ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸಿಟಿ ಕೋ-ಆಪರೇಟಿವ್ ಬ್ಯಾಂಕ್ 110 ನೇ ವರ್ಷಕ್ಕೆ ಮುನ್ನಡೆದಿದ್ದು, ಪ್ರಸಕ್ತ ವರ್ಷದಲ್ಲಿ 85.32 ಲಕ್ಷ ರೂ. ನಿವ್ವಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕ್ ನ ಅಧ್ಯಕ್ಷರಾದ ಉಮಾಶಂಕರ ಉಪಾಧ್ಯಾಯ ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿಂದು ಬ್ಯಾಂಕ್ನ ಪ್ರಗತಿಯನ್ನು ವಿವರಿಸಿದ ಅವರು 3.45 ಕೋ.ರೂ. ಗಳ ಷೇರು ಬಂಡವಾಳ, 85.32 ಕೋ.ರೂ. ಠೇವಣಿಯನ್ನು ಮತ್ತು 105.7 ಕೋ ರೂ.ಗಳ ದುಡಿಯುವ ಬಂಡವಾಳವನ್ನು ಮತ್ತು 32.48 ಕೋ.ರೂ ಹೂಡಿಕೆಗಳನ್ನು ಹೊಂದಿದೆ. ಬ್ಯಾಂಕ್ ತನ್ನ ಷೇರುದಾರರ ಹಿತ ಕಾಯುವಲ್ಲಿ ಬದ್ದವಾಗಿದ್ದು, ಬ್ಯಾಂಕ್ ನ ’ಎ’ ತರಗತಿ ಷೇರುದಾರರು ಮೃತಪಟ್ಟ ಸಂದರ್ಭದಲ್ಲಿ ಅಂತ್ಯಸಂಸ್ಕಾರಕ್ಕೆ 7000 ರೂ.ಗಳನ್ನು ಮತ್ತು 25.000ರೂ. ಅಪಘಾತವಿಮಾ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಶೈಕ್ಷಣಿಕ ಸಾಧನೆಗೈದ ಬ್ಯಾಂಕ್ ಸದಸ್ಯರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಲಾಗುತ್ತಿದೆ. ಸಾಲ ಮರುಪಾವತಿ ಮಾಡಿದ ಸದಸ್ಯರಿಗೆ ಸನ್ಮಾನವನ್ನು ಮಾಡುವ ಪ್ರೋತ್ಸಾಹಿಸಲಾಗುತ್ತಿದೆ ಎಂದು ವಿವರಿಸಿದರು.
ಪ್ರಸ್ತುತ ಬ್ಯಾಂಕಿನ ಎನ್.ಪಿ ಎ ಶೇ. 6 ರಷ್ಟು ಇದ್ದು, 2010 ರಿಂದ ಷೇರುದಾರರಿಗೆ ಶೇ. 10 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ. ಶೇ.9.50 ರಿಂದ ಶೇ. 10.50 ಬಡ್ಡಿದರದಲ್ಲಿ ಆಧಾರ ಸಾಲ, ಶೇ. 9 ದರದಲ್ಲಿ ಬಂಗಾರ ಸಾಲವನ್ನು ನೀಡಲಾಗುತ್ತಿದೆ. ಹಿರಿಯ ನಾಗರೀಕರಿಗೆ ಒಂದು ವರ್ಷದ ಮಟ್ಟಿಗೆ ಶೇ. 7.50 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗವುದು. ಬ್ಯಾಂಕ್ ನ 100 ವರ್ಷಗಳ ಸಾಧನೆಯನ್ನು ಪರಿಗಣಿಸಿ ನವದೆಹಲಿಯಲ್ಲಿ ನಡೆದ ನ್ಯಾಷನಲ್ ಕಾನ್ಕ್ಲೇವ್ ನಲ್ಲಿ ಬ್ಯಾಂಕ್ ನ್ನು ಸನ್ಮಾನಿಸಲಾಯಿತು. ಕಾಲ ಕಾಲಕ್ಕೆ ಚುನಾವಣೆಗಳನ್ನು, ಸರ್ವಸದಸ್ಯರ ಸಭೆಗಳನ್ನು ನಡೆಸುತ್ತಾ ಬಂದಿದ್ದು ಬ್ಯಾಂಕ್ ಆರ್ಥಿಕವಾಗಿ ಸಧೃಢವಾಗಿದೆ. ಷೇರುದಾರರು ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಅಧ್ಯಕ್ಷ ಉಮಾಶಂಕರ ಉಪಾದ್ಯಾಯ ಅವರು ಮನವಿ ಮಾಡಿಕೊಂಡರು.
