ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ವತಿಯಿಂದ ಆ.11 ರಿಂದ 14ರವರೆಗೆ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಚುಂಚಾದ್ರಿ ಕಪ್ 23ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಆದಿಚುಂಚನಗಿರಿ ಆಂಗ್ಲ ಶಾಲೆಯ ಪ್ರಾಂಶುಪಾಲೆ ದಿವ್ಯ ಕರಣಂ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 22ವರ್ಷಗಳಿಂದ ಚುಂಚಾದ್ರಿ ಕಪ್ನ್ನು ನಾವು ನಡೆಸುತ್ತಾ ಬಂದಿದ್ದೇವೆ. ಈ ಬಾರಿಯೂ ಕೂಡ ಆ.11ರಿಂದ 14ರ ವರೆಗೆ ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಆಹ್ವಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆ ಆಯೋಜಿಸಲಾಗಿದೆ. ಈಗಾಗಲೇ ಸುಮಾರು 64ಕ್ಕೂ ಹೆಚ್ಚು ಬಾಲಕ-ಬಾಲಕಿಯರ ತಂಡಗಳು ನೊಂದಾವಣೆ ಮಾಡಿಸಿಕೊಂಡಿವೆ. ಇದಕ್ಕಾಗಿ ವಸತಿ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆಮಾಡಿಕೊಳ್ಳಲಾಗಿದೆ ಎಂದರು.
79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಾಗೂ 23ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಆ.14ರ ಸಂಜೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಕ್ರೀಡಾಕೂಟದ ದಿವ್ಯ ಸಾನ್ನಿಧ್ಯವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸಾನಿಧ್ಯ ವಹಿಸಲಿದ್ದು, ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದಿವ್ಯ ಉಪಸ್ಥಿತಿ ವಹಿಸುವರು ಎಂದರು.
ಈ ಪಂದ್ಯಾವಳಿಯಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ಬಾಲಕ, ಬಾಲಕಿಯರಿಗೆ “ಬೆಸ್ಟ್ ಅಟ್ಯಾಕರ್, ಬೆಸ್ಟ್ ಬೂಸ್ಟರ್, ಬೆಸ್ಟ್ ಆಲ್ ರೌಂಡರ್, ಬೆಸ್ಟ್ ಲೀಬ್ರೋ” ಸೆಂಟರ್ ಬ್ಲಾಕರ್ ಈ ಪ್ರಶಸ್ತಿಗಳನ್ನು ನೀಡಿ ಕ್ರೀಡಾ ಪಟುಗಳನ್ನು ಹುರಿದುಂಬಿಸಲಾಗುತ್ತಿದೆ, ವಿಜೇತ ತಂಡಗಳಿಗೆ ಆಕರ್ಷಕ ಪಾರಿತೋಷಕದೊಂದಿಗೆ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತಿದೆ. ಈ ಬಾರಿ ಬಾಲಕಿಯರ ವಿಭಾಗದಲ್ಲಿ 32ಕ್ಕಿಂತ ಹೆಚ್ಚು ತಂಡಗಳು ಭಾಗವಹಿಸುತ್ತಿರುವುದರಿಂದ ಈ ಬಾರಿಯೂ ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆದ ಬಾಲಕಿಯರ ತಂಡಕ್ಕೆ ನಗದು ಬಹುಮಾನ ಕೊಡುತ್ತಿ ರುವುದು ಮತ್ತೊಂದು ವಿಶೇಷ ಎಂದರು.
ಈ ಪಂದ್ಯಾವಳಿ ಆರಂಭವಾದಾಗಿನಿಂದ ಪ್ರತಿವರ್ಷವೂ ಶಿವಮೊಗ್ಗ ಜಿಲ್ಲೆಯ 20 ರಿಂದ 25 ವಾಲಿಬಾಲ್ ಕ್ರೀಡಾಪಟುಗಳು ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸಿ ಶಿವಮೊಗ್ಗ ಜಿಲ್ಲೆಗೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾರೆ ಎಂದ ಅವರು, ಈ ವರ್ಷ ನಡೆಯುವ ಪಂದ್ಯಾವಳಿಗಾಗಿ ಈಗಾಗಲೇ ನಾಲ್ಕು ಅಂಕಣಗಳಲ್ಲಿ ಸಿದ್ಧಪಡಿಸಲಾಗಿದೆ. ರಾಷ್ಟ್ರ ಮತ್ತು ರಾಜ್ಯಮಟ್ಟದ ನುರಿತ ವಾಲಿಬಾಲ್ ತೀರ್ಪುಗಾರರು ಆಗಮಿಸಲಿದ್ದಾರೆ ಎಂದರು.
