ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಸ್ತಿಗಾಗಿ ತಂದೆಯನ್ನೇ ಕೊಲ್ಲಿಸಿದ ಘಟನೆ ಶಿಕಾರಿಪುರದ ಶಿರಾಳಕೊಪ್ಪದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿರಾಳಕೊಪ್ಪ ಉಪವಿಭಾಗ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಶಿರಾಳಕೊಪ್ಪದ ಬೋವಿ ಗ್ರಾಮದವರಾದ ಕೆಎಸ್ಆರ್ಪಿಯ ನಿವೃತ್ತ ಎಸ್ಐ ನಾಗೇಂದ್ರಪ್ಪ ಎಂಬವರ ಶವ ನ.29ರಂದು ಚರಂಡಿಯಲ್ಲಿ ಸಿಕ್ಕಿದ್ದು, ಆಸ್ತಿ ವಿಚಾರದಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಿದ್ದ ಪೊಲೀಸರು ಆ ದಿಕ್ಕಿನಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಆಸ್ತಿಯಲ್ಲಿ ಪಾಲು ಕೊಡದೆ ಎರಡನೇ ಮದುವೆಯಾದ ಹಿನ್ನೆಲೆ ನಾಗೇಂದ್ರಪ್ಪ ಅವರ ಮೂವರು ಮಕ್ಕಳು ತಂದೆಯನ್ನು ಹತ್ಯೆ ಮಾಡಲು ರಿಜ್ವಾನ್ , ಹಬೀಬುಲ್ಲಾ , ಸುಹೇಲ್ ಎಂಬುವರಿಗೆ ಸುಪಾರಿ ಕೊಟ್ಟು ಹಲ್ಲೆ ಮಾಡಿಸಿದ್ದಾರೆ ಎಂದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಐವರನ್ನು ಬಂಧಿಸಲಾಗಿದೆ.
Also read: ಪರಿಸರ ಸಂರಕ್ಷಣೆಯನ್ನು ಧ್ಯೇಯವನ್ನಾಗಿಟ್ಟುಕೊಂಡು ಕಾರ್ಯೋನ್ಮುಖರಾಗಿ: ಚಂದ್ರಶೇಖರ್ ಕರೆ
ಘಟನೆ ಹಿನ್ನೆಲೆ:
ನಾಗೇಂದ್ರಪ್ಪನವರಿಗೆ ಐದೂವರೆ ಎಕರೆ ಭೂಮಿಯಿದ್ದು , ಉತ್ತಮ ಫಸಲು ಬರುತ್ತಿತ್ತು . ಐವರು ಮಕ್ಕಳಿದ್ದ ನಾಗೇಂದ್ರಪ್ಪ , ಪತ್ನಿ ನಿಧನಗೊಂಡಿದ್ದರಿಂದ ಎರಡು ವರ್ಷಗಳ ಹಿಂದೆ ವಿಧವೆಯೊಬ್ಬರನ್ನು ಮದುವೆಯಾಗಿದ್ದರು . ಮಕ್ಕಳೇ ನಿಂತು ಮದುವೆ ಮಾಡಿಸಿದ್ದರು. ಎರಡನೇ ಮದುವೆಯಿಂದ ಗಂಡು ಮಗು ಜನಿಸಿತ್ತು . ತಮಗೆ ಆಸ್ತಿ ಪಾಲು ಮಾಡಿಕೊಡುವಂತೆ ಮೊದಲ ಹೆಂಡತಿ , ಮಕ್ಕಳು ನಾಗೇಂದ್ರಪ್ಪನಿಗೆ ಬೇಡಿಕೆ ಇಟ್ಟಿದ್ದರು . ನಾಗೇಂದ್ರಪ್ಪ ಆಸ್ತಿ ಪಾಲಿಗೆ ನಿರಾಕರಿಸಿದ್ದರು . ಊರಲ್ಲಿ ನ್ಯಾಯ ಪಂಚಾಯಿತಿ ನಡೆದು , ಐದೂವರೆ ಎಕರೆ ಜಾಗದಲ್ಲಿ ಪಾಲು ಮಾಡುವ ಸಂಧಾನ ನಡೆದಿತ್ತು . ಆದರೆ ನಾಗೇಂದ್ರಪ್ಪ ಸಂಧಾನಕ್ಕೆ ಒಪ್ಪಿರಲಿಲ್ಲ . ಮಗ ಉಮೇಶ್ ಭದ್ರಾವತಿ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ದಾವೆ ವಿಚಾರಣೆ ನಡೆದಿತ್ತು.
ಭದ್ರಾವತಿ ಕೋರ್ಟ್ಗೆ ಹೋಗಿ ಶಿಕಾರಿಪುರಕ್ಕೆ ಬಂದಿದ್ದ ನಾಗೇಂದ್ರಪ್ಪ ಅವರನ್ನು ತಮ್ಮ ಆಟೋದಲ್ಲಿ ಹತ್ತಿಸಿಕೊಂಡಿದ್ದ ಆರೋಪಿಗಳು ಪುಣೀದಹಳ್ಳಿ ಗ್ರಾಮದ ಬಳಿ ಕರೆದೊಯ್ದು ಬಲವಂತದಿಂದ ನಶೆ ಬರುವ ಔಷಧಿ ಕುಡಿಸಿದ್ದರು. ನಂತರ ಉಸಿರುಗಟ್ಟಿಸಿ ಸಾಯಿಸಿ ಅದೇ ಆಟೋದಲ್ಲಿ ಶವ ಸಾಗಿಸಿ ಉಡುಗಣಿ ಗ್ರಾಮದಿಂದ ಕುಸ್ಕೂರು ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿನ ಚರಂಡಿಗೆ ಬಿಸಾಡಿದ್ದರು. ಇದಕ್ಕೂ ಮುನ್ನ ನ.9 ರಂದು ಸಹ ಅವರ ಕೊಲೆ ಯತ್ನ ನಡೆದಿತ್ತು . ಲಗೇಜ್ ಆಟೋದಿಂದ ನಾಗೇಂದ್ರಪ್ಪರ ಬೈಕಿಗೆ ಡಿಕ್ಕಿ ಹೊಡಿಸಲಾಗಿತ್ತು ನಾಗೇಂದ್ರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದರು.
ಅಪ್ಪನ ಹಠದಿಂದ ಸಿಟ್ಟಾಗಿದ್ದ ಮಂಜುನಾಥ್ , ಉಮೇಶ್ , ಅಪ್ಪನನ್ನೇ ಮುಗಿಸಲು ಯೋಜನೆ ಹಾಕಿದ್ದರು . ಬೋಗಿ ಗ್ರಾಮದ ಮೂವರಿಗೆ ತಂದೆಯ ಕೊಲೆಗೆ ಐದು ಲಕ್ಷಕ್ಕೆ ಸುಪಾರಿ ನೀಡಿ, ತಂದೆಯನ್ನು ಹತ್ಯೆ ಮಾಡಿಸಿದ್ದಾರೆ ಎನ್ನಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