ಬ್ಯಾಂಕ್ ಹಿರಿಯ ನಿರ್ದೇಶಕರಾದ ಎಸ್.ಕೆ ಮರಿಯಪ್ಪ ಅವರು ಮಾತನಾಡಿ, ಬಿ.ವಿ ಚಂದ್ರಶೇಖರ್, ಎಂ.ಸಿ ಮಹೇಶ್ವರಪ್ಪ, ಎಸ್.ಆರ್ ತಿಮ್ಮಯ್ಯ, ಎಂ. ನಾಗೇಂದ್ರರಾವ್, ಕೃಷ್ಣಸಿಂಗ್, ಎಸ್.ವಿ ತಿಮ್ಮಯ್ಯ ಸೇರಿದಂತೆ ಅನೇಕ ಹಿರಿಯ ಸಹಕಾರಿಗಳ ಶ್ರಮದಿಂದ ಸರ್ವಧರ್ಮಗಳ ಜನರನ್ನೊಳಗೊಂಡಂತೆ ಸಿಟಿಕೋ.ಆಪರೇಟವ್ ಬ್ಯಾಂಕ್ ಸ್ಥಾಪನೆಯಾಗಿದ್ದು, 110 ವರ್ಷಗಳ ಯಶಸ್ವಿ ಮುನ್ನಡೆ ಸಾಧಿಸಿದೆ. ಆರ್. ಬಿಐ ನಿಯಮಗಳಿಗನುಗುಣವಾಗಿ ಬ್ಯಾಂಕ್ ವಹಿವಾಟು ನಡೆಯುತ್ತಿದ್ದು, ಆಡಳಿತ ಮಂಡಳಿಯ ಸದಸ್ಯರಿಗಾಗಲಿ, ಅವರ ಸಂಭಂಧಿಗಳಿಗಾಗಲಿ ಸಾಲವನ್ನು ನೀಡುವುದಿಲ್ಲ. ಅಷ್ಟರ ಮಟ್ಟಿಗೆ ಬ್ಯಾಂಕ್ ನ ವಹಿವಾಟನ್ನು ದಕ್ಷತೆಯಿಂದ ನಿರ್ವಹಿಸುತ್ತಿದ್ದು, ಷೇರುದಾರರ ಹಿತವನ್ನು ಕಾಪಾಡಲಾಗುತ್ತಿದೆ ಎಂದರು.
ಬ್ಯಾಂಕ್ ನ ಶಾಖೆಗೆ ಸ್ವಂತ ನಿವೇಶನವೊಂದನ್ನು ಖರೀದಿಸಲಾಗಿದ್ದು, ಸದ್ಯದಲ್ಲೆ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಆಡಳಿತ ಮಂಡಳಿ ಚುನಾವಣೆಯ ವೆಚ್ಚವನ್ನು ಕಡಿತಗೊಳಿಸಲು ಬಹುತೇಕ ಅವಿರೋಧವಾಗಿ ಆಯ್ಕೆಗೆ ಆಧ್ಯತೆ ನೀಡಲಾಗಿದ್ದು, ಆಂತರಿಕ ಒಡಂಬಡಿಕೆಯಂತೆ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಸಾರ್ವಜನಿಕ ಹಣ ವ್ಯಯವಾಗದಂತೆ ಈ ಪದ್ದತಿಯನ್ನು ಅನುಸರಿಸುತ್ತಿದ್ದು, ಇದೊಂದು ಐತಿಹಾಸಿಕ ನಡೆ ಎಂದು ಮರಿಯಪ್ಪ ಅವರು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಬ್ಯಾಂಕ್ ನ ನಿರ್ದೇಶಕ ಎಸ್.ಪಿ. ಶೇಷಾದ್ರಿ, ರೇಖಾಚಂದ್ರಶೇಖರ್, ಜಿ.ರಾಜು, ಎಸ್ ಕೆ ರಘುಕೃಷ್ಣಸಿಂಗ್, ಎಂ.ರಾಕೇಶ್, ಎಸ್.ಎಂ. ದೀಪು, ಬ್ಯಾಂಕ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಎಂ. ಮನೋಜ್ ಕುಮಾರ್ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