ಶಿವಮೊಗ್ಗ ಜಿಲ್ಲಾ ವಾಲಿಬಾಲ್ ಸಂಸ್ಥೆಯ ಮಹಾಪೆÇೀಷಕರು ಹಾಗೂ ಕ್ರೀಡಾ ಪ್ರೇಮಿಗಳಾದ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮಿಜಿಯವರು ಪ್ರತಿ ವರ್ಷ ಈ ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇವರೊಂದಿಗೆ ಜಿಲ್ಲಾ ವಾಲಿಬಾಲ್ ಸಂಸ್ಥೆಯು ಸಹ ಕೈಜೋಡಿಸಿದೆ ಎಂದರು.
ನಗದು ಬಹುಮಾನ : ಬಾಲಕರ ವಿಭಾಗ : ಪ್ರಥಮ ಸ್ಥಾನ 5000 ರೂ. ದ್ವಿತೀಯ ಸ್ಥಾನ 4000 ರೂ. ತೃತೀಯ ಸ್ಥಾನ 3000 ರೂ. ಮತ್ತು ನಾಲ್ಕನೇ ಸ್ಥಾನ 2000 ರೂ. ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು.
ಬಾಲಕಿಯರ ವಿಭಾಗ : ಪ್ರಥಮ ಸ್ಥಾನ ಪಡೆದ ತಂಡಕ್ಕೆ 5000 ರೂ. ಮತ್ತು ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 4000 ರೂ. ತೃತೀಯ ಸ್ಥಾನ 3000 ರೂ. ಮತ್ತು ನಾಲ್ಕನೇ ಸ್ಥಾನ 2000 ರೂ. ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.
ಅಥ್ಲೇಟಿಕ್ ಕ್ಲಬ್ಬಿನ ಅಧ್ಯಕ್ಷ ಉದಯ್ಕುಮಾರ್ ಮಾತನಾಡಿ, ಇದೇ ಸಂದರ್ಭದಲ್ಲಿ ಬಾಲಕ-ಬಾಲಕಿಯರಿಗಾಗಿ ರಸ್ತೆ ಓಟದ ಸ್ಪರ್ಧೆಯನ್ನು, ಆ.14 ರಂದು ಆಯೋಜಿಸಲಾಗಿದೆ. ನೆಹರೂ ಕ್ರೀಡಾಂಗಣದಿಂದ ಪ್ರಾರಂಭವಾಗುವ ಈ ಓಟದ ಸ್ಪರ್ಧೆ ಬೆಳಗ್ಗೆ 6ಕ್ಕೆ ಆರಂಭವಾಗುತ್ತದೆ. ಶರಾವತಿ ನಗರದ ಬಿಜಿಎಸ್ ವಸತಿ ಶಾಲೆಯ ಆವರಣದಲ್ಲಿ ಕೊನೆಗೊಳ್ಳುತ್ತದೆ. ಪ್ರಾಥಮಿಕ ಶಾಲಾ ಬಾಲಕಿಯರಿಗೆ 2ಕಿ.ಮೀ. ಬಾಲಕರಿಗೆ 3ಕಿ.ಮೀ. ಹಾಗೂ ಪ್ರೌಢಶಾಲಾ ಬಾಲಕರಿಗೆ 5 ಕಿ.ಮೀ. ಸ್ಪರ್ಧೆ ನಡೆಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷ ಭಾಸ್ಕರ್ ಜಿ.ಕಾಮತ್, ಸಂಸ್ಥೆಯ ನಿರ್ದೇಶಕ ಕೊಳಿಗೆ ವಾಸಪ್ಪಗೌಡ. ಗುರುಪುರದ ಬಿಜಿಎಸ್ ಕಾಲೇಜಿನ ಪ್ರಾಂಶುಪಾಲ ಸುರೇಶ ಎಸ್.ಹೆಚ್., ಹಿರೇಮಠ್, ಶಿಕ್ಷಕಿ ಸುಜಾತ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















