿದ್ದಾರೆ. ರೈತರು ಭಯ ಪಡುವ ಅನಿವಾರ್ಯತೆ ಕಂಡಿತ ಇಲ್ಲ, ನಮ್ಮ ಸರಕಾರ ಎಂದಿಗೂ ರೈತ ಪರವಾದ ಸರಕಾರ, ಮುಂದಿನ ದಿನಗಳಲ್ಲಿ ಕಂಡಿತ ರೈತರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಶ್ರಮಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾ.ಪಂ ಅಧ್ಯಕ್ಷರು ಶಿವಕುಮಾರ್, ನೀರು ಬಳಕೆ ದಾರ ಸಂಘ ಅಧ್ಯಕ್ಷರು, ಮಲ್ಲಿಕಪ್ಪ, ಗ್ರಾ. ಸದಸ್ಯರಾದ ಮಂಜುನಾಥ್ ನಾಯ್ಕ್ ಮತ್ತು ಪುರುಶೋತ್ತಮ್, ಬಿ. ಬೀರನಹಳ್ಳಿ ಯುವಕರ ಸಂಘದ ಸದಸ್ಯರುಗಳಾದ ಸುನೀಲ್, ನಾಗಪ್ಪ, ಗೀರೀಶ್, ಊರಿನ ಗ್ರಾಮಸ್ಥರು ಹಾಗೂ ರೈತ ಮುಖಂಡರು ಹಾಜರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















