ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಾಹಿತ್ಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಹಿತ್ಯದ ವಿದ್ಯಾರ್ಥಿಗಳ ಆಲೋಚನೆಗಳು ವಿಭಿನ್ನವಾಗಿರುತ್ತದೆ. ಸಾಹಿತ್ಯವನ್ನ ಕೇವಲ ಅಂಕ ಗಳಿಸುವುದಕ್ಕಾಗಿ ಓದದೇ ಅಭಿರುಚಿಗಾಗಿ, ಆನಂದಕ್ಕಾಗಿ ಓದಬೇಕು ಎಂದು ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ನಾಗಭೂಷಣ್ ಹೇಳಿದರು.
ಮಾನಸ ಟ್ರಸ್ಟ್, ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಇಂಗ್ಲಿಷ್ ವಿಭಾಗ ಶಿವಮೊಗ್ಗ, ಇವರ ವತಿಯಿಂದ ಇಂದು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ಪ್ರಥಮ ಪದವಿಯ ಐಚ್ಛಿಕ ಇಂಗ್ಲಿಷ್ ವಿದ್ಯಾರ್ಥಿಗಳಿಗೆ ಎರಡು ದಿನಗಳ ಓರಿಯೆಂಟೆಷನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ತರಗತಿಗಳು ಬರಿ ತರಗತಿಗಳಾಗಿ ಇರುವುದಿಲ್ಲ ನಮ್ಮ ಯೋಚನಾ ಲಹರಿಯನ್ನು ಉನ್ನತಗೊಳಿಸುವ, ವಿಭಿನ್ನ ಆಲೋಚನಾ ಕ್ರಮಗಳನ್ನು ರೂಢಿಸಿಕೊಳ್ಳುವ ಅವಕಾಶಗಳಾಗಿರುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಒಂದು ನಿರ್ದಿಷ್ಟ ಪಠ್ಯವನ್ನು ಓದುವಾಗ ಆ ಪಠ್ಯದ ಕರ್ತೃ ಮತ್ತು ಪಠ್ಯದ ಹಿನ್ನಲೆಯನ್ನ ತರಗತಿಗಳಲ್ಲಿ ಕಲ್ಪಿಸಿಕೊಂಡು ಆಳವಾದ ಅಧ್ಯಯನದ ಮೂಲಕ ಕೃತಿಯನ್ನು ತನ್ನೊಳಗೆ ತೆಗದುಕೊಳ್ಳಬೇಕು ಎಂದರು.
ಕುವೆಂಪು, ಶಿವರಾಮ್ ಕಾರಂತ, ವರ್ಡ್ಸ್ ವರ್ತ್, ಶೇಕ್ಸ್ಪಿಯರ್ ಅವರಂತಹ ಮಹಾನ್ ಲೇಖಕರು ಪಠ್ಯಗಳ ಪುಟಗಳಿಗೆ ಮಾತ್ರ ಸೀಮಿತಗೊಂಡಿಲ್ಲ ಅವರು ಕೃತಿಗಳ ಮೂಲಕ ನಮ್ಮೊಳಗೇ ಸೇರಿಕೊಂಡಿದ್ದಾರೆ. ಅವರೆಲ್ಲರೂ ಬಹು ಸುಂದರವಾದ ಸಾಹಿತ್ಯ ಲೋಕವನ್ನೂ ಸೃಷ್ಟಿಸಿಕೊಟ್ಟಿದ್ದಾರೆ. ವಿದ್ಯಾರ್ಥಿಗಳು ಮೂರು ವರ್ಷದ ಪದವಿಯಲ್ಲಿ ಸಾಹಿತ್ಯವನ್ನು ಬರಿ ತರಗತಿಗೆ ಸೀಮಿತಗೊಳಿಸಿ ಓದುವುದಲ್ಲ, ಆನಂದಿಸಬೇಕು ಎಂದರು.
ಸಾಹಿತ್ಯವು ಸಮಾಜದ ಪ್ರತಿಬಿಂಬವಾಗಿರುತ್ತದೆ. ಒಬ್ಬ ಶೇಕ್ಸ್ಪಿಯರ್ ನಿಮ್ಮ ತರಗತಿಗಳಿಗೆ ಪ್ರವೇಶಿಸಿದಾಗ, ಅಥವಾ ಒಬ್ಬ ಶ್ರೇಷ್ಟ ಲೇಖಕ ನಿಮ್ಮ ಮನಸಿನಲ್ಲಿ ಹೊಕ್ಕಾಗ ನೀವು ಅಗಾಧವಾದದ್ದನ್ನ ಕಲಿಯುತ್ತೀರಿ. ಹಲವಾರು ಸಾಹಿತ್ಯಕ ಚಟುವಟಿಕೆಗಳು ನಿಮ್ಮ ಸೃಜನ ಶೀಲತೆಯನ್ನು ಹೆಚ್ಚಿಸುತ್ತದೆ. ನೀವು ಆಯ್ಕೆ ಮಾಡಿಕೊಂಡಿರುವ ಕೋರ್ಸ್ ಮತ್ತು ಕಾಲೇಜು ಅತ್ಯುತ್ತಮವಾಗಿವೆ. ನಿಮ್ಮ ಮೂರು ವರ್ಷದ ವಿದ್ಯಾರ್ಥಿ ಜೀವನ ತುಂಬಾ ಉತ್ಸಾಹದಾಯಕವಾಗಿರಲಿ ಎಂದು ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ವಿದ್ಯಾರ್ಥಿಗಳೆಲ್ಲರೂ ಅತ್ಯುತ್ತಮವಾದ ಗುರುಗಳ ಮಾರ್ಗದರ್ಶನದಲ್ಲಿ ಬೆಳೆಯಲು ವಿಪುಲ ಅವಕಾಶಗಳಿವೆ. ನೀವೆಲ್ಲರೂ ಅಂತಿಮವಾಗಿ ಉತ್ತಮ ಸ್ಥಾನವನ್ನು ಪಡೆಯುತ್ತಿರಿ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿಯವರು ಮಾತನಾಡಿ, 2025-26ರ ಶೈಕ್ಷಣಿಕ ವರ್ಷ ಪೂರ್ತಿ ಕಾಲೇಜಿನಲ್ಲಿ ನಡೆಯುವ ಹಲವಾರು ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು. ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಅವಕಾಶಗಳನ್ನ ಒದಗಿಸಿಕೊಡುತ್ತಿದೆ, ಅವುಗಳ ಉಪಯೋಗವನ್ನು ಪಡೆದುಕೊಂಡು ಮುಂದಿನ ಜೀವನ ರೂಪಿಸಿಕೊಳ್ಳಬೇಕು. ಇಂಗ್ಲಿಷ್ ಸಾಹಿತ್ಯವನ್ನು ಐಚ್ಛಿಕವಾಗಿ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು. ಮನಶಾಸ್ತ್ರ ಮತ್ತು ಸಾಹಿತ್ಯ ಒಟ್ಟಿಗೆ ಓದುವುದರಿಂದ ವಿದ್ಯಾರ್ಥಿಗಳು ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ರೇಷ್ಮಾರವರು ವಿಭಾಗದ ಹಲವಾರು ಚಟುವಟಿಕೆಗಳನ್ನು ಮತ್ತು ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಉಪನ್ಯಾಸಕರಾದ ಕು. ಯೋಷಿತಾ ಎಸ್ ಸೊನಲೆ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿ, ಆಡಳಿತಾಧಿಕಾರಿಗಳಾದ ಪ್ರೋ. ರಾಮಚಂದ್ರ ಬಾಳಿಗ ಹಾಗೂ ಐ ಕ್ಯೂ ಎ ಸಿ ಸಂಯೋಜಕರಾದ ಡಾ. ಅರ್ಚನಾ ಭಟ್, ವಿಭಾಗದ ಉಪನ್ಯಾಸಕರಾದ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕು. ಐಶ್ವರ್ಯ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post